ರಾಮಯ್ಯನೆಂಬ ತಂಬೂರಿ, ಹಂದಲಗೆರೆ ಕವಿ, ನಾದ ಮತ್ತು ಏಕದಾರಿ
ನಾದ ಮಣಿನಾಲ್ಕೂರು
ರಾಶಿ ರಾಶಿ ಸೋರೆ ಬುರುಡೆ… ಬಿದಿರ ಕೋಲುಗಳು,
ಬೋಕಿ ಬಿಲ್ಲೆ … ಇದೆಲ್ಲದರ ಮಧ್ಯೆ ಆ ತಂಬೂರಿ ಉಲಿಯುತ್ತಲೇ ಮುಂದರಿಯಿತು….
ಕಲ್ಲು ಹೊಡೆಯೋ ಕೆಂಚಪ್ಪಜ್ಜನಿಂದ ತತ್ತ್ವ ಪದದ ಪ್ರೇರಣೆ, ತಾನು ಬೆಳೆದ ಗದ್ದೆಯ ಪೈರು ತಿಂದರೂ ಹಸುವಿಗೆ ಬೈಯ್ಯದ ಹೃದಯವಂತಿಕೆಯ ಮೊಮ್ಮಗ ಈ ರಾಮಯ್ಯ…
ಈಗ್ಗೆ ಹನ್ನೆರಡು ವರ್ಷಗಳಿಂದೀಚೆಗೆ ‘ಏಕದಾರಿ’ ಯತ್ತಲೇ ಮುಖ ಮಾಡಿನಿಂತವ ರಾಮಯ್ಯ.
****************************************
ಬೆಂಗಳೂರುಗೆ ಬಂದಾಗೆಲ್ಲ ಹೊಸದೊಂದು ತಂಬೂರಿ ಬೇಕೆಂದು ಅಲವತ್ತುಕೊಂಡಾಗ ‘ತಂಬೂರಿ ಮಾಡುವವರಲ್ಲಿಯೇ ಹೇಳಿ ನಮಗೆ ಬೇಕಾದಂತೆ ಮಾಡಿಸೋಣ ನಾದ’ ಅಂತ ಕವಿ ಮಿತ್ರ ಹಂದಲಗೆರೆ ಗಿರೀಶ್ ಮಾತು ಕೊಟ್ಟ….
ಮೊನ್ನೆ ಅವನ ಬೈಕು ನಮ್ಮನ್ನು ಆ ಬೆಂಗಳೂರು ನಗರದ ಕೆಂಗೇರಿ ಪಕ್ಕದ ಗೊಲ್ಲಹಳ್ಳಿ ಹೋಬಳಿಯ ಕೆಂಚನಪಾಳ್ಯದ ‘ಜೀರ್ಣಾವಸ್ಥೆಯ ಟೆಂಟ್’ ಮುಂದೆ ನಿಲ್ಲಿಸಿತು. ಅಲ್ಲಿ ಯಾವ ಸದ್ದು – ಗದ್ದಲಗಳಿರಲಿಲ್ಲ. ಅದು ‘ಶ್ರೀ ಮಲೈಮಹದೇಶ್ವರ ಸಾಂಸ್ಕೃತಿಕ ಸೇವಾ ಟ್ರಸ್ಟ್’ ಅಂತ ಹೆಸರಿದ್ದ ಹಳೆಯ ಫ್ಲೆಕ್ಸೊಂದನ್ನು ಹೊತ್ತಿತ್ತು. ಇದರೊಳಗೆ ಆ ತಂಬೂರಿ ಉಸಿರಾಡುತ್ತಿತ್ತು…
****************************************
ಸೋರೆ ಬುರುಡೆ ಆಯ್ಕೆಯಾಯ್ತು, ಬಿದಿರು ಸಿಕ್ತು, ತೂತಾಯ್ತು, ಬಿದಿರು ಒಳ ಹೊಕ್ಕಿತು, ಬೋಕಿ ಬಿಲ್ಲೆ ಆಯ್ತು, ಬಿದಿರ ಗೂಟ ಬಂತು, ಮೆಟಲ್ ಪೇಸ್ಟ್ ಹಚ್ಚಿತು, ತಂತಿ ಬಿಗಿಯಿತು, ನಾದ ಹುಟ್ಟಿತು…. ಏಕತಾರಿ…. ಏಕದಾರಿಯಾದ ಕತೆ ಹಾಡಾಯಿತು….
” ತತ್ವ ಚಿಂತನೆ ಮಾಡೋ ಮನುಜಾ.. ವ್ಯರ್ಥ ಕಾಲವ ಕಳೆಯದೇ ” ಅಂತ ರಾಮಯ್ಯನೆಂಬ ಆ ಏಕದಾರಿ ಹಾಡಿತು…
…
ಈಗ ನಂಜೊತೆ ತಂಬೂರಿಯೊಂದಿಗೆ ‘ಏಕದಾರಿ’ಯೂ ಹಾಡಿಸುತ್ತಿದೆ…. ಕವಿಮಿತ್ರ ಗಿರೀಶ್ ಹಂದಲಗೆರೆ ಮತ್ತು ತಂಬೂರಿ ರಾಮಯ್ಯ ಅವರಿಗೆ ಇದರೆಲ್ಲಾ ಕೃತಜ್ಞತೆಗಳು ಸಲ್ಲಲಿ.
ಫೋಟೋಗಳಲ್ಲೇ ಒಂದೊಂದು ಕವಿತೆ ಕಂಡಿತು .. ಥ್ಯಾಂಕ್ಸ್ .
ಚಿಕ್ಕವಳಿದ್ದಾಗ ಈ ತಂಬೂರಿ ಬಾರಿಸುವವರು ಬಂದರೆ ಆ ತಂಬೂರಿ ಬಗ್ಗೆ ಇನ್ನಿಲ್ಲದ ಕುತೂಹಲ. ಅಷ್ಟು ಚಂದ ಆಕಾರ ಹೇಗೆ ಯಾತರಿಂದ ಮಾಡ್ತಾರೆ. ಮುಟ್ಟಿ ನೋಡಿ ಖುಷಿ ಪಡುವ ಕಾಲ. ಆದರೆ ಈಗ ಇವರು ವಿರಳ. ಇಲ್ಲಿ ಫೋಟೊ ನೋಡಿ ಆನಂದ,ಆದರೆ ಇವರ ನಾದದ ವೈಖರಿಯ ಒಂದು ವೀಡಿಯೊ ಇದ್ದಿದ್ದರೆ ….? ಅದರ ಗಮ್ಮತ್ತೆ ಬೇರೆ. ಸರ್ ಒಮ್ಮೆ ಇವರಿಂದ ಹಾಡಿಸಿ.
ಇಂಥವೆಲ್ಲ ಬೆಂಗಳೂರಿನಿಂದ ಹೊರಗೆ ಮಾತ್ರ ಸಾಧ್ಯ. ಇಲ್ಲಿ ಈ ನಗರದಲ್ಲಿ ಏಕತಾರಿಯತ್ತ ಗಮನ ಹರಿಸಲು ಯಾರಿಗಿದೆ ಪುರಸತ್ತು ? ಇವರೇ ಬೇರೆ, ಇವರ ನಾದವೇ ಬೇರೆ… ಈ ನಿಮ್ಮ ಲೇಖನ ಓದಿದ ಕೂಡಲೇ ನನಗೆ ಮಿರಜ್ ನೆನಪಾಯಿತು. ಅಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಬಳಸುವ ತಂಬೂರಿ, ಸಿತಾರ್, ವೀಣೆ, ರುದ್ರವೀಣೆ, ದಿಲ್ರೂಬಾ ಇತ್ಯಾದಿ ತಂತಿ ವಾದ್ಯಗಳನ್ನು ತಯಾರಿಸುವ ಹತ್ತಿಪ್ಪತ್ತು ಅಂಗಡಿಗಳಿವೆ.
ಲೇಖನ ಚೆನ್ನಾಗಿದೆ..ನೀವು ಹಾಡಿದ ನಾನು ಏಕತಾರಿ ಕವಿತೆ ಕೇಳಿ ಖುಷಿಯಾಗಿತ್ತು. ಈಗ ಏಕತಾರಿ ತಯಾರಿಕೆ ನೋಡಿದಂತಾಯ್ತು. ಸುಮಿತ್ರಾ ಎಲ್ ಸಿ