ಒಂದು ಕವಿತೆ
– ಶಾಂತಿ ಅಪ್ಪಣ್ಣ
ಹಸಿ ಸೌದೆ ನೀನು.
ಎಷ್ಟು ಹೊತ್ತಿಸಿದರೂ
ಹತ್ತಿಕೊಳ್ಳದೆ ನಿಡುಸುಯ್ಯುತ್ತಿರುವೆ …
ತಿಕ್ಕಿ ತೀಡಿ ಊದಿ ಒದರಿ..
ಓಲೈಸಿ….ಉಹೂಂ..
ನೀ ಉರಿಯದೆ ಸುಮ್ಮನಿರುವೆ..
ಬೂದಿಮುಚ್ಚಿದ ಕೆಂಡ ನಾನು
ಒಳಗೆ ಬಯಕೆ ಬೇಗೆ..
ಮೇಲೆ ನಿರ್ಬಲ ಪರದೆ..
ಗಾಳಿಯೊಂದು ನೆಪ…
ನನಗೋ ಉರಿದು ಧಗಧಗಿಸುವ ತವಕ ..
ನೀ ಉರಿಯಲೊಪ್ಪದೆ ಸುಮ್ಮನಿರುವೆ..
ಭಯ ನಿನಗೆ…
ನನ್ನೊಳಗೊಂದಾಗಿ..ಉರಿದು ಬೂದಿಯಾಗಿ..
ಅಸ್ತಿತ್ವವೇ ಕಳೆದುಹೊಗುವುದೇನೋ
ಎಂಬ ತಲ್ಲಣ..!
ಅದಕೇ ಇರಬೇಕು..
ನೀ ಚಿಟಿ ಚಿಟಿ ಚಡಪಡಿಸುತ್ತಿರುವೆ ..
ನನಗೂ ಭಯ..
ಎಲ್ಲಿ ನಿನಗಾಗಿ ಕಾದು ಕಾದು..
ಕಡೆಗೊಮ್ಮೆ ಆರಿ ತಣ್ಣಗಾಗಿ
ಬರಿಯ
ಇದ್ದಿಲಾಗಿ ಬಿಡುವೆನೋ ಎಂಬ ದಿಗಿಲು..
ನಾನೂ ತಳಮಳಿಸುತ್ತಿರುವೆ….
ಬಾ ನಲ್ಲ..
ಎಲ್ಲ ಮರೆತು …
ನೀ ನನ್ನೊಳಾಗಿ, ನಾ ನಿನ್ನೊಳಾಗಿ
ಇಬ್ಬರೊಂದಾಗಿ..
ಕೇವಲ ಒಂದೇ ಆಗಿ ..
ಬೆಳಕಾಗಿ ಬೆಂಕಿಯಾಗಿ ಉರಿದು ಬಿಡೋಣ…
ನಾನು ನೀನೆಂಬ ಎಲ್ಲ ಭೇಧಗಳ ತೊರೆದು..
ಅಹಂಕಾರವ ಸುಟ್ಟು..
ಹೊಸತೊಂದು ರೂಪದಲಿ ಐಕ್ಯವಾಗೋಣ






Nice Poem…ಇಷ್ಟ ಆಯ್ತು 🙂
TUMBA CHENNAGE MOODIBANDIDE
tumbaa chennaagide…