ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಾಲಿಮನಿಯ ಮುರಿದ ಗೂಟಕ್ಕೆ ಹರಿದು ನೇತಾಡುತ್ತಿತ್ತು…

ದಪ್ಪು

IMG_4180

ಲಕ್ಷ್ಮಿಕಾಂತ ಇಟ್ನಾಳ್

Sannata

ಅಪ್ಪನ ಬಯಲಾಟದ ಹಾಡಿನಲ್ಲಿ ಅದು ಹೇಗೆ ಕುಣಿದು ಕುಪ್ಪಳಿಸಿತ್ತು ಆ ದಪ್ಪು
ಅಪ್ಪನಿಗೆ ಎದೆಗಪ್ಪಿ ನಕ್ಕಿತ್ತು, ಇವನಪ್ಪಿದ್ದನೋ, ಅದೇ ಅಪ್ಪಿತ್ತೋ, ಗೊತ್ತಾಗದ ಹೊತ್ತು

‘ಬಾ ಗಜವದನ…ಇದೋ ಕರುಣಾ’ ನಾಂದಿಯಿಂದಲೇ ‘ತಿಕ್ಕಡ್ ತಿಕ್ಕಡ್ ತಿಕ್ಕಡ್ ಥಾ’ ತಾಳಕ್ಕೆ
ರಾತ್ರಿಯೆಂಬ ರಾತ್ರಿಯೇ ಮರುಳು ಗಾನಕ್ಕೆ, ಚುಕ್ಕಿ ಚಂದ್ರಮರು ಹಾಜರು, ದಪ್ಪಿನ ನಾದಕ್ಕೆ
‘ಥೋಂ ತತಜನ, ಥೀಂ ತತಜನ, ಥೋ ಂ ತತಜನ ಥಾ, ….ಥಯಾ ಥೋಂ ತತಜನ ಥಾ’
ಆಟದ ಮಾಟಕ್ಕೆ ಸಭೆ ಮಂತ್ರಮುಗ್ಧ, ಲಯ ಹೇಗೆ ಗೋಣು ಹಾಕಿಸುತ್ತಿತ್ತು, ನೀವು ನೊಡಬೇಕಿತ್ತು,
ರಂಭೆ ಊರ್ವಶಿ ದ್ರೌಪದಿ, ಸಾವಿತ್ರಿ ಶೂರ್ಪಣಖಿಯರ ಸಂತೆ ಅಲ್ಲಿ, ತಾಲಿಮನಿಯಲ್ಲಿ
ಅಸಲು ಎಲ್ಲ ಗಂಡಸರೇ,…. ನೇಪಥ್ಯದಲ್ಲಿ ಚೋಪಡಿ ಹಿಡಿದು ‘ಚುಟ್ಟಾ’ ಸೇದುತ್ತಿದ್ದರು
ಭೀಮ, ದುರ್ಯೋಧನ,ಕೀಚಕ, ಅರ್ಜುನ, ರಾಮ, ಕೃಷ್ಣರೆಲ್ಲರೂ ನೆರೆದಿದ್ದರಲ್ಲಿ .
‘ಕಂಟ್ರಿ ಸಾರಾಯಿ’ ಯಲ್ಲಿ ಮಿಂದು ಬಂದಿದ್ದರೆಲ್ಲ, …ಸಂಜೆಯಿಂದಲೇ ಸೋಗಿನಲ್ಲಿ
ದ್ರೌಪದಿಯ ವಸ್ತ್ರಾಪಹರಣಕ್ಕಂತೂ ಊರಿಗೆ ಊರೇ ನೆರೆದಿತ್ತು, ಧಾವಂತದಲ್ಲಿ ಓಡಿ
ತಮ್ಮ ಮನೆಯ ಸೀರೆಯನ್ನು ಎಲ್ಲಿ ಜೋಡಿಸಿದ್ದಾರೆ ಎನ್ನುವ ಕೂತೂಹಲವೂ ಕೂಡಿ
ಮಹಾಭಾರತ ಯುದ್ಧದಲ್ಲಿ ಸತ್ತ ಶವಗಳಂತೆ ಕಾಣುತ್ತಿದ್ದರು ಕೆಲ ಅಮಲಿನ ಸಭಿಕರು
ಊರ ಹೆಂಗಳೆಯರ ಮಾತು ಸೋಲುತ್ತಿದ್ದುದು ಇದೊಂದು ರಾತ್ರಿಯಲ್ಲಿ ಮಾತ್ರ
ಸೋಗಿನಲ್ಲಿ ಹುಡುಗರ ಆಟಕ್ಕೆ , ಮನೆಯವರಿಗೆ ಮೂಡಿದ ಕೋಡು ನೋಡಬೇಕಿತ್ತು
ನಡುನಡುವೆ ಬರುವ ಅಡ್ಡಸೋಗುಗಳು ನಗಿಸುವ ಪರಿಯನ್ನು ಕಣ್ಣಾರೆ ಕಾಣಬೇಕಿತ್ತು
ಬೆಳಗಾದಂತೆ ಅಪ್ಪನ ಕೈಬೆರಳುಗಳೊಡೆದು ‘ರಗತ’ ದಪ್ಪಿನ ಚರ್ಮದಲ್ಲಿ ಸೋರುತ್ತಿತ್ತು
ಬಲು ಕರುಣಿ ಅದು , ಗೆಳೆಯನ ಹಾಗೆ, ಮೈ ಸಡಿಲಾಗಿಸಿ ಬೆರಳಿನ ಕಾಳಜಿ ಮಾಡುತ್ತಿತ್ತು
ಮೊನ್ನೆ ಅಪ್ಪನಿಲ್ಲದ ಊರಿಗೆ ಹೋದಾಗ, ಬಯಲಾಟದ ಆ ಜಾಗಕ್ಕೆ ಹೋದೆ,
ತಾಲಿಮನಿಯ ಮುರಿದ ಗೂಟಕ್ಕೆ ಹರಿದು ನೇತಾಡುತ್ತಿತ್ತು …, ನೇಣುಹಾಕಿದಂತೆ ದಪ್ಪು!

‍ಲೇಖಕರು G

27 September, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading