ಮೂಲ: ಸರ್ವೇಶ್ವರ್ ದಯಾಳ್ ಸಕ್ಸೇನ
ಕನ್ನಡಕ್ಕೆ: ವಿವೇಕ್
ನಿನ್ನ ಮನೆಯ ಒಂದು ಕೋಣೆಯಲ್ಲಿ ಬೆಂಕಿ ಹತ್ತಿ ಉರಿಯುತ್ತಿರುವಾಗ
ಪಕ್ಕದ ಕೋಣೆಗೆ ಹೋಗಿ ನೀನು ನಿದ್ರಿಸಬಲ್ಲೆಯಾ!
ನಿನ್ನ ಮನೆಯ ಒಂದು ಕೋಣೆಯಲ್ಲಿ ಶವಗಳು ಕೊಳೆಯುತ್ತಿರುವಾಗ
ಪಕ್ಕದ ಕೋಣೆಯಲ್ಲಿ ನೀನು ಪ್ರಾರ್ಥಿಸಬಲ್ಲೆಯಾ?
ನಿನ್ನ ಉತ್ತರ ಹೌದು ಎಂದಾದರೆ
ನಿನಗೆ ನಾನು ಏನೂ ಹೇಳಲಾರೆ.
ಒಂದು ಭಾಗ ಹರಿದರೂ ಇನ್ನೊಂದು ಭಾಗ ಹಾಗೇ ಗಟ್ಟಿಯಾಗಿರಲು
ದೇಶವು ಬರಿಯ ಕಾಗದದ ಮೇಲೆ ಗೀಚಿರುವ ನಕ್ಷೆಯೇನು?
ಇಲ್ಲಿನ ನದಿಗಳು ಬೆಟ್ಟ ನಗರ ಹಾಗು ಹಳ್ಳಿಗಳು
ವ್ಯಾಕುಲವಾಗಿರಲು ಹೇಗೆ ತಾನೆ ಸಾಧ್ಯ
ಇದನ್ನು ನೀನು ಒಪ್ಪುವುದಿಲ್ಲವಾದರೆ
ನಾನು ನಿನ್ನ ಸಂಗಡ ಇರಲು ಸಾಧ್ಯವಿಲ್ಲ
ಈ ಜಗತ್ತಿನಲ್ಲಿ ಮನುಷ್ಯನ ಜೀವಕ್ಕಿಂತ ಮಿಗಿಲು ಯಾವುದೂ ಇಲ್ಲ
ದೇವರಾಗಲಿ, ಜ್ಞಾನವಾಗಲಿ, ಚುನಾವಣೆಯಾಗಲಿ
ಯಾವುದೂ ಜೀವಕ್ಕಿಂತ ದೊಡ್ಡದಲ್ಲ
ಕಾಗದದ ಮೇಲೆ ಬರೆದ ರಿವಾಜುಗಳನ್ನು ಹರಿದು
ಭೂಮಿಯ ಏಳು ಪದರಗಳ ಕೆಳಗೆ ಹೂತುಬಿಡಬಹುದು
ಶವಗಳ ಟೇಕದಲ್ಲಿ ನಿಂತಿರುವ ವಿವೇಕ
ವಿವೇಕವಲ್ಲ; ಅದು ಕುರುಡುತನ
ಬಂದೂಕಿನ ಆಧಾರದಲ್ಲಿ ನಿಂತಿರುವ ಶಾಸನ
ಶಾಸನವಲ್ಲ; ಅದು ಕೊಲೆಗಾರರ ಧಂಧೆ
ಇದನ್ನು ನೀನು ಒಪ್ಪುವುದಿಲ್ಲವಾದರೆ
ಒಂದು ಕ್ಷಣವೂ ನಿನ್ನನ್ನು ನಾನು ಸಹಿಸಲಾರೆ.
ನೆನಪಿರಲಿ
ಒಂದು ಮಗುವಿನ ಹತ್ಯೆ
ಒಂದು ಹೆಣ್ಣಿನ ಸಾವು
ಗುಂಡುಗಳಿಂದ ನುಚ್ಚುನೂರಾದ ಇನ್ನೊಬ್ಬನ ದೇಹ
ಯಾವುದೋ ಶಾಸನದ್ದಲ್ಲ
ಇಡೀ ರಾಷ್ಟ್ರದ ಪತನವೆಂದು
ಹೀಗೆ ಹರಿದ ರಕ್ತವು ಭೂಮಿಯ ಒಳಹೋಗುವುದಿಲ್ಲ
ಆಗಸದಲ್ಲಿ ಹಾರಾಡುವ ಭಾವುಟವನ್ನು ಹರಿದು ಚೂರಾಗಿಸುತ್ತದೆ
ಯಾವ ನೆಲದಲ್ಲಿ ಸೈನ್ಯದ ಬೂಟಿನ ಗುರುತಿದೆಯೋ
ಹಾಗು ಆ ನೆಲದ ಮೇಲೆ ಶವಗಳು ಉರುಳುತ್ತಿವೆಯೋ
ಆ ನೆಲ ನಿನ್ನ ರಕ್ತದಲ್ಲಿ ಬೆಂಕಿಯಾಗಿ ಹರಿಯುತ್ತಿಲ್ಲ ಎಂದಾದಲ್ಲಿ
ತಿಳಿದುಕೋ ನೀನು ಅದಾಗಲೇ ಬಂಜರಾಗಿರುವೆಯೆಂದು
ಇಲ್ಲಿ ಉಸಿರಾಡುವ ಅಧಿಕಾರ ನಿನಗಿಲ್ಲ
ಕೊನೆಯ ಮಾತು
ನೇರವಾದ ಮಾತು
ಯಾವುದೇ ಕೊಲೆಗಾರನನ್ನು ಕ್ಷಮಿಸಬೇಡ
ಅದು ನಿನ್ನ ಸ್ನೇಹಿತನಾಗಿರಲಿ
ಧರ್ಮದ ಗುತ್ತಿಗೆದಾರನಾಗಿರಲಿ
ಅಥವಾ
ಈ ಲೋಕತಂತ್ರದ ಸ್ವಯಂಘೋಷಿತ ಚೌಕೀದಾರನೇ ಆಗಿರಲಿ.
ಕೊಲೆಗಾರನನ್ನು ಕ್ಷಮಿಸಬೇಡ.
ಶವಗಳ ಟೇಕದಲ್ಲಿ ನಿಂತಿರುವ ವಿವೇಕ
ವಿವೇಕವಲ್ಲ; ಅದು ಕುರುಡುತನ
ಎಂಥಾ ವಿವೇಕದ ಮಾತು…ಈ ದುರಿತ ಕಾಲದಲ್ಲಿ ಇಂಥ ಕವನಗಳು, ದೇಶದಲ್ಲಿ ನಡೆಯುತ್ತಿರುವ ದಳ್ಳುರಿಗೆ, ಅಂಧಾ ಕಾನೂನುಗಳಿಂದ ರೋಸೆದ್ದು, ಅಳುತ್ತಿರುವ ಹೃದಯವನ್ನು ಮತ್ತಷ್ಟು ಆರ್ದ್ರಗೊಳಿಸುತ್ತದೆ. ಅಂಥ ಹೃದಯಶೀಲನೊಂದಿಗೆ ಮತ್ತೊಬ್ಬ ಸಂಗಾತಿ ಇದ್ದಾನೆಂಬುವ ಸಮಾಧಾನ ತರುತ್ತದೆ.