ಸದಾಶಿವ್ ಸೊರಟೂರು
ಜಾತ್ರೆ ಮುಗಿದ ಮಾರನೆಯ ದಿನ
ವಿಷಣ್ಣ ಮೌನ..
ಒಡೆದ ಬಲೂನಿನಿಂದ ಚಿಮ್ಮಿದ
ಮಾರುವವನ ಉಸಿರು-
ಹೆಸರೆ ಕೇಳದೆ ಕೊಂಡುಹೋದ ಮಂದಿ,
ಮಾರನೆ ದಿನಕ್ಕಿಲ್ಲದ ದಿನಸಿ
ಅದದೆ ಗಾಳಿಯನ್ನ ಮತ್ತೆ ಉಣ್ಣುತ್ತಾನೆ-
ಪೋರ ಬಿಳಿಸಿಕೊಂಡು ಹೋದ ಪೀಪಿ
ಯಾರದೊ ಕಾಲಿಗೆ ಸಿಕ್ಕಿ
ತುಂಡಾಗಿ ರೋಧಿಸುತ್ತಿದೆ..
ತುಳಿದವರ ಪಾದದ ಗೆರೆ ಮೂಡಿ-

ತೇರಿನ ಕೊರಳಿನಿಂದ ಬಿದ್ದ ಹಾರವನ್ನು
ಯಾರೊ ಪೊರಕೆಯಲ್ಲಿ ಗುಡಿಸಿ
ಹಾಕಿ ಎದ್ದು ಹೋಗಿದ್ದಾರೆ..
ನಗರ ಸಭೆ ಗಾಡಿ ತುಂಬ ಸುವಾಸನೆ-
ಆಟಿಕೆಯ ಗಂಟಿನಿಂದ ತಪ್ಪಿಸಿಕೊಂಡ
ಗೊಂಬೆಯೊಂದು
ಒಂಟಿತನಕ್ಕೆ ನಡುಗಿ ಬಿಕ್ಕುತ್ತಿದೆ..
ರಮಿಸುವವರಿಲ್ಲದೆ-
ತಪ್ಪಿಸಿಕೊಂಡು ಕಂಗಾಲಾಗಿದ್ದ ಕಂದನ
ಹೆಜ್ಜೆ ಗುರುತುಗಳು ಅನಾಥವಾಗಿ
ಯಾರದೊ ಪಾದಗಳನು ಹಿಂಬಾಲಿಸಿ
ಹೊರಟಿದೆ-
ಜನರ ಕಾಟದಿಂದ ತಪ್ಪಿಸಿಕೊಂಡು ಬಂದ
ದೇವರು ಗರ್ಭಗುಡಿಯಲ್ಲಿ
ಕಾಲು ಚಾಚಿ ಮೈಚೆಲ್ಲಿದ್ದಾನೆ..
ನಿರಾಳ-
ನಿರಾಭರಣ-
ಯಾವ ನಿದ್ದೆ ಮೆತ್ತಿತ್ತೊ
ಮನೆಮನೆಗಳಲಿ ಯಾಕೊ ಮಾತುಗಳಿಲ್ಲ
ಅಂಗಳದಲಿ ಬಿದ್ದ ಕಸ ಯಾರೂ
ತೊಳೆದಿಲ್ಲ-
ಜಾತ್ರೆ ಮುಗಿದರೂ,
ನಮ್ಮ ನಮ್ಮ ಯಾತ್ರೆಗಳು ಮುಗಿದರೂ
ಅಷ್ಟೆ..
ಬಳಿಕ ಎಲ್ಲವೂ ಸ್ತಂಭ
ಅದೆ ವಿಷಣ್ಣ ಮೌನ..






0 Comments