ದೀಪಾ ಗೋನಾಳ
ಕಾಗದದ ನೋಟುಗಳು
ಕಾಗದದಲ್ಲಿ ಸುತ್ತಿ ತಂದನು
ವಿಚಿತ್ರ ಬಣ್ಣ
ವಿಧವಿಧ ಆಕಾರ
ಬೆಲೆ ಕೇಳಿದರೆ
ಬಾಯ್ಮೆಲೆ ಬೆರಳಿಡುವರು
ದುಡ್ಡಿನ ಬೆಲೆ ತಿಳಿದವರು
ನಾನೋ ದುಡ್ಡಿನ
ದರ್ಪಕ್ಕೆ ಮಣಿಯದ
ಮಣ್ಣು ಅಲ್ಲಲ್ಲಾ
ಹೆಣ್ಣು!!
ಹೆಣ್ಣೊ? ಮಣ್ಣೊ?
ಈ ನೆಲದಲ್ಲಿ
ಅಂತ ವ್ಯತ್ಯಾಸವೇನಿಲ್ಲ
ಎರಡೂ ಕಾಲ್ಗೆಳಗೆ
ಒಂದೊಂದರ ಮೇಲೂ
ಗಾಂಧಿ ಫೊಟೊ
ಹಲ್ಲಿಲ್ಲದ ಬಾಯಿಗೆ
ನಗೆಯ ತೇಪೆ
ಕನ್ನಡಿ ಇಲ್ಲದ
ಕನ್ನಡಕಕ್ಕೆ ದೃಷ್ಟಿ
ಇದ್ದಿದ್ದರೆ..!!
ಕನಸು ಕಂಡ ಕಂಗಳಲಿ
ಕಣ್ಣೀರು ಉದುರುತ್ತಿತ್ತಾ!?
ನೋಟು ತೋಯ್ದಿತು
ಸುಮ್ಮನಿರು ತಾತ !!
ಎನ್ನಿತ್ತಿದ್ದರು ಭವ್ಯ ಭಾರತದ
ಭಾವಿ ಪ್ರಜೆಗಳು
ನೋಟುಗಳನು ನೋಡಲಿಲ್ಲ
ಎತ್ತಿ ಹಿಡಿದು ಎಣಿಸಲಿಲ್ಲ
ಅವನು ಹೇಳಿದ ಎರಡು ಲಕ್ಷ ಇದೆ..
ನಾನೂ ಹೇಳಿದೆ
ಅಲ್ಲಿಡು..
ಅಷ್ಟೆ,
ಇಟ್ಟ,ಹೊರಟ;
ಇನ್ನೊಬ್ಬ ಬಂದ
ನನ್ನ ಲಕ್ಷ್ಯ ಬೇರೆಡೆ
ಇರುವಾಗ ಈ ಲಕ್ಷ
ಎತ್ತಿಕೊಂಡು ಹೋದ..
ನಾನು ಮಗ್ನಳಾಗಿದ್ದೆ
ಒಂದು ಗಾಂಧಿ ಕವಿತೆ
ಓದುವುದರಲ್ಲಿ-
ಚಳಿಗೆ ತರಗುಟ್ಟುವ
ಬರೀ ಮೈಯಲ್ಲಿ
ತಿರುಗಿದನಲ್ಲ ನಿಲ್ಲದೆ
ನಡೆದೆ ಇದ್ದನಲ್ಲ
ದಾಸ್ಯವನ್ನು ಕಳೆಯುವುದರಲ್ಲೆ
ತನ್ನ ಕಳೆದುಕೊಂಡನಲ್ಲ
-ಎಂದು ಬೆರಗಾಗುವುದರಲ್ಲಿ
ಬೆಂಕಿಯ ಕಿಡಿಯನು
ಬೆರಳಲಿ ಪಿಡಿದು
ಸಾಲು ದೀಪ ಬೆಳಗುವುದರಲ್ಲಿ
0 ಪ್ರತಿಕ್ರಿಯೆಗಳು