‘ನವ್ಯೋತ್ತರ ಕವಿಯಾದ ಕೆ.ಎಸ್ ನಿಸಾರ್ ಅಹಮದ್ ಅವರು ನವ್ಯರಾಗಿ ಬದಲಾಗಲು ಮುಖ್ಯ ಕಾರಣವೆಂದರೆ, ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಭಾರತೀಯ ಜೀವನದ ಎಲ್ಲ ಕ್ಷೇತ್ರಗಳೂ ಬದಲಾವಣೆಯ ಬಿರುಗಾಳಿಗೆ ಸಿಕ್ಕಿಕೊಂಡಿತು, ಜೀವನ ಬದಲಾದಂತೆ, ಅದರ ಪ್ರತಿಬಿಂಬವಾದ ಸಾಹಿತ್ಯವೂ ಬದಲಾಗಬೇಕಾದ ಅನಿವಾರ್ಯ ಮೂಡಿತು’ ಎಂದು ಹಿರಿಯ ನಾಟಕಕಾರ ವ್ಯಾಸ ದೇಶಪಾಂಡೆ ಅಭಿಪ್ರಾಯಪಟ್ಟರು.
ಹುಬ್ಬಳ್ಳಿಯ ‘ನಾಗಸುಧೆ ಕಾವ್ಯ ಜಗಲಿ’ಯ ‘ಕವಿ ಕಾವ್ಯ ಮಂಥನ’ ಕಾರ್ಯಕ್ರಮದ ಪೂರ್ವದಲ್ಲಿ ತಿಂಗಳ ಅತಿಥಿಯಾಗಿ ಮಾತನಾಡುತ್ತಾ ವ್ಯಾಸ ದೇಶಪಾಂಡೆ ಅವರು ತಾವು ನಾಟಕಕಾರರಾಗಿ ನಡೆದು ಬಂದ ದಾರಿಯ ಕುರಿತು ಹೇಳುತ್ತ, ಕವಿ ನಿಸಾರ್ ಬರಹದ ಕುರಿತು ಈ ಮೇಲಿನಂತೆ ವಿಶ್ಲೇಷಿಸಿದರು.
ನಂತರ ನಿಸಾರ್ ಅವರ ದ್ವಂದ್ವ, ಇನ್ನೊಂದು ಮುಖ, ಯಾಕಿಷ್ಟು ದೇವರುಗಳು, ಮುಖವಾಡಗಳೇ, ಎಲ್ಲಿದ್ದೀಯ ಕವಿತೆ, ಆಕಾಶಕ್ಕೆ ಸರಹದ್ದುಗಳಿಲ್ಲ ಮುಂತಾದ ಕವಿತೆಗಳ ವಾಚನ ಚರ್ಚೆ ಸಂವಾದಗಳು ಸುಧೀರ್ಘವಾಗಿ ನಡೆದವು. ಈ ಕವಿತೆಗಳ ವಾಚನದ ನಂತರ ಕವಿ ಕೃಷ್ಣ ನಾಯಕ ಹಿಚ್ಕಡ ಮಾತನಾಡುತ್ತಾ ‘ತಾವು ಭಾರತೀಯ ಸಮಾಜದಲ್ಲಿ ಎದುರಿಸಬೇಕಾದ ಹಲವು ಸಂಕಟದ ಸ್ಥಿತಿಯಲ್ಲಿಯೂ ನಿಸಾರ್, ಈ ದೇಶದ ನೆಲ ಜಲ ಗಿಡಮರಗಳ ಸೊಬಗನ್ನು ಅತ್ಯಂತ ಪ್ರೀತಿಯಿಂದ ಕಂಡು ಹಾಡಿದ್ದಾರೆ’ ಎಂದರು. ಸಹಕವಿಗಳಾದ ರಾಜು ದರ್ಗಾದವರ ಮತ್ತು ಮಲ್ಲಮ್ಮ ಚಲವಾದಿ ನಿಸಾರ್ ಕವಿತೆಗಳನ್ನು ಪ್ರಸ್ತುತಪಡಿಸಿದರು.
ಪ್ರಕಾಶ ಕಡಮೆ ನಿಸಾರ್ ರ ‘ಅಮ್ಮ ಆಚಾರ, ನಾನು’ ಕವಿತೆಯೊಂದಿಗೆ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುನಂದಾ ಕಡಮೆ ‘ಕವಿ ಕಾವ್ಯ ಮಂಥನ’ ಕಾರ್ಯಕ್ರಮವನ್ನು ಸಂಯೋಜಿಸಿ ವಂದಿಸಿದರು. ಎಂ.ಬಿ ಅಡ್ನೂರ, ಚನ್ನಪ್ಪ ಅಂಗಡಿ, ಸಿ.ಎಂ ಮುನಿಸ್ವಾಮಿ, ರಂಗನಾಥ ಕಂಟನಕು೦ಟೆ, ಲಲಿತಾ ಪಾಟೀಲ, ನಿರ್ಮಲಾ ಶೆಟ್ಟರ್, ಶಿವಾನಂದ ಉಳ್ಳಿಗೇರಿ, ವಿರುಪಾಕ್ಷ ಕಟ್ಟೀಮನಿ, ಶಂಕರಗೌಡ ಸಾತ್ಮಾರ. ಶಾಂತಲಾ ಗೋಕರ್ಣ, ಸುಭಾಸ ಶೆಟ್ಟಿ, ರೋಹಿಣ ಕೃಷ್ಣ, ಅರುಂಧತಿ, ಅರುಣಕುಮಾರ ಹಬ್ಬು, ಪುಷ್ಪಾ ಹಾಲಭಾವಿ, ಸಿ.ಎಂ ಚನ್ನಬಸಪ್ಪ, ಗುರುನಾಥ್, ಸೋಮಶೇಖರ ಇಟಗಿ, ವೈಭವ ಪೂಜಾರಿ, ಶಂಕರಗೌಡ ಸಾತ್ಮಾರ, ಸುರೇಶ ಹೊರಕೇರಿ, ಶಾರದಾ ಕೌದಿ, ಕಸ್ತೂರಿ ಮುಂತಾದವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
0 ಪ್ರತಿಕ್ರಿಯೆಗಳು