ಶಿವರುದ್ರಯ್ಯ ಅವರ ನಿರ್ದೇಶನದ ಮಾದೇವ ಅವರ ‘ ಮಾರಿಕೊಂಡವರು’ ಸಿನಿಮಾದ ಶೋ ಇತ್ತು.
ಚೆನ್ನಾಗಿದೆ.
ಚಿತ್ರದ ನಾಯಕ ಸುಲಿಲ್ ಕುಮಾರ್ ಥೇಟ್ ದೇವನೂರ ಮಹಾದೇವರ ಥರಾನೆ ಕಾಣ್ತಾರೆ. ತುಂಬಾ ಚೆನ್ನಾಗಿ ನಟಿಸಿದ್ದಾರೆ ಕೂಡ.
ಒಳ್ಳೆ ಫೋಟೋಗ್ರಫಿ, ಒಳ್ಳೇ ಸಂಗೀತ ಜೊತೆಗೆ ನಮ್ಮ ಸತ್ಯ, ದಿಲೀಪ್ ರಾಜ್ , ಸೋನು, ಸಂಯುಕ್ತ ಹೊರನಾಡು, ಸಂಚಾರಿ ವಿಜಯ್ ಮೊದಲಾದವರ ಒಳ್ಳೆ ಪಾತ್ರಗಳಿವೆ.
ಒಟ್ಟಿನಲ್ಲಿ ಕನ್ನಡಕ್ಕೆ ಒಂದು ಒಳ್ಳೆ ಸಿನಿಮಾ ಬಂದಿದೆ.
-ಹುಲಿಕುಂಟೆ ಮೂರ್ತಿ
ನಿರ್ದೇಶಕ ಶಿವರುದ್ರಯ್ಯ ಸದ್ದಿಲ್ಲದೆಯೇ ಹಾಗೊಂದು ಸಿನಿಮಾ ಮುಗಿಸಿದ್ದಾರೆ. ಅದು ಸಾಹಿತಿ ದೇವನೂರು ಮಹದೇವು ಅವರ ಕಥಾಸಂಕಲನದ ಕಥೆಗಳನ್ನು ಆಯ್ದು. ಅವರು ತಮ್ಮ ಚಿತ್ರಕ್ಕೆ ಇಟ್ಟುಕೊಂಡಿರುವ ಹೆಸರು “ಮಾರಿಕೊಂಡವರು’.
ದೇವನೂರು ಮಹದೇವು ಅವರ ಕಥಾಸಂಕಲನದಲ್ಲಿ ಒಂಭತ್ತು ಕಥೆಗಳಿವೆ. ಆ ಪೈಕಿ, ಶಿವರುದ್ರಯ್ಯ ಈ ಹಿಂದೆ “ಅಮಾಸ’ ಎಂಬ ಚಿತ್ರ ಮಾಡಿದ್ದರು. ಈಗ “ಡಾಂಬರು ಬಂದದ್ದು’, “ಮಾರಿಕೊಂಡವರು’ ಮತ್ತು “ಮೂಡಲ ಸೀಮೆಯಲ್ಲಿ ಕೊಲೆಗಿಲೆ ಮುಂತಾದವು’ ಕಥೆಗಳನ್ನು ಒಟ್ಟುಗೂಡಿಸಿ, “ಮಾರಿಕೊಂಡವರು’ ಶೀರ್ಷಿಕೆಯಡಿ ಸಿನಿಮಾ ಮಾಡಿದ್ದಾರೆ.
ನಿರ್ದೇಶಕರಿಗೆ ಇದು ಎಂಟನೇ ಸಿನಿಮಾ. ಬಹುತೇಕ ಕಾದಂಬರಿ ಆಧಾರಿತ ಚಿತ್ರಗಳನ್ನೇ ಮಾಡಿರುವ ಅವರು, ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕಳೆದ ಹದಿನೈದು ವರ್ಷಗಳ ಹಿಂದೆಯೇ ಈ ಸಿನಿಮಾ ಮಾಡಬೇಕು ಅಂದುಕೊಂಡಿದ್ದ ಅವರಿಗೆ ಅದು ಸಾಧ್ಯವಾಗಿರಲಿಲ್ಲ. ಕಾರಣ, ಚಿತ್ರಕ್ಕೆ ಬಜೆಟ್ ಕೊಂಚ ಹೆಚ್ಚು ಆಗುತ್ತೆ ಎಂಬುದು.
ದೇವನೂರು ಮಹದೇವು ಅವರ ಕಥಾಸಂಕಲನದ ಸಿನಿಮಾ ಅಂದಕೂಡಲೇ, ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು, ಎ.ಎಸ್.ವೆಂಕಟೇಶ್. ತಮ್ಮ ಅಕ್ಷರ ಕ್ರಿಯೇಷನ್ಸ್ ಬ್ಯಾನರ್ನಡಿ “ಮಾರಿಕೊಂಡವರು’ ಚಿತ್ರ ನಿರ್ಮಿಸುವ ಮೂಲಕ ಒಂದೊಳ್ಳೆಯ ಚಿತ್ರ ಕೊಡುವ ಉತ್ಸಾಹದಲ್ಲಿದ್ದಾರೆ. ಇವರಿಗೆ ಎಂ.ಗುರುರಾಜ್ ಸಾಥ್ ನೀಡಿದ್ದಾರೆ. ಈ ಸಿನಿಮಾ ಕುರಿತು ನಿರ್ದೇಶಕ ಶಿವರುದ್ರಯ್ಯ “ಉದಯವಾಣಿ’ ಜತೆ ಹೇಳಿಕೊಂಡಿದ್ದು ಹೀಗೆ.
“ಈ ಚಿತ್ರವನ್ನು ಮಾಡಬೇಕು ಅಂತ ಹಲವು ವರ್ಷಗಳಿಂದಲೂ ಸಾಕಷ್ಟು ಪ್ರಯತ್ನ ಮಾಡಿದ್ದೆ. ಆದರೆ, ಆಗಿರಲಿಲ್ಲ. ಎ.ಎಸ್.ವೆಂಕಟೇಶ್ ಅವರ ಸಹಕಾರ ಮತ್ತು ಪ್ರೋತ್ಸಾಹದಿಂದ ಚಿತ್ರ ಪೂರ್ಣಗೊಂಡಿದೆ. ಇಂತಹ ಚಿತ್ರಗಳಿಗೆ ಹಣ ಹಾಕಲು ಹಿಂದೆ ಮುಂದೆ ನೋಡದೆ, ನಮ್ಮ ತಂಡದ ಬೆನ್ನುತಟ್ಟಿ ಉತ್ಸಾಹದಿಂದ ನಿರ್ಮಾಣ ಮಾಡಿದ್ದಾರೆ. ಇದೂ ಕೂಡ ಮೆಚ್ಚುಗೆಯ ಚಿತ್ರವಾಗುತ್ತೆ. ಇದು ಕಲಾತ್ಮಕ ಚಿತ್ರ ಎನಿಸಿದರೂ, ಇಲ್ಲಿ ಕಮರ್ಷಿಯಲ್ ಅಂಶಗಳೂ ಇವೆ. ದೊಡ್ಡ ತಾರಾಬಳಗವೇ ಇದೆ. ಸರ್ದಾರ್ ಸತ್ಯ ಇಲ್ಲಿ ಹೀರೋ ಆಗಿ ನಟಿಸಿದರೆ, ಸಂಯುಕ್ತಾ ಹೊರನಾಡು ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ ಸೋನುಗೌಡ, ದಿಲೀಪ್ರಾಜ್, ಸಂಚಾರಿ ವಿಜಯ್ ಸೇರಿದಂತೆ ಇತರೆ ರಂಗಭೂಮಿಯ ಹಿರಿಯ ಕಲಾವಿದರು ನಟಿಸಿದ್ದಾರೆ.
ಇನ್ನು, ಚಿತ್ರಕ್ಕೆ ದೇವನೂರು ಮಹದೇವು ಅವರ ಬೆಂಬಲವಿದೆ. ಲಕ್ಷ್ಮೀಪತಿ ಕೋಲಾರ ಹಾಗು ದೇವನೂರು ಬಸವರಾಜು ಸಂಭಾಷಣೆ ಬರೆದಿದ್ದಾರೆ. 1975 ರಿಂದ 1980 ರ ಅವಧಿಯಲ್ಲಿ ನಡೆಯುವಂತಹ ಘಟನೆಗಳು ಚಿತ್ರದ ಹೈಲೈಟ್. ಊರೊಂದಕ್ಕೆ ಡಾಂಬರು ಹಾಕೋಕೆ ಮಂಜೂರು ಸಿಗುತ್ತೆ. ಆದರೆ, ಅದು ಊರಿನ ರಸ್ತೆಗೆ ಬಿಟ್ಟು, ನದಿ ಪಕ್ಕದ ರಸ್ತೆಗೆ ಡಾಂಬರು ಹಾಕಲಾಗುತ್ತೆ. ಆ ಸಮಯದಲ್ಲಿ ಐವರು ಯುವ ಪ್ರಗತಿಪರರು ಆ ವಿರುದ್ಧ ಹೋರಾಡುತ್ತಾರೆ. ಕೆಲವರು ಮರಳು ಸಾಗಿಸೋಕೆ ಮಾಡಿರುವ ಪ್ಲಾನ್ ಅದು ಅಂತ ತಿಳಿದು ಆ ವಿರುದ್ಧ ಧ್ವನಿ ಎತ್ತುತ್ತಾರೆ. ಇಲ್ಲಿ ಮರಳು ಮಾಫಿಯಾವನ್ನು ಸೂಕ್ಷ್ಮವಾಗಿ ಹೇಳಲಾಗಿದೆ. ಒಟ್ಟಾರೆ ಇದು ಕುಂಬಾರ, ಕಂಬಾರ, ಬ್ರಾಹ್ಮಣ, ಅಯ್ಯಂಗಾರ್ ಹುಡುಗರು ಒಂದಾಗಿ ಜಾತಿ, ಧರ್ಮ ಮರೆತು ಪರಿಸರಕ್ಕಾಗಿ ಹೋರಾಡುವ ಕಥೆ. ಇಲ್ಲಿ ದೇವನೂರು ಮಹದೇವು ಅವರ ಕಥೆಯಾಧರಿತ ಸಿನಿಮಾ ಅಂತಾನೇ ಬಹಳಷ್ಟು ಮಂದಿ ಪ್ರೀತಿಯಿಂದ ನಟಿಸಿದ್ದಾರೆ.
ಶಶಿಧರ ಅಡಪ ಕಲಾನಿರ್ದೇಶನವಿದೆ ಎಸ್.ಪಿ.ವೆಂಕಟೇಶ್ ಇಲ್ಲಿ ಎರಡು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಇಸಾಕ್ ಥಾಮಸ್ ಹಿನ್ನೆಲೆ ಸಂಗೀತವಿದೆ. ಸುರೇಶ್ ಅರಸ್ ಕತ್ತರಿ ಹಿಡಿದಿದ್ದಾರೆ. ಚಾಮರಾಜನಗರ, ನಂಜನಗೂಡು, ತಾವರಕೆರೆ, ಬೆಂಗಳೂರು, ಚನ್ನಪಟ್ಟಣ್ಣ, ರಾಮನಗರ ಸುತ್ತಮುತ್ತ ಚಿತ್ರೀಕರಿಸಲಾಗಿದೆ’ ಎಂದು ವಿವರ ಕೊಡುತ್ತಾರೆ ಶಿವರುದ್ರಯ್ಯ.
-ಉದಯವಾಣಿ
0 ಪ್ರತಿಕ್ರಿಯೆಗಳು