ಟಿಪ್ಪೂ ಜಯಂತಿಯ ಬದಲು ತಿಪ್ಪೆ ಜಯಂತಿ
ನಾಗೇಶ್ ಹೆಗಡೆ
ತಿಪ್ಪೆರುದ್ರಸ್ವಾಮಿಯ ಕೃಪಾಕಟಾಕ್ಷದಿಂದಾಗಿ ಟಿಪ್ಪೂ ಹುಟ್ಟಿದ ಎನ್ನುತ್ತಾರೆ.
ತಿಪ್ಪೆ ಎಂದರೆ ಹಿಂದಿನ ಕಾಲದಲ್ಲಿ ಹೇಸಿಗೆಯ ತಾಣ ಆಗಿರಲಿಲ್ಲ; ಬಳಸಿ ಬಿಸಾಕಿದ್ದನ್ನು ಮರುಬಳಕೆಗೆಂದು ಕೂಡಿಡುವ ತಾಣವಾಗಿತ್ತು. ಪಾರಂಪರಿಕ ಕೃಷಿಕರಿಗೆ ಅದು ಪೂಜಾರ್ಹ ತಾಣವೂ ಆಗಿತ್ತು. ಸಾವಯವ ತ್ಯಾಜ್ಯ ಮತ್ತು ಬೂದಿಯನ್ನು ಗುಂಡಿಗೆ ತುಂಬಿ ಎರಡು ಋತುಗಳ ನಂತರ ಪೂಜೆ ಮಾಡಿ ಮೇಲೆತ್ತಿ ಹೊಲಗಳಿಗೆ ಗೊಬ್ಬರ ರೂಪದಲ್ಲಿ ಉಣಿಸುವ ಪವಿತ್ರ ಕೆಲಸವಾಗಿತ್ತು.
ಈಗ ನಗರಗಳಲ್ಲಿ ತಿಪ್ಪೆ ಎಂಬುದು ಶಾಪಕೂಪವಾಗಿದೆ. ಅದರಲ್ಲಿ ನಂಜು ರಸಾಯನ ಮತ್ತು ಪ್ಲಾಸ್ಟಿಕ್ ಎಲ್ಲ ಸೇರಿ ಮೂಕಪ್ರಾಣಿಗಳಿಗೆ ಕಂಟಕಕಾರಿ ಆಗಿದೆ. ಅದಕ್ಕೆ ಆಗಾಗ ಬೆಂಕಿ ಕೊಟ್ಟು, ಹೊಗೆ ಎಬ್ಬಿಸಿ ಡಯಾಕ್ಸಿನ್ ವಿಷವನ್ನು ಊರಿಗೆಲ್ಲ ಹಂಚಿ, ವಾಯುಮಂಡಲವನ್ನೇ ಬಗ್ಗಡ ಮಾಡಲಾಗುತ್ತಿದೆ. ಪಂಜಾಬ್ ಹರ್ಯಾಣಾಗಳಲ್ಲಿ ಮೂರುವರೆ ಕೋಟಿ ಟನ್ ಹುಲ್ಲನ್ನು ಸುಟ್ಟು ಈಗ ದಿಲ್ಲಿಗೂ ಉಸಿರುಗಟ್ಟುತ್ತಿದೆ. ಸಂಪತ್ತಾಗಬೇಕಿದ್ದ ವಸ್ತು ಶಾಪವಾಗುತ್ತಿದೆ.
ಈ ಸಾಮೂಹಿಕ ಕುಕೃತ್ಯಗಳನ್ನು ಸರಿಪಡಿಸಬೇಕೆಂದರೆ ಸರಕಾರವೇ ಮುಂದಾಗಿ ಅಲ್ಲಲ್ಲಿ ‘ತಿಪ್ಪೆ ಉತ್ಸವ’ ನಡೆಸಬೇಕು. ಅದನ್ನು ಬೇಕಿದ್ದರೆ ‘ಟಿಪ್ಪೂ ಉತ್ಸವ’ ಎನ್ನೋಣ. ಸ್ವಚ್ಛ ಭಾರತ ಅಭಿಯಾನದ ಹರಿಕಾರರೂ ಕೈಜೋಡಿಸಿದರೆ ಜಗತ್ತಿಗೇ ಹೆಮ್ಮೆಯಿಂದ ತೋರಿಸಬಹುದಾದ ಒಂದು ಸಾಧನೆ ನಮ್ಮದಾಗಬಹುದು.





0 Comments