ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ವರ್ಷ ಹೀಗಿತ್ತು..

ನಾ ಸಂಪತ್ ಕುಮಾರ್ 

ಆತ್ಮೀಯರೇ,

೨೦೧೬ ಅನ್ನುವ ವರ್ಷ ನನಗೆ ಒಂದಲ್ಲ ಒಂದಲ್ಲ ಒಂದು ರೀತಿ ಮಹತ್ವದ ವರ್ಷವೇ. ಮುಖ್ಯವಾಗಿ ‘ಕಿರಗೂರಿನ ಗಯ್ಯಾಳಿಗಳು’, ‘ಸಿನೆಮಾ ಮೈ ಡಾರ್ಲಿಂಗ್’, ‘ಬಳ್ಳಾರಿ ದರ್ಬಾರ್’ ಈ ಮೂರೂ ಚಿತ್ರಗಳೂ ಇದೇ ವರ್ಷ ಬಿಡುಗಡೆಯಾದವು ಮತ್ತು ಮೂರೂ ಚಿತ್ರಗಳಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದೆ. ‘ಪುಷ್ಪಕ ವಿಮಾನ’, ‘ಶ್ರೀ ಕಂಠ’ ಜನವರಿ ೬ ಕ್ಕೆ ಬಿಡುಗಡೆಯಾಗಲು ತಯಾರಿವೆ. ‘ಮೂಕ ಹಕ್ಕಿ’ , ಇದೇ ವರ್ಷ ಚಿತ್ರೀಕರಣ ಮುಗಿಸಿದೆ.

ಆರ್ಥಿಕ ಸಂಕಷ್ಟ ಎದುರಿಸಿದ್ದು ಅಪಾರ. ವರ್ಷದ ಕೊನೆಗೆ ನೋಟು ರದ್ದತಿಯಿಂದ ಯಾವ ತಪ್ಪೂ ಇಲ್ಲದ ನಾನೂ ತೊಂದರೆ ಅನುಭವಿಸಿದ್ದು ಅಷ್ಟಿಷ್ಟಲ್ಲ (ನನ್ನಂತ ಅಸಂಖ್ಯಾತ ಮಂದಿ). ಕಷ್ಟಕ್ಕೆ ಯಾರನ್ನು ಕೇಳಿದರೂ ದುಡ್ಡು ಹುಟ್ಟದ ಪರಿಸ್ಥಿತಿಯನ್ನು ಇಡೀ ದೇಶ ಅನುಭವಿಸುತ್ತಿದೆ.

ಆಗಾಗ ‘ಮಂಟೇಸ್ವಾಮಿ ಕಥಾ ಪ್ರಸಂಗ’ ನಾಟಕ ಮರು ಪ್ರದರ್ಶನವಾಗುತ್ತಿರುವುದಷ್ಟೇ ರಂಭೂಮಿಯ ಚಟುವಟಿಕೆ.
ಸುಮಾರು ವರ್ಷಗಳಿಂದ ಕೇವಲ ಫೋನ್ ಸಂಪರ್ಕದಲ್ಲಿದ್ದ ಮಿತ್ರರು ಈ ವರ್ಷ ಒಬ್ಬರಿಗೊಬ್ಬರು ಸಿಗುವಷ್ಟು ಹತ್ತಿರಾಗಿದ್ದಾರೆ. ಹೊಸ ಗೆಳೆಯರೂ ಸಿಕ್ಕಿದ್ದಾರೆ. ವೃತ್ತಿ ಬದುಕಿಗೆ ಆಗಾಗ ಎಚ್ಚರಿಕೆ ನೀಡುವ ಅಕ್ಕ ಸಿಕ್ಕಿರುವುದು ಈ ವರ್ಷವೇ. ಹಾಗೆಯೇ ನನ್ನ ಪ್ರತಿ ಹೆಜ್ಜೆಯನ್ನೂ, ಉಸಿರನ್ನೂ, ಏಳು ಬೀಳುಗಳನ್ನು ಗಮನಿಸುತ್ತ , ಛೇಡಿಸುತ್ತ, ಬೈಯುತ್ತ, ಧೈರ್ಯ ತುಂಬುತ್ತ, ಹೆದರಿಸುತ್ತ, ಕನಸುಗಳನ್ನು ಮತ್ತಷ್ಟು ತಂದು ಸುರಿದಿರುವ ಗೆಳತಿ ಸಿಕ್ಕಿರೋದು ಈ ವರ್ಷವೇ.

ಒಂದು ಸಲ ಚಿತ್ರೀಕರಣದ ಸಮಯದಲ್ಲಿ ಬಿದ್ದು ಮಿದುಳಿನ ರಕ್ತಸ್ರಾವವಾಗಿ ಸಾವಿನ ಹತ್ತಿರ ನಿಂತು ಬಂದದ್ದು ಒಂದು ಕಡೆಯಾದರೆ ಮತ್ತೊಂದು ಸಲ ಗೊತ್ತಿರುವ ವಿದ್ಯೆಯೊಂದನ್ನು ಅನಿವಾರ್ಯವಾಗಿ ನನ್ನ ಮೇಲೆ ಪ್ರಯೋಗಿಸಿಕೊಂಡು ಕ್ಷಣ ಮಾತ್ರದಲ್ಲಿ ಬಚಾವಾಗಿದ್ದು ಇದೇ ೨೦೧೬ರಲ್ಲಿ..

ಹಾಗೆಯೇ ಮೈಸೂರಿನ ‘ಓಶೋ ಅಲ್ಲಮ’ ಸನ್ನಿದಿಗೆ ಹೋಗಿ ಧ್ಯಾನವನ್ನು ಕಲಿತು ಬಂದದ್ದು ನಂತರ ಬದುಕುವ ಕ್ರಮವನ್ನು ಸ್ವಲ್ಪ ಬದಲಾಯಿಸಿಕೊಂಡದ್ದು ಇದೇ ವರ್ಷ. ಅದೇನೆ ಇದ್ದರೂ ಹೆಚ್ಚು ಸಂಭ್ರಮಿಸಿದ ವರ್ಷವಿದು. ಇವತ್ತಿಗೆ ಮುಗಿಯುತ್ತಿರುವ ಈ ವರ್ಷಕ್ಕೆ ಅಭಿಮಾನದಿಂದ ವಿದಾಯವನ್ನು ಹೇಳುತ್ತ..

ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು..

‍ಲೇಖಕರು admin

1 January, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading