ಹಿರಿಯ ಅರಣ್ಯಾಧಿಕಾರಿ ಕಾಡುಗಳ ಕುರಿತು ಅಪಾರ ಮಾಹಿತಿ ಹೊಂದಿದ್ದ ಕೊಡಗಿನ ಕೆ.ಎಂ.ಚಿಣ್ಣಪ್ಪ(84) ಅವರು ಇಂದು ನಿಧನರಾಗಿದ್ದಾರೆ. ‘ವೈಲ್ಡ್ಲೈಫ್ ಫಸ್ಟ್’ ಸಂಘಟನೆಯ ಮೂಲಕ ಕಾಡ್ಗಿಚ್ಚು ನಿಯಂತ್ರಣ ಸೇರಿದಂತೆ ಪರಿಸರ ಪೂರಕವಾದ ಹತ್ತು ಹಲವು ಹೋರಾಟಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು.
——
ಚಿಣ್ಣಪ್ಪ ಅವರು ಕಾಡಿನ ಬಗ್ಗೆ ಅಪಾರ ಜ್ಞಾನ ಮತ್ತು ಪ್ರೀತಿ ಹೊಂದಿದವರು. ನಾವು ಹದಿನೈದು ವರ್ಷಗಳ ಹಿಂದೆ ಬೆಂಗಳೂರು ವರದಿಗಾರ ಕೂಟದ ವತಿಯಿಂದ ನಾಗರಹೊಳೆಗೆ ಪ್ರವಾಸ ಹೋಗಿದ್ದೆವು. ಒಂದು ರಾತ್ರಿ ಅಲ್ಲಿಯೇ ವಾಸ್ತವ್ಯ ಮಾಡಿದ್ದೆವು. ಮರುದಿನ ಬೆಳಿಗ್ಗೆ ಚಿಣ್ಣಪ್ಪ ಅವರು ನಮಗೆ ಕಾಡಿನ ದರ್ಶನ ಮಾಡಿಸಿದರು. ಕಾಲ್ನಡಿಗೆಯಲ್ಲಿ ಸ್ವಲ್ಪ ದೂರ ಕ್ರಮಿಸಿದ್ದೆವು. ಕಾಡಿನ ಬಳ್ಳಿಗಳು, ಮರ, ಕೀಟಗಳು, ಬೃಹದಾಕಾರದ ಒರಲೆ ಹುತ್ತಗಳು… ಒಂದು ಅನೂಹ್ಯ ಲೋಕವನ್ನು ನಮ್ಮ ಮುಂದೆ ತೆರೆದಿಟ್ಟಿದ್ದರು.
ಸಣ್ಣಸಣ್ಣ ಜೀವಿಗಳು ಮತ್ತು ಸಸ್ಯಗಳ ಗುಣಲಕ್ಷಣಗಳನ್ನು ಅವರದೇ ಮಾತುಗಳಲ್ಲಿ ಕೇಳುತ್ತಿದ್ದಾಗ ಅವರೊಬ್ಬ ಕಾಡಿನ ತಪಸ್ವಿಯಂತೆ ಮಿಂಚಿದ್ದರು.
ದೂರದಲ್ಲಿ ನಮಗೆ ಅಪರಿಚಿತವಾದ ಯಾವುದೋ ಹಕ್ಕಿಯೋ, ಕೀಟವೋ ಕೂಗಿದಾಗ, ನಮ್ಮ ಗದ್ದಲವನ್ನು ನಿಲ್ಲಿಸಿ ಆ ಶಬ್ಧವನ್ನು ಮತ್ತೆ ಕೇಳಿಸಿ ಅದರ ಇಡೀ ಜಾತಕವನ್ನು ಬಿಡಿಸಿಟ್ಟಿದ್ದರು.
ಆ ಒಂದು ಮುಂಜಾನೆ ಪತ್ರಕರ್ತರಾದ ನಮ್ಮ ಪಾಲಿಗೆ ಅವಿಸ್ಮರಣೀಯ. ನಿಸರ್ಗದ ಬಗ್ಗೆ, ವನ್ಯಜೀವಿಗಳ ಬಗ್ಗೆ ಅವರ ಕಳಕಳಿ, ಪ್ರೀತಿ ಅನನ್ಯ. ಪರಿಸರದ ಕಥೆಗಳ ಮೂಲಕ ತೇಜಸ್ವಿ ಹೇಗೆ ನೆನಪಾಗುತ್ತಾರೋ ಹಾಗೆ ಚಿಣ್ಣಪ್ಪ. ಕಾಡಿನ ಅನುಭವದ ಕುರಿತು ಅವರು ಪುಸ್ತಕಗಳನ್ನು ಬರೆದಿದ್ದು ಅದನ್ನು ಓದಿದ್ದೇನೆ.
ನನ್ನ ಈ ಅನುಭವವನ್ನು ನಾನು ಕಾರ್ಯನಿರ್ವಹಿಸುತ್ತಿದ್ದ ಉದಯವಾಣಿಯಲ್ಲಿ ಲೇಖನ ರೂಪದಲ್ಲಿ ಬರೆದಿದ್ದೆ.
ನಾಡಿನ ಕಾಡಿನ ಹಾದಿಯಲ್ಲಿ ಅವರ ಮಧುರ ನೆನಪುಗಳಿವೆ.
-ಕಂಕ ಮೂರ್ತಿ
0 ಪ್ರತಿಕ್ರಿಯೆಗಳು