ಜಯರಾಮಚಾರಿ
ಸಾಹೇಬರು ಆಫೀಸಲ್ಲಿದ್ದರು. ಸಾಹೇಬರು ಬೇರಾರು ಅಲ್ಲ ಹೊಳೆನರಸಿಪುರದ ಸಿದ್ದಯ್ಯ. ಸಿದ್ದಯ್ಯ ಸಾಹೇಬರಾಗಿ ಎಷ್ಟೊ ವರುಷಗಳಾಗಿವೆ, ಈ ಪಿ ಡಬ್ಲ್ಯೂ ಡಿ ಇಲಾಖೆಗೆ ಟ್ರಾನ್ಸ್ಫರ್ ಆಗಿ ಆರೇಳು ವರುಷವಾಗಿವೆ. ಈ ಆರೇಳು ವರುಷಗಳಲ್ಲಿ ಸಾಹೇಬರು ಆಫೀಸಲ್ಲಿದ್ದುದು ಕಮ್ಮಿ. ಇವತ್ತು ಆಫೀಸಲ್ಲಿದ್ದರು, ಅವರು ಈ ಹೊತ್ತಲ್ಲೂ ಇದ್ದುದ್ದೇ ವಿಶೇಷ ಈ ಹೊತ್ತು ಎಂದರೆ ಮಧ್ಯಾನ್ಹ ಎರಡಕ್ಕೆ, ಸಾಹೇಬರು ಪ್ರಾರಂಭದ ಒಂದೆರಡು ತಿಂಗಳು ಬಿಟ್ರೆ ಮತ್ತೆಂದೂ ಆಫೀಸಲ್ಲಿ ಊಟ ಮಾಡಿಲ್ಲ.
ಹನ್ನೆರಡಾಯಿತೆಂದ್ರೆ ಫೈಲುಗಳೆಲ್ಲ ಪಕ್ಕಕ್ಕಿಟ್ಟು, ಅಟ್ಯಾಚ್ ಮಾಡಿಸಿಕೊಂಡ (ಇತ್ತೀಚೆಗೆ ಗೋಡೆ ಹೊಡೆದು ಪೈಪು ಹಾಕಿ ಕಮೋಡ್ ಕೂರಿಸಿ ಕನ್ನಡಿಯೊಂದು ನೇತು ಹಾಕಿದ್ದಾರೆ) ಬಾತ್ ರೂಂಲೀ ಮುಖ ತೊಳೆದು, ಉಳಿದ ಬೆರಳಣಿಕೆ ಕೂದಲ ಸವರಿ (ಇತ್ತೀಚೆಗೆ ಕೂದಲ ಡಾಕ್ಟರ ವಿಸಿಟ್ ಆದಾಗ ಅವರು ದಪ್ಪ ಹಲ್ಲಿನ ಬಾಚಣಿಗೆ ಬಳಸಲು ಹೇಳಿದ್ದಾರೆ) ಕನ್ನಡಿ ನೋಡಿ ಕಿಸಕ್ಕನೆ ನಕ್ಕು ಈಚೆ ಬಂದರೆ ಅದನ್ನೇ ಕಾಯುವ ಅವನ ಡ್ರೈವರು ಸಾಹೇಬರ ಬ್ಯಾಗಿಡಿದು (ಬರ್ತ ತೂಕ ಕಮ್ಮಿ ಇರುವ ಹೋಗ್ತಾ ತೂಕ ಜಾಸ್ತಿ ಇರುವ) ಕಾರಿನ ಹಿಂಬದಿಯಲ್ಲಿಡುತ್ತಾನೆ, ಸಾಹೇಬರು ಒಣ ಕೆಮ್ಮು ಕೆಮ್ಮುತ್ತ ಬಂದು ಕಾರು ಹತ್ತುವರು. ಮತ್ತೆ ಆಫೀಸಿಗೆ ಬಂದರೆ ಬಂದರು ಇಲ್ದಿದ್ರೆ ಇಲ್ಲ. ಇವತ್ತು ಮಧ್ಯಾಹ್ನ ಎರಡಾದರೂ ಕೂತಿದ್ದಾರೆ. ಅವರಿಗೆ ಯಾವುದೋ ಚೆಕ್ ಬರಬೇಕು ಹಾಗಾಗಿ ಏನೋ ದಿಕ್ಕಪಾಲಾಗಿ ಕೂತಿದ್ದಾರೆ. ಚೆಕ್ ಬಂದರ್ ಚೆಕ್ ಔಟ್ ಆಗಿಬಿಡುತ್ತಾರೆ.
ಅದೇ ಸಮಯಕ್ಕೆ ಕೈಗೆ ಕೈಯಿಂದ ತಲೆಗೆ ಬ್ಯಾಂಡೇಜ್ ಕಟ್ಟಿಕೊಂಡ ನರೇಶ ಬಂದ, ಬರಬಾರದಿತ್ತು. ಅವನ ಹಿಂದೆಯೇ ಅವನನ್ನು ತಡೆಯಲು ಬಂದ ಆಫೀಸಿನ ಜವಾನ, ಮಧ್ಯಾಹ್ನವಾದರೂ ನಗುವರಳಿಸಿಕೊಂಡಿರುವ ರಿಸೆಪ್ಸನ್ ರಶ್ಮಿ ಓಡಿ ಬಂದರು. ಸಾಹೇಬ ಗತ್ತಿನಿಂದ ನೋಡುತ್ತಿದ್ದ. ಜವಾನ ಮತ್ತು ರಶ್ಮಿ ಏನೇನೋ ಬಡಬಡಿಸಿದರು. ಬಡಬಡಿಕೆಯಲ್ಲಿ ಅರ್ಥವಾಗಿದಿಷ್ಟು. ನರೇಶ, ರೋಡು, ಬಿಲ್ಲು ಮತ್ತು ಅವ್ನಜ್ಜಿ ಪಿಂಡ ಪದಗಳು. ಅವನ್ನೆಲ್ಲ ಸೇರಿಸಿ ಏನಾಗಿರಬಹುದೆಂದು ಯೋಚಿಸುವಷ್ಟರಲ್ಲಿ. ನರೇಶ ಆಸ್ಪತ್ರೆಯ ಬಿಲ್ಲುಗಳನ್ನು ಮುಖಕ್ಕೆಸೆದು ಏನು ತೆರೆಯಕ್ ಕೆಲಸಕ್ಕೆ ಇದ್ದೀರ ಎಂದ.
ಸಾಹೇಬನಿಗೆ ಸಿಟ್ಟು ನೆತ್ತಿಗೇರಿ ಏನೋ ಬೋಳಿಮಗನೇ ಎಂದು ಎದ್ದು ನಿಂತ. ನನ್ಮಕ್ಕಳ ನೆಟ್ಟಗೆ ರೋಡ್ ಮಾಡಿ ಸಾಯ್ರೋ, ತೂ ಲೋಫರ್ ನನ್ಮಕ್ಕಳ ಇಡೀ ಇಡೀ ಕುಟುಂಬ ಆಕ್ಸಿಡೆಂಟ್ ಆಗುತ್ತೆ, ಸಾಯ್ತೀರ ನನ್ಮಕ್ಕಳ ಎಂದು ಇನ್ನೊಂದು ಬೈಯ್ದು ಬಿರ ಬಿರನೇ ನಡೆದು ಹೋದ. ಹೋದವನ್ನ ಹಿಡಿಯುವುದೋ ಬೇಡವೋ ಜವಾನನ ಗೊಂದಲ. ರಶ್ಮಿ ತನ್ನ ಸಾರ್ ಗೆ ಆದ ಅವಮಾನಕ್ಕೆ ನಗುವನ್ನು ಕೊಂದು ನಿಂತಳು.
ಸಾಹೇಬನಿಗೆ ಅವಮಾನ ಸಿಟ್ಟಲ್ಲಿ ತುಟಿ ಅದುರುತ್ತಿದ್ದರೆ ಕಾಲು ನಡುಗುತ್ತಿದ್ದವು. ಅದೇ ಸಮಯಕ್ಕೆ ಫೋನ್ ಬಂತು ‘ಸಾರಿ ಸರ್ ಇವತ್ತು ಚೆಕ್ ಆಗ್ಲಿಲ್ಲ ನಾಳೆ ತಲುಪಿಸ್ತೀನಿ ತಕ್ಕೊಳ್ಳಿ’ ಅಂತ ಧ್ವನಿ, ಸಾಹೇಬ ಸಿಟ್ಟಿನಿಂದ ನಾನೇನ್ ತೆರೆಯಕ್ಕ ಫೈಲು ಮೂವ್ ಮಾಡಿದ್ದು ಅಂತ ಉಗಿದು ಕಾಲ್ ಕಟ್ ಮಾಡಿದ. ಸರ್ರನೆ ಎದ್ದು ಗೆಟ್ ಲಾಸ್ಟ್ ಎಂದು ಅಲ್ಲಿದ್ದವರಿಗೆ ಉಗಿದ ಯಾಕೆ ಎಂದು ಅವನಿಗೂ ಗೊತ್ತಿರಲಿಲ್ಲ.
ಆಫೀಸಿನ ಡೋರ್ ಬಡಿದು ಹೊರಟ. ಡೋರಿನಲ್ಲೇ ನಿಂತ ಡ್ರೈವರ್ ಒಳಗೆ ಬಂದು ತೂಕವಿರದ ಬ್ಯಾಗ್ ಹಿಡಿದು ಅವನ ಹಿಂದೆ ಓಡಿ ಸಾಹೇಬನ್ನು ಓವರ್ ಟೇಕ್ ಮಾಡಿ (ಬಲಗಡೆಯಿಂದ) ಕಾರಿನ ಡೋರ್ ತೆಗೆದು ಬ್ಯಾಗಿಟ್ಟ. ಡೋರ್ ರಪ್ಪಂತ ಬಡಿದು ಕಾರೊಳಗೆ ಕೂತ ಸಾಹೇಬ.
ಕಾರು ಆಫೀಸಿನ ಲೆಫ್ಟಿಗೆ ಕರ್ವಿಗೆ ತಿರುಗಿತು ಚಂಗನೆ ಹಾರಿದ ಹಸುವಿಗೆ ಡ್ರೈವರ್ ತಬ್ಬಿಬ್ಬಾಗಿ ಸ್ಟೇರಿಂಗ್ ತಿರುಗಿಸುತ್ತ ಎದುರಿನ ದೊಡ್ಡ ಹಳ್ಳಕ್ಕೆ ಕಾರು ಬಿಟ್ಟ. ಆಮೇಲೆ ಗ್ಯಾನ ತಪ್ಪಿದ್ದ.
ಕಾರು ಸುತ್ತ ಜನ. ಯಾರೋ ಬೈಕಿಂದ ಬಂದವನು ಸಡನ್ನಾಗಿ ನಿಲ್ಸಿ ಏನಾಯ್ತು ಅಂತ ಪಕ್ಕದ ಬೈಕಿನವನನ್ನು ಕೇಳಿದಾಗ ಆಕ್ಸಿಡೆಂಟ್ ಸ್ಪಾಟ್ ಡೆತ್ ಅಂದ. ಬೈಕಿನವನು ಬೋಳಿ ಮಕ್ಳು ನೆಟ್ಟಗೆ ರೋಡ್ ಮಾಡೊಲ್ಲ ಎಂದು ಬೈದು ಹೊರಟ
****
ಹೀಗೆ ಸಾಹೇಬ ಸತ್ತ ಮೂರು ವರುಷದ ಹಿಂದೆ ತಿರುಪತಿಗೆ ಹೋದ ಹೆಂಡತಿ ಮಗ ನಿದ್ದ ಕಾರಿಗೆ ಲಾರಿ ಗುದ್ದಿ ತೀರಿ ಹೋಗಿದ್ದರು.
0 ಪ್ರತಿಕ್ರಿಯೆಗಳು