ನಾನು ‘ಸಂಚಾರಿ ವಿಜಯ್’ ಹಾಗೂ ರಾಷ್ಟ್ರೀಯ ಹೆದ್ದಾರಿ 4..

ಮಂಸೋರೆ

ರಾಷ್ಟ್ರೀಯ ಹೆದ್ದಾರಿ 4, ನನ್ನ ಜೀವನದಲ್ಲಿ ಬಹು ಮುಖ್ಯವಾದ ಅಧ್ಯಾಯ. ಬೆಂಗಳೂರು ಚೆನ್ನೈ ನಗರವನ್ನು ಸಂಪರ್ಕಿಸುವ ಇಂದಿನ ರಾಷ್ಟ್ರೀಯ ಹೆದ್ದಾರಿ 75 ಚತುಷ್ಪಥ ರಸ್ತೆ ಆಗುವ ಮೊದಲು ರಾಷ್ಟ್ರೀಯ ಹೆದ್ದಾರಿ 4 ಎಂದಿತ್ತು. ಅದು ನಮ್ಮೂರನ್ನು ಹಾದು ಹೋಗುವ ಹೆದ್ದಾರಿ ಆದ್ದರಿಂದ ಸಹಜವಾಗಿಯೇ ಅದರೊಂದಿಗೆ ಒಂದು ನಾಸ್ಟಾಲಜಿ ಬೆಸೆದುಕೊಂಡಿರುತ್ತದೆ. ಆದರೆ ನನಗೆ ರಾಷ್ಟ್ರೀಯ ಹೆದ್ದಾರಿ 4 ಹೆಚ್ಚು ಮುಖ್ಯವಾದದ್ದು, ಹರಿವು ಸಿನೆಮಾದ ಕಾರಣಕ್ಕೆ.

ಹರಿವು-ಮೊದಲ ನಿರ್ದೇಶನದ ಸಿನೆಮಾ, ಮೊದಲ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ತಂದುಕೊಟ್ಟ ಸಿನೆಮಾ, ನಾನಾ ಕೆಲಸಗಳನ್ನು ಮಾಡಿಕೊಂಡಿದ್ದ ನನಗೆ, ನಿರ್ದೇಶಕನಾಗಿ ಒಂದು ಗಟ್ಟಿಯಾದ ನೆಲೆ ಕೊಟ್ಟ ಸಿನೆಮಾ, ಅದೆಲ್ಲದಕ್ಕಿಂತ ಹೆಚ್ಚಾಗಿ ‘ಸಂಚಾರಿ ವಿಜಯ್’ ಎಂಬ ಆಪ್ತ ಗೆಳೆಯನನ್ನು ಕೊಟ್ಟ ಸಿನೆಮಾ. ಮುಖ್ಯ ಪಾತ್ರ ನಾಯಕನಾಗಿ ವಿಜಯ್ ಸರ್ ಮೊದಲ ಸಿನೆಮಾ ಹರಿವು, ಅದರ ಮೊದಲ ಶಾಟ್ 2012ರಲ್ಲಿ ಚಿತ್ರೀಕರಣವಾದದ್ದು ಇದೇ ರಾಷ್ಟ್ರೀಯ ಹೆದ್ದಾರಿ 4, ನಾನು ನಿರ್ದೇಶಕನಾಗಿ ಮೊದಲ ಬಾರಿಗೆ Action-Cut ಹೇಳಿದ್ದು ಇದೇ ರಾಷ್ಟ್ರೀಯ ಹೆದ್ದಾರಿ 4ರ ಮೇಲೆ.

ಆ ಸಿನೆಮಾ ಚಿತ್ರೀಕರಣವಾದದ್ದು ಇದೇ ರಾಷ್ಟ್ರೀಯ ಹೆದ್ದಾರಿ 4ರಲ್ಲಿ. ‘ಹರಿವು’ ಸಿನೆಮಾದ ಮುಖ್ಯ ಕತೆ ಅನಾವರಣಗೊಳ್ಳುವುದು ಇದೇ ರಾಷ್ಟ್ರೀಯ ಹೆದ್ದಾರಿ 4ರ ಮೇಲೆ. 2012ರಲ್ಲಿ ಮೊದಲ ಬಾರಿಗೆ ಚಿತ್ರೀಕರಣ ಆರಂಭಿಸಿದಾಗ ಮಾಡಿಕೊಂಡ ಅವಾಂತರಗಳು, ಕಲಿಸಿದ ಪಾಠಗಳು, ನಿರ್ದೇಶನದ ಕಡೆಗೆ ಇರಬೇಕಾದ ಬದ್ಧತೆಗಳನ್ನು ಕಲಿಸಿಕೊಟ್ಟದ್ದು ಇದೇ ರಾಷ್ಟ್ರೀಯ ಹೆದ್ದಾರಿ 4.ಈ ರಾಷ್ಟ್ರೀಯ ಹೆದ್ದಾರಿ 4ರ ಮೇಲೆ ನಾನು ‘ಸಂಚಾರಿ ವಿಜಯ್’ ಸರ್ ಸಾಕಷ್ಟು ಬಾರಿ ಜೊತೆಯಾಗಿ ಪ್ರಯಾಣ ಮಾಡಿದ್ದೇವೆ. ಆದರೆ ಈ ರಾಷ್ಟ್ರೀಯ ಹೆದ್ದಾರಿ 4 ನನ್ನ ಪಾಲಿಗೆ ಶಾಶ್ವತವಾದ ದುಃಖದ ನೆನಪೊಂದನ್ನು ಉಳಿಸಿ ಬಿಡುತ್ತದೆ ಎಂದು ಯಾವತ್ತೂ ಯೋಚಿಸಿರಲಿಲ್ಲಾ.



ಎಷ್ಟೊ ಕನಸುಗಳು, ನಗು, ಜಗಳ, ನೆನಪುಗಳ ಮೂಲಕ ಸಂಚರಿಸಿದ್ದ ಈ ರಾಷ್ಟ್ರೀಯ ಹೆದ್ದಾರಿ 4ರ ಮೇಲೆ, ನನ್ನ ಗೆಳೆಯನ ಜೊತೆ ಅಂತಿಮ ಪ್ರಯಾಣ ಮಾಡುವ ದಿನ ಬಂದಿದ್ದು ನನ್ನ ಪಾಲಿನ ಬಹು ದೊಡ್ಡ ದುರಂತ. ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ, ಈ ರಾಷ್ಟ್ರೀಯ ಹೆದ್ದಾರಿ 4ರ ಮೂಲಕ ಆಪ್ತ ಗೆಳೆಯನನ್ನು Ambulance ಅಲ್ಲಿ ಮಲಗಿಸಿಕೊಂಡು, ಅವರ ಆಪ್ತವಾದ ಸಾಕಷ್ಟು ಕನಸುಗಳನ್ನು ಕಂಡಿದ್ದ ಅವರ ದುಡಿಮೆಯ ಗಳಿಕೆಯಿಂದ ಕೊಂಡುಕೊಂಡಿದ್ದ ಅವರ ತೋಟಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬರುವಂತ ದಿನ ಬರುತ್ತದೆ ಎಂದು ಯಾವತ್ತೂ ಊಹಿಸಿರಲಿಲ್ಲಾ.. ಅಂತ ದುರಂತದ ದಿನಕ್ಕೆ ಇಂದಿಗೆ ಒಂದು ವರ್ಷ.

ವಿಜಯ್ ಸರ್ ನನಗೆ ಪರಿಚಯ ಆಗಿದ್ದು, ಮೊದಲ ಬಾರಿ ಮಾತನಾಡಿದ್ದು 13-06-2012 ಅವರು ನನ್ನೊಂದಿಗೆ ಮಾತು ನಿಲ್ಲಿಸಿ ಮೌನವಾಗಿದ್ದು 13-06-2021 .

ಅಪ್ಪನ ಜೊತೆಯ ನೆನಪಿನ ಕೊನೆಯ ಪಯಣವೂ ಇದೇ ರೀತಿ ಆಂಬ್ಯುಲೆನ್ಸ್ ನಲ್ಲೇ ಸಾಗಿತ್ತು, ಅಷ್ಟೇ ಆಪ್ತನಾದ ಗೆಳೆಯನ ಜೊತೆಯ ಕೊನೆಯ ಪಯಣವೂ ಆಂಬ್ಯುಲೆನ್ಸಲ್ಲೇ ಸಾಗುವಂತಾಯಿತು. ಅದು ನಮ್ಮಿಬ್ಬರ ಪಾಲಿನ, ಜೀವನದಲ್ಲಿ ಮುಖ್ಯವಾದ ಹೆದ್ದಾರಿಯಲ್ಲಿ.
ಆ ಹೆದ್ದಾರಿಯಲ್ಲಿ ಒಂದೊಂದು ಹಂತದಲ್ಲೂ ಒಂದೊಂದು ನೆನಪುಗಳಿವೆ, ಪ್ರತೀ ಬಾರಿ ಹೋದಾಗಲೂ ಆ ನೆನಪುಗಳು ಕಾಡುತ್ತಲೇ ಇರುತ್ತವೆ, ಮಿಸ್ ಯೂ ‘ಸಂಚಾರಿ ವಿಜಯ್’ ಸರ್.

‍ಲೇಖಕರು Admin

June 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Varsha

    ಮನ್ಸೋರೆ ಅವ್ರು ಬರೆದಿರುವ ಸಾಲುಗಳನ್ನ ಓದುವಾಗ ಮತ್ತೆ ಕಣ್ಣಂಚಿನಲ್ಲಿ ನೀರು ತುಂಬಿತು.
    ಸವಿ ನೆನಪಾಗಿ ಉಳಿದ ಸಂಚಾರಿ ವಿಜಯ್ ಸರ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: