ಸೂತ್ರಧಾರ ರಾಮಯ್ಯ
ಅಕ್ಟೋಬರ್ ೨ರಂದು ರಾಷ್ಟ್ರಪಿತ (ಫಾದರ್ ಆಫ್ ದ ನೇಷನ್) ಗಾಂಧಿ ಸ್ಮರಣೆಗಿಂತ ಬಿಹಾರದ ‘ಫಾಡರ್’ ಅರ್ಥಾತ್ ಮೇವಿನ ಬಗ್ಗೆಯೇ ದೇಶದ ಜನ ಚರ್ಚೆ ಮಾಡಿದ್ದು ವಿಪರ್ಯಾಸವೇ ಸರಿ. “ಕಾನೂನಿನ ಬಗ್ಗೆ, ಕೋರ್ಟಿನ ತೀರ್ಪುಗಳ ಬಗ್ಗೆ ತಮಗೆ ಅಪಾರ ಗೌರವವಿದೆ” ಎಂದು ಹೇಳುತ್ತಲೇ, ತಮ್ಮ ಮೇಲಿನ ಪ್ರಕರಣಗಳ ವಿಚಾರಣೆಗಳನ್ನು ದಶಕಗಳ ಕಾಲ ಎಳೆಯುವಂತ ಹುನ್ನಾರಗಳನ್ನು ಹೆಣೆಯುತ್ತ ಬಂದರೂ ( ಲಾ ವಿಲ್ ಟೇಕ್ ಇಟ್ಸ್ ಓನ್ ಕೋರ್ಸ್ ಅನ್ನುವುದು ‘ವಿಳಂಬಿ ಹೇ ವಿಳಂಬಿ’ ಅನ್ನೋ ಈ ನಿಧಾನ ದ್ರೋಹಕ್ಕೇ ಇರಬೇಕು ) ತೀರ್ಪುಗಳು ತಮಗೆ ವ್ಯತಿರಿಕ್ತವಾಗಿ ಬಂದಾಗ, ನ್ಯಾಯಾಂಗ ನಿಂದನೆಯನ್ನ್ನೂಲೆಕ್ಕಿಸದೆ ‘ಇದೆಲ್ಲಾ ವಿರೋಧಿಗಳ ಪಿತೂರಿ’ ಎನ್ನುವ ವಿತಂಡವಾದವಂತೂ ಮಾಮೂಲು. ಒಟ್ಟಾರೆ, ಹಳೆಯ ನಾಣ್ನುಡಿ ಬದಲಾಗಿ, ಜಬ್ ತಕ್ ರಹೇಗ ಸ’ಮೋಸ’ ಮೇ ಆಲೂ, ತಬ್ ತಕ್ ರಹೇಗ ‘ಜನ್ಮಸ್ಥಾನ್’ಮೇ ಲಾಲೂ ಅನ್ನುವಂತಾಗಿದೆ. ಜಾನುವಾರುಗಳ ಮೇವನ್ನೂ ಬಿಡದೆ ಮೇಯ್ದ ಜಾಣವಾರ್ ಗಳನ್ನು ನೋಡಿ ಅರ್ಥಾತ್ , ಮೇಯ್ದ ಅಪರಾಧಕ್ಕೆ,ಈಗ ಜೈಲಿನಲ್ಲಿ ಮೆಲುಕು ಹಾಕುತ್ತಿರುವ ‘ಮೇವ’ರಿಕ್ ಲೀಡರ್ ಲಾಲೂ ಮತ್ತು ನಲವತ್ನಾಕು ಮಂದಿಯನ್ನು ನೋಡಿಯಾದರೂ, ಉಳಿದವರು ಸಗಣಿಗಳಾಗದೆ ಸುಗುಣಿಗಳಾಗೊ ಸನ್ಮತಿ ದೇ ಭಗವಾನ್ ಎಂದು ಮಹಾತ್ಮನನ್ನು ಸ್ಮರಿಸೋಣ.
ದೂಸರಾ-ರಜ-ತೋತ್ಸವ?
ಅಕ್ಟೋಬರ್ ೨ರಂದು ಶುರುವಾದದ್ದು ಈ ‘ಹೈ ಪ್ಲೆಶರ್ ಹವಾಮಾನ..,ಇಡೀ ತಿಂಗಳು ಕ್ಯಾಲೆಂಡರಲಿ ರಜತುಂಬಿ, ಜನಸೇವಕರು(?) ಕಾರ್ಯಾಲಯಗಳಲಿ ಇದ್ದಾರೋ;ಇಲ್ಲವೋ ಅನ್ನುವ ಪರಿಸ್ತಿತಿ. ದ ವೀಕ್ಸ್ ದಟ್ ವರ್ ನಾಟ್ ಅನ್ನುವಂತೆ ಅಕಟೋ ಬರ ನವೆಂ ಬರದಲ್ಲೂ ಹಾಲಿಡೆಗಳ ಸುಗ್ಗಿ. ‘ಕೆಂಪಾದವೋ ಕ್ಯಾಲೆಂಡರುಗಳು’ ಎನ್ನುತ್ತಾ ಬಸ್ ನಿಲ್ದಾಣಕ್ಕೆ ಕಾಲಿಟ್ಟರೆ ಅದೇನು ಜನಪ್ರವಾಹ ! ಎಲ್ಲಿಂದ ಬಂದವರೋ ; ಎಲ್ಲಿಗೆ ಹೋಗುವವರೋ?
ಸರ್ಕಾರಿ ಕಚೇರಿಗಳಂತೂ ವರ್ಚ್ಯುಯಲ್ shut down. ‘ಅಮೆರಿಕದವರು ಒಬ್ಬರೇನಾ? ನಾವೂ ಯಾಕ್ ಬರಾಕ್ ಒಗಾಮಾ ಕೆಲಸಕ್ಕೆ, ಹ್ಯಾಗೂ ಪೇಯ್ಡ್ ಹಾಲಿಡೆ ? ಅನ್ನೋ ಧೋರಣೆ. ರಜೋ ಗುಣದವರಲ್ಲವೇ ಲಾಗಾಯ್ತಿಂದ ನಾವೂ? ಮಧ್ಯೆ ಮಧ್ಯೆ ಒಂದೆರಡು ಕ್ಯಾಶುಯಲ್ ಲೀವ್ ಹಾಕಿದರೆ ಹದಿನೈದು ಇಪ್ಪತ್ತು ದಿನ ಸಾಲು ಸಾಲು ರಜಾ ಮಜಾ! ಆಡಳಿತಕ್ಕೆ, ಜನಸೇವೆಗೆ ಕ್ಯಾಶುಯಲ್ಟಿ ಆದರೂ ಪರವಾಗಿಲ್ಲ ಚಲ್ತಾ ಹೈ. ಅನ್ನೋದು ಉಳ್ಳವರ ವರ. ಅತ್ತ ಕಡೆ ದಿನಗೂಲಿಗಳಿಗೆ ಸಾಲಸೋಲ ಇದ್ದದ್ದೆ, ಆದರೆ ನಮ್ಮ ಮಾಜಿ ರಾಜರುಗಳ, ಹಾಲಿ ರಾಜ ಕಾರಣಿಗಳ, ರಜಾಧಿ ರಾಜರ, ಐ ಮೀನ್ ನೌಕರ ಶಾಹಿಗಳ ನವೆ ರಾತ್ರಿಗಳಿಗೆ ಭಂಗ ಬರಬಾರದು ಅಷ್ಟೇ. ಒಟ್ಟಾರೆ ಕಾಯಕ ವೇ ಟು ಕೈಲಾಸ, ವರ್ಕ್ ಈಸ್ ವರ್ಷಿಪ್ ಅನ್ನೋ ಪ್ರಗತಿ ಶೀಲವಂತರ ಕಟ್ಟಳೆಯ ಮೀರಿದ ನಮಗೆ ಕತ್ತಲೆಯೇ ತಾನೇ?
end ಗುಟುಕು
ಕಾಸು ಕಾಸು ಅನ್ನೋರಿಗೆ ಲೈಫಲ್ಲಿ ಬರಿದೆ ಸುಖಾನುಭವ. ಆದರೆ ಕಾಸು ಜತೆಗೆ cause ಅಂದವರಿಗೆ ಬದುಕೆಲ್ಲ ಸಂತೋಷಾನುಭವ. ಇಲ್ಲವಾದರಿಲವೆನ್ನಿ.
0 ಪ್ರತಿಕ್ರಿಯೆಗಳು