ಜೋಗಿ
ಆವತ್ತು ಬೆಳಗ್ಗೆ ಮನೆ ಮುಂದೆ
ಜನ.
ನೋಡಲಿಕ್ಕೆಂದು ನನ್ನ
ಸತ್ತ ಹೆಣ.
ಕೆಲವರಿಗೆ ಸತ್ತಿರಲಿಕ್ಕಿಲ್ಲ ಎಂಬ ಗುಮಾನಿ
ಹಲವರಿಗೆ ಸಾಯದಿದ್ದರೂ
ಪ್ರಾಣ ಹೋಗಿರಲಿಕ್ಕೆ ಸಾಕು ಎಂಬ
ಖಾತ್ರಿ.
ಸಾಯೋ ವಯಸ್ಸಲ್ಲ
ಇನ್ನು ಸಾಧಿಸೋದಿತ್ತು
ದುರಭ್ಯಾಸಗಳಿದ್ದವು, ಯಾರಿಗಿಲ್ಲ ಬಿಡಿ.
ಕಾಯಿಲೆ ಇತ್ತಂತೆ ಹೌದೇ?
ಮನೆ ಕಡೆ ಚೆನ್ನಾಗಿರಬೇಕಲ್ಲ?
ನಿನ್ನೆ ಬೆಳಗ್ಗೆ ಮಾತಾಡಿದ್ದೆ ಕಣ್ರೀ
ಮನುಷ್ಯ ಹೀಗೇಂತ ಹೇಳಕ್ಕಾಗಲ್ಲ!
ಹೀಗೆ ಆಡಬೇಕಾದ ಮಾತುಗಳನ್ನು ಮಥಿಸಿ
ಕೂಡಿಸಿ ಭಾಗಿಸಿ ಗುಣಿಸಿ
ಅವನ್ನೆಲ್ಲ ನಾಲಗೆ ಕರವಸ್ತ್ರದಲ್ಲಿ ಮಡಿಸಿಟ್ಟುಕೊಂಡು
ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ.
ಸಾಯುವುದು ಇಷ್ಟೆಲ್ಲ ಸಂಭ್ರಮ
ಅಂತ ಗೊತ್ತಿರಲೇ ಇಲ್ಲ.
ಜೀವ ನೀನು ಅಂತ ತಬ್ಬಿ ಪ್ರೇಮಿಸಿದ
ಅವಳು ಕೈ ಕೊಟ್ಟಾಗ ಸತ್ತಿದ್ದೆ.
ನಾನು ಬರೆದ ಕವಿತೆಯನ್ನು
ನಾನೇ ಹರಿಯುತ್ತಾ ಸತ್ತಿದ್ದೆ.
ಬದುಕೋದು ಕಲೀರಿ ಅಂತ
ಸಂಪಾದಕರು ಗದರಿದಾಗ ಸತ್ತಿದ್ದೆ.
ನಿಮಗೆ ತಾತ್ವಿಕ ಬದ್ಧತೆ ಇಲ್ಲ
ಅಂದಾಗೊಮ್ಮೆ ಸತ್ತಿದ್ದೆ.
ಕೆಳಗಿದ್ದವರು ನಕ್ಕಾಗ, ಮೇಲಿದ್ದವರು ಮೊಟಕಿದಾಗ
ನಾನು ಮೇಲೂ ಇಲ್ಲ ಕೆಳಗೂ ಇಲ್ಲ ಎಂದು ಗೊತ್ತಾದಾಗ
ನನ್ನ ಮನೆ ದಾರಿ ಮರೆತಾಗ
ಅವಳ ಮನೆಯಲ್ಲಿ ಚಪ್ಪರ ಎದ್ದಾಗ
ಶ್ರೀರಾಮ ವಾಲಿಯನ್ನು ಮೋಸದಿಂದ ಕೊಂದಿದ್ದು ಗೊತ್ತಾದಾಗ
ಅಶ್ವತ್ಥಾಮ ಹೆಸರಿನ ಆನೆ ಸತ್ತಿದ್ದು
ಅಂತ ಕೃಷ್ಣ ಪಿಸುಗುಟ್ಟಿದಾಗ
ಭಗವದ್ಗೀತೆ ನಿನಗೆ ಕಡ್ಡಾಯ ಎಂದಾಗ
ಪದೇ ಪದೇ ಸತ್ತಿದ್ದೆ.
ಯಾರೂ ಸಂಭ್ರಮಿಸಿರಲಿಲ್ಲ.
ನೆತ್ತಿಯಲ್ಲಿ ಮೊದಲ ಬಿಳಿಕೂದಲು ಕಂಡಾಗ
ಅಕ್ಷರ ಮಸುಕಾದಾಗ
ಕವಿತೆ ಅರ್ಥವಾಗದೇ ಛೇಡಿಸಿದಾಗ
ಕೆನ್ ಯೂ ಸ್ಪೀಕ್ ಇನ್ ಇಂಗ್ಲಿಷ್ ಅಂತ
ಮಂಡ್ಯದ ಮೇಷ್ಟ್ರು ಕೇಳಿದಾಗ
ಸಿನಿಮಾ ಸಲೀಸು ಅಂತ ನಿರ್ದೇಶಕ ನಕ್ಕಾಗ
ವೋಲೆ ಸೋಯಿಂಕಾ? ಯಾರದು?
ಅಂತ ಗೆಳತಿ ಕೇಳಿದಾಗ
ಮತ್ತೆ ಮತ್ತೆ ಸತ್ತಿದ್ದೆ.
ಸಾವು ನಿಗೂಢ.
ನಾವು ಸಾಯುವುದು ಯಾರಿಗೂ ಗೊತ್ತೇ ಆಗುವುದಿಲ್ಲ.
ಅದು ಎಲ್ಲರಿಗೂ ತಿಳಿದಾಗ
ನಮಗೆ ಅರಿವೇ ಆಗುವುದಿಲ್ಲ.
ನಮ್ಮ ಸಾವು ನಮ್ಮದು
ಅವರ ಸಾವು ನಮ್ಮದು
ಎರಡೂ ಒಂದೇ ಆದರೆ
ಅವನು ಮಹಾತ್ಮ
ಕವಿ
ಅಥವಾ
ಮನುಕುಲದ ಶತ್ರು
0 ಪ್ರತಿಕ್ರಿಯೆಗಳು