ಚನ್ನಪ್ಪ ಅಂಗಡಿ ಹೊಸ ಕವಿತೆ ‘ನೆಲ ತತ್ವ’

ಚನ್ನಪ್ಪ ಅಂಗಡಿ

**

ಒಬ್ಬರಿಗಿಂತ ಇಬ್ಬರು ಲೇಸು
ಅನ್ನುವ ಮುನ್ನ
ಕೈ ಬೆರಳೈದಾಗಿ ನೆನಪಿಸಿದವು
ಸಂಖ್ಯಾಬಲವೆಂದೋ ಅಸಂಖ್ಯವಾಗಿದೆ
ಕಲಿಗಾಲದಲಿ.

ಹೋಗುವ ಜೀವ ಬರುವ ಜೀವ
ಎರಡೂ ಸಜೀವ
ಕೇಳುವ ಕನಸಿನ ಸ್ಮೃತಿ
ನೋಡುವ ನನಸಿನ ಕೃತಿ
ಪ್ರಮಾಣು ಪ್ರಮಾಣು ಪ್ರಮಾಣು
ಸಾಪೇಕ್ಷತೆ.

ಅಂತರಂಗದಲಿ ಆಕಾಶ
ಬಹಿರಂಗದಲಿ ಭೂಮಿ
ಗ್ರಹ-ಗತಿಯಲಿ ಗಾಳಿ
ಬೆದೆಯುಕ್ಕಿ ಬೆಂಕಿ
ನೆರೆಬಂದ ನಿಡಿ ನೀರು
ಜಡಗೊಳ್ಳದೆಂದೂ ಸಕಲ ಪಡಿಪದಾರ್ಥ
ಒಡಲೊಳಗಿಂದ ಸಂಚಿತ ಕಾರ್ಯಕಾರಣಾರ್ಥ

ಬೆಳಗಾಗಿ ನಾನೆದ್ದು….
ಬಚ್ಚಲ ಮನೆಯಲ್ಲಿ
ಅದೂ ಇದೂ ಮಣ್ಣುಮಸಿ
ಯಂತ್ರಲೋಕದ ಅಂತರಂಗದಲಿ
ತಂತ್ರ ಮಂತ್ರದ ಹಮ್ಮುಬಿಮ್ಮು

ಬಿದ್ದೊಂದು ಗಳಿಗೆ ಸಹಿಸಿ ಸವೆದೇನು
ಮರಣಿಸುವಗೆ ಕರುಣೆಯ ಮಡಿಲಾಗಿ ನೀನು
ಹಿಡಿಜೀವಕ್ಕೆ ಹೆಚ್ಚು ಹೆಚ್ಚಿನ ಕನವರಿಕೆ
ಕೊಡಮಾಡಿ ಕೃಪೆಮಾಡಿ
ಜೀವ ನೀಡಿದವಳು ಹಡೆದವ್ವಗೆ
ಸಾವ ಬಾಗಿಲಲಿ ನನ್ನಿಯ ನಿನ್ನುಡುಗೆ

**

ಆಳದೊಳಗಿನುರಿಯ ಆಗಾಗ ಕಕ್ಕುತ
ಮೂಳೆ ಚಕ್ಕಳಗಳ ಒಮ್ಮೊಮ್ಮೆ ಕನಲಿಸುತ
ಕಣ್ಣು ಕಿಸಿದು ನೋಡಿ ಬಾಯ್ದೆರೆದು ಹಾಡಿ
ಪೂತಿನಿಯೆದೆಯೂಡಿಸಿ ಗುಡಿಸಿಬಿಡುವ ಮಾತಾಯೆ
ಮನದಾಳದ ಚಲನೆಯಲಿ ಲೆಕ್ಕಾಚಾರದ ತುಲನೆ
ಈ ನೆಲದ ತತ್ವದಲಿ

ನೀನಿರುವೆ ಸತ್ವದಲಿ
ಹಿಕ್ಕೆ-ಪುಕ್ಕ-ಬಿಕ್ಕು ದ್ರವ್ಯದಲಿ ಒಂದಾಗಿ
ಚೈತನ್ಯ ಬೀಜ ತೋಯಿಸಿ ಮಳೆಯೊಡೆದು
ದ್ಯಾವಾ ಪೃಥಿವಿ ಸಂಸಾರ ಮಾಡಿ ಫಲಾಫಲ ನೀಡಿ

ಅನ್ಯದೈವಕ್ಕೆಳೆಸುವ ಭವಿ ಗಣಂಗಳನ್ನು
ಮಣ್ಣು ತಾಗದೆ ಬೆಣ್ಣೆ ತಿನ್ನುವ ಕಡುಪಾಪಿಗಳನ್ನು
ಕಣ್ಣಿಟ್ಟು ಕಾಯೆ ಮಲಮಕ್ಕಳ ತಾಯೆ

ಮಡೆಗದ್ದೆ ಹುಡಿದಿಬ್ಬ ಖೋಟ ಖರಾಬು ಜಮೀನಿನಲ್ಲಿ
ತೋಟ ತರಿಯಲ್ಲಿ ಬೆಟ್ಟಗುಡ್ಡದ ಬರೆಯಲ್ಲಿ
ಮೆಕ್ಕಲಮಣ್ಣ ಹಕ್ಕಲದಲಿ ಹಳ್ಳದ ದಂಡೆಯಲಿ
ಗಾಂವಠಾಣ ಗೋಮಾಳ ಹುಲ್ಲುಗಾವಲಿನಲಿ
ಹೋಗಲಿ, ಕಾಡುಮೇಡು ಕಾನನ ಕುರುಚಲಿನಲಿ
ಎಲ್ಲಿಯಾದರೂ ನೆಲೆ ಕಾಣಿಸವ್ವ
ನಿನ್ನ ಮನೆತುಂಬ ಮಕ್ಕಳಿರಲವ್ವ.

‍ಲೇಖಕರು Admin MM

March 28, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: