ಮೂಲತಃ ದಕ್ಷಿಣ ಕನ್ನಡದ ಮರವಂತೆಯವರಾದ ದೀಪ್ತಿ ಭದ್ರಾವತಿ ತಮ್ಮ ಹೆಸರಿನ ಜೊತೆ ಭದ್ರಾವತಿ ಸೇರಿಸಿಕೊಳ್ಳುವುದರೊಂದಿಗೆ ಪಕ್ಕಾ ಭದ್ರಾವತಿಯ ವರೆ ಆಗಿಹೋಗಿದ್ದಾರೆ.
ಓದಿದ್ದು ಪತ್ರಿಕೋದ್ಯಮ ಹಾಗೂ ಕನ್ನಡ ಆದರೂ ಕೆಲಸ ಮಾಡುತ್ತಿರುವುದು ಆರೋಗ್ಯ ಇಲಾಖೆಯಲ್ಲಿ. ಕವಿತೆ, ಕಥೆ ಇವರನ್ನು ಸದಾ ಜೀವಂತವಾಗಿಟ್ಟಿರುವ ಸಂಗಾತಿಗಳು.
ಕಾಗದದ ಕುದುರೆ, ಗ್ರೀನ್ ರೂಮಿನಲ್ಲಿ, ಆ ಬದಿಯ ಹೂವು, ಗೀರು ಇವರ ಕೃತಿಗಳು.
೨೦೨೦ ನೇ ಸಾಲಿನ ಪ್ರತಿಷ್ಠಿತ ವಿಭಾ ಸಾಹಿತ್ಯ ಪ್ರಶಸ್ತಿ ಘೋಷಿಸಲಾಗಿದ್ದು ದೀಪ್ತಿ ಅವರಿಗೆ ಸಂದಿದೆ.
‘ಅಷ್ಟೇ’ ಬಹುಮಾನ ಗೆದ್ದ ಹಸ್ತಪ್ರತಿ
ಈ ಹಿನ್ನೆಲೆಯಲ್ಲಿ ʼಅವಧಿʼ ನಡೆಸಿದ ಫಟಾ ಫಟ್ ಸಂದರ್ಶನ ಇಲ್ಲಿದೆ.
ʼಅಷ್ಟೇʼ ಕೃತಿಗೆ ವಿಭಾ ಸಾಹಿತ್ಯ ಪ್ರಶಸ್ತಿ ದೊರೆತಿರುವುದು ಹೇಗನ್ನಿಸುತ್ತಿದೆ.?
> ತುಸು ಹೆಚ್ಚೆ ಖುಷಿಯಲ್ಲಿದಿನಿ. ಎಂಟು ವರ್ಷಗಳಲ್ಲಿ ಬರೆದ ಕವಿತೆಗಳಿವು. ಇದಕ್ಕೆ ಪ್ರಶಸ್ತಿ ದೊರೆತಿರುವುದು ಖುಷಿ ತಂದಿದೆ.
ವಿಭಾ ಸಾಹಿತ್ಯ ಪ್ರಶಸ್ತಿ ನಿಮಗೆ ಎಷ್ಟನೇ ಪ್ರಶಸ್ತಿ ?
> ಬಹುಶಃ ಹದಿಮೂರೋ, ಹದಿನಾಲ್ಕೋ ಇರಬಹುದು ಸರಿಯಾಗಿ ಗೊತ್ತಿಲ್ಲ.
ʼಅಷ್ಟೇʼ ಕವನಗಳನ್ನು ಬರೆದಾಗಿನ ಅನುಭವ ಹೇಗಿತ್ತು?
> ಇವು ಒಂದು ಘಳಿಗೆಯಲ್ಲಿ ಕೂತು ಬರೆದ ಕವಿತಗಳು ಅಲ್ಲವೇ ಅಲ್ಲ. ಸುದೀರ್ಘ ಎಂಟು ವರ್ಷದಲ್ಲಿ ನನಗೋಸ್ಕರ ನಾನೇ ಬರೆದ ಕವಿತೆಗಳಿವು.
ಮುಂದಿನ ಕೃತಿ ಯಾವುದು?
> ಎಂಭತ್ತರ ದಶಕದ ಭದ್ರಾವತಿಯ ಚಿತ್ರಣವನ್ನ ಕಟ್ಟಿಕೊಡುವ ಕಾದಂಬರಿವೊಂದನ್ನು ಬರೆಯುತ್ತಿದ್ದೇನೆ. ಅದು ಪೂರ್ಣಗೊಳ್ಳುವುದಕ್ಕೆ ಸ್ವಲ್ಪ ಸಮಯ ಹಿಡಿಯುತ್ತಿದೆ.
ಪತ್ರಿಕೋದ್ಯಮ ಓದಿ ಆರೋಗ್ಯ ಇಲಾಖೆಯಲ್ಲಿ??
> ನನಗೆ ಡಾಕ್ಟರ್ ಆಗಬೇಕು ಅನ್ನುವ ದೊಡ್ಡ ಕನಸು. ವೈಯಕ್ತಿಕ ಕಾರಣಗಳಿಂದಾಗಿ ಅದು ಆಗಲಿಲ್ಲ. ಹಾಗಾಗಿ ಪತ್ರಿಕೋದ್ಯಮ ಡಿಪ್ಲೋಮಾ ಮಾಡಿದೆ. ನಂತರ ನನಗೆ ಆರೋಗ್ಯ ಇಲಾಖೆಯಲ್ಲಿ ಕೆಲಸ ಸಿಕ್ಕಿತು ಇಲ್ಲಿಯೇ ಮುಂದುವರೆದೆ.
ಅಷ್ಟೇʼ ನಿಮಗೆಷ್ಟು ಆಪ್ತ ?
> ಆಗ್ಲೇ ಹೇಳಿದಹಾಗೆ ಯಾವುದೋ ಘಳಿಗೆಯಲ್ಲಿ ಯಾವುದೋ ಕಾಡಿದ ವಿಚಾರಗಳಿಗೆ ಬರೆದ ಕವಿತೆಗಳಿವು ಹೀಗಾಗಿ ತುಂಬಾ ಆಪ್ತ.
ನಿಮ್ಮ ಕೃತಿಗಳಿಗೆ ವಿಮರ್ಶಾ ಲೋಕದ ಪ್ರತಿಕ್ರೀಯೆ ಹೇಗಿದೆ?
> ಬಹಳಷ್ಟು ಹಿರಿಯರು ಪ್ರೋತ್ಸಾಹಿಸಿದ್ದಾರೆ. ಬೆನ್ನು ತಟ್ಟಿದ್ದಾರೆ, ಪ್ರತಿಕ್ರಿಯೆ ತುಂಬಾ ಚೆನ್ನಾಗಿವೆ.
ಕತೆ, ಕವಿತೆ ಯಾವುದು ನಿಮ್ಮ ಹೃದಯಕ್ಕೆ ಆಪ್ತ ?
> ಕವಿತೆಗಳಿಗಿಂತ ಕತೆ ಹೆಚ್ಚು ಹೃದಯಕ್ಕೆ ಆಪ್ತ.
ಪ್ರೀತಿಯ ಗೆಳತಿ ದೀಪ್ತಿ. ಅಭಿನಂದನೆಗಳು ಕಳೆದ ವರ್ಷ ನಿಮ್ಮ ” ಗೀರು” ಕಥಾಸಂಕಲನ ಬಿಡುಗಡೆ ಕಾರ್ಯಕ್ರಮ ಕ್ಕೆ ಭದ್ರಾವತಿ ಗೆ ಬಂದಾಗ ತುಂಬಾ ಸಡಗರ. ಹೆಗ್ಗೋಡು ಸಂಸ್ಕೃತಿ ಶಿಬಿರದಲ್ಲಿ ಒಂದು ವಾರ ಸಾಹಿತ್ಯ ರಂಗಭೂಮಿಯ ಪರ್ವದಲ್ಲಿ ಸಂಭ್ರಮದಿಂದ ಕಳೆದಿದ್ವಿ . ಸಾಹಿತ್ಯ ಲೋಕದಲ್ಲಿ ನಿಮ್ಮ journey ಗೆ ಇನ್ನಷ್ಟು ಸಿಗಲಿ. ಮತ್ತೊಮ್ಮೆ ಅಭಿನಂದನೆಗಳು.
ಅಭಿನಂದನೆ ಗೆಳತಿ…ಸಾಧನೆ ,ಯಶಸ್ಸು ನಿರಂತರವಾಗಿರಲಿ.
ಅಭಿನಂದನೆಗಳು ದೀಪ್ತಿ, ನಿಮ್ಮ ಕವಿತೆ/ ಕತೆಗಳ ಅಭಿಮಾನಿ ನಾನು.