ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಿಟ್ಟೆಯಾಗಿ ಹೊರಬರಲಾಗದ ತಹತಹಿಕೆ..

ಚಂದ್ರಶೇಖರ ಹೆಗಡೆ 

ದಿಕ್ಕು ದಿಕ್ಕಿಗೂ ಅನುರಣಿಸುತಿದೆ

ಆಕಳಿಸುವ ಜಗದ ನೆತ್ತಿಯ

ಮೇಲೆ ಕುಕ್ಕಿದಂತೆ

ಜ್ಯೋತಿ ಹಚ್ಚಿಟ್ಟ ಮಹಾಮನೆಯೆ ಜಗುಲಿಯೆಲ್ಲಿ

ಸಿರಿ ತುಂಬಿದ ಅರಮನೆಗಳೇ ಎಲ್ಲ ಇಲ್ಲಿ

ಗುಹೆಗಳ ಒಳ ಹೊಕ್ಕು ಬಾಚಿಕೊಂಡ

ಭೋಗದ ಚೀಲಗಳೇ ಬೆನ್ನ ಮೇಲೆ

ಅಲಿಬಾಬಾಗಳ ಕಣ್ಣುಗಳ ಭಿತ್ತಿಯೊಳಗೆ

ಮುತ್ತು ರತ್ನ ಹವಳ ಸುವರ್ಣ

ಮಹಾಮಾಲೆ

ಶರಣ ಪ್ರಮಥಂಗಳ ಮಾತು

ಮಥನ ಅನುಭಾವದ ನವನೀತವೆತ್ತಣ

ದಾಸಯ್ಯರು ತೋರಿದ ಮಧುಸೂದನನ

ಕೊಳಲಗಾನವೆತ್ತಣ

ಮುಕ್ತಿಯ ಪದಮಾಲಿಕೆ

ಶರೀಫರ ತಂಬೂರಿಯ ನಾದದೀಪಿಕೆ

ಮರೆತು ಹೋಗಿ ಹಾದಿ ತಪ್ಪಿದವರು

ಚಿಟ್ಟೆಯಾಗಿ ಹೊರಬರಲಾಗದ ತಹತಹಿಕೆ

ಕಾಮದೆಳೆ ಮೋಹ ಮತ್ಸರದ ಬಲೆ

ಹೆಣೆದು ಸಿಲುಕಿ ಗುದ್ದಿ ಒದ್ದಾಡಿ

ಬಳಲಿ ಬೆಂದು ಹೋದ ತೆರಣಿ

ತೊಳಲಾಟದ ಕನವರಿಕೆಯ ಕನಸು

ಸಿರಿ ಸುಖದ ಹಳಹಳಿಕೆಯ ಮನಸು

ಮಬ್ಬು ಮುಸುಕಿದ ಹಾದಿಯ ತುದಿ

ಅಡ್ಡ ಹರಿಯುತಿದೆ ಭವದ ನದಿ

ದಡದಾಚೆ ಕರೆದೊಯ್ಯುವ ಅಂಬಿಗನ ದೋಣಿ

ಚೌಡಯ್ಯನಿಲ್ಲದೆ ಎಲ್ಲೆಲ್ಲೂ ಸೋರುವ

ತೂತುಗಳ ಖಣಿ

ಎಲ್ಲಿ ಪಯಣದ ಯೋಗ

ಇಲ್ಲ ಧ್ಯಾನದ ಜಾಗ

ಮಹಾಮಾಯೆಯಾಟ ಭವದ ಚಕ್ರವ್ಯೂಹ

ಸುಲಭ ಹೊರಟ ಅಭಿಮನ್ಯುಗಳಿಗೆ

ದಿಕ್ಕಿಲ್ಲದ ದ್ವಂದ್ವ ಭವಿಗಳಿಗೆ

ದುರಾಸೆ ಮೂಟೆ ಒಂದೆಡೆಗೆ

ಧುಮ್ಮಿಕ್ಕಿ ಹರಿವ ನದಿ ಇನ್ನೊಂದೆಡೆಗೆ

ತೆರೆಯದ ಭದ್ರ ಬಾಗಿಲು ಮಗದೊಂದೆಡೆಗೆ

ಬಳಲುವುದೊಂದೇ ಕಾಯಕ

ನಿತ್ಯ ಸಂತೆಯ ಮಿಥ್ಯಗಳೊಳಗೆ

ಸತ್ಯ ಶೋಧನೆಯ ಕುಹಕದಲಿ ಮುಳುಗಿ

ಭೋಗದರಮನೆಯೊಳಗೆ ಝಗಮಗಿಸುವ

ಥಳುಕು ಬಳುಕು

ಗುರಿಯಿಲ್ಲದ ನಾಳೆಗಳ ಕನಸು

ಮುಂದೆ ತೆವಳುವವರಿಲ್ಲ

ಹಿಂದೆ ತಳ್ಳುವವರೇ ಎಲ್ಲ

ಬಾಗಿಲ ಬಳಿ ನಿಂತನರಸ ಬಿಜ್ಜಳ

ತಪ್ಪಿಸಿಕೊಳ್ಳದಂತೆ ಒಂದೇ ಒಂದು

ಸಾಮ್ರಾಜ್ಯದ ಹುಳ

ಕನಕನ ಕಿಂಡಿಯೇ ಬೆಳಕಿನ ಪಥ

ಸಾಹಸದ ಪಯಣ ದೂರ ಗಾವುದ

ಕಾಣುವುದಾರಿಗೋ ಎಲ್ಲ ಚೀಲ

ಹೊತ್ತವರೇ

ಸುತ್ತುವುದಲ್ಲಿಯೇ ಗೂಡೊಳಗೆ

ಸಿರಿಯ ಕೃತಕ ಮಯನರಮನೆಯೊಳಗೆ

ಬಂಧನ ಮುಕ್ತಿ ಬಂಧನ ಮುಕ್ತಿ

ಮಂತ್ರಜಪದ ಮಂಥನ

ಜಾರುಬೀಳುವುದರೊಳಗೆ

‍ಲೇಖಕರು avadhi

23 January, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading