ವಡ್ಡಗೆರೆ ಚಿನ್ನಸ್ವಾಮಿ
ನಾಡಿನ ಸಾಕ್ಷಿ ಪ್ರಜ್ಞೆ, ಕರುಣೆಯ ಕಡಲು ದೇವನೂರ ಮಹಾದೇವ ನನ್ನೊಂದಿಗೆ ಮಾತನಾಡಿದರು. ಕೃಷಿಯ ಬಗ್ಗೆ ನನ್ನಲ್ಲಿದ್ದ ಗೊಂದಲಗಳಿಗೆ ಉತ್ತರವಾದರು.
‘ಆಂದೋಲನ’ ಪತ್ರಿಕೆಯಲ್ಲಿ ಇಂದು ಶ್ರೀರಾಮನ್ ಬಗ್ಗೆ ಬರೆದಿದ್ದೀರಿ… ಅಂತ ಮಾತು ಶುರುಮಾಡಿ, ಕೃಷಿಯನ್ನು ಸುಸ್ಥಿರ ಎಂದು ಯಾಕೆ ಕರೆಯಲೇಬಾರದು ಅಂತ ಹೇಳುತ್ತಾ ಹೋದರು…
ಸಹಜವಾಗಿ ನಾವೆಲ್ಲ ‘ಸಸ್ಟೇನಬಲ್ ಅಗ್ರಿಕಲ್ಚರ್’ ಎಂಬ ಪದವನ್ನು ಕನ್ನಡದಲ್ಲಿ ‘ಸುಸ್ಥಿರ ಕೃಷಿ’ ಅಂತಲೇ ಕರೆದು ಬಿಡುತ್ತೇವೆ. ಆದರೆ ಹಾಗೆ ಕರೆಯುವಾಗ “ಸುಸ್ಥಿರ” ಪದದ ಅರ್ಥ ಸಾಧ್ಯತೆಗಳ ಬಗ್ಗೆ ಯೋಚಿಸಿರುವುದೇ ಇಲ್ಲ.
ದೇವನೂರ ಮಹಾದೇವ ಹೇಳುವುದನ್ನು ಕೇಳುತ್ತಾ ಹೋದಂತೆಲ್ಲಾ ಅವರ ಆಲೋಚನಾ ಕ್ರಮಕ್ಕೂ ನಮ್ಮ ಆಲೋಚನಾ ಕ್ರಮಕ್ಕೂ ಎಷ್ಟೊಂದು ಅಂತರವಿದೆಯಲ್ಲ ಅಂತ ಅನಿಸಿತು. ಸಮಾಜವನ್ನು ಅವರು ನೋಡುವ ಕ್ರಮದಿಂದಲೇ ದೇವನೂರ ಅವರು ನಾಡಿನ ಸಾಕ್ಷಿ ಪ್ರಜ್ಞೆಯಾಗಿದ್ದಾರೆ. ಬೇರೆಯವರಿಗಿಂತ ಭಿನ್ನವಾಗಿದ್ದಾರೆ ಅನಿಸಿತು.
ಬೇಸಾಯದ ಬಗ್ಗೆ ಅವರಾಡಿದ ಮಾತುಗಳನ್ನೇ ನಿಮ್ಮೊಂದಿಗೆ ಇಲ್ಲಿ ಹಂಚಿಕೊಂಡಿದ್ದೇನೆ…
“ಯಾವುದೂ ಸ್ಥಿರ ಅಲ್ಲ. ಸ್ಥಿರ ಅಲ್ಲಾ, ಆದ್ದರಿಂದನೇ ನಾವು ಬದಲಾವಣೆಯನ್ನ ಬಯಸ್ತಿರೋದು. ಸ್ಥಿರವಾದ್ರೆ ಸುಮ್ಮನೆ ಒಪ್ಪಕ್ಕಂಡು ಬದುಕ ಬಿಡಬಹುದು”.ಅಲ್ವಾ.
ಚೇಂಜ್ ಆಗುತ್ತೆ ಅನ್ನೋ ಕಾರಣಕ್ಕಾಗೇ ಒಳ್ಳೆದರ ಕಡೆಗೆ ಚೇಂಜ್ ಆಗಲಿ ಅಂತ ಬಯಸ್ತೀವಿ. ಇಲ್ಲದೆ ಇದ್ರೆ ನಾವು ಎಷ್ಟೇ ಒಳ್ಳೆದಾಗಲಿ ಅಂತ ಬಯಸಿದ್ರೂನುವೆ ಅದು ಸ್ಥಿರವಾಗಿದ್ರೆ ಹುಲ್ಲ ಕಡ್ಡಿನುವೆ ಅಲಗಾಡಲ್ಲಾ. ವಿಧಿ ವಾದ.
ಸ್ಥಿರ ಅನ್ನೋದು ವೈದಿಕ ಚಿಂತನೆ. ಸದಾ ಬದಲಾಗುತ್ತಿರುತ್ತೆ ಅನ್ನೊದು ಬೌದ್ಧ ಚಿಂತನೆ .ಅಲ್ವಾ. ಅದರಿಂದಲೇ ಜಾತಿ ಪದ್ಧತಿ ಸ್ಥಿರವಾಗಿದೆ.
ಸುಸ್ಥಿರ ಬೇಸಾಯ ಅನ್ನುವ ಬದಲು ತಾಳಿಕೆ-ಬಾಳಿಕೆ ಬೇಸಾಯ ಅಂತ ಕರಿಬೋದೇನೋ. ಅಲ್ವಾ.
ಅದಕ್ಕೆ ನಾನು ಅದನ್ನ “ಬೆಳಕಿನ ಬೇಸಾಯ “ಅಂತ ಕರಿತೀನಿ. ಮಣ್ಣನ್ನ ಹ್ಯೂಮಸ್ ಮಾಡಿದ್ರೆ ಬೇಸಾಯ ಗೆಲ್ಲುತ್ತೆ.
ನಾವು ಬೆಳೆಯುವ ಯಾವುದೇ ಬೆಳೆ ಇರಬಹುದು ಅದು ಶೇಕಡ 98.5 ರಷ್ಟನ್ನು ವಾತಾವರಣದಿಂದಲೇ ಪಡೆದುದ್ದಾಗಿರುತ್ತೆ.ಉಳಿದ ಶೇಕಡ 1.5 ರಷ್ಟನ್ನು ಮಾತ್ರ ಭೂಮಿಯಿಂದ ಪಡೆಯುತ್ತದೆ.
ಇದನ್ನ ನೀವು ರೈತರಿಗೆ ಅರ್ಥ ಮಾಡಿಸಬೇಕು.ಗೊತ್ತಾಯ್ತಲ್ಲಾ. ಮಣ್ಣಿಗೆ ಕಾಂಪೋಸ್ಟ್ ಹಾಕಿ ಬೆಳೆ ಬೆಳೆಯೋದು ಖರ್ಚೆ.
ಆದರೆ ಸುಭಾಷ್ ಪಾಳೇಕರ್ ಪದ್ಧತಿಯಲ್ಲಿ ಜೀವಾಮೃತ ನೀಡ್ತಾ, ಟ್ರಂಚ್ ಮಾಡಕಂಡು ಮಣ್ಣನ ಹ್ಯೂಮಸ್ ಮಾಡಕಂಡ್ರೆ ಖರ್ಚಇರಲ್ಲಾ.
ಮುಂದೆ ಹನಿ ನೀರಿಗೂ ತೊಂದ್ರೆ ಆಗಬೋದು.ಆಗ ನೆಲಕ್ಕೆ ಬಿದ್ದ ಇಬ್ಬನಿ ಕೂಡ ನಮಗೆ ಮುಖ್ಯ ಆಗುತ್ತೆ. ಇಬ್ಬನಿನೂ ಮಣ್ಣು ಹಿಡಿದಿಟ್ಟುಕೊಳ್ಳೊಥರ ಹ್ಯೂಮಸ್ ಕ್ರೀಯೆಟ್ ಮಾಡಬೇಕು..
ಇದೆಲ್ಲಾ ಪರಿಕಲ್ಪನೆಗಳು ಇಲ್ಲದೆ ಇರೋದರಿಂದ ಬೇರೆ ಬೇರೆ ಹೆಸರಲ್ಲಿ ನಾವು ಕೃಷಿನಾ ಕರಿತಿವಿ. ಅರ್ಥ ಆಯ್ತಲ್ಲಾ…”
ಸುಸ್ಥಿರ, ಸಮಗ್ರ ಬೇಸಾಯ ಅಂತ ನಾವು ಸಾಮಾನ್ಯವಾಗಿ ಕರೆಯುವ ಕೃಷಿ ಪದ್ಧತಿಗಳ ಕುರಿತು ದೇವನೂರ ಮಹದೇವ ಹೇಳುತ್ತಾ ಹೋದರು…… ಮಹಾದೇವ ನನ್ನ ಬರವಣಿಗೆಯನ್ನು ಗಮನಿಸುತ್ತಾರೆ ಎನ್ನುವುದೆ ನನ್ನಲ್ಲಿ ಆತಂಕ ಹುಟ್ಟಿಸಿತು. ಇದರಿಂದಾಗಿ ಬೇಜವಾಬ್ದಾರಿಯಿಂದ ಬರೆಯಲು ಆಗುವುದಿಲ್ಲ. ಪ್ರತಿ ಪದ ಬಳಕೆಯಲ್ಲೂ ಎಚ್ಚರ ಕಾಯ್ದುಕೊಳ್ಳಬೇಕು.ಜೊತೆಗೆ ಸತ್ಯದ ಮಾರ್ಗದಲ್ಲೇ ಇರಬೇಕು. ಇಷ್ಟೆಲ್ಲಾ ತೊಂದರೆಗಳು ನೋಡಿ.
ಅದಕ್ಕೆ ನಾನು ಗೆಳೆಯರಿಗರ ಸದಾ ಹೇಳುತ್ತಿರುತ್ತೇನೆ, ನಮ್ಮೆಲ್ಲರ ನೈತಿಕ ಪ್ರಜ್ಞೆಗೆ, ಸರಿಯಾದ ಮಾರ್ಗದಲ್ಲಿ ನಡೆಯಲು ಮಹಾದೇವ ಅವರ ಕಣ್ಗಾವಲು ಇರುವುದೆ ಆಗಿದೆ ಅಂತ.
ದೇವನೂರ ಮಹಾದೇವ ಅಂತವರು ನಮ್ಮನ್ನು ದೂರದಿಂದ ಗಮನಿಸದಿದ್ದರೆ ನಾವೂ ಕೂಡ ಜಾತಿ ಪ್ರಜ್ಞೆಯಲ್ಲಿ ನರಳುವ ಕ್ರಿಮಿಗಳಾಗಿ, ಭ್ರಷ್ಟರಾಗಿ ಬಿಡುವ ಅಪಾಯ ಇತ್ತು. ಅಷ್ಟರ ಮಟ್ಟಿಗೆ ನಾನು ನೈತಿಕತೆಯನ್ನು ಉಳಿಸಿಕೊಂಡಿದ್ದೇನೆ ಎನ್ನುವುದೆ ನನ್ನ ಬಗ್ಗೆ ನನಗಿರುವ ಹೆಮ್ಮೆ.
namaste..nija devanoor sir namma naadina prgneya saakshi. avaraadida matugagLu saahitya krushiguu anvaya madikoLLabahudallave?!…hanchikondiddakke dhanyavadagaLu..sir.