ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಇನ್ನಿಲ್ಲ: ಹಂಪನಾ ನುಡಿ ನಮನ…

ಖ್ಯಾತ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಇನ್ನಿಲ್ಲ.

ಅವರ ನೆನಪಿಗೆ ಕನ್ನಡದ ಮಹತ್ವದ ವಿದ್ವಾಂಸರಾದ ಪ್ರೊ ಹಂಪ ನಾಗರಾಜಯ್ಯ ಅವರು ಬರೆದ ಲೇಖನ ಇಲ್ಲಿದೆ-

ಪ್ರೊ. ಹಂಪ ನಾಗರಾಜಯ್ಯ

ವರಾ೦ಗದವರ ಪುತ್ರ

ತುಳುನಾಡಿನ ಕಾರ್ಕಳ ತಾಲ್ಲೂಕು ವರಾಂಗದ ಪುರೋಹಿತ ಕುಟುಂಬದಲ್ಲಿ ಹುಟ್ಟಿದ ತರುಣನ ಏರೇರಿಕೆಯ ವಿದ್ವತ್ಪಯಣ ಮನನೀಯ, ತಂದೆ ಶಾಲಾ ಅಧ್ಯಾಪಕರು. ಅವರ ಮಗ ರತ್ನವರ್ಮ ಪುತ್ರರತ್ನನಾಗಿ, ನಾಡಿನ ಕಣ್ಮಣಿಯಾಗಿ ವರ್ಧಿಷ್ಣುವಾದದ್ದು ರೋಚಕ ಇತಿಹಾಸ. ಅವರ ಜೀವನ, ಅಧ್ಯಯನ, ಸಾಧನ, ಬೋಧನ-ಇವು ಸ್ಮರಣೀಯವೂ ಸ್ಪೃಹಣೀಯವೂ ಆಗಿವೆ. ಯೋಗ ಪುರುಷನಾಗಿ ಹುಟ್ಟಿ ಯುಗ ಪುರುಷನಾಗಿ ಬೆಳೆದ ಸಂಕಥನವಿದು.

ವರಾಂಗ ಪರಾತನ ಜೈನಕೇಂದ್ರ. ಅದು ಆಳುಪ ಅರಸರಿತ್ತ ಬಳುವಳಿ. ನೇಮಿನಾಥ ತೀರ್ಥಂಕರರು ಸ್ಥಳೀಯ ಬಸದಿಯ ಮೂಲ ಆರಾಧ್ಯ ಮೂರ್ತಿ. ವರಾಂಗದ ಜೈನಮಠವೂ ಜಿನಾಲಯವೂ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕು ಹೊಂಬುಜ ಮಠಕ್ಕೆ ಪ್ರತಿಬದ್ಧವಾಗಿತ್ತು. ವರಾಂಗದ ಬಸದಿಗಳಲ್ಲಿ ಪರಂಪರೆಯಿ೦ದ ಪೌರೋಹಿತ್ಯ ಮಾಡುತ್ತ ಬಂದ ಕುಟುಂಬದ ಯಜಮಾನರು ಚಂದ್ರರಾಜ ಇಂದ್ರರು ಶಾಲಾ ಮಾಸ್ತರರೂ ಆಗಿದ್ದರು. ಅವರ ಮಡದಿ ಶ್ರೀಕಾಂತಮ್ಮ ಗೃಹತಪಸ್ವಿನಿ. ಮೇ ತಿಂಗಳು ಮೂರನೆಯ ತಾರೀಕು ೧೯೪೯ರಂದು (೦೩-೦೫-೧೯೪೯) ಮನೆತನವನ್ನು ಬೆಳಗುವ ಬೆಳಕು ಬಂದ೦ತೆ ಮಗ ಹುಟ್ಟಿದ. ರತ್ನದಂತೆ ತೊಳಗುತ್ತಿದ್ದ ಕೂಸು ಕಂದಯ್ಯನಿಗೆ ರತ್ನವರ್ಮನೆಂದು ಹೆಸರಿಟ್ಟರು. ಊರಿನಲ್ಲಿದ್ದ ಪ್ರಾಥಮಿಕ ಶಾಲೆಯ ಓದು ಮುಗಿಯಿತು. ಮುಂದಿನ ವ್ಯಾಸಂಗಕ್ಕೆ ಅನುಕೂಲವಾಗಲೆಂದು ಘಟ್ಟದ ಮೇಲಿನ ಹೊಂಬುಜದ ಮಠದಲ್ಲಿನ ಶ್ರೀ ಕುಂದಕು೦ದ ಬ್ರಹ್ಮಚರ್ಯಾಶ್ರಮಕ್ಕೆ ಸೇರಿಸಿದರು.

ಅರ್ಹದ್ದಾಸರ ಆಸರೆ

ಇಂದು ಹುಂಚ ಎಂಬ ಹೆಸರಿಂದ ಹೆಸರುವಾಸಿಯಾಗಿರುವ ಹೊಂಬುಜ ಕ್ಷೇತ್ರವು ಸಾಂತರರೆ೦ಬ ಸಾಮಂತ ರಾಜ ಮನೆತನದ ರಾಜಧಾನಿಯಾಗಿತ್ತು. ಇಲ್ಲಿನ ಪಾರ್ಶ್ವನಾಥ ಚೈತ್ಯಾಲಯ, ಅಭೀಷ್ಟವರ ಪ್ರದಾಯಿನಿ ಪದ್ಮಾವತೀ ದೇವಿಯ ಮಂದಿರ ಮತ್ತು ಮಠ ಪ್ರಸಿದ್ಧಿ ಪಡೆದಿವೆ. ವರಾಂಗ, ಕು೦ದಾದ್ರಿ ಮತ್ತು ಹಿರಿಯಂಗಡಿ ಬಸದಿಗಳೆಲ್ಲವೂ ಹೊಂಬುಜ ಮಠದ ಆಡಳಿತಕ್ಕೆ ಒಳಪಟ್ಟಿವೆ. ಅಂದು ಮಠಾಧೀಶರಾಗಿದ್ದ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯರು ಘನ ವಿದ್ವಾಂಸರಾಗಿದ್ದರು. ಪಟ್ಟಾಭಿಷಿಕ್ತರಾಗುವ ಮೊದಲು ಇದ್ದ ಅರ್ಹದ್ದಾಸರು ಎಂಬ ಹೆಸರಿಂದ ಅವರು ಜನಾನುರಾಗ ಗಳಿಸಿದ್ದರು. ಅವರ ತಾಯಿನುಡಿ ತುಳು, ಕಲಿತ ಭಾಷೆ ಮತ್ತು ನಿತ್ಯದ ವ್ಯವಹಾರ ಭಾಷೆ ಕನ್ನಡ. ಜತೆಗೆ ಸಂಸ್ಕೃತ ಪ್ರಾಕೃತ ಭಾಷೆಗಳಲ್ಲಿ ಧಾರ್ಮಿಕ ಶಿಕ್ಷಣವಾಗಿತ್ತು. ಉತ್ತಮ ವಾಗ್ಮಿಯಾಗಿದ್ದರು. ಅಂತಹ ಗುರು ರತ್ನವರ್ಮನ ಬೆನ್ನ ಬತ್ತಳಿಕೆಯಾಗಿದ್ದರು.

ಶಿಷ್ಯವತ್ಸಲರಾದ ಅರ್ಹದ್ದಾಸ ದೇವೇಂದ್ರ ಕೀರ್ತಿಯವರ ಅರಿವಿನ ಅರವಂಟಿಗೆಯಲ್ಲಿ ರತ್ನವರ್ಮನು ಗುರುವಿನ ಜ್ಞಾನನಿಧಿಯನ್ನೂ ಗುಣಗೌರವವನ್ನೂ ಮೈಗೂಡಿಸಿ ಬೆಳೆದನು. ಹೊಂಬುಜದ ಪುಷ್ಕರಣೀಯ ಕಲರವ ಆಲಿಸುತ್ತ ಪುರಾಣ ಇತಿಹಾಸದಲ್ಲಿ ಆಸಕ್ತಿ ಚಿಗುರಿತು. ದಿನನಿತ್ಯ ಬಸದಿಗಳ ದರ್ಶನ ಧಾರ್ಮಿಕ ಪ್ರವೃತ್ತಿಯನ್ನು ಬೇರೂರಿತ್ತು. ಗುಡ್ಡದ ಬಸದಿ, ಅದರೊಳಗಿನ ಬಾಹುಬಲಿ ಮೂರ್ತಿ ಗಾಢ ಪ್ರಭಾವ ಬೀರಿತ್ತು.

ದಿವ್ಯ ತಿರುವು

ಇದ್ದಕಿದ್ದ ಹಾಗೆ ರತ್ನವರ್ಮನ ಬದುಕಿನ ಪಯಣದಲ್ಲಿ ಅನಿರೀಕ್ಷಿತ ದಿವ್ಯ ತಿರುವುಗಳು ಉಂಟಾದುವು. ಶ್ರವಣಬೆಳಗೊಳದ ಭಟ್ಟಾರಕರ ಪೀಠ ತೆರವಾಯಿತು. ಸಮಾಜದ ಒಮ್ಮತದ ಅಪೇಕ್ಷೆ ಮತ್ತು ಗುರುಗಳಾದ ಅರ್ಹದ್ದಾಸರ ಆಣತಿಯಂತೆ೧೨-೧೨-೧೯೬೯ರ೦ದು ಇಪ್ಪತ್ತರ ತರುಣ ರತ್ನವರ್ಮನಿಗೆ ಸನ್ಯಾಸ ದೀಕ್ಷೆಯಿತ್ತರು. ೧೯-೦೪-೧೯೭೦ರಂದು ಬೆಳಗ್ಗೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯರಾಗಿ ಅಭಿಷಿಕ್ತರಾದರು. ತಾಯಿ ತಂದೆ ಬಂಧು ಬಳಗ ಮಮತ್ವದ ಹೊಕ್ಕಳಬಳ್ಳಿ ಸಂಬ೦ಧವನ್ನು ತುಂಡರಿಸಿ ಸಮಾಜದ ಒಳಿತಿಗೆ ಕಂಕಣ ಕಟ್ಟಿ ಪುರುಷವ್ರತ ಹಿಡಿದರು.

ಭಟ್ಟಾರಕರೆಂದರೆ ಯಾರು, ಅವರ ಅರ್ಹತೆ ಅಧಿಕಾರ ಅಂತಸ್ತು ಕರ್ತವ್ಯಾದಿಗಳು ಯಾವುವು ಎಂಬುದು ನಿಶ್ಚಿತವಾಗಿದೆ-

ಭಟ್ಟಾರಕ ಸೋಹಿ ಜಾಣ ಭ್ರಷ್ಟಾಚಾರ ನಿವಾರೇ
ಧರ್ಮಪ್ರಕಾಶೇ ದೋಇ ಭವಿಕ ಜೀವ ಬಹು ತಾರೇ.
ಸಕಲ ಶಾಸ್ತ್ರ ಸಂಪೂರ್ಣ ಸೂರಿಮಂತ್ರ ಆರಾಧೇ
ಕರೇ ಗಚ್ಛ ಉದ್ಧಾರ ಸ್ವಾತ್ಮಕಾರ್ಯಬಹು ಸಾಧೇ.
ಸೌಮ್ಯ ಮೂರ್ತಿ ಶೋಭಾ ಕರಣ ಗಂಭೀರ ಮತಿ
ಭಟ್ಟಾರಕ ಸೋಹಿಜಾಣ ಯೇ ಕಹತ ಜ್ಞಾನಸಾಗರಯತಿ.

“ಭಟ್ಟಾರಕರು ದುರಾಚಾರ ನಿವಾರಕರು. ಅವರು ಆಗಮ ಶಾಸ್ತ್ರ ಪಾರಂಗತರು, ಜಿನಬಿ೦ಬಗಳ ಪ್ರತಿಷ್ಠಾಪನವಧಾನ ಬಲ್ಲವರು, ಧರ್ಮಪ್ರಭಾವಕರು-ಸಂರಕ್ಷಕರು, ಶ್ರಾವಕ-ಶ್ರಾವಿಕಾ ಮತ್ತು ಮುನಿ-ಆರ್ಯಿಕಾ ಎಂಬ ಚತುಃಸಂಘದ ಪ್ರಮುಖರು, ಉಭಯ ಧರ್ಮವನ್ನು ಪ್ರಕಾಶಿಸುತ್ತ ಭಟ್ಟಾರಕರು ಸನ್ಯಾಸಿಗಳಿಗೂ ಸಂಸಾರದಲ್ಲಿರುವವರಿಗೂ ಸುವರ್ಣ ಕೊಂಡಿಯಾಗಿರುವವರು”. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕರು ಇವೆಲ್ಲವೂ ಆಗಿದ್ದು ನಾಡಿನ ಮನ್ನಣೆ ಗಳಿಸಿದ್ದಾರೆ.

ಮಠದ ಮಾಣಿಕ್ಯ

ಭಟ್ಟಾರಿಕೆಯೆಂಬುದು ಸುಖದ ಸುಪ್ಪತ್ತಿಗೆಯಲ್ಲ. ಸಂಸಾರ ತೊರೆದು ಸನ್ಯಾಸಿಯಾಗುವುದೆಂದರೆ ಬಾಣಲಿಯಿಂದ ಬೆಂಕಿಗೆ ಬಿದ್ದಂತೆ. ಭಕ್ತರಾಗುವುದು ಸುಲಭ, ಭಟ್ಟಾರಕರಾಗುವುದು ಕತ್ತಿಯ ಅಲಗಿನಮೇಲೆ ನಡೆದಂತೆ. ಭಟ್ಟಾರಕರಿಗೂ ಕಡುಕಷ್ಟಗಳುಂಟು. ಸ್ಥಳೀಯ ಸಮಸ್ಯೆಗಳ ಕಗ್ಗಂಟನ್ನು ಬಿಡಿಸಬೇಕು. ಆಡಳಿತದ ಸವಾಲುಗಳನ್ನು ಯಥೋಚಿತವಾಗಿ ನಿವಾರಿಸಬೇಕು. ಸಮಾಜದ ಬೇಕು-ಬೇಡಗಳ ಸೂಕ್ಷ್ಮವನ್ನು ಗುರುತಿಸಿ ಪ್ರತಿಕ್ರಿಯಿಸಬೇಕು. ಶ್ರೀಕ್ಷೇತ್ರಕ್ಕೆ ನಿರಂತರವಾಗಿ ಬಂದು ಹೋಗುವ ಭಕ್ತರನ್ನೂ ಋಷಿಮುನಿ ಆರ್ಯಿಕೆ ನಿರ್ಗ್ರಂಥರನ್ನೂ ಸುಧಾರಿಸಿ ತಕ್ಕ ವ್ಯವಸ್ಥೆ ಕಲ್ಪಿಸಬೇಕು.ಇದ್ದಕಿದ್ದ ಹಾಗೆ ಬರುವ ಗಣ್ಯಾತಿಗಣ್ಯರ ಸತ್ಕಾರವಾಗಬೇಕು. ದಾನಶಾಲೆ, ಧರ್ಮಶಾಲೆ, ಬಸದಿಗಳಲ್ಲಿ ಪೂಜೆ ಸಂರಕ್ಷಣೆ ಜೀರ್ಣೋದ್ಧಾರ ನಡೆಯುತ್ತಿರಬೇಕು. ನಿರ್ವಹಿಸಬೇಕಾದ ಕೆಲಸ ಕಾರ್ಯಗಳ ಸರಮಾಲೆ ದೊಡ್ಡದು. ಇದೊಂದು ಬಗೆಯ ಚಕ್ರವ್ಯೂಹ. ಭಟ್ಟಾರಕರು ಪದ್ಮಪತ್ರದಂತೆ ಲೌಕಿಕ ಕಾರ್ಯಗಳನ್ನು ಸಂಯೋಜಿಸಿ ವಿವೇಕದಿಂದ ಮುನ್ನಡೆಸಬೇಕು. ನಾಲ್ಕು ದಶಕಗಳಿಂದ ಸ್ವಸ್ತಿಶ್ರೀ ಚಾರುಕೀರ್ತಿಯವರು ಇವೆಲ್ಲವನ್ನೂ ಸಮತೋಲನದಿಂದ ಸಂಬಾಳಿಸಿ ಯಶಸ್ವಿಯಾಗಿರುವುದು, ಲೌಕಿಕ ಅಲೌಕಿಕಗಳನ್ನು ಸಮದಂಡಿ ಪ್ರಭುತ್ವದಿಂದ ಕೈಗೂಡಿಸಿರುವುದು ಅವರ ದಕ್ಷತೆಯ ಪ್ರತೀಕ.

ಅಧ್ಯಾತ್ಮದ ಹಸಿವು ಅವರ ಏಕಾಂತ ಸಮಯಕ್ಕೆ ಮುಡಿಪು ಭಟ್ಟಾರಕರಾಗಿ ಪೀಠಾರೋಹಣ ಮಾಡಿದ ಮೇಲೂ ಕಲಿಯುವ ಹ೦ಬಲ ತಣಿಯಲಿಲ್ಲ. ಇಂಗದ ವಿದ್ಯಾದಾಹವನ್ನು ತಣಿಸಲು ಎರಡು ವಿಶ್ವವಿದ್ಯಾಲಯಗಳ ಸ್ನಾತಕೊತ್ತರ ಪದವಿಗಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿ೦ದ ಚರಿತ್ರೆ ವಿಷಯದಲ್ಲಿಎಂಏ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಫಿಲಾಸಫಿ ಎಂ.ಎ ಪಡೆದರು. ಮುಂದೆ ತಲಪಬೇಕಾದ ಗುರಿಮುಟ್ಟಲು ಜ್ಞಾನದ ಬುತ್ತಿಯನ್ನು ಬೆನ್ನಿಗೆ ಕಟ್ಟಿ ಹುರಿಗೊಂಡರು. ಮುನ್ನೋಟ ಮೊನಚುಗೊಂಡಿತು.

ಗುರು ಅರ್ಹದ್ದಾಸರು ಅನುಗ್ರಹಿಸಿ ಬಿತ್ತಿದ ಆದರ್ಶದ ಕಾಳುಗಳು ಮೊಳಕೆಯೊಡೆದು ಪಲ್ಲವಿಸಿದುವು. ನಿರಾಡಂಬರ ಸರಳೆತೆಯೇ ಸಾತ್ವಿಕ ಜೀವನಕ್ಕೆ ಅಲಂಕಾರವೆ೦ಬುದಕ್ಕೆ ತಾವೇ ಉದಾಹರಣೆಯಾದರು. ಪುರಾತನ ಪರಂಪರೆಯನ್ನು ಪರಿಪಾಲಿಸುತ್ತಿರುವಾಗಲೂ ಆಧುನಿಕತೆಗೆ ವಿಮುಖತೆಯಿಲ್ಲ. ಸಾಹಿತ್ಯೋಪಾಸನೆಯೊಂದಿಗೆ ಸಂಗೀತೋಪಾಸನೆ ನಿಂತಿಲ್ಲ. ಹಳಗನ್ನಡ ಪ್ರೀತಿಯು ಹೊಸತನ್ನು ಮೆಚ್ಚಲು ಅಡ್ಡಿ ಮಾಡಿಲ್ಲ. ಸ್ಥಳದ ಇತಿಹಾಸ ಸಂರಕ್ಷಣೆಯತ್ತ ಕಾಳಜಿ. ಶಾಸನಗಳ ಮಹತ್ವ ಬಲ್ಲವರು.ಕರ್ನಾಟಕದ ಸಮಗ್ರ ಜೈನ ಶಾಸನಗಳ ಐದು ಬೃಹತ್ ಸಂಪುಟಗಳು ಅಚ್ಚಾಗಲು ನೆರವು ನೀಡಿದರು. ಆಹಾರ, ಅಭಯ, ಔಷಧ ಮತ್ತು ಶಾಸ್ತ್ರವೆಂಬ ಚತುರ್ವಿಧ ದಾನಗಳು ಇತೋಪ್ಯತಿಶಯವಾಗಿ ನಡೆಯಲು ಸೂಕ್ತ ವ್ಯವಸ್ಥೆ ಮಾಡಿದರು.

ಆಧುನಿಕ ಬೆಳ್ಗೊಳದ ಶಿಲ್ಪಿ

ಸಾವಿರ ವರ್ಷವಾದರೂ ಇಂದಿಗೂ ಜಗನ್ಮೋಹಕ ಬಾಹುಬಲಿ ಮೂರ್ತಿಯನ್ನು ಕಡೆದು ಮೂಡಿಸಿದ ಮಹಾಶಿಲ್ಪಿ ಯಾರೆಂಬುದು ಯಕ್ಷಪ್ರಶ್ನೆ. ಆದರೆ ಪುರಾತನ ಶ್ರವಣಬೆಳುಗೊಳವನ್ನು ಅತ್ಯಾಧುನಿಕವಾಗಿ ರೂಪಿಸಿದ ರೂವಾರಿ ಚಾರುಕೀರ್ತಿಯವರೆಂಬುದು ಲೋಕವಿದಿತ. ನವಮನ್ವಂತರದ ಹರಿಕಾರರಾಗಿ ಅವರು ಮಾಡಿರುವ ಕಾರ್ಯಗಳು ಕ್ಷೇತ್ರದ ಆಯಾಮವನ್ನು ಹಿಗ್ಗಿಸಿವೆ. ಗಾಳಿ ಮಳೆ ಚಳಿ ಬಿಸಿಲು ಏನೇ ಇದ್ದರೂ ಪ್ರೇಕ್ಷಕರಿಗೆ ಅನುಕೂಲ ಆಗುವಂತೆ ಸರ್ವ ಋತು ಪ್ರಯೋಜನದ ಬಹೂಪಯೋಗಿ ಚಾವುಂಡರಾಯ ಮಂಟಪ ಕಟ್ಟಿಸಿದರು. ಸಾಂಸ್ಕೃತಿಕ ಪರಿವೇಶವಕ್ಕೆ ಜೀವ ತುಂಬಿದರು. ಅದೆಷ್ಟು ಬಗೆಯ ವೈವಿಧ್ಯಮಯ ಕಾರ್ಯಕ್ರಮಗಳ ಸಾತತ್ಯ. ನಿರಂತರ ಸಭೆ ಸಮಾರಂಭಗಳಿ೦ದ ಝಗಮಗಿಸುವ ಚಾವುಂಡರಾಯ ಮಂಟಪ.

ಚ೦ದ್ರಗಿರಿ ಮಹೋತ್ಸವ ಸಮ್ಮೇಳನ, ಮಹಿಳಾ ಸಮ್ಮೇಳನ, ಸಂಸ್ಕೃತ ಸಮ್ಮೇಳನ, ಪ್ರಾಕೃತ ಸಮ್ಮೇಳನ, ವಿದ್ವತ್ ಸಮ್ಮೇಳನ, ಯುವ ಸಮ್ಮೇಳನ, ಸಮ್ಮೇಳನಗಳ ವಿಚಾರ ಸಂಕಿರಣಗಳ ಮಹಾಭಿಷೇಕದ ನಿತ್ಯೋತ್ಸವದಿಂದ ಬೆಳಗೊಳವನ್ನು ಜನಮನದ ಕಣ್ಮಣಿಯಾಗಿಸಿದ್ದಾರೆ. ತೆಂಕಣ, ಬಡಗಣ, ಮೂಡಣ ಹಾಗೂ ಪಡುವಣದ ಬಲ್ಲಿದರ ಪಡೆಯನ್ನು ಒಂದು ಕೊಡೆಯಡಿಯಲ್ಲಿ ಆಗಾಗ ಕೂಡಿಸುವರು, ಸನ್ಮಾನಿಸುವರು. ಭಕ್ತರಿಗೆ ಹೇಗೊ ಹಾಗೆ ಸಾಹಿತಿಗಳಿಗೂ ಕಲಾವಿದರಿಗೂ ವಿದ್ವಾಂಸರಿಗೂ ಇತಿಹಾಸ-ಶಾಸನಕಾರರಿಗೂ ಶ್ರವಣಬೆಳಗೊಳ ತವರು ಮನೆಯಾಗಿಸಿದ್ದಾರೆ. ಜಿ.ಬ್ರಹ್ಮಪ್ಪ, ನಾಡೋಜ ದಂಪತಿಗಳಾದ ಕಮಲಾ-ಹಂಪನಾ, ಜಯಚ೦ದ್ರ, ಸರಸ್ವತಿ ವಿಜಯಕುಮಾರ್, ಜೀವಂಧರ ಕುಮಾರ ಹೋತಪೇಟೆ, ಸಣ್ಣಯ್ಯ ಮೊದಲಾದ ಅನೇಕಾನೇಕ ಸಾಹಿತಿಗಳನ್ನೂ ವಿದ್ವಾಂಸರನ್ನೂ ಚಾರುಶ್ರೀಯವರು ಪ್ರೋತ್ಸಾಹಿಸಿದ್ದಾರೆ.

ಶಕ ಪುರುಷರು

ಸಮನ್ವಯದ ಹರಿಕಾರರಾದ ಚಾರುಶ್ರೀಯವರ ಪರಿಶ್ರಮದ ಫಲವಾಗಿ ಶ್ರವಣಬೆಳುಗೊಳದಲ್ಲೀಗ ಸಾಧುಸಂತ ತಪೋಧನರ ಜ್ಞಾನಧಾರೆಯ ಅಮೃತ ಸಿಂಚನ. ಮು೦ಜಾವಿನಿ೦ದ ಸಂಜೆಯವರೆಗೆ ಜಿನವಾಣಯ ನಿನಾದದ ಆವರ್ತನ. ಸದಾ ಅನುರಣಿ ಸುವ ಸಾಂಸ್ಕೃತಿಕ ಕಲರವ. ಎಲ್ಲದಕ್ಕೂ ಸ್ವಸ್ತಿಶ್ರೀ ಚಾರುಕೀರ್ತಿಯವರ ಮಾರ್ಗದರ್ಶನ, ನಿರ್ದೇಶನ, ಪ್ರೋತ್ಸಾಹ. ಕಾರ್ಯಕ್ರಮ ಚಿಕ್ಕದು ದೊಡ್ಡದು ಎಂಬ ತಾರತಮ್ಯ ತೋರದೆ ಉಪಸ್ಥಿತರಿದ್ದು ಆಶೀರ್ವಚನ ನೀಡಿ ಹುರಿದುಂಬಿಸುವರು. ಶ್ರೀಮದ್ಗಾ೦ಭೀರ್ಯವನ್ನು ಅತಿ ಮಾಡದೆ ಎಲ್ಲರ ಮನಸನ್ನು ಅರಳಿಸುವ ನವಿರು ಹಾಸ್ಯವನ್ನು ಪಾಲಿಸುತ್ತಾರೆ. ಪೂರ್ವಾರ್ಗ್ರಹ ಪ್ರತೀಕಾರಗಳಿಲ್ಲ. ಚಾರುಶ್ರೀಯವರ ಮನಸು ಕಲುಷಿತ ಭಾವನೆಗಳಿಗೆ ಎಡೆಗೊಡದ ಅಚ್ಛೋದ ಸರೋವರ.

ತಪಸ್ವಿ ಚಾರುಕೀರ್ತಿಯವರು ೧೯೮೧, ೧೯೯೩, ೨೦೦೬, ೨೦೧೮ರಲ್ಲಿ, ಒಂದಕ್ಕಿ೦ತ ಒಂದು ಸುಂದರತರ, ಸು೦ದರತಮವಾದ ನಾಲ್ಕು ಮಹಾ ಮಸ್ತಕಾಭಿಷೇಕಗಳನ್ನು ತಮ್ಮ ಸರ್ವಂಕಷ ಮೇಲಾಳಿಕೆಯಲ್ಲಿ ಯಶಸ್ವಿಯಾಗಿ ನಡಸಿ ಹೊಸ ದಾಖಲೆ ಸ್ಥಾಪಿಸಿದರು. ೨೦ನೇ ಶತಮಾನದ ಕಡೆಯ ಮಹಾ ಮಜ್ಜನ ಮತ್ತು೨೧ನೇ ಶತಮಾನದ ಮೊದಲನೆಯ ಮಹಾ ಮಜ್ಜನ, ಅಂದರೆ ಎರಡು ಶತಮಾನಗಳ ಮಹತ್ವದ ಮಹಾ ಮಸ್ತಕಾಭಿಷೇಗಳನ್ನು ನೆರವೇರಿಸಿದವರೆಂಬ ಹೆಗ್ಗಳಿಕೆಗೆ ಪಾತ್ರರಾದರು. ೧೯೮೧ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾ೦ಧಿಯವರು ಹಾಜರಿದ್ದು ಸಂತೋಷಿಸಿದರು.

ವರ್ತಮಾನದ ಉಪಕರಣಾದಿಗಳ ಬಳಕೆ ಉಚಿತಕೆ ತಕ್ಕಷ್ಟು. ಅಸಾಧಾರಣ ವ್ಯಕ್ತಿಯೊಬ್ಬರು ಹಲವು ಜನ್ಮದಲ್ಲಿ ಸಾಧಿಸಬಹುದಾದುನ್ನು ಚಾರುಕೀರ್ತಿಯವರು ಒಂದೇ ಭವದಲ್ಲಿ ಸಾಕ್ಷಾತ್ಕರಿಸಿದ್ದು ಪವಾಡ. ಧನಾತ್ಮಕ ಮನೋಧರ್ಮವನ್ನು ರೂಢಿಸಿಕೊಂಡು ತಮ್ಮ ಧ್ಯಾನದ ಪ್ರಭಾವಳಿಗೆ ಶಕ್ತಿ ಊಡಿದರು.

ಈ ಜ್ಞಾನೋಪಾಸಕರು ಬಹು ಭಾಷಾವಿದರು. ಕನ್ನಡ, ತುಳು, ಪ್ರಾಕೃತ, ಸಂಸ್ಕೃತ, ಹಿ೦ದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪರಿಣತರು. ತುಳು ಅವರ ತಾಯ್ನುಡಿ. ಕನ್ನಡ ಅವರಿಗೆ ಕರುಳಿನ ಭಾಷೆ. ಉಳಿದುವು ಓದಿಗಾಗಿಯೂ ವ್ಯವಹಾರಕ್ಕಾಗಿಯೂ ಕಲಿತ ಭಾಷೆಗಳಷ್ಟೆ. ಮಠದ ಆಡಳಿತದಲ್ಲಿ ಕನ್ನಡಕ್ಕೆ ಮೊದಲ ಮಣೆ. ಪುಸ್ತಕ ಪ್ರಕಟಣೆಯಲ್ಲಿ ಕನ್ನಡಕ್ಕೆ ಅಗ್ರ ತಾಂಬೂಲ. ನಿರಂತರ ನಡೆಯುವ ಕಾರ್ಯಕ್ರಮಗಳಲ್ಲಿ ಕನ್ನಡಕ್ಕೆ ಪಟ್ಟ. ವಿಚಾರ ಸಂಕಿರಣಗಳೂ, ರಾಷ್ಟ್ರೀಯ ಸಮಾವೇಶಗಳೂ ಅಂತರರಾಷ್ಟ್ರೀಯ ಸಮ್ಮೇಳನಗಳೂ ಹಿಂದಿ ಇಲ್ಲವೇ ಇಂಗ್ಲಿಷ್ ಭಾಷೆಗಳಲ್ಲಿ ನಡೆದರೂ ಚಾರುಶ್ರೀಯವರ ಆಶೀರ್ವಚನ ಉಪದೇಶ ಮಾತ್ರ ಕನ್ನಡದಲ್ಲಿ.

ಕನ್ನಡದ ಭಟ್ಟಾರಕರು

೨೦೧೫ನೇ ಇಸವಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ ನಗರದಲ್ಲಿ ನಡೆಯಲು ನಿರ್ಧಾರವಾಗಿತ್ತು. ಆದರೆ ಅಲ್ಲಿ ಸ್ಥಳೀಯರಲ್ಲಿ ಭಿನ್ನಾಭಿಪ್ರಾಯ ವಿರಸ ಉಂಟಾಯಿತು. ಅದರಿ೦ದ ಅಲ್ಲಿ ಬಿಟ್ಟು ಬೇರೆ ಕಡೆ ಸಮ್ಮೇಳನ ಮಾಡಲು ನಿರ್ಧರಿಸಿದರು. ಕೇವಲ ಎರಡು ಮೂರು ತಿಂಗಳು ಸಮಯದಲ್ಲಿ ಏರ್ಪಾಡಾಗಬೇಕಿತ್ತು. ತೀರ ಕಡೆಯ ಘಳಿಗೆಯಲ್ಲಿ ಸಮ್ಮೇಳನ ನಡೆಸಬಲ್ಲವರನ್ನು ಎಲ್ಲಿ ಹುಡುಕುವುದು?ಅದರಿಂದ ಅನಿರ್ದಿಷ್ಟ ಕಾಲ ಮುಂದೂಡೋಣವೆ೦ದು ಪರಿಷದಧ್ಯಕ್ಷ ಪುಂಡಲೀಕ ಹಾಲಂಬಿ ನಿಶ್ವೈಸಿದ್ದರು. ಆದರೆ ಅವರಿಗೆ ಏನನ್ನಿಸಿತೊ, ಇದ್ದಕ್ಕಿದ್ದ ಹಾಗೆ ರಾತ್ರೋರಾತ್ರಿ ನನ್ನಲ್ಲಿಗೆ ಕರೆದೊಯ್ದು – “ಗುರುಗಳೇ ಈ ಶಿಷ್ಯನನ್ನು ಸಂಕಷ್ಟದಿ೦ದ ಪಾರುಮಾಡಬೇಕು“-ಎಂದು ಪರಿಸ್ಥಿತಿಯನ್ನು ವಿವರಿಸಿದರು. ಶ್ರವಣಬೆಳಗೊಳದಲ್ಲಿ ಸಮ್ಮೇಳನ ನಡೆಸಿಕೊಡಲು ಪೂಜ್ಯಶ್ರೀಗಳನ್ನು ಬೇಡಿಕೊಳ್ಳುವುದು ಅತ್ಯುತ್ತಮವೆಂದು ಕಾರ್ಯ ಸಮಿತಿಯವರ ಅಭಿಪ್ರಾಯ, ತಾವು ಸಹಾಯ ಮಾಡಿದರೆ ಕೆಲಸ ಸುಸೂತ್ರವಾಗುತ್ತದೆಂದರು. ನಾನು ಹಿನ್ನೆಲೆಯಲ್ಲಿದ್ದು ಸಹಕರಿಸುವುದಾಗಿ ತಿಳಿಸಿ, ನಲ್ಲೂರು ಪ್ರಸಾದರ ನೆರವು ಪಡೆಯಲು ಸೂಚಿಸಿದೆ. ಶ್ರವಣಬೆಳಗೊಳದ ಕಾಲೇಜಲ್ಲಿ ಓದಿ ಬೆಳೆದ ನಲ್ಲೂರು ಪ್ರಸಾದರಿಗೆ ಪರಿಷತ್ತಿನ ಅಧ್ಯಕ್ಷರಾದ ಮೇಲೆ ಶ್ರೀಮಠದ ಸಂಪರ್ಕ ಇನ್ನೂ ಗಾಢವಾಯಿತು. ಪಟ್ಟಾಚಾರ್ಯರ ಕನ್ನಡ ನಿಷ್ಠೆ ಬಲ್ಲವರಾಗಿದ್ದರು.

ಪರಿಷತ್ತಿನವರು ಬೆಳಗೊಳಕ್ಕೆ ಧಾವಿಸಿ ಭಟ್ಟಾರಕರಿಗೆ ಆಪದ್ಬಾಂಧವರಾಗಿ ಸಹಾಯ ಮಾಡಲು ಬೇಡಿಕೊಂಡರು. ಸ್ವಾಮೀಜಿಯವರು- “ನಾನು ಕನ್ನಡವನ್ನು ನಂಬಿ ಬೆಳೆದವನು. ಇಲ್ಲಿಗೆ ಮಠಾಧೀಶನನ್ನಾಗಿ ಮಾಡಿದವರು ಕನ್ನಡಿಗರು. ಇಂಥ ಕನ್ನಡದ ಸೇವೆ ಮಾಡುವ ಭಾಗ್ಯವನ್ನು ಕಲ್ಪಿಸಿದ್ದಕ್ಕಾಗಿ ನಾವು ನಿಮಗೆ ಕೃತಜ್ಞತೆ ಹೇಳುತ್ತೇವೆ“-ಎಂದು ನುಡಿದು ಒಪ್ಪಿಗೆಯಿತ್ತರು. ಬೆಟ್ಟದಂತೆ ಬಂದಿದ್ದ ಸಮಸ್ಯೆ ಮಂಜಿನ೦ತೆ ಕರಗಿತ್ತು. ಆತಂಕದಿ೦ದ ಬಂದವರು ಆನಂದದಿ೦ದ ಹಿಂತಿರುಗಿದರು.

ಚರಿತ್ರಾರ್ಹ ಕನ್ನಡ ಸಮ್ಮೇಳನ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಶ್ರವಣಬೆಳಗೊಳದಲ್ಲಿ ನಡೆಯಿತು. ಅದು ಐತಿಹಾಸಿಕ ಮಹತ್ವದ ಅಪೂರ್ವ ಕನ್ನಡ ಸಮಾವೇಶ. ವಿಶ್ವಾಮಿತ್ರನು ತಾನೇ ಬೇರೊಂದು ಸ್ವರ್ಗ ಸೃಷ್ಟಿಸದಂತೆ ಪೂಜ್ಯರು ಸಮ್ಮೇಳನಕ್ಕಾಗಿ ವಿನೂತನ ನಗರವನ್ನು ರೂಪಿಸಿದರು. ಮೂರೂ ಕಡೆಯಿಂದ ಗಾಳಿ ಬೆಳಕು ಧಾರಾಳವಾಗಿ ಬರುವಂತೆ ಬೃಹತ್ತಾದ ತೆರೆದ ಒಪ್ಪವಾದ ಚೆಲುವು ಚಿಮ್ಮುವ ಶಾಮಿಯಾನ ಹಾಕಿಸಿದರು. ಉಚಿತ ಊಟದ ಏರ್ಪಾಡು. ಬೆಳಗ್ಗೆಯಿಂದ ರಾತ್ರಿಯವರೆಗೆ ಆಹಾರದ ಅನುಕೂಲ. ಏಕಕಾಲದಲ್ಲಿ ಐದಾರು ಕಡೆ ಅಡಿಗೆ ಮನೆ, ತಂಡೋಪತ೦ಡವಾಗಿ ಬರುವ ಸಾಹಿತ್ಯಾಭಿಮಾನಿಗಳಿಗೆ ಉಣಬಡಿಸಲು ಸದಾ ಟೊಂಕ ಕಟ್ಟಿ ಸಜ್ಜಾಗಿ ನಿಂತ ದೊಡ್ಡ ಸ್ವಯಂಸೇವಕರ ತಂಡ. ಮೂರು ನಾಲ್ಕು ದಿನಗಳವರೆಗೆ ನಡೆದ ಸಾಹಿತ್ಯ ಸಮಾರಾಧನೆಯ ಜತೆ ಜತೆಯಲ್ಲೇ ಸಮಾನಾಂತರವಾಗಿ ಭಕ್ಷ್ಯಭೋಜನದ ಸಮಾರಾಧನೆ.

ಸಾಹಿತ್ಯ-ಸಂಗೀತ-ಕವಿ ಗೋಷ್ಠಿಗಳು, ನಾಟಕ ನೃತ್ಯ ಪ್ರದರ್ಶನಗಳು, ಊಟ ವಸತಿ ವಾಹನ ಸೌಕರ್ಯಗಳು–ಎಲ್ಲವೂ ಸವ್ಯವಸ್ಥಿತ. ಸಾಹಿತಿ ಕಲಾವಿದರು ಸಂತೃಪ್ತರಾಗಿ ಒಕ್ಕೊರಲಿಂದ “ಸಮ್ಮೇಳನಗಳು ಹೇಗೆ ನಡೆಯಬೇಕು ಎಂಬುದಕ್ಕೆ ಇದು ಮಾದರಿ” ಎಂದು ಮೆಚ್ಚಿ ನುಡಿದರು. ಶ್ರವಣಬೆಳಗೊಳ ಶ್ರೀಮಠದ ವತಿಯಿಂದ ನಾಲ್ಕುದಿನಗಳ ಬೃಹತ್ ಸಮ್ಮೇಳನದ ಸಮಸ್ತ ಏರ್ಪಾಟು ನಡೆದಿತ್ತು. ಈ ಸಂಬ೦ಧವಾಗಿ ತಗಲಿದ ಒಂದೂವರೆ ಕೋಟಿ ವೆಚ್ಚವನ್ನು ಭರಿಸಲು ಮುಂದಾಗಿ ಬಂದಾಗ ಪೂಜ್ಯ ಚಾರು ಕೀರ್ತಿಶ್ರೀಗಳು “ಆಹಾರ ದಾನ ಪರಮ ಪುಣ್ಯ ಕಾರ್ಯ, ಮೂರು ನಾಲ್ಕು ದಿವಸ ಲಕ್ಷಾಂತರ ಕನ್ನಡಿಗರು ಭೋಜನ-ಫಲಾಹಾರ ಮಾಡಿರುವುದು ತುಂಬ ಸಂತೋಷ ಕೊಟ್ಟಿದೆ. ಕನ್ನಡಕ್ಕೂ ಕರ್ನಾಟಕಕ್ಕೂ ಈ ಸೇವೆ ಮಾಡುವ ಸುವರ್ಣಾವಕಾಶ ದೊರೆತ ಧನ್ಯತೆಯೇ ಸಾಕು. ಅದು ಅಮೂಲ್ಯ. ಅದಕ್ಕೆ ಹಣವನ್ನು ಪಡೆಯುವುದು ಸರಿಯಲ್ಲ”-ಎಂದು ವಿನಯದಿಂದ ನಿರಾಕರಿಸಿದರು.

ಸಾಹಿತ್ಯ ಸಮ್ಮೇಳನ ಮುಗಿದ ಮೇಲೂ ಚಾರು ಶ್ರೀಯವರು ವಿರಮಿಸಲಿಲ್ಲ. ಸಮ್ಮೇಳನಾಧ್ಯಕ್ಷ ಸಿದ್ದಲಿಂಗಯ್ಯ-ದ೦ಪತಿಗಳು ಮತ್ತು ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ-ಸರೋಜ ದಂಪತಿಗಳು ಇವರಿಗೆಂದೇ ಪುಟ್ಟ ಪ್ರತ್ಯೇಕ ಆತ್ಮೀಯ ಬೀಳ್ಕೊಡಿಗೆ ಸಮಾರಂಭವನ್ನು ಹಂಪನಾ ಅಧ್ಯಕ್ಷತೆಯಲ್ಲಿ ಏರ್ಪಡಿಸಿದರು. ಪರಿಷತ್ತಿನ ಮತ್ತು ಸಮ್ಮೇಳನದ ಇತಿಹಾಸದಲ್ಲಿ ಇದು ಅಪರೂಪದ ಹೃದಯಸ್ಪರ್ಶಿ ಸಂಮಾನ ಸಮಾರಂಭ. ಭಟ್ಟಾರಕರ ಕನ್ನಡ ಪ್ರೇಮ ಎಷ್ಟು ಅಸೀಮ ಮತ್ತು ಉತ್ಕಟವಾದುದೆಂಬುದು ಮತ್ತೊಮ್ಮೆ ಬಯಲಾಯಿತು. ತಮ್ಮ ತಪದಲ್ಲಿ ಕನ್ನಡದ ಜಪವಿರುವುದನ್ನು ಬಹಿರಂಗ ಪಡಿಸಿದರು. ಅ೦ಗೈ ಅಗಲದ ಬಂಗಾರದ ತಗಡಿನ ಮೇಲೆ ತಾವೇ ತಮ್ಮ ಕೈಯಿಂದ ಕನ್ನಡ ಬಾವುಟವನ್ನು ಬರೆದು ಅದನ್ನು ಶ್ರೀಮಠದ ಶುಭಾಶಯವೆಂದು ಸಮ್ಮೇಳನಾಧ್ಯಕ್ಷರಿಗಿತ್ತು ಆನಂದ ತು೦ದಿಲರಾದರು. ಈ ಅನಿರೀಕ್ಷಿತ ಹೃದಯಸ್ಪರ್ಶಿ ಘಟನೆಯಿಂದ ಎಲ್ಲರೂ ಭಾವುಕರಾದರು, ಕಣ್ಣುಗಳು ನೀರಿನ ಪುಟ್ಟ ಬಟ್ಟಲುಗಳಾದುವು.

ಅಪೂರ್ವ ಹಳಗನ್ನಡ ಸಮ್ಮೇಳನ

“ಚಾರುಶ್ರೀಯವರು ಕನ್ನಡದ ಭಟ್ಟಾರಕರು, ಅದರಲ್ಲಿಯೂ ಹಳಗನ್ನಡ ಸಾಹಿತ್ಯದ ಪರಮ ಆರಾಧಕರು”’ –ವಿದಿ ಗುಟ್ಟನ್ನು ಮನಗಂಡ ಪರಿಷದಧ್ಯಕ್ಷ ಮನು ಬಳಿಗಾರರು ಹಳಗನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಿಕೊಡಬೇಕೆಂದು ಕೋರಿದರು. ಮರುಮಾತಿಲ್ಲದೆ ಸಂತೋಷದಿ೦ದ ಸಮ್ಮತಿಸಿದರು, ಉಚಿತ ಊಟ ವಸತಿ ಸೌಕರ್ಯಗಳನ್ನು ಕಲ್ಪಿಸಿದರು.

ಸಲಿಲ ವಾಗ್ಧಾರೆ

ಭಟ್ಟಾರಕರ ಭಾಷಣಗಳಲ್ಲಿ ವಾಕ್ ಶಕ್ತಿ, ವಾಗ್ವೈಭವಕ್ಕಿಂತಲೂ ವಿಚಾರದ ದೀಪ್ತಿ ಪ್ರಖರವಾಗಿ ಮಿಂಚುತ್ತಿರುತ್ತದೆ. ಅವರ ಉಪನ್ಯಾಸಗಳು ಉಪಮಾಸರಸ್ಸು. ನಿರೂಪಿತ ವಿಷಯವು ನಿರುಕಾಗಿ ನೆನಪಲ್ಲಿ ನಿಲ್ಲುವಂತೆ ಸಮುಚಿತ ಉಪಮೆ ದೃಷ್ಟಾಂತಗಳಿ೦ದ ಮನೋಜ್ಞವಾಗಿ ಗಂಭೀರವಾದ ಶಾಸ್ತ್ರ ವಿಚಾರಗಳನ್ನು ಮಂಡಿಸುತ್ತಾರೆ. ಅದರಿ೦ದ ಜ್ಞಾನವೃದ್ಧ ವಯೋವೃದ್ಧ ನಿರ್ಗ್ರಂಥ ತಪಸ್ವಿಗಳೂ ಸಾಧೂ ಸಂತ ಕಂತಿಯರೂ ಚಾರುಶ್ರೀಯವರ ಪ್ರವಚನಗಳಿಗೆ ಹಾಜರಾಗುತ್ತಾರೆ.ಪ್ರಾಚೀನ ಶಾಸ್ತ್ರ, ತತ್ವ ಸಿದ್ಧಾಂತ ಮುಂತಾದ ಗಹನ ಸಂಗತಿಗಳನ್ನು ಆಧುನಿಕ ಬುದ್ಧಿಭಾವಗಳಿಗೆ ಒಗ್ಗುವಂತೆ ರೋಚಕವಾಗಿಯೂ ಅಷ್ಟೇ ಗಂಭೀರವಾಗಿಯೂ ವ್ಯಾಖ್ಯಾನಿಸುವ ವಿಧಾನ ಅವರಿಗೆ ಕರತಲಾಮಲಕ.

ವಿದೇಶ ಪ್ರವಾಸ ಪ್ರಿಯರಲ್ಲವಾದರೂ ಆಹ್ವಾನದ ಮೇರೆಗೆ ವಿಶ್ವ ಧರ್ಮ ಶಾಂತಿ ಸಮ್ಮೇಲನದಂತಹ ಕೆಲವು ಅಂತರರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿದರು. ಈ ಸಂಬ೦ಧವಾಗಿ ಅಮೆರಿಕ, ಇಂಗ್ಲೆ೦ಡು, ಕೆನ್ಯಾ, ಸಿ೦ಗಪುರ ಮುಂತಾದ ದೇಶಗಳನ್ನು ಸಂದರ್ಶಿಸಿದ್ದಾರೆ. ಇ೦ಗ್ಲೆ೦ಡಿನ ಲೆಸ್ಟರ್ ನಗರದಲ್ಲಿ ಜಿನಮಂದಿರ ಪ್ರಾರಂಭೋತ್ಸವವನ್ನು ನೆರವೇರಿಸಿದರು ಹಾಗೂ ಅದರಲ್ಲಿ ಬಾಹುಬಲಿ ಬಿಂಬ ಪ್ರತಿಷ್ಠಾಪನೆಯನ್ನೂ ವಿದ್ಯುಕ್ತವಾಗಿ ನೆರವೇರಿಸಿದರು.

ಭಟ್ಟಾರಕ ಪರಂಪರೆಯ ಪುನರುಜ್ಜೀವನ

ನಾಲ್ಕು ದಶಕಗಳಲ್ಲಿ ಶ್ರವಣಬೆಳಗೊಳ ಲೋಕಪ್ರಸಿದ್ದಿ ಪಡೆಯಿತು. ದಿಗಂಬರ ನಿರ್ಗ್ರಂಥ ಮುನಿ ಪರಂಪರೆಯನ್ನು ಚಾರಿತ್ರ ಚಕ್ರವರ್ತಿ ಶಾಂತಿಸಾಗರ ಮುನಿ ಮಹಾರಾಜರು ಪುನರುಜ್ಜೀವಿಸಿದ ಮಹಾತ್ಮರು. ಚಾರುಕೀರ್ತಿಯವರು ಕ್ಷೀಣ ಸುತ್ತ ದುರ್ಬಲವಾಗುತ್ತಿದ್ದ ಭಟ್ಟಾರಕ ಪರಂಪರೆಗೆ ನೀರುಣಿಸಿ ಸಪ್ರಾಣಿಸಿದರು. ಕೊಲ್ಲಾಪುರ, ಕಾರ್ಕಳ, ಕನಕಗಿರಿ (ಮಲೆಯೂರು), ಅರಿಹಂತಗಿರಿ, ಕ೦ಬದಹಳ್ಳಿ, ಮೂಡಬಿದಿರೆ, ಜಿನಕ೦ಚಿ, ವರೂರು, ಹೊ೦ಬುಜ, ಸೋ೦ದಾ, ನರಸಿ೦ಹರಾಜಪುರ, ನಾ೦ದಣ, ಮತ್ತು ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ಆರಂಭವಾದ ಅರೆತಿಪ್ಪೂರು ಮಠಗಳಿಗೆ ಚಾರುಶ್ರೀಗಳು ಚೈತನ್ಯ ತುಂಬಿ ಸ್ಫೂರ್ತಿ ನೀಡುತ್ತಿದ್ದಾರೆ. ಶ್ರೀಗಳ ಮಾರ್ಗದರ್ಶನದಲ್ಲಿ ಧರ್ಮಚಕ್ರ ಪ್ರವರ್ತನೆ ನಾಡಿನಾದ್ಯಂತ ಸಂಚರಿಸಿ ಆಸ್ತಿರಲ್ಲಿ ಧಾರ್ಮಿಕ ಸಂಚಲನ ಉಂಟು ಮಾಡಿತು. ನಲ್ಲೂರು, ಬೆ೦ಗಳೂರು, ವಿಜಯಪುರ, ಸಾ೦ಗಲಿ ಮುಂತಾದ ಕಡೆಗಳಲ್ಲಿ ಚಾತುರ್ಮಾಸವಿದ್ದು ಕನ್ನಡದ ಪ್ರವಚನಗಳಿಂದ ಧರ್ಮ ಪ್ರಭಾವನೆ ಮಾಡಿದರು.

ಪ್ರಾಕೃತ ಸಾಹಿತ್ಯ ಪುನರುತ್ಥಾನ

ಪ್ರಾಕೃತವನ್ನು ಪೊರೆದ ಜೀವ ಚಿಂತಾಮಣಿ. ಪಾಇಯಂ ಅಬ್ಬುಟ್ಠಾಮೊ (ಪ್ರಾಕೃತವನ್ನು ಪುನರುತ್ಥಾನಿಸೋಣ) ಎಂಬುದು ಅವರ ಘೋಷವಾಕ್ಯ. ರಾಷ್ಟ್ರಪತಿ ಶಂಕರ ದಯಾಳ ಶರ್ಮರ ಕಾಲದಲ್ಲಿ ರಾಷ್ಟ್ರೀಯ ಪ್ರಾಕೃತ ಸಂಶೋಧನೆ ಮತ್ತು ಅಧ್ಯಯನ ಸಂಸ್ಥೆ ಉದ್ಘಾಟಿತವಾಯಿತು. ಅದರ ಆಸರೆಯಲ್ಲಿ ಪ್ರಾಕೃತದಲ್ಲಿ ತರಗತಿಗಳನ್ನು ರಾಜ್ಯಾದ್ಯಂತ ತೆರೆದರು. ಪ್ರಾಕೃತ ಡಿಪ್ಲಮೊ ಮತ್ತು ಸರ್ಟಿಫಿಕೇಟು ಕೋರ್ಸುಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.ಅದು ಮತ್ತಷ್ಟು ಫಲಪ್ರದವೂ ಪ್ರಭಾವಿಯೂ ಆಗಲಯ ಪ್ರತಿ ವರ್ಷ ಪ್ರಾಕೃತ ಪರೀಕ್ಷೆಗಳಲ್ಲಿ ಉತ್ತೀರ್ಣರಿಗೆ ಘಟಿಕೋತ್ಸವವನ್ನೂ ಏರ್ಪಡಿಸುತ್ತಿದ್ದಾರೆ. ಸಮಗ್ರ ಭಾರತದಲ್ಲಿ ಈ ತೆರನಾದ ವ್ಯವಸ್ಥೆ ಇರುವುದು ಶ್ರವಣಬೆಳಗೊಳದಲ್ಲಿ ಮಾತ್ರ ಎಂಬುದು ಇದರ ಹಿರಿಮೆಗೆ ಸಾಕ್ಷಿ.

ಅವರು ಸಮದರ್ಶಿ. ಪೂರ್ವಗ್ರಹವಿರದ ಮುಕ್ತ ಮನಸ್ಸು ಗುರುವಿನ ಗರಡಿಯಲ್ಲಿ ಪೂರ್ವೇತಿಹಾಸವನ್ನು ಅತಿ ಕಿರಿದರಲ್ಲಿ ಪರಿಚಯಿಸಿದರೆ ಸಾಕು. ಅವಸರ್ಪಿಣಯ ನೆರಳು ಕಾಣುತ್ತಿತ್ತು. ಅದನ್ನು ಬೆಳಗೊಳದ ಬಳಿಗೆ ಬರಗೊಡದೆ ಉತ್ಸರ್ಪಿಣಿಯ ಏರುಗಾಲವನ್ನು ತಂದ ಋಷ್ಯಶೃಂಗರು, ಜಾಗತಿಕ ಭೂಪಟದಲ್ಲಿ ಶ್ರವಣಬೆಳಗೊಳವನ್ನು ಕೀಲಿಸಿದರು.

ಪ್ರಾಕೃತ ಜ್ಞಾನಭಾರತಿ ಅಂತರ ರಾಷ್ಟ್ರೀಯ ವಾರ್ಷಿಕ ಪ್ರಶಸ್ತಿಯನ್ನು೨೦೦೪ರಲ್ಲಿ ಪ್ರಾರಂಭಿಸಿದರು. ಅದು ಪ್ರಶಸ್ತಿ ಫಲಕದೊಂದಿಗೆ ಈಗ ಮೂರು ಲಕ್ಷ ರೂಪಾಯಿ ನಗದನ್ನೂ ಒಳಗೊಂಡ ಬಹು ಪ್ರತಿಷ್ಠಿತ ವಿದ್ವತ್ ಪ್ರಶಸ್ತಿ. ಇಂಥದು ಹಾಲಿ ಜಗತ್ತಿನಲ್ಲಿ ಇನ್ನೊಂದು ಇಲ್ಲ ಎಂಬುದು ಇದರ ಹಿರಿಮೆ. ಇದುವರೆಗೆ ಈ ಪ್ರತಿಷ್ಠಿತ ಪ್ರಶಸ್ತಿ ಪಾತ್ರರಾದ ಅಂತರರಾಷ್ಟ್ರೀಯ ವಿದ್ವಾಂಸರು-ಪದ್ಮನಾಭ ಜೈನಿ (ಬರ್ಕ್ಲಿ, ಅಮೆರಿಕ), ವಿಲ್ಲೆಮ್ ಬೊಲ್ಲಿ (ಬ್ಯಾಂಬರ್ಗ್, ಜರ್ಮನಿ), ಕ್ಲಾಸ್ ಬ್ರೂನ್ (ಬರ್ಲಿನ್, ಜರ್ಮನಿ), ಅಡೆಲೆಡ್ ಮೆತ್ತೆ (ಮ್ಯೂನಿಚ್, ಜರ್ಮನಿ), ರಾಜಾರಾಂ ಜೈನ್ (ನೊಯ್ಡಾ, ಉತ್ತರ ಪ್ರದೇಶ), ನಳಿನಿ ಬಲ್ಬೀರ್ (ಪ್ಯಾರಿಸ್ಸು, ಫ್ರಾನ್ಸ), ಆರ್.ಪಿ.ಪೊದ್ದಾರ್ (ಪುಣೆ, ಮಹಾರಾಷ್ಟ್ರ), ಜೊಹನೆಸ್ ಬ್ರಾಂಕ್ ಹಾರ್ಸ್ಟ (ಲುಂಡ್), ಕ್ರಿಸ್ಟಿನ್ ಚೊಜನಕಿ (ಲೊಯನ್,ಫ್ರಾನ್ಸ್), ಕಮಲಚಂದ್ ಸೊಗಾನಿ (ಜೈಪುರ, ರಾಜಸ್ಥಾನ), ಸತ್ಯರಂಜನ್ ಬ್ಯಾನರ್ಜಿ (ಕಲಕತ್ತ), ನಟಾಲಿಯಾ ಝೆಲಜ್ ನೋವಾ (ಮಾಸ್ಕೋ, ರಷಿಯಾ), ಪ್ರೇಂ ಸುಮನ್ ಜೈನ್ (ಉದಯಪುರ, ರಾಜಸ್ಥಾನ). ಪಾಲ್ ದಂಡಾಸ್ (ಲ೦ಡನ್,ಇ೦ಗ್ಲೆ೦ಡ್), ಫಿಲ್ಲಿಸ್ ಗ್ರೆನಾಫ್ (ಯೇಲ್,ಅಮೆರಿಕ), ಈವ ಡಿ ಕ್ಲರ್ಕ (ಘೆಂಟ್ಬೆಲ್ಜಿಯ೦), ಆಂಡ್ರ್ಯೂ ಓಲೆಟ್ (ಹಾರ್ವರ್ಡ್). ಇವರುಗಳು ಪ್ರಾಕೃತ ಭಾಷಾಸಾಹಿತ್ಯ ಸಂವರ್ಧನೆಗೆ ಶ್ರಮಿಸಿದವರು.

೨೦೧೭ರಲ್ಲಿ ಏರ್ಪಾಟಾಗಿದ್ದ ಅಂತರ ರಾಷ್ಟ್ರೀಯ ಪ್ರಾಕೃತ ಸಮ್ಮೇಲನ ಹೊಸ ಇತಿಹಾಸವನ್ನೇ ಸೃಷ್ಟಿಸಿತು. ದೇಶ ವಿದೇಶಗಳಿಂದ ಆಗಮಿಸಿದ್ದ ೨೦೦ಜನ ಪ್ರಾಕೃತ- ಸಂಸ್ಕೃತ ಅರಿವಿನೋಜರು ಒಂದೆಡೆ ಕಲೆತು ಮೂರುದಿನಗಳ ಕಾಲ ಮಹತ್ವದ ಸಂವಾದ ನಡೆಸಿದರು. ಜಗತ್ತಿನ ವಿಚಾರ ಹಾಗಿರಲಿ, ಭಾರತದಲ್ಲಿಯೇ ಒಂದಾದರೂ ಪ್ರಾಕೃತ ವಿದ್ಯಾಲಯವಿಲ್ಲ ಎಂಬುದನ್ನು ಮನಗಂಡರು. ಈ ದಿಕ್ಕಿನಲ್ಲಿ ಚಾರುಶ್ರೀಗಳ ನಿರಂತರ ಪ್ರಯತ್ನವನ್ನು ಪರಿಗಣಿಸಿ ಅದನ್ನು ಬೇಷರತ್ತಾಗಿ ಬೆಂಬಲಿಸಿದರು.

ಹಿತ ಮಿತ ಮೃದು ವಚನರಾದ ಪೂಜ್ಯಶ್ರೀಗಳ ಸರಳ ಜೀವನದ ಆದರ್ಶಗಳು ಅನುಕರಣೀಯವಾದುವು. ಅವರು ಇಂದ್ರಿಯ ಸುಖ ವಿಮುಖರಾಗಿ ಅತೀಂದ್ರಿಯ ಆನುಭಾವಿಕ ಸುಖ ವಿಹಾರಿಯಾಗಿದ್ದರೂ ಸಮಾಜಮುಖಿ ಕಾರ್ಯಪ್ರವೃತ್ತರಾಗಿದ್ದರು. ಇಂದಿನ ದಿನಮಾನದಲ್ಲಿಯೂ ಮೊಬೈಲು ಫೋನು ಟೀವಿ ಬಳಸದೆಯೂ ಅಥವಾ ಉಚಿತಕೆ ತಕ್ಕಷ್ಟು ಬಳಸಿ ಬಾಳಬಹುದು ಎಂಬುದಕ್ಕೆ ಭಟ್ಟಾರಕರು ಒಳ್ಳೆಯ ಉದಾಹರಣೆ. ಶೀಘ್ರಾತಿ ಶೀಘ್ರ ಸಂಪರ್ಕಕ್ಕೆ ಮೊಬೈಲಾದಿ ಸಲಕರಣೆಗಳು ಸಹಕಾರಿಯಾಗಿವೆ ಎಂಬುದು ಅವರಿಗೆ ತಿಳಿದಿದೆ. ಆಧುನಿಕ ಸೌಲಭ್ಯಗಳನ್ನು ಸ್ವಾಗತಿಸುತ್ತಾರೆ. ವಿಜ್ಞಾನ ಕರುಣಿಸಿದ ಸುಲಭ ಸೌಲಭ್ಯಗಳನ್ನು ಯಥೋಚಿತವಾಗಿ ಬಳಸಬೇಕೇ ಹೊರತು ಅವುಗಳಿಗೆ ದಾಸರಾಗಬಾರದು ಎಂಬುದು ಸ್ವಾಮೀಜಿಯವರ ನಿಲುವು.

ಧವಲತ್ರಯಾದಿ ಆಗಮ ಭಗೀರತರು

ಅಪರೂಪದ ಜ್ಞಾನನಿಧಿ ಧವಲಾ, ಜಯಧವಲಾ, ಮಹಾಧವಲಾ ತೀರ್ಥಧಾರೆ ಕನ್ನಡದಲ್ಲಿ ಪ್ರವಹಿಸಿದ್ದು ಜಂಗಮ ತೀರ್ಥ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕರ ಪರಿಶ್ರಮದ ಫಲವಾಗಿ.

ಕನ್ನಡದ ನೆಲದಲ್ಲಿ ಕುಡಿಯೊಡೆದು ದಾಂಗುಡಿಯಿಟ್ಟ ಗ್ರಂಥರಾಜ ಧವಲಾದ ಕನ್ನಡ ಆವೃತ್ತಿ ಇಲ್ಲವೆಂಬ ಕೊರಗು ಬಾಧಿಸುತ್ತಿತ್ತು. ಅದರಿಂದ ಕನ್ನಡ ಅನುವಾದದ ಬೃಹದ್ ಯೋಜನೆ ಕೈಗೆತ್ತಿಕೊಂಡೆವು. ಅಷ್ಟು ದೊಡ್ಡ ಕಾರ್ಯವನ್ನು ಹೇಗೆ ನಿರ್ವಹಿಸುವುದೆಂಬ ಸವಾಲು ಎದುರಾಯಿತು. ದಿಗಂಬರ ಪರಂಪರೆಗೆ ಸೇರಿದ ಮೂಲ ಆಗಮ ಗ್ರಂಥದ ಹೆಸರು ಷಟ್ ಖಂಡ ಆಗಮ. ಇದು ಪ್ರಾಕೃತ ಭಾಷೆಯಲ್ಲಿದೆ. ಇದಕ್ಕೆ ವೀರಸೇನಾಚಾರ್ಯರು ಮೊದಲು ಧವಲಾ ಟೀಕೆಯನ್ನು ಬರೆದರು. ಅನಂತರ ಜಯ ಧವಲಾ ಟೀಕೆಯಲ್ಲಿ ವೀರಸೇನರು ಪೂರ್ವಾರ್ಧ ಮತ್ತು ಜಿನಸೇನಾಚಾರ್ಯರು ಉತ್ತರಾರ್ಧ ಬರೆದರು. ಮಹಾಧವಲಾಕ್ಕೆ ಟೀಕೆಯಿಲ್ಲ. ಇವುಗಳಿಗೆ ಹಿಂದಿ ಅನುವಾದವನ್ನು ಬರೆಸಿ ಪ್ರಕಾಂಡ ಪಂಡಿತರಾದ ಹೀರಾಲಾಲರು ಮತ್ತು ಉಪಾಧ್ಯೆಯವರು೩೯ ಸಂಪುಟಗಳಲ್ಲಿ ಪ್ರಕಟಿಸಿದರು. ಕನ್ನಡಿಗರಿಗೂ ಇವು ದೊರಕಬೇಕೆಂಬ ಭಾವನೆಯಿಂದ ಅನುವಾದ ಯೋಜನೆ ಹಮ್ಮಿಕೊಂಡೆವು. ಇದು ಕನ್ನಡದ ನೋಂಪಿಯೆ೦ಬ ನಂಬಿಕೆಯಿ೦ದ ಬೇರೆ ಕಡೆ ಗಮನ ಕೊಡದಿರಲು ಟೊಂಕ ಕಟ್ಟಿ ಸಜ್ಜಾದೆವು. ಬೆಳಗೊಳವನ್ನು ಬಿಟ್ಟು ಹೊರಗಿನ ಪ್ರಯಾಣವನ್ನೆಲ್ಲ ರದ್ದು ಮಾಡಿದೆವು. ಅನೇಕ ಕಾರ್ಯಕ್ರಮಗಳನ್ನು ಕೈಬಿಟ್ಟೆವು. ಫೋನು ಮೊಬೈಲು ಮುಟ್ಟದಿರಲು ಸಂಕಲ್ಪಿಸಿದೆವು. ಮೊಬೈಲು ಚಾಲ್ತಿಗೆ ಬಂದ೦ದಿನಿ೦ದ ಇಂದಿನವರೆಗೂ ಅದನ್ನು ಬಳಸಿಲ್ಲ. ನಾನು ಅದರ ಹಗೆಯಲ್ಲ, ಅದೂ ನನ್ನ ಶತ್ರುವಲ್ಲ. ಅಥವಾ ಅದನ್ನು ಬಹಿಷ್ಕರಿಸಿಲ್ಲ. ಬಹು ಜನರಿಗೆ ಅದರಿಂದ ಬಹಳ ಪ್ರಯೋಜನವಿದೆ. ಆದರೆ ನನ್ನಂಥವರಿಗೆ ಅದು ಅನಿವಾರ್ಯವಲ್ಲವೆಂದು ಕಾಣುತ್ತದೆ.

ತಾವು ಫೋನು ಮೊಬೈಲು ಉಪಯೋಗಿಸದಿದ್ದರೂ ಸುದ್ದಿ ಸಮಾಚಾರ ಮತ್ತು ಆಡಳಿತ ವ್ಯವಹಾರಗಳ ಮಾಹಿತಿಯನ್ನು, ಪತ್ರ ವ್ಯವಹಾರವನ್ನು ಕಾರ್ಯಾಲಯದ ಸಿಬ್ಬಂದಿಯವರಿ೦ದ ನಡೆಸುತ್ತಾರೆ. ಏನು ಹಾಗಾದರೆ ಟೀವಿಯನ್ನೂ ನೋಡುವುದಿಲ್ಲವೆ ಎಂದರೆ, ಹೌದು ಮತ್ತು ಇಲ್ಲ ಎಂದು ಉತ್ತರಿಸಬೇಕಾಗತ್ತದೆ. ದೂರದರ್ಶನವನ್ನು ತಿರಸ್ಕರಿಸಿಲ್ಲ. ಒಲಂಪಿಕ್ಸ್ ಕ್ರೀಡೆಗಳ ಆರಂಭೋತ್ಸವ, ಗಣರಾಜ್ಯೋತ್ಸವ ಸ್ವಾತಂತ್ರ್ಯೋತ್ಸವ ನೋಡುತ್ತೇನೆ. ಕೊಯಮತ್ತೂರಿನಲ್ಲಿ ನಡೆದ ಶಿವನ ಪ್ರತಿಮೆಯ ಅನಾವರಣ ಸಮಾರಂಭ ನೋಡಿ ಆಹ್ಲಾದವಾಯಿತು. ದೂರದರ್ಶನದಲ್ಲಿ ಪ್ರಸಾರವಾಗುವ ಅಪೂರ್ವ ಸಾಂಸ್ಕೃತಿಕ ಕಾರ್ಯಕ್ರಮಗಳು ಉಪಯುಕ್ತವಾಗಿರುತ್ತವೆ.

ಈ ಬಗೆಯ ಸ್ವಯಂ ದಿಗ್ಬಂಧನ ಹಾಕಿ ಧವಲಾ ಅನುವಾದದಲ್ಲಿ ಮುಳುಗಿ ಹೋದೆವು. ಮಹಾಮಣಿಹದಲ್ಲಿ ಹೀಗೆ ಕಟ್ಟುನಿಟ್ಟಾಗಿ ತೊಡಗಿದೆವು. ಪ್ರಯತ್ನ ಫಲಿಸಿತು. ೪೨ ಬೃಹತ್ಸಂಪುಟಗಳಲ್ಲಿ ಪವಿತ್ರ ಆಗಮ ಗ್ರಂಥಗಳು ಕನ್ನಡದಲ್ಲಿ ಇಳಿದುಬಂದುವು.

ಭಗೀರಥನು ಗಂಗೆಯು ಕೈಲಾಸದಿಂದ ಭೂಮಿಗೆ ಅವತರಿಸಲು ಕಾರಣನಾದುದರಿಂದ ಗಂಗೆ ಭಾಗೀರತಿಯೆನಿಸಿದಳು. ಚಾರುಕೀರ್ತಿಯವರು ಧವಲತ್ರಯ ತೀರ್ಥಧಾರೆಯನ್ನು ಕನ್ನಡಕ್ಕಿಳಿಸಿ ಆಗಮ ಭಗೀರಥ ಎಂಬ ಬಿರುದಿಗೆ ಪಾತ್ರರಾದರು.

ಗ್ರಂಥ ಪ್ರಕಾಶನಕ್ಕೆ ಮನ್ನಣೆ

ಪ್ರೊ. ಎಂ.ಎ.ಜಯಚ೦ದ್ರ ಅವರ ಹಿರಿತನದಲ್ಲಿ ಕೆಲವು ಮಹತ್ವದ ಪ್ರಾಕೃತ ಕಾವ್ಯ ಮತ್ತು ಶಾಸ್ತ್ರಗ್ರಂಥಗಳು ಕನ್ನಡ ಅನುವಾದ ಸಹಿತ ಗಂಭೀರ ಓದುಗರಿಗೆ ದೊರೆಯುವಂತಾಗಿದೆ. ಪ್ರಾಚೀನ ಪ್ರಾಕೃತ ಶಾಸ್ತ್ರಗ್ರಂಥ ತಿಲೋಯ ಪಣ್ಣತ್ತಿಯು ಆಚಾರ್ಯ ಯತಿ ಋಷಭರ ಮಹತ್ಕೃತಿ. ಕ್ರಿ.ಶ.೪-೫ನೆಯ ಶತಮಾನಕ್ಕೆ ಸೇರಿದ ಪುರಾತನ ಶಾಸ್ತ್ರಗ್ರಂಥ. ಇದನ್ನು ಕನ್ನಡ ಭಾಷೆಗೆ ಭಾಷಾಂತರಿಸಿ ನಾಲ್ಕು ಸಂಪುಟಗಳಲ್ಲಿ ಮುದ್ರಿಸಿದ್ದಾರೆ. ಪಂಪ ಮಹಾಕವಿಯ ಆದಿಪುರಾಣ ದೀಪಿಕೆಯ ಪ್ರಕಾಶನಕ್ಕೆ ಹಣ ಸಹಾಯ ಮಾಡಿದ್ದಾರೆ. ಪೊನ್ನ ಮತ್ತು ಕಮಲಭವ ಕವಿಯ ಶಾಂತಿ ಪುರಾಣ ಕಾವ್ಯ ಜೋಡಿಯನ್ನು ಹೊರತಂದಿದ್ದಾರೆ.

ಬಿ.ಎಸ್. ಸಣ್ಣಯ್ಯ ಅವರಿಂದ ಸಂಪಾದಿಸಿ ಪರಿಷ್ಕರಿಸಿ ಕೇಶವವರ್ಣಿಯ ಮಹತ್ವದ ಕನ್ನಡ ಟೀಕು ಸಹಿತ ಗೊಮ್ಮಟ ಸಾರವನ್ನು ನಾಲ್ಕು ಸಂಪುಟಗಳಲ್ಲಿ, ಎರಡು ಸಾವಿರ ಪುಟಗಳಲ್ಲಿ ಅಚ್ಚು ಮಾಡಿಸಿದ್ದಾರೆ. ಕ್ರಿ.ಶ.೭೭೯ನೆಯ ಇಸವಿಯಲ್ಲಿ ಉದ್ಯೋತನ ಸೂರಿ ಪ್ರಾಕೃತದಲ್ಲಿ ರಚಿಸಿದ ಕುವಲಯ ಮಾಲಾ ಎಂಬ ಮಹಾ ಕಾವ್ಯದ ಇಂಗ್ಲೀಷು ಅನುವಾದದ ಎರಡು ದೊಡ್ಡ ಸಂಪುಟಗಳನ್ನು ಅಕ್ಷರಾಭಿಷೇಕ ಮಾಲಿಕೆಯಲ್ಲಿ ಹೊರತಂದು ವಿದ್ವತ್ ಜನರ ಮನ್ನಣೆ ಪಡೆದಿದ್ದಾರೆ. ಇದಲ್ಲದೆ ಹಲವಾರು ಇಂಗ್ಲಿಷ್ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಗೌರವದ ನವಿಲುಗರಿಗಳು

ಚಾರುಕೀರ್ತಿಯವರ ಎಣೆಯಿಲ್ಲದ ನಿಸ್ವಾರ್ಥ ದಶಕಗಳ ಸೇವೆಗೆ ಸಂದ ಗೌರವಗಳು, ಬಂದ ಪುರಸ್ಕಾರಗಳು ಹಲವಾರು. ಹಿಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಕರ್ಮಯೋಗಿ ಪ್ರಶಸ್ತಿಯಿತ್ತು ಪುರಸ್ಕರಿಸಿದರು. ಸಮಸ್ತ ಜೈನ ಸಮಾಜದವರು ಸೇರಿ ವಿಶಿಷ್ಟವಾದ ಸ್ಯಾದ್ವಾದ ಸಿದ್ಧಾಂತ ಚಕ್ರವರ್ತಿ ಪ್ರಶಸ್ತಿ ನೀಡಿ ಗೌರವಿಸಿದರು. ಇದು ಅವರ ಅಗಾಧ ಆಗಮ ಸಿದ್ಧಾಂತ ಜ್ಞಾನವನ್ನು ಪರಿಗಣಿಸಿ ಪ್ರದಾನ ಮಾಡಿದ ಪುರಸ್ಕಾರ. ವಾಸ್ತವವಾಗಿ ಅವರು ಅಗಾಧ ಬೋಧ ನಿಲಯರೆಂದು ಖ್ಯಾತನಾಮರಾಗಿರುವರು. ಅವರನ್ನು ಸುಜನಜನ ಮನೋ ಮಾನಸೋತ್ತಂಸ ಹಂಸರೆ೦ದು ಬುದ್ಧಿಯೊಡೆಯರು ಪರಿಚಯಿಸುವರು. ಚಾರುಶ್ರೀಯವರು ಬಿಡುವು ದೊರೆಯುವುದೆ ತಡ ಪಂಚ ಪರಮೇಷ್ಠಿಗಳ ಧ್ಯಾನದಲ್ಲಿ ತಲ್ಲೀನರಾಗುವರು. ಅಧ್ಯಾತ್ಮವೆ ನಿಚಿತ ಪ್ರಯೋಜನವೆನಗೆ ಎಂದು ವಿರಾಮವನ್ನು ಧ್ಯಾನಕ್ಕೆ ಮೀಸಲಿಡುವರು. ಅದರಿಂದ ಜಿನಚರಣಭೃ೦ಗ ಎ೦ಬ ಬಿರುದು ಪಡೆದರು.

ಸರ್ವಧರ್ಮ ಸಮನ್ವಯದ ಹರಿಕಾರರು

ಪೂಜ್ಯ ತ ಪೋಧನರುಗಳಾದ ಸಿದ್ಧಗಂಗೆಯ ಶಿವಕುಮಾರರು, ಸುತ್ತೂರು ಮಠದ ಶಿವರಾತ್ರಿ ದೇಶಿಕೇ೦ದ್ರರು ಆದಿಚು೦ಚನಗಿರಿಯ ಬಾಲಗ೦ಗಾಧರ ನಾಥರು ಮತ್ತು ನಿರ್ಮಲಾನ೦ದರು, ಶ್ವೇತಾ೦ಬರರು, ಮಾಧ್ವರು, ಶೈವರು, ವೈಷ್ಣವರು, ತಾವೇ ಖುದ್ದಾಗಿ ಬೇರೆ ಮಠಗಳಿಗೆ ಹೋಗಿ ಬರುವರು ಹಾಗೂ ಅನ್ಯಾನ್ಯ ಮಠಾಧೀಶರನ್ನು ಬೆಳಗೊಳಕ್ಕೆ ಭವ್ಯ ಮೆರವಣಿಗೆಯಿಂದ ಬರಮಾಡಿಕೊ೦ಡು ಸತ್ಕರಿಸುವರು. ಸಮದರ್ಶಿತ್ವವನ್ನು ಮೈಗೂಡಿಸಿಕೊ೦ಡು ಚತುಸ್ಸಮಯವಷ್ಟೇ ಅಲ್ಲದೆ ಬಹುಸಮಯ ಪುರಸ್ಕೃತರಾಗಿದ್ದಾರೆ. ತಮ್ಮ ಭಕ್ತರಿಗೂ ಶಿಷ್ಯವೃಂದಕ್ಕೂ- “ಸರ್ವಧರ್ಮ ಸಮನ್ವಯ ದೃಷ್ಟಿಯನ್ನು ರೂಢಿಸಿಕೊಂಡು ಸಹನೆ ತಾಳ್ಮೆಯನ್ನು ಪೋಷಿಸಿ ಸಮರಸದಿಂದ ಬಾಳಿ“-ಎಂದು ಬೋಧಿಸುವರು. ಅಹಿಂಸೆಯಿಂದ ಶಾಂತಿ, ತ್ಯಾಗದಿಂದ ಸುಖ ಎಂಬುದು ಅವರ ಅಮರ ಸಂದೇಶದ ಸಾರ.

‍ಲೇಖಕರು avadhi

March 23, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: