ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಿಟಿಕೆ ಸಾಸಿವೆಯ ಮುಂದೆ..

 

 

 

 

ನೇಪಥ್ಯ

ಸಂಗೀತ ರವಿರಾಜ್

 

 

 

 

ಹುಳಿ ಮಜ್ಜಿಗೆ ಬೆರೆಸಿದ ಬದನೆ ಗೊಜ್ಜು,
ನಿಂಬೆ ರಸ ಪಾಕದ ಹಲಸಿನ ಬೀಜದ ಚಟ್ನಿ
ನೀರು ಸೌತೆಯ ಪಚ್ಚಡಿ
ಮಾವಿನಕಾಯಿಯ ಪೊಜ್ಜಿ,
ಗಂಜಿಗೆ ನೆಚ್ಚಿಕೊಳ್ಳುವ
ನೀರೂರಿಸುವ ಖಾರ ಖಾದ್ಯಗಳಿಗೆಲ್ಲಾ
ಜೀವ ತುಂಬಿದೊಗ್ಗರಣೆ
ಒಂದು ಹಂತದಲ್ಲಿ ….
ಸಂತೆಯಲ್ಲಿ ಬಿಕರಿಗಿಟ್ಟ ಕನಸು!

ನುಣ್ಣಗಿನ ಪುಟ್ಟ ಸಾಸಿವೆಯ ಸಿಡಿತ
ಎಸಳು ಬೆಳ್ಳುಳ್ಳಿಯ ಘಮ ಬೆರೆತ
ದಿಟ, ಸ್ಫುಟ ಪಚ್ಚೆ ಕರಿಬೇವಿನೆಸಳ ಸಂಗಮದೆಣ್ಣೆ
ಹೆಚ್ಚಿಸಿದ ರುಚಿಯ ಭಾರವ ಹೊತ್ತು
ತುರ್ತಿನ ದಾರಿಯಲ್ಲಿ ಹೊರಟವರಿಗೆಲ್ಲಾ
ಗಮ್ಯ ತಿಳಿಯಲೇ ಇಲ್ಲ!

 

 

 

 

 

 

 

 

 

 

ಊಟವೇ ಬೇಡವೆಂದವರೂ
ಒಗ್ಗರಣೆಯ ಘಮಕ್ಕೆ ದಡಕ್ಕನೇ ಊಟಕ್ಕೆದ್ದು
ಅಪ್ಪಿ ತಪ್ಪಿ ನಡುವಲ್ಲಿ ಸಿಕ್ಕ
ಬೆಳ್ಳುಳ್ಳಿಯನ್ನೋ, ಬೇವಿನೆಸಳನ್ನೋ
ನಿರ್ದಾಕ್ಷಿಣ್ಯವಾಗಿ ಪಕ್ಕಕ್ಕಿಟ್ಟಾಗ
ಸಿಡಿಯುವ ಸಾಸಿವೆಯು ಒಂದು ಕ್ಷಣ
ನಿರುತ್ತರವಾಗಿಬಿಡುತ್ತದೆ ಇವರ ಮುಂದೆ!
ಉರಿಗೆ ಸಿಕ್ಕ ನಂತರವೇ ಸಿಡಿಯುವ ಸಾಸಿವೆಗೂ
ಈ ಪರಿಯ ಧ್ಯಾನ ಎಲ್ಲಿಂದ ಬಂತು?
ಅಚ್ಚರಿ ನನಗೆ.

ತಾತ, ಮುತ್ತಾತರಿಂದ ಹಿಡಿದು
ನಮ್ಮ ಪೂರ್ವಿಕರೆಲ್ಲಾ ಮಾಡಿದ ಪೂರ್ವಾಗ್ರಹಪೀಡಿತ
ಜಾಣ್ಮೆಯ ಕೆಲಸ ಇದು!
ಈಗ ಮೊಮ್ಮಗನಾದಿಯಾಗಿ ಬೆಳೆದರು
ರುಚಿ ನೀಡಿ ಅವಿತ ಒಗ್ಗರಣೆ
ಒಂದಿನಿತು ಬೇಸರಿಸಲಿಲ್ಲ
ಬದಲಿಗೆ ತನ್ನ ಬೆಲೆ ನೆಲೆಯ
ತಾನೇ ಭದ್ರಪಡಿಸಿಕೊಂಡಿದೆ..
ಒಗ್ಗರಣೆಗೆ ಕೃತಜ್ಞತೆ ಸೂಚಿಸದೆ ಕೃತಘ್ನರಾದವರು
ಚಿಟಿಕೆ ಸಾಸಿವೆಯ ಮುಂದೆ
ಇನ್ನು ಕುಬ್ಜರು ಅಷ್ಟೇ …!

‍ಲೇಖಕರು avadhi

15 September, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading