ಓ, ಜ್ಞಾನವೆಂಬುದು ಎಷ್ಟು ಭಯಂಕರ..

 

 

ವೈಚಾರಿಕತೆ ಮತ್ತು ಸಮಾಜ: ಗ್ರಹಿಕೆಯ ಸವಾಲುಗಳು

ಮೇಟಿ ಮಲ್ಲಿಕಾರ್ಜುನ

 

 

 

ಈ ಬರಹದ ಉದ್ದೇಶ ಗೌರಿ ಲಂಕೇಶ್ ಅವರನ್ನು ಬರ್ಬರವಾಗಿ ಕೊಲೆ ಮಾಡಿರುವುದರ ಹಿಂದಿನ ಮೋಟಿವ್‍ಅನ್ನು ವಿಶ್ಲೇಷಿಸುವುದಾಗಿದೆ.

ಇದನ್ನೊಂದು ರಾಜಕೀಯ ಹತ್ಯೆಯನ್ನಾಗಿ ಹಾಗೂ ತಾತ್ವಿಕ ಭಿನ್ನಾಭಿಪ್ರಾಯದ ಪರಿಣಾಮವಾಗಿ ಈ ಕೊಲೆಯನ್ನು ನೋಡಲಾಗಿದೆ. ಸದ್ಯಕ್ಕೆ ಈ ನಿಲುವುಗಳಿಗೆ ಹೊರತಾಗಿ ಈ ಕೊಲೆಯನ್ನು ಬೇರೆಯಾಗಿ ವಿಶ್ಲೇಷಿಸುವುದು ಕಷ್ಟ. ಏಕೆಂದರೆ, ಏಕಾಏಕಿ ಇಂತಹವೊಬ್ಬ ಹೆಣ್ಣು ಮಗಳನ್ನು ಹೀಗೆ ಕೊಲೆಗೈಯುವುದರ ಹಿಂದಿನ ಉದ್ದೇಶ ಬೇರೆಯಿರಲು ಸಾಧ್ಯವಿಲ್ಲ. ಅಂತಹ ಯಾವುದೇ ಕಾರಣಗಳು ಇದುವರೆಗೂ ಕಂಡುಬಂದಿಲ್ಲ ಹಾಗೂ ಕಾಣುವ ಅಂತಹ ಸುಳಿವುಗಳೂ ದೊರೆತಿಲ್ಲ.

ಸಮಾಜಮುಖಿ ವೈಚಾರಿಕತೆಯನ್ನು ತಾಳಿಕೊಳ್ಳದ, ಎಲ್ಲ ಕಾಲಕ್ಕೂ ಮನುಷ್ಯವಿರೋಧಿ ನಿಲುವುಗಳನ್ನು ಹೊಂದಿರುವ, ಧರ್ಮಾಂಧತೆಯಿಂದ ಬಳಲುತ್ತಿರುವ ಮನಸ್ಥಿತಿಯ ಸಮೂಹವೊಂದು ಈ ಕೊಲೆಗೆ ಕಾರಣ ಎಂಬುದು ಅತ್ಯಂತ ಸ್ಪಷ್ಟವಾಗಿದೆ. ಹಾಗಾಗಿ ಸಮಾಜ ಮತ್ತು ವೈಚಾರಿಕತೆಗಳ ನಡುವಣ ತಿಕ್ಕಾಟಗಳು, ವಿರೋಧಗಳು ಹಾಗೂ ಕಾರಣಗಳ ಸ್ವರೂಪವನ್ನು ಕುರಿತು ಯೋಚಿಸುವುದು ಇವತ್ತಿನ ಅಗತ್ಯವಾಗಿದೆ. ಏಕೆಂದರೆ, ಕಳೆದ ಎರಡು ವರುಷಗಳ ಹಿಂದೆ ಪ್ರೊ. ಎಂ.ಎಂ. ಕಲಬುರ್ಗಿಯವರ ಕೊಲೆಯನ್ನೂ ಹೀಗೆ ಮಾಡಲಾಗಿತ್ತು. ಆದರೆ ಆ ವ್ಯಕ್ತಿಯ ಕೊಲೆಗೆ ಹಲವು ಊಹಾಪೋಹಗಳನ್ನೂ ಮಾಡಲಾಗಿತ್ತು. ಗೌರಿಯವರ ಕೊಲೆ ಪ್ರಕರಣದಲ್ಲಿ ಇಂತಹ ಅನಗತ್ಯ ಸಂಶಯಕ್ಕೆ ಯಾವುದೇ ಕಾರಣಗಳಿಲ್ಲ. ಆದ್ದರಿಂದ ಕಲಬುರ್ಗಿಯವರ ಕೊಲೆ ಮತ್ತು ಗೌರಿಯವರ ಕೊಲೆಯನ್ನು ಸೂಕ್ಷ್ಮವಾಗಿ ನೋಡಿದರೆ ಇವೆರಡೂ ಕೊಲೆಗಳ ಹಿಂದಿನ ಉದ್ದೇಶ ಒಂದೇಯಾಗಿದೆ ಎನ್ನುವುದೂ ಈಗ ಸ್ಪಷ್ಟವಾಗಿ ಕಾಣುತ್ತಿದೆ.

ಪ್ರಜಾಸತ್ತಾತ್ಮಕ, ಸೆಕ್ಯೂಲರ್ ಹಾಗೂ ಬಹುಳತೆಯಿಂದ ಕೂಡಿದ ಭಾರತದಲ್ಲಿ ಜಾತಿ, ಧರ್ಮಗಳ ಮೇಲಾಟದಿಂದ ಊಳೀಗಮಾನ್ಯ ಹಾಗೂ ಮೂಲಭೂತವಾದದಿಂದ ಏರ್ಪಟ್ಟಿರುವ ಕ್ರೌರ್ಯ ಇಂದಿಗೂ ಅತ್ಯಂತ ಪ್ರಬಲವಾಗಿ ನೆಲೆನಿಂತಿದೆ ಎಂಬ ವಾಸ್ತವ ಮತ್ತೆ ಮತ್ತೆ ನಮಗೆ ಮನವರಿಕೆಯಾಗುತ್ತಿದೆ.

ವೈಚಾರಿಕತೆ, ತಾತ್ವಿಕತೆ, ಸಾಮಾಜಿಕ ಸಮಾನತೆ, ಸಾಮಾಜಿಕ ನ್ಯಾಯ, ಜಾತ್ಯತೀತತೆ, ಅಸ್ಪ್ರುಶ್ಯತೆ ನಿವಾರಣೆ, ಸಾಂಸ್ಕ್ರುತಿಕ ಸರಿತನ ಮುಂತಾದ ಮೌಲ್ಯಗಳನ್ನು ನೆಲೆಗೊಳಿಸಲು ಪ್ರಾಣವನ್ನು ಪಣಕ್ಕಿಡಬೇಕಾದ ಹೀನಸ್ಥಿತಿ ಕರ್ನಾಟಕಕ್ಕೆ ಬಂದೊದಗಿದೆ. ಸಾಮಾಜಿಕ ಅನಿಷ್ಠಗಳನ್ನು ಹೋಗಲಾಡಿಸಲು ಹೋರಾಡುವ ವಿಚಾರವಂತರನ್ನು ವ್ಯತರಿಕ್ತವಾಗಿ ಬಿಂಬಿಸುವ ಹುನ್ನಾರಗಳು ನಡೆಯುತ್ತಿವೆ. ಅಂದರೆ ಸಮೂಹಗಳ ಪರವಾಗಿ ಧ್ವನಿಯೆತ್ತುವ ಕ್ರಮವನ್ನೇ ‘ದೇಶ ದ್ರೋಹದ’ದ ಕ್ರಿಯೆಯನ್ನಾಗಿ ರೂಪಿಸಲಾಗುತ್ತಿದೆ.

ಭಾರತದ ನಾಗರಿಕತೆಗೆ ಹಲವು ಸಹಸ್ರಮಾನಗಳ ಚರಿತ್ರೆಯಿದೆ ಎಂದು ಬೀಗುವ ನಾವು, ಅಮಾನುಷ ಧೋರಣೆ, ಕ್ರೌರ್ಯಕ್ಕೂ ಕೂಡ ಅದೇ ಪ್ರಮಾಣದ ಚರಿತ್ರೆಯಿದೆ ಎಂಬುದನ್ನೂ ಒಪ್ಪುವುದಕ್ಕೆ ತಯ್ಯಾರಿಲ್ಲ. ಏಕೆಂದರೆ ವೇದ, ಉಪನಿಷತ್ತು, ಪುರಾಣಗಳನ್ನು ಅತ್ಯಂತ ಪ್ರಾಚೀನ ಕಾಲದಿಂದಲೂ ನಮ್ಮ ಸ್ಮ್ರುತಿಗಳಲ್ಲೇ ಕಾಪಿಟ್ಟುಕೊಂಡು ಬಂದಿದ್ದೇವೆ. ಹಾಗೂ ಲೋಕದ ಇತರೆ ಎಷ್ಟೋ ದೇಶಗಳು ನಾಗರಿಕಗೊಳ್ಳುವ ಮೊದಲು ಭಾರತ ವೈಚಾರಿಕ, ಶಾಸ್ತ್ರೀಯ ಹಾಗೂ ಪೌರಾಣಿಕ ಪರಂಪರೆಗಳನ್ನು ಹೊಂದಿತ್ತು ಎಂಬ ಅಪ್ಪಟ ನಂಬಿಕೆಯನ್ನು ಹೊಂದಲಾಗಿದೆ.

ಹಾಗಾದರೆ ವೈಚಾರಿಕತೆಯನ್ನು ಎಲ್ಲಿ? ಯಾವಾಗ? ಕಳೆದುಕೊಂಡೆವು? ಇಲ್ಲವೇ ನಾಗರಿಕತೆ, ಪೌರಾಣಿಕ ಹಾಗೂ ಶಾಸ್ತ್ರೀಯ ಅಧ್ಯಯನ ಶಿಸ್ತುಗಳ ಪರಂಪರೆಗಳನ್ನು ಹೊಂದುವುದೆಂದರೆ, ವೈಚಾರಿಕ ಮತ್ತು ತಾತ್ವಿಕ ನಿಲುವುಗಳನ್ನು ಕೈಬಿಟ್ಟು, ಜನವಿರೋಧಿ ನಿಲುವುಗಳನ್ನು ತಾಳುವುದೇ? ವಿಚಾರ, ವಿವೇಕ ಹಾಗೂ ಮಾನವ ಸಂಬಂಧದ ನೀತಿಪಾಠಗಳು, ನೈತಿಕತೆಯ ವಿನ್ಯಾಸಗಳು ಮತ್ತು ಸಮೂಹವೆಂದರೆ ಪರಸ್ಪರ ಅನುಸರಿಸಿಕೊಂಡು ಸಹಬಾಳ್ವೆಯನ್ನು ನಡೆಸಲು ಅನುವಾಗದಂತೆ, ಸಮಾಜಗಳನ್ನು ಕಟ್ಟುವುದಕ್ಕೆ ನಾಗರಿಕ ಸಮಾಜಗಳೆಂದು ಕರೆಯಬಹುದೇ?

ಮನುಷ್ಯ ಪ್ರೀತಿ, ಸಹಜೀವನ ಮೊದಲಾದ ಮೌಲ್ಯಗಳನ್ನು ರೂಪಿಸಿಕೊಳ್ಳುವುದಕ್ಕೆ ಬೇಕಾಗಿರುವ ಸಾಮಾಜಿಕ-ರಾಜಕೀಯ ರಾಚನಿಕ ಹೊಂದಾಣಿಕೆಯನ್ನು ವೈಚಾರಿಕತೆ ಎಂದು ಕರೆಯೋಣ. ಬುದ್ದ, ಬಸವ, ಗುರುನಾನಕ್, ಮಹ್ಮದ್, ಕಬೀರ್, ಕನಕದಾಸ, ನಾರಾಯಣಗುರು, ಮಾಕ್ರ್ಸ್, ಅಂಬೇಡ್ಕರ್, ಗಾಂಧಿ, ಕುವೆಂಪು ಮೊದಲಾದವರನ್ನು ಚಿಂತಕರು, ವಿಚಾರವಂತರು, ಮಹರ್ಷಿಗಳು ಎಂಬೆಲ್ಲ ಹೆಸರುಗಳಿಂದ ಗುರುತಿಸುತ್ತೇವೆ.

ಇಂತಹ ಹೆಸರುಗಳಿಂದ ಗುರುತಿಸುವುದಕ್ಕೆ ಇರುವ ಆಧಾರಗಳೇ ವಿಚಾರ, ವಿವೇಕ ಇಲ್ಲವೇ ವೈಚಾರಿಕ ವಿನ್ಯಾಸಗಳಾಗಿರುತ್ತವೆ. ಅಂದರೇನಾಯ್ತು ವ್ಯಕ್ತಿ ನೆಲೆಯಿಂದ ಸಾಮುದಾಯಿಕ ನೆಲೆಗಿನ ಪಯಣವೇ ನಾಗರಿಕ ಸಮೂಹಗಳ ರಚನೆಯಾಗಿದೆ. ನಿಜ, ಸಮಾಜಗಳ ರಚನೆಗೆ ಬೇಕಾಗಿರುವ ಸಾಮಾಜಿಕ, ಮಾನವಿಕ ಹಾಗೂ ಶಾಸ್ತ್ರೀಯ ಚೌಕಟ್ಟುಗಳು ಭಾರತದಲ್ಲಿ ಇನ್ನೂ ಅಸ್ತಿತ್ವಕ್ಕೆ ಬಂದಿರುವುದಿಲ್ಲ. ಹಾಗಾಗಿ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆಗಳ ನಡುವಣ ಅಂತರಗಳನ್ನು ಇವತ್ತಿಗೂ ನಮ್ಮಿಂದ ಅರಿತುಕೊಳ್ಳಲು ಸಾಧ್ಯವಾಗಿಲ್ಲ.

ಯುರೋಪಿನ ಕಲ್ಪನೆಗಳಾದ ಸೊಸೈಟಿ, ಸಿವಿಕ್ ಸೊಸೈಟಿ, ಸಾವರ್ನಿಟಿ ಹಾಗೂ ಡೆಮಾಕ್ರಸಿಯನ್ನು ಕೇವಲ ಮಂತ್ರಗಳನ್ನಾಗಿ ಜಪಿಸುತ್ತಿದ್ದೇವೆ. ಅದೇ ಪ್ರಕಾರ, ರ್ಯಾಶಿನ್ಯಾಲಿಟಿ, ಫಿಲಾಸಫಿಕಲ್ ಮುಂತಾದ ಪದಗಳಿಗೆ ಪರ್ಯಾಯವಾಗಿ ವೈಚಾರಿಕ ಹಾಗೂ ತಾತ್ವಿಕ ಎಂಬ ಸಮಾನ ಪದಗಳನ್ನು ಮಾತ್ರ ಬಳಸಲಾಗುತ್ತದೆ. ಹೊರತು ಆಯಾ ಪದಗಳಲ್ಲಿ ಗೃಹಿತವಾಗಿರುವ ವಿಚಾರ, ವಿವೇಕ ಇಲ್ಲವೇ ಅರಿವಿನ ವಿನ್ಯಾಸಗಳನ್ನು ಕೈಬಿಟ್ಟು ಪದಗಳ ಬೆನ್ನುಹತ್ತಿದ್ದೇವೆ.

ಭಕ್ತಿ ಪರಂಪರೆ, ಚಳವಳಿ, ಚಿಂತಕರು, ತತ್ವಪದಕಾರರು ಮತ್ತು ಮಹರ್ಷಿಗಳು ಪದಶಃ ನಡೆ-ನುಡಿಗಳ ನಡುವೇ ತಪ್ಪಿಹೋಗಿರುವ ಲಯಗಳನ್ನು ಮರುಹೊಂದಿಸುವ ಪ್ರಯತ್ನವನ್ನು ಮಾಡಿದರು. ಈ ಹೊಂದಾಣಿಕೆಯ ಮೂಲಕವೇ ಸಾಮುದಾಯಿಕ ಪ್ರಜ್ಞೆ, ವಿವೇಕ, ಎಚ್ಚರ ಹಾಗೂ ತಾತ್ವಿಕ ಪರಂಪರೆಗಳನ್ನು ಕಟ್ಟುವ ದಾರಿಯನ್ನು ತುಳಿದರು. ಆಧುನಿಕ ಭಾರತದ ನಿರ್ಮಾಣದ ಸನ್ನಿವೇಶದಲ್ಲೂ ಕೂಡ ಗಾಂಧಿ, ಅಂಬೇಡ್ಕರ್ ಹಾಗೂ ಲೋಹಿಯಾ ಇವರುಗಳು ಸದ್ಯದ ಭಾರತಕ್ಕೆ ಬೇಕಾದ ವೈಚಾರಿಕ ದಾರಿಗಳನ್ನು ಕಂಡುಕೊಳ್ಳಲು ಯುರೋಪಿನ ಪದಗಳನ್ನು ಮಾತ್ರ ಎರವಲು ಪಡೆದುಕೊಳ್ಳದೇ, ಸಮೂಹಗಳ ಏಳ್ಗೆಯನ್ನು ಬಯಸಿದ ದಾರ್ಶನಿಕರು, ಮಹರ್ಷಿಗಳು ಹಾಗೂ ಪುರಾಣಗಳನ್ನು ಬಳಸಿಕೊಂಡರು.

ಗಾಂಧಿಯವರ ಅಹಿಂಸೆ, ಸತ್ಯ, ರಾಮರಾಜ್ಯದ ಕಲ್ಪನೆ ಪುರಾಣದಿಂದ ಹಾಗೂ ಅಂಬೇಡ್ಕರ್ ಅವರ ಸಮಾನತೆ, ಸ್ವಾತಂತ್ರ್ಯ ಹಾಗೂ ಬಾಂಧವ್ಯದಂತ ಕಲ್ಪನೆಗಳನ್ನು ಬುದ್ದನಿಂದ ಪಡೆದುಕೊಂಡರು. ಗಾಂಧಿಯವರ ಧಾರ್ಮಿಕ ಕಲ್ಪನೆ ಸನಾತನವಾಗದೇ, ಸಾಮರಸ್ಯವನ್ನು ಬೆಳೆಸುವ ಸಾಮಾಜಿಕ ಕ್ರಿಯೆಯಾಗಿತ್ತು.

ಸಾಮಾಜಿಕ, ಸಾಂಸ್ಕ್ರುತಿಕ ವೈವಿಧ್ಯತೆಯನ್ನು ಒಪ್ಪಿ ಸಹಬಾಳ್ವೆಯನ್ನು ನಡೆಸುವುದಕ್ಕೆ ಬೇಕಾದ ನೈಸರ್ಗಿಕವಾದ ಮಾರ್ಗಗಳನ್ನು ಅಂಬೇಡ್ಕರ್ ಮತ್ತು ಗಾಂಧಿಯವರಲ್ಲಿ ಕಾಣುತ್ತೇವೆ. ಆದಾಗ್ಯೂ ಇವರಿಬ್ಬರ ವೈಚಾರಿಕ ನಿಲುವುಗಳಲ್ಲಿ ಸಾಕಷ್ಟು ತಾತ್ವಿಕ ಭಿನ್ನಾಭಿಪ್ರಾಯಗಳಿದ್ದವು ಎಂಬುದು ಗಮನಾರ್ಹ. ಆದರೆ, ಇದಕ್ಕೆ ವ್ಯತರಿಕ್ತವಾಗಿ ಹಿಂದುತ್ವದ ಕಲ್ಪನೆ, ರಾಜಕಾರಣ, ರಾಷ್ಟ್ರಭಕ್ತಿ, ಧರ್ಮ, ಗೋವಿನ ಬಗೆಗಿನ ನಂಬಿಕೆಗಳು ಇತ್ಯಾದಿ ಸಂಗತಿಗಳನ್ನು ರೂಪಿಸುವಾಗ ಭಾರತದ ಸಾಮಾಜಿಕ, ಧಾರ್ಮಿಕ, ಸಾಂಸ್ಕ್ರುತಿಕ ಹಾಗೂ ರಾಜಕೀಯ ವೈವಿಧ್ಯತೆಗಳನ್ನು ಮರೆಮಾಚಿ, ಯಾವುದೇ ಒಂದು ಪಂಗಡದ ನಂಬಿಕೆ ಮತ್ತು ಧೋರಣೆಗಳಿಗೆ ಮಾತ್ರ ಪೂರಕವಾಗಿ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ.

ಈ ಪಂಗಡದವರು ಆಚರಿಸುವ ಅಸ್ಪ್ರುಶ್ಯತೆ, ಧಾರ್ಮಿಕ ಮೂಲಭೂತವಾದ, ಸಾಮಾಜಿಕ ವಿಂಗಡನೆ, ಜಾತಿಗಳಲ್ಲಿ ಮೇಲು ಮತ್ತು ಕೀಳುಗಳು ಯಾವತ್ತಿಗೂ ಅವೈಚಾರಿಕ, ಅವೈಜ್ಞಾನಿಕ, ಅಮಾನವೀಯ ವಿದ್ಯಮಾನಗಳಾಗಿ ಇವರಿಗೆ ಕಾಣಲಿಲ್ಲ. ಬದಲಾಗಿ ಇಂತಹ ಅಮಾನವೀಯ ಆಚರಣೆಗಳನ್ನು ವಿರೋಧಿಸುವ ಹಾಗೂ ಸಾಮಾಜಿಕ ಬಾಂಧವ್ಯ ಮತ್ತು ಸೌಹಾರ್ದತೆಯನ್ನು ಬಯಸುವವರು ಅಂದರೆ ವಾಸ್ತವದಲ್ಲಿ ವೈಚಾರಿಕ, ಪ್ರಗತಿಪರ, ಎಡಪಂಥೀಯ ನಿಲುವುಗಳನ್ನು ಹೊಂದಿದವರು ದೇಶ ದ್ರೋಹಿಗಳು, ಸಮಾಜ ವಿರೋಧಿಗಳು ಎಂದಾಗಿ ಬಿಂಬಿಸಿ, ಜನಸಾಮನ್ಯರಲ್ಲಿ ಸಮಾಜ ಪರವಾಗಿರುವವರ ಬಗೆಗೆ ಅಪನಂಬಿಕೆಯನ್ನು ಸೃಷ್ಟಿಸಲಾಗುತ್ತಿದೆ.

ಇಂತಹ ಹುನ್ನಾರಗಳು ಹಿಂದುತ್ವ ರಾಜಕಾರಣದಿಂದ ನಡೆಯುತ್ತಿವೆ. ಇದೇ ರಾಜಕೀಯ-ಧಾರ್ಮಿಕ ಹುನ್ನಾರಕ್ಕೆ ಕಲಬುರ್ಗಿಯವರು ಮತ್ತು ಗೌರಿಯವರು ಬಲಿಯಾಗಿದ್ದಾರೆ. ಹೊಸ ಭಾರತದ ನಿರ್ಮಾಣದ ಸನ್ನಿವೇಶದಲ್ಲಿ ಯಾವ ತಾತ್ವಿಕತೆ ಮತ್ತು ವೈಚಾರಿಕತೆಯನ್ನು ಗಾಂಧಿ, ಅಂಬೇಡ್ಕರ್, ನೆಹರೂ ಹಾಗೂ ಲೋಹಿಯಾ ಅವರು ನೆಲೆಗೊಳಿಸಲು ಹಂಬಲಿಸಿದರೋ, ಆ ಎಲ್ಲ ತಾತ್ವಿಕ-ವೈಚಾರಿಕ ಚೌಕಟ್ಟುಗಳನ್ನು ಗಾಳಿಗೆ ತೂರಿ, ಅಂದರೆ ಸಹಸ್ರಮಾನಗಳಿಂದ ಗಳಿಸಿಕೊಂಡು ಬಂದಿದ್ದ ಬುದ್ದನ ಜೀವಕಾರುಣ್ಯವನ್ನು, ಬಸವಣ್ಣನ ಮಾನವ ಪ್ರೀತಿಯನ್ನು, ಗಾಂಧಿಯವರ ರಾಮರಾಜ್ಯ, ಅಹಿಂಸೆ ಹಾಗೂ ಸತ್ಯದ ಕಲ್ಪನೆಗಳನ್ನು ಹಾಗೂ ಅಂಬೇಡ್ಕರ್ ಅವರ ಸಮಾನತೆ, ಸ್ವಾತಂತ್ರ್ಯ ಮತ್ತು ಬಾಂಧವ್ಯದ ಕಲ್ಪನೆಗಳನ್ನು ನಾಶ ಮಾಡಲು, ಇಂತಹ ವೈಚಾರಿಕ ನಿಲುವುಗಳ ಪರವಾಗಿರುವವರನ್ನು ನಾಶ ಮಾಡುವ ಹುನ್ನಾರಗಳೂ ಇವತ್ತು ನಡೆಯುತ್ತಿವೆ.

ಪರಿಣಾಮವಾಗಿ ಗಾಂಧಿಯವರ ಹತ್ಯೆಯಿಂದ ಶುರುವಾಗಿ ಕಲಬುರ್ಗಿ ಹಾಗೂ ಗೌರಿಯವರವರೆಗೆ ಇದು ಬಂದಿದೆ. ನಮ್ಮ ವಿಚಾರ ಪರಂಪರೆಗಳು ಸಾಮಾಜಿಕ ವಿವೇಕದ ಚೌಕಟ್ಟುಗಳಾಗಿ ನೆಲೆಗೊಂಡರೆ ಮಾತ್ರ ವೈಚಾರಿಕ ಕ್ರಾಂತಿಗಳು ನಡೆಯುತ್ತವೆ ಇಲ್ಲವಾದರೆ ಹಿಂದುತ್ವ ರಾಜಕಾರಣದ ಹುನ್ನಾರದಿಂದ ಸಮೂಹ ಸಮೂಹಗಳೇ ನಾಶವಾಗುತ್ತವೆ. ಹಾಗಾಗಿ ಈ ಆಪತ್ತಿನಿಂದ ಪಾರಾಗುವುದು ಹೇಗೆ? ಸಾಫೊಕ್ಲಿಸ್‍ನ ದೊರೆ ಈಡಿಪಸ್ (ಲಂಕೇಶ್ ಅವರ ಅನುವಾದ) ನಾಟಕದ ಟೈರೀಸಿಯಸ್ ಪಾತ್ರದ ಮಾತೊಂದು ಈಗ ನೆನಪಾಗುತ್ತಿದೆ. ಅದೇನೆಂದರೆ, “ಓ, ಜ್ಞಾನವೆಂಬುದು ಎಷ್ಟು ಭಯಂಕರ, ಅದರಿಂದ ಉಪಯೋಗವಿಲ್ಲದಿದ್ದಾಗ! ಇದನ್ನು ಅರಿತಿದ್ದ ನಾನು ಯಾಕೆ ಮರೆತೆ? ಯಾಕಾದರೂ ಇಲ್ಲಿಗೆ ಬಂದೆ?” ವಿಚಾರವಂತರು ಹೀಗೆ ಪಶ್ಚಾತಾಪ ಪಡುವ ಬಿಕ್ಕಟ್ಟಿಗೆ ಸಿಲುಕಿದ್ದಾರೆ. ಈ ಬಕ್ಕಟ್ಟಿನಿಂದ ಹೊರಬರುವ ದಾರಿಗಾಗಿ ಕಾಯಬೇಕಿಲ್ಲ. ಬದಲಾಗಿ ಅವುಗಳನ್ನು ಮರುಸಂಪಾದಿಸಿಕೊಂಡು ಹೊರಹೊಮ್ಮಬೇಕಿದೆ.

‍ಲೇಖಕರು avadhi

September 15, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: