ನಂದಿನಿ ಹೆದ್ದುರ್ಗ
ಕಂಪಿಸಿ
ಕಳಿಸಿದ ಸಂದೇಶವೊಂದು
ಅವನ
ನೋಟದ ನಂಜುಂಡು
ನೀಲಿಯಾಗಲು
ಕಾದು ಕನಲುತ್ತಿದೆ ಗೆಳತಿ
ಕಂಬನಿ ತುಂಬಿಕೊಂಡ
ಮುದ್ದು ಗೊಂಬೆಯಂತವಳು
ಹಠ ಹಿಡಿದು
ಭೀಕರ ನೋವಿನ
ಶಿಖರವೇರುತ್ತಿರುವಳು
ಹೊಡೆವ ಥಂಡಿಗೆ
ಮೈ
ಕೊರಡಾಗಬಹುದು
ಮನಸ್ಸು
ಬರಡಾಗಬಹುದು
ಕಾಯದಿರಲು ಹೇಳು
ಮನೆಯವರಿಗೆ
ಅವಳ
ಕಳೆದ ಉಂಗುರವೀಗ
ಮೀನಿನ
ಒಡಲಲ್ಲಿಲ್ಲ
ಕೊಳದ ತಳದಲ್ಲಿಲ್ಲ
ಅವನೆದೆಯ
ತಿಳಿವಲ್ಲೂ ಇಲ್ಲ
ಆ ಅಂಗಳಕೆ ಬರುವ
ಖಾಲಿ ಸಂಜೆಗಳಲಿ
ಕಂಡ ಹೊಂಗನಸ ಕುರುಹಿಲ್ಲ
ಉದುರಿದ ಹೂಪಕಳೆಗಳ
ಬೆಳಕಿಗೆ ಅವನ ಗಂಧವಿಲ್ಲ
ಗೆಳತಿ
ಕಾಲ ಕಾಲಕ್ಕೂ
ಇಲ್ಲಿ ಶಕುಂತಲೆಯರೇ
ಮತ್ತೆಮತ್ತೆ
ಹುಟ್ಟುವುದು.
ಇದು ಕಾರಣ…
ದುಷ್ಯಂತರನ್ನು
ದುರುಳರೆನ್ನಬಾರದಲ್ಲವೇ
ನಾವು?
Intresting