ಅಂಬಿಕಾ ಎಮ್
ಇವತ್ತಿಗೆ ಕೊರೊನಾ ಭಯದೊಂದಿಗೆ ಜೀವಿಸಿ ಹದಿನಾಲ್ಕು ದಿನವಾಯಿತು. ಅಂದಹಾಗೆ ಕೊರೊನಾ ಪಾಸಿಟೀವ್ ನನಗೆ ಆಗಿರಲಿಲ್ಲ. ನಮ್ಮ ಅಕ್ಕ ಮತ್ತು ಭಾವನಿಗೆ ಅವರು ಯಲಹಂಕಾ ಹತ್ತಿರದ ಹುಣಸೆ ಮಾರನಹಳ್ಳಿಯಲ್ಲಿ ವಾಸವಾಗಿದ್ದರು. ನಮ್ಮ ಭಾವನಿಗೆ ಮೊದಲು ಜ್ವರ, ನೆಗಡಿ ಇನ್ನಿತರ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡವು.
ತಕ್ಷಣ ಕೊರೊನಾ ಟೆಸ್ಟ್ ಸಿಟಿ ಸ್ಕ್ಯಾನ್ ಮಾಡಿಸಿದಾಗ ನೆಗೆಟಿವ್ ರಿಪೋರ್ಟ್ ಬಂತು ಅಬ್ಬಾ! ಮಹಾಮಾರಿಯಲ್ಲ ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ನಮ್ಮ ಅಕ್ಕನಿಗೆ ಜ್ವರ, ನೆಗಡಿ ಶುರುವಾಯಿತು ಪುನಃ ಕೋವಿಡ್ ಟೆಸ್ಟ್ ಸ್ಯಾಂಪಲ್ ನೀಡಿದರು ನಂತರ ನಮ್ಮ ಭಾವನಿಗೆ ಕೋವಿಡ್ ನೆಗೆಟಿವ್ ಬಂದದ್ದರಿಂದ ಯಲಹಂಕದಿಂದ ನಮ್ಮ ಊರಿಗೆ ಬನ್ನಿ ಎಂದು ಹೇಳಿ ಕರೆಸಿಕೊಂಡೆವು.
ಅಲ್ಲಿ ಮಾನಸ ಆಸ್ಪತ್ರೆಯಲ್ಲಿ ರಕ್ತ ಮತ್ತು ಯೂರಿನ್ ಪರೀಕ್ಷೆ ಮಾಡಿ ಅಲ್ಲಿನ ಡಾಕ್ಟರ್ ಟೈಫೈಡ್ ಮತ್ತು ಯೂರಿನ್ ಇನ್ಫೆಕ್ಷನ್ ಎಂದು ಆಸ್ಪತ್ರೆಗೆ ದಾಖಲು ಮಾಡಿಕೊಂಡರು. ಒಂದು ರಾತ್ರಿ ಕಳೆಯಿತು. ನಮ್ಮ ಅಮ್ಮ ಆಸ್ಪತ್ರೆಯಲ್ಲಿ ಅಕ್ಕನ ಜೊತೆಯಿದ್ದರು. ನಮ್ಮ ಭಾವ ನಮ್ಮ ಮನೆಯಲ್ಲಿ ಮಲಗಿದ್ದರು ಬೆಳಿಗ್ಗೆ ಆಗುವಷ್ಟರಲ್ಲಿ ಅವರಿಬ್ಬರಿಗೂ ಕೊರೊನಾ ಪಾಸಿಟೀವ್ ಎಂಬ ಮೆಸೇಜ್ ಬಂದಿತ್ತು. ಮನೆ ತುಂಬ ಆತಂಕದ ವಾತಾವರಣ ಕಾರಣ ಮನೆಯಲ್ಲಿ ಕೊರೊನಾ ಪಾಸಿಟೀವ್ ಆದ ನಮ್ಮ ಭಾವ ಜೊತೆಯಲ್ಲಿ 70ರ ನಮ್ಮ ಅಜ್ಜಿ 11 ತಿಂಗಳ ಅಣ್ಣನ ಮಗ ಇದ್ದ. ಇತ್ತಕಡೆ ಆಸ್ಪತ್ರೆಯಲ್ಲಿ ನಮ್ಮ ಅಕ್ಕನ ಜೊತೆ ನಮ್ಮ ಅಮ್ಮ ಇಂತಹ ಸಂದಿಗ್ಧ ಸ್ಥಿತಿ ನೆನೆಸಿಕೊಂಡರು.
ಭಯ ಕೊರೊನಾ ಮಹಾಮಾರಿ ಅಷ್ಟು ಆತಂಕ ಹುಟ್ಟಿಸಿದೆ. ನಮ್ಮ ಅಕ್ಕನ ಆರೋಗ್ಯ ಟೈಫೈಡ್, ಯೂರಿನ್ ಇನ್ ಫೆಕ್ಷನ್ ನಿಂದ ಸ್ವಲ್ಪ ಗಂಭೀರವಾಗಿತ್ತು. ಪೂರ್ತಿ ರೆಸ್ಟ್ ಬೇಕಿತ್ತು. ಅಲ್ಲಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಸೀದಾ ಯಲಹಂಕಾದ ಅವರ ಮನೆಗೆ ಕರೆದುಕೊಂಡು ಬಂದೆವು. ನಮ್ಮ ಅಕ್ಕ ಭಾವ ಇದ್ದ ಪರಿಸ್ಥಿತಿಯಲ್ಲಿ ಅವರಿಗೆ ಬಿಸಿಬಿಸಿ ಊಟ, ಪೋಷಕಾಂಶ ತುಂಬಿದ ಊಟ ಹಾರೈಕೆ ಅತ್ಯಧಿಕವಾಗಿತ್ತು. ನಾನು ಅವರ ಜೊತೆ ಬಂದು ಹಾರೈಕೆ ಮಾಡುವ ನಿರ್ಧಾರ ಮಾಡಿದೆ.
ಕೊರೊನಾ ಸೋಂಕು ನನಗೂ ತಗುಲಬಹುದು ಎಂಬ ಭಯದಲ್ಲೇ ಈ ನಿರ್ಧಾರ ತೆಗೆದುಕೊಂಡೆ ಅವರ ಜೊತೆಯಲ್ಲಿಯೇ ಅವರ ಮನೆಗೆ ಬಂದೆ ಇಲ್ಲಿಂದ ಕೊರೊನಾ ಹೋಗಲಾಡಿಸುವ ನಮ್ಮ ಪ್ರಯತ್ನ ಶುರುವಾಯಿತು. ನನ್ನ ಈ ಹದಿನಾಲ್ಕು ದಿನದ ದಿನಚರಿ ಹೇಗಿತ್ತು ಎಂದರೆ, ಎದ್ದ ತಕ್ಷಣ ಫ್ರೆಶಪ್ ಆಗಿ ಅಪರಿಚಿತ ಊರಿನಲ್ಲಿ ಹಾಲು ಬೇಕಾದ ಅಗತ್ಯ ಸಾಮಗ್ರಿ ಖರೀದಿಸಿ ನಿತ್ಯ ಬೆಳಿಗ್ಗೆ ಬಿಸಿನೀರು ಕಾಯಿಸಿಕೊಟ್ಟು ಅದರ ಜೊತೆ ಉಪ್ಪು, ಬೆಳ್ಳುಳ್ಳಿ ಗಾಗಲ್ ಮಾಡಲು ಕೊಟ್ಟು, ಚಕ್ಕೆ, ಲವಂಗ, ಏಲಕ್ಕಿ, ಮೆಣಸು, ಶುಂಠಿ, ಬೆಲ್ಲ ಹಾಕಿ ಕಷಾಯ ಮಾಡಿ ನಂತರ ಹಾಲು ಅರಿಶಿಣ ಬೆಲ್ಲ ಹಾಕಿ ಅವರಿಗೆ ಸೇವಿಸಲು ನೀಡಿ ತಕ್ಷಣವೇ ಬೆಳಿಗ್ಗಿನ ಟಿಫನ್ ರೆಡಿ ಮಾಡಿ ಅವರಿಗೆ ನೀಡಿ ತಿಂದು ಮುಗಿಸಿದ ಮತ್ತೊಂದು ಚಿಂತೆ ಶುರವಾಗುತ್ತಿತ್ತು.
ಮಧ್ಯಾಹ್ನದ ಊಟಕ್ಕೆ ಏನು ಮಾಡಲಿ ಅಂತ ಊಟಕ್ಕೆ ಸಿದ್ಧಪಡಿಸಿದ ನಂತರ ಸಿಂಕಿನ ತುಂಬಾ ಪಾತ್ರೆಗಳು ನೋಡಿ ಗಾಬರಿಯಾಗುತ್ತಿತ್ತು. ಅಷ್ಟೇ ಅಲ್ಲ ಮನೆಯನ್ನು ಸ್ಯಾನಿಟೈಸ್ ಮಾಡಿ ಸ್ವಚ್ಛಗೊಳಿಸುವ ಜವಾಬ್ದಾರಿಯು ನನ್ನದು ಇಷ್ಟೆಲ್ಲಾ ಮುಗಿಸಿ ಸ್ನಾನ ಮಾಡಿ ಬರುವಷ್ಟರಲ್ಲಿ ಸಂಜೆ 4 ಗಂಟೆ ಸ್ನಾನ ಮಾಡುವಾಗಲೂ ರಾತ್ರಿಗೆ ಊಟ ಏನು ಮಾಡಲಿ ಎಂಬ ಚಿಂತೆ, ಚಿಂತೆಯೊಂದಿಗೆ ಅವರಿಗೆ ಎನರ್ಜಿಗಾಗಿ ಏನಾದರೂ ಗಂಜಿ ಥರದ ಪ್ರೋಟೀನ್ ಫುಡ್ ನೀಡಿ ಎಂದಿದ್ದರು. ಹಲವರು ಅದರಂತೆಯೆ ರವೆ ಗಂಜಿ, ರಾಗಿ ಗಂಜಿ ಅಥವಾ ಓಟ್ಸ್ ಮಾಡಿಕೊಡುತ್ತಿದ್ದೆ. ಮತ್ತೆ ಕಷಾಯ ಮಾಡಿ ಶುಂಠಿ ಟೀ ಕುಡಿದ ಹಿಂದೆಯೇ ರಾತ್ರಿ ಊಟಕ್ಕೆ ರೆಡಿ ಮಾಡಿಕೊಳ್ಳುತ್ತಿದ್ದೆ.
ಸರಿಯಾದ ಸಮಯಕ್ಕೆ ಊಟ ರೆಡಿ ಮಾಡಿ ಇಡುತ್ತಿದ್ದೆ ಇಷ್ಟೆಲ್ಲಾ ಮಾಡಿ ಸುಧಾರಿಸಿಕೊಳ್ಳುವಷ್ಟರಲ್ಲಿ ಸಿಂಕ್ ತುಂಬಾ ಪಾತ್ರೆಗಳು ನನ್ನನ್ನು ಕರೆಯುತ್ತಿದ್ದವು. ಆ ಸಿಂಕ್ ನಲ್ಲಿ ನೀರು ಹೋಗಿಸುವುದೇ ದೊಡ್ಡ ಸವಾಲಾಗಿತ್ತು ನನಗೆ ಸಿಂಕ್ನಲ್ಲಿ ನೀರು ಹೋಗುವುದು ಕಡಿಮೆ ಮತ್ತು ಆಗಾಗ ಕಟ್ಟಿಕೊಳ್ಳುತ್ತು. ಅದನ್ನು ಕ್ಲೀನ್ ಮಾಡಿ ನಾನೂ ಊಟ ಮಾಡಿ ಮುಗಿಸುವಷ್ಟರಲ್ಲಿ ಸಾಕಾಗಿ ಹೋಗುತ್ತಿತ್ತು.
ಈ ದಿನಚರಿಯಲ್ಲಿ ನನ್ನ ಮುಖದಲ್ಲಿ ಮಾಸ್ಕ್, ಪದೇ ಪದೇ ಕೈ ತೊಳೆಯುವುದು, ಕೈಗೆ ಸ್ಯಾನಿಟೈಸರ್, ಹ್ಯಾಂಡ್ ಗ್ಲೌಸ್ ಹಾಕಿಕೊಳ್ಳುವುದು ಕಡ್ಡಾಯವಾಗಿತ್ತು. ಅದರಲ್ಲೂ ನಮ್ಮ ಅಕ್ಕನ ಮನೆ ಸಿಂಗಲ್ ಬೆಡ್ ರೂಮ್ ಒಂದೇ ವಾಷ್ ರೂಂ ಟಾಯ್ಲೆಟ್ ಮೂರೂ ಜನ ಒಂದೇ ಬಳಸಬೇಕಿತ್ತು. ಇದು ಇನ್ನೂ ಆತಂಕ ಹುಟ್ಟಿಸಿತ್ತು. ಕಾರಣ ಕೊರೊನಾ ನಮ್ಮ ಮನಸ್ಸುಗಳ ಭಯೋತ್ಪಾದಕ.
ಇಷ್ಟು ನನ್ನ ದಿನಚರಿ ಹದಿನಾಲ್ಕು ದಿನದ ನನ್ನ ಅಡುಗೆ ಮನೆಯ ಒಡನಾಟ ಮತ್ತು ಕೊರೊನಾ ರೋಗಿಗಳೊಂದಿಗಿನ ಕಳೆದ ದಿನ ನನಗೆ ಅಡುಗೆ ಮನೆಯಲ್ಲಿ ಪ್ರವೇಶಿಸಿದ ಪ್ರತಿಸಲ ‘ಗ್ರೇಟ್ ಇಂಡಿಯನ್ ಕಿಚನ್’ ಮಲಯಾಳಂ ಸಿನಿಮಾ ನೆನಪಾಗುತ್ತಿತ್ತು. ಎರಡು ಬಾರಿ ಸಿನಿಮಾ ನೋಡಿ ಪುರುಷ ಪ್ರಧಾನ ಸಮಾಜದ ಕುರಿತು ಕೋಪ ಬರುತ್ತಿತ್ತು. ಆದರೆ ಕಿಚನ್ ನಲ್ಲಿ ಕಳೆದ ನನ್ನ ಅನುಭವ. ಪ್ರತಿಯೊಂದು ಮನೆಯಲ್ಲೂ ಹೆಣ್ಣು ಮಕ್ಕಳು ಅವರ ಬಗ್ಗೆ ಅವರ ಆಸೆ ಆಕಾಂಕ್ಷೆಗಳ ಬಗ್ಗೆ ಒಂದು ಕ್ಷಣವೂ ಯೋಚನೆ ಮಾಡದೆ ಅಡುಗೆ ಮನೆಯಲ್ಲಿಯೇ ಅವರ ಜೀವನ ಬೇಯಸುತ್ತಿದ್ದಾರೆ.
ಹೆಣ್ಣುಮಕ್ಕಳು ಬೇಯಿಸಿ ಹಾಕುವುದ್ದನ್ನೇ ಕಾಯಿಕೊಂಡು ಊಟ ಮಾಡಿ ಆರಾಮಾಗಿ ಇರುವವರು ಕೊರೊನಾ ರೋಗಿಗಳ ಸಮ ಅನಿಸಿತು. ಒಂದು ವಿಷಯವೇನೆಂದರೆ ಕೊರೊನಾ ರೋಗಿಗಳ ಆರೈಕೆ ಮಾಡುವುದರಲ್ಲಿ ಒಂದು ಸತ್ಯ ಬಲವಾದ ಕಾರಣವಿದೆ. ಆದರೆ ಪ್ರತಿದಿನ ಸುಮ್ಮನೆ ಕುಳಿತು ಅವಳು ಮಾಡಿ ಇಡಲೇ ಇರುವುದು ಎಂಬ ಮನಸ್ಥಿತಿಗಳು ಒಮ್ಮೆ ಮನಸಾಕ್ಷಿಯಿಂದ ಕೇಳಿಕೊಳ್ಳಬೇಕು.
ಹದಿನೈದು ದಿನದ ಅನುಭವ ನನಗೆ ತುಂಬಾ ಕಲಿಸಿದೆ. ಓದಿಕೊಂಡು, ಚಿತ್ರ ಬರೆದುಕೊಂಡು ಮನೆಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ಇಲ್ಲಿ ನಿಭಾಯಿಸಿದ ಕೆಲಸ ತುಂಬಾ ದೊಡ್ಡದು ಹಾಗೂ ಹೊಸ ಅನುಭವ. ಸಧ್ಯ ನಮ್ಮ ಅಕ್ಕ ಭಾವ ಮತ್ತು ನಾನು ಮೂವರು ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಮಾಡಿಸಿದ್ದೆವು. ರಿಪೋರ್ಟ್ ಮೂವರದ್ದು ನೆಗೆಟಿವ್ ಬಂದಿದೆ. ತುಂಬಾ ಖುಷಿ ಆಯಿತು.
ಕೊನೆಯದಾಗಿ ಕೊರೊನಾಗೆ ಹೆದರುವುದು ಬೇಡ, ಜಾಗರೂಕರಾಗಿರಿ. ಧೈರ್ಯದಿಂದ ಆತ್ಮಸ್ತೈರ್ಯ ವೃದ್ಧಿಸಿಕೊಂಡು ಬಿಸಿ ನೀರು, ದಿನಕ್ಕೆ ಎರಡು ಬಾರಿ ಕಷಾಯ ಬಿಸಿ ನೀರಿನಲ್ಲಿ ದಿನಕ್ಕೆ 4 ಬಾರಿ ಸ್ಟೀಮ್, ಹಣ್ಣುಗಳು, ಸೊಪ್ಪು ತರಕಾರಿ ಸಮಯಕ್ಕೆ ಸರಿಯಾಗಿ ಊಟ ಡಾಕ್ಟರ್ ಗಳು ಸೂಚಿಸಿರುವ ಟ್ಯಾಬ್ಲೇಟ್ ಗಳು ತಗೊಂಡು ಆತ್ಮಸ್ತೈರ್ಯದಿಂದ ಇದ್ದರೆ ಸಾಕು. ಯಾವ ಮಹಾಮಾರಿಯು ನಮ್ಮನ್ನು ಏನು ಮಾಡಲಾಗದು ಕೊರೊನಾ ರೋಗಿಗಳೊಂದಿಗೆ ದೈಹಿಕವಾಗಿ ಅಂತರ ಕಾಯ್ದುಕೊಳ್ಳಿ ಅಷ್ಟೆ ಮಾನಸಿಕವಾಗಿ ಹತ್ತಿರವಾಗಿ ಆತ್ಮೀಯವಾಗಿರಿ ಎಂಬುದು ನನ್ನ ವಿನಂತಿ.
0 ಪ್ರತಿಕ್ರಿಯೆಗಳು