ಇಮ್ತಿಯಾಜ್ ಶಿರಸಂಗಿ
ದೂರದ ಕಾಡಿನಿಂದ ಹೊತ್ತು
ತಂದು ಉರಿಸುತ್ತಾಳೆ ಬದುಕಿನ
ಒಲೆ ಹೊರೆ ಕಟ್ಟಿಗೆಯಲ್ಲಿ..
ಅಪರಿಚಿತ ಊರಲ್ಲಿ
ಆಸರೆಯ ದಾರಿ ಸಿಕ್ಕಂತೆ
ಖುಷಿ ಪಡುತ್ತಾಳೆ,
ಸಿಕ್ಕಾಗ ಗಾಳಿಗೆ
ಮುರಿದು ಬಿದ್ದ
ಮರದ ದೊಡ್ಡ
ತುಣಕೊಂದು..

ಕಡುಕಷ್ಟ ಕೊಡುವ
ಕಾಲನ ವಿರುದ್ಧ ಸೆಣಸುತ್ತಾಳೆ,
ಹಿಡಿದು ಕೈಯಲ್ಲಿ ಕೊಡಲಿ,
ಬತ್ತದ ಭರವಸೆ ಜೊತೆಗೆ
ಅಳಿಸದ ವಿಶ್ವಾಸ…
ಅನ್ನ ಕುಚ್ಚಿ,
ತಾನು ಕುದ್ದು
ಸಾಕುತ್ತಾಳೆ,
ದುಡಿಯದೇ
ಕಾಯಿಲೆ ಬಿದ್ದ ಗಂಡನನ್ನು.
ಶಾಲೆಗೆ ಹೋಗುವ ಪುಟ್ಟ ಮಕ್ಕಳನ್ನು.
ಬಿಟ್ಟರೆ ಜಗತ್ತನ್ನು…

ಸಾಕುತ್ತಾಳೆ
ಜೊತೆ ಜೊತೆಗೆ
ನಾಳೆ ಫಲಿಸಬಹುದಾದ ಕನಸೊಂದನ್ನು
ತನ್ನೆಲ್ಲ ಕಷ್ಟಗಳೂಟ್ಟಿಗೆ ಜತನ ಮಾಡಿ…
ಇವಳು ಯಾರೆಂದರೆ,,,
ವಸಂತದೊಂದಿಗೆ ಖಾಯಂ ಮುನಿಸಿಕೊಂಡ ಕೋಗಿಲೆ,
ಸ್ಮಶಾನದಲ್ಲಿ ಅರಳಿನಿಂತ ನತದೃಷ್ಟ ಒಂಟಿ ಹೂ….






ಚೆಂದದ ಕವಿತೆ