ಭುವಿ
ಪ್ರಬುದ್ಧತೆಯಲ್ಲಿ ಬುದ್ಧನಾಗದಿರು
ಹೌಹಾರುತ್ತೇನೆ
ನನ್ನೆದೆಯ ರಾಜ್ಯಭಾರಕೆ ನಿನದೆ ಕಿರೀಟವಿರಲಿ,
ಯಶೋಧರೆಯೆಂದೂ ಹಸ್ತಾಂತರಿಸಲಿಲ್ಲ ತ್ಯಾಗದ ಜ್ಯೋತಿಯನ್ನು ನನ್ನ ಅಂಗೈಗೆ,
ಜ್ಞಾನೋದಯಗಳಲ್ಲಿ ಉತ್ತರ ಸಿಗಬಹುದು ನಿನಗೆ,
ನಿರುತ್ತರಿ ನಾನು, ಸಸ್ಯದ ಜೀವಂತಿಕೆಯ ಕುರುಹೂ
ನನ್ನಲ್ಲಿ ಉಳಿಯದಾದೀತು;
ಸತ್ಯ ಬಿತ್ತರಿಸುತ್ತಾ ಮಹಾತ್ಮ ನೀ,
ಸುಳ್ಳು ಬಿದ್ದ ನನ್ನ ಸತ್ಯಗಳ ಸಾಲದ
ಲೆಕ್ಕ ಯಾರು ನಂಬಿಯಾರು ??
ಸಬಾತಿ ಹುಲುಮಾನವಿ ನಾ..
ನಿನ್ನ ಹಿತವಚನಗಳಲ್ಲಿ ಜೀವನದ ಅರ್ಥ
ಬಿತ್ತರಗೊಂಡಾಗ ಮೂಡಿದ ಗಂಭೀರತೆ
ಜೀವಂತ ಹೂತ ಚೆಲ್ಲುತನಕೆ
ಗೂಳಿಯಾಗಿ ಇರಿಯದಿರದು
ನಿನ್ನ ಪಾದುಕೆಗಳ ಭಾರ ಹೆಚ್ಚಾದದ್ದು
ನನ್ನ ನಾಡಿಗಳ ಗ್ರಹಿಕೆಗೆ ಸಿಲುಕಿ
ಉಮೇದಿಯಲ್ಲಿ ಸ್ತಬ್ಧಗೊಂಡ ಎದೆಗೆ,
ನೀನು ಹಿಂದಿರುಗಿ ನೋಡಿದ ನೋಟ
ಶರಣಾಗತಿಯ ಬಾಣ ಹೂಡಬಹುದು!
0 ಪ್ರತಿಕ್ರಿಯೆಗಳು