ನಾಗರಾಜನಾಯಕ ಡಿ.ಡೊಳ್ಳಿನ
ಮಹಿಳೆಯರಿಗೆ ಜಾಹೀರಾತು ಅಂಟಿಸಬಾರದು ಅಂದ ಮಂಕ, ಈ ಮಾತು ಹೇಳಿದ ಕೂಡಲೇ ಬಸ್ನಲ್ಲಿ ಇದ್ದ ನಮ್ಮ ಶಿವಲಿಂಗಣ್ಣ, ಶಿವನೇ ಶಂಭುಲಿಂಗ ಅಂತ ನಮ್ಮ ಧಿರೇಂದ್ರ ಗೋಪಾಲ ಅವರ ಶೈಲಿಯಲ್ಲಿ ಒಂದ್ಸಲಾ ಹೇಳಿ, ಯಾ ಪುಣ್ಯಾತ್ಮ ಹೇಳಿದ್ದು ಈ ಮಾತನ್ನ ಅವನಗ ಮಾಡಬೇಕು ಎರಡು ಕೈ ಎತ್ತಿ ಅನ್ನುವಷ್ಟರಲ್ಲಿ ವೆಂಕ ಏನು ಮಾಡಬೇಕಣ್ಣಾ, ಏ ಸುಮ್ನೇ ನಿಂತ್ಕಳ್ಳಲಾ ಎರಡು ಕೈ ಎತ್ತಿ ಮುಗಿಬೇಕು ಅಂದೆ.
ಹ್ಹ ಹ್ಹ . . . ಎಂದು ನಕ್ಕ ಮಂಕ ಶಿವಲಿಂಗಣ್ಣ ಈ ಮಾತನ್ಯಾಗ ಅಂತದ್ದೇನೂ ವಿಶೇಷ ಐತಿ. ಅಲ್ಲಲೇ ಮಂಕ ಈ ಜಾಹೀರಾತು ಮಾಡೋ ಅವಾಂತರ ಒಂದಾ ಎರಡಾ ಮೊನ್ನೆ ನಮ್ಮೂರನ್ಯಾಗ 50% ಡಿಸ್ಕೌಂಟು ಐತಿ ಅಂತ ಜಾಹೀರಾತು ಕೊಟ್ಟರು. ಅಸಲಿ ವಿಚಾರ ಎನಪಾ ಅಂದ್ರ. ಒಳಗಡೆ ಹೋದ್ಮೇಲೆ ತಿಳಿದಿದ್ದು.
ಏನಾಯ್ತಣ್ಣ, ಒಳಗಡೆ ಹೋದ್ಮೇಲೆ ಗೊತ್ತಾಗಿದ್ದು ಈ ಡಿಸ್ಕೌಂಟು ಇರೋ ಸಾರಿನ ಯಾರು ನೋಡ್ತಾ ಇಲ್ಲ, ಇವರು ನೋಡೊ ಸಾರಿಗೆ ಡಿಸ್ಕೌಂಟು ಇಲ್ಲ ಅಂತ ಅವರು, ಡಿಸ್ಕೌಂಟು ಇರೋ ಸಾರಿ ಇವರಿಗೆ ಇಷ್ಟ ಆಗ್ತಿಲ್ಲ. ಆಮೇಲೆ ಏನಾಯ್ತು ಅಂದ ವೆಂಕ. ಇನ್ನೇನ್ಲಾ ಆಗ್ಬೇಕು ಕರ್ಕೊಂಡು ಹೋಗಿದ್ದ ತಪ್ಪಿಗೆ ನಮ್ಮ ಜೇಬಿಗೆ ಬಿದ್ದಿದ್ದು ಕತ್ತರಿ.
ಅವತ್ತಿಂದಾ ಈ ಡಿಸ್ಕೌಂಟು ಅಂದರೇನೆ, ಮನಿಕೌಂಟು ಅನ್ನೋ ಹಾಗಾಗುತ್ತೆ. ಈ ಹಾಳಾದ ಜಾಹೀರಾತು ಮಾಡೋ ಅವಾಂತರ ಒಂದಾ ಎರಡಾ ನಮ್ಮ ಶಿವಣ್ಣ ಬಂದು ಭರವಸೆಯೆ ಮಾತು ಅಂತ ಚಿನ್ನ ಖರೀದಿಸುವ ಮಾತನ್ನಾಡಿದ್ರೆ, ಇತ್ತ ನಮ್ಮ ಅಪ್ಪು ಮನೆಯಲಿ ಇದ್ದರೆ ಚಿನ್ನ ಚಿಂತೆಯೂ ಏತಕೆ ಅಂತ ಹೇಳ್ತಾರೆ,
ಇನ್ನು ಆ ಸಿಂಪಲ್ಲಾಗ್ ಒಂದ ಲವ್ ಸ್ಟೋರಿ ಚಿತ್ರದಲ್ಲಿ ಪ್ರೇಮಲೋಕ ಸೃಷ್ಟಿಸಿದ ಕ್ರೇಜಿಸ್ಟಾರ್ ಅರೆಂಜ್ ಮ್ಯಾರೇಜ್ ಆದ್ರು, ಈ ಪ್ರೀತಿ ಪ್ರೇಮ ಎಲ್ಲಾ ಹಾಳ ಪುಸ್ತಕದ ಬದನೆಕಾಯಿ ಅಂದ ರಿಯಲಸ್ಟಾರ್ ಲವ್ ಮ್ಯಾರೇಜ್ ಆದ್ರು ಹೀಗೆ ಡೈಲಾಗ್ ಹೇಳಿದ ರಕ್ಷಿತ್ ಶೆಟ್ಟಿ ಇದರಲ್ಲಿ ಜಾಹೀರಾತು ಮಾಡ್ತಾ ಅದೇ ನಾವು ನೀವು ಚಿಕ್ಕವರಿದ್ದಾಗ ಕೇಳಿದ್ವಲ್ಲಾ ಕೊಡ್ಲಿ ಕತೆ.
ಹೂ ನಣ್ಣಾ ಅದೇ ಕೂಡ್ಲಿ ನೀರನ್ಯಾಗ ಬೀಳತೈತಿ ಅವಾಗ ದ್ಯಾವ್ರು ಪ್ರತ್ಯಕ್ಷ ಆಗಿ ಮೊದಲಿಗೆ ಬಂಗಾರದ ಕೊಡ್ಲಿ, ಆಮೇಲೆ ಬೆಳ್ಳಿ ಕೊಡ್ಲಿ ಕಾಡ್ತಾನೆ ಆಗ ಭಕ್ತ ಈ ಕೊಡ್ಲಿ ನನ್ನವಲ್ಲ ಅಂದಿದ್ದಕ್ಕೆ ಭಕ್ತನ ನಿಯತ್ತಿಗೆ ಮೆಚ್ಚಿದ ದ್ಯಾವ್ರು, ಭಕ್ತನ ಕೊಡ್ಲಿ ಜೊತೆಗೆ ಬಂಗಾರ ಮತ್ತು ಬೆಳ್ಳಿಯ ಕೊಡ್ಲಿಯನ್ನು ಕೊಡ್ತಾನಲ್ಲ ಆ ಕಥೆನಾ ಅಂದ ಮಂಕ, ಅದಕ್ಕೆ ವೆಂಕ ಏ ಇದರಲ್ಲಿ ಏನಯ್ತಿ ವಿಶೇಷ, ಅಲ್ಲೇ ಇರೋದು ವಿಷಯ ಈ ಸಿನಿಮಾದವರು ಈ ಕತೆನೂ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ.
ಕಥೆಯಲ್ಲಿ ಬರುವಂತೆ ಇದರಲ್ಲೂ ದೇವಿ ಪ್ರತ್ಯಕ್ಷ ಆಗ್ತಾಳೆ ಕೊಡ್ಲಿ ಕೊಡ್ತಾಳೆ, ಭಕ್ತನ ನಿಯತ್ತಿಗೆ ಮೆಚ್ಚಿ ಮೂರು ಕೊಡ್ಲಿ ಕೊಡೊಕೆ ಬಂದ್ರೆ, ನನಗೆ ಇದು ಬೇಡ, ಇದೆಲ್ಲಾ ಜುಜುಬಿ ನನಗೆ ಕೊಡೊದಿದ್ರೆ ಆ ಗೋಲ್ಡ್ ಕೊಡು ಅನ್ನಬೇಕೆ, ಅದ್ಯಾವುದೋ ಚಿನ್ನದ ಜ್ಯುವೇಲರಿದು ಕಣಪ್ಪಾ ಜಾಹೀರಾತು ಅದು.
ಇನ್ನು ಆನಲೈನ್ ಮಾರುಕಟ್ಟೆಯವರು ಹಗಲೊತ್ತು ಬಿಟ್ಟು ರಾತ್ರಿಯೇ ಭರ್ಜರಿ ಆಫರ್ ಕೊಟ್ಟು ಎಲ್ಲರನ್ನು ಆನಲೈನ್ ಲ್ಲಿ ಕಾದು ಕುಳಿತು ನೋಡುವಂತೆ ಮಾಡುತ್ತಾರೆ. ಇನ್ನು ಅದೋ ಸರ್ವರ್ ಬ್ಯೂಸಿ ಅಂತ ಒಂದು ಸರಿಯಾಗಿ ಬುಕ್ ಆಗಲ್ಲ. ಹೂ ನಣ್ಣಾ ಮೊನ್ನೆ ಹೀಗೆ ಆಫರ್ ಐತಿ ಅಂತ ಮೊಬೈಲ್ ರೇಟು ಸಿಕ್ಕಾಪಟ್ಟೆ ಇಳ್ಸಿದ್ರು, ಅದೆಷ್ಟು ಪ್ರಯತ್ನ ಪಟ್ಟರು ಬುಕ್ಕೇ ಆಗಲಿಲ್ಲ.
ಅದ್ಯಾಕ ಅವಾಗೆ ಹಂಗ ಆಗಬೇಕು ಶಿವ, ಉಳಿದ ವೇಳ್ಯಾದಾಗೆ ಸರಿಯಾಗೇ ಇರುತ್ತೆ. ಈ ಆಫರ್ ಬಿಟ್ಟಾಗಲೇ ಹೀಗಾಗುತ್ತೇ, ಶಿವನೇ ಶಂಭುಲಿಂಗ ಅದು ಹಂಗೇ ಲಾ ಇವಾಗ ಅದೆಂಥದೋ ಫೋನ್ ಕೊಟ್ಟರಲ್ಲಾ ಅದಕ್ಕೆ ಇಂಟರನಟ್, ಕಾಲ್ ಎರಡು ಫ್ರೀ ಅನ್ ಲಿಮಿಟೆಡ್ ಅಂತು ಅವರು ಕೊಟ್ಟಿದ್ದು ಕೊಟ್ಟಿದ್ದೆ, ಇವರು ಎಲೆ ಅಡಿಕೆದಾಗಿನ ಸುಣ್ಣದ ತರಾ ತಿಕ್ಕಿದ್ದು ತಿಕ್ಕಿದ್ದೆ.
ಈವಾಗ ನೋಡು ಕರೆ ಮಾಬೇಕಾದರೆ ಮತ್ತೇ ರಿಚಾರ್ಜ ಮಾಡ್ಸಿ ಅಂತಾರೆ ಇದನ್ನೆಲ್ಲಾ ನೋಡಿದ್ರೆ ಬಾಯಿಗೆ ನಮ್ಮ ಜಗ್ಗಣ್ಣನ ಸ್ಟೈಲ್ನಾಗೆ ಹಾವಾದ್ರು ಕಚ್ಚಾಬಾರ್ದಾ ಅಂತಾ ಇಷ್ಟು ಉದ್ದ ಬರುತ್ತೆ, ಆದ್ರೂ ಬ್ಯಾಡ ಸೆನ್ಸಾರ್ ಪ್ರಾಬ್ಲಮ್ ಆಗತೈತೇ.. ಲೇ ವೆಂಕ ಬಸ್ ಎಲ್ಲಿಗೆ ಬಂತಲಾ. ಶಿವಲಿಂಗಣ್ಣ ಬಸ್ ಕಿತ್ತೂರ ಚೆನ್ನಮಮ್ಮನ ಸರ್ಕಲ್ ಹತ್ತಿರ ಬಂತು.
ಮಂಕ ಅಣ್ಣ ಅಲ್ಲಿ ಪುರುಷರಿಗೂ ಜಾಹೀರಾತು ಅಂಟಿಸಬಾರದು ಅಂತಾನೂ ಇತ್ತು. ಹೌದು ಲೇ ಪುರುಷರೇ ಆಗಲಿ ಮಹಿಳೆಯರೇ ಆಗಲಿ ಜಾಹೀರಾತು ನೋಡಿ ಹಾಳಾಗಬಾರದು ಅಂತ ಬರದಾರೆ, ಆದರೂ ಈ ಪಾಟಿ ತತ್ವ ಎಲ್ಲಲೆ ಬರೆದಿದ್ದೂ, ಅದೇ ನಮ್ಮ ಅಡವಿ ಸ್ವಾಮಪುರ ಲೇ ಅದು ಸ್ವಾಮಪುರ ಅಡವಿ ಸೋಮಾಪೂರ ಅದು ಅಲ್ಲಿ ಎಲ್ಲಿ ಬರೆದಿತ್ತು.
ಅದೇ ಬಸ್ ನಿಲ್ದಾಣದಲ್ಲಿ ಅಣ್ಣ ಅಯ್ಯೋ ನಿನ್ ಮಖಕ್ಕೆ ನನ್ನ… ಅದು ಬಸ್ ನಿಲ್ದಾಣದಲ್ಲಿ ಯಾರು ಜಾಹೀರಾತು ಅಂಟಿಸಬಾರದು ಅಂತ ಬರೆದಿದ್ದು, ಬಸ್ ಗಾಗಿ ಕಾಯಲು ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಭಾಗದಲ್ಲಿ ಈ ಮಾಹಿತಿಯನ್ನು ಬಿಡಿಸಿ ಬರೆಯದೇ ಕೂಡಿಸಿ ಬರೆದಿದ್ದ. ಮಂಕ ಶಿವಲಿಂಗಣ್ಣ ಏನಾದ್ರೂ ಆಗಲಿ ಈ ಜಾಹೀರಾತು ಯಾರಿಗೂ ಅಂಟಿಸಬಾರದಲ್ವಾ. ಜಾಹೀರಾತಿನ ವಿಷಯ ಆಮೇಲೆ ಮಾತಾಡಿವಂತೆ ಹುಬ್ಬಳ್ಳಿ ಬಂತು, ಮೊದಲು ಜನತಾ ಬಜಾರ ದಲ್ಲಿ ಸಂತಿ ಮಾಡೋಣ ನಡಿ ನಡಿ . . .
0 ಪ್ರತಿಕ್ರಿಯೆಗಳು