‘ಚಂಪಾ’ ಎಂಬ ಮಹಾನ್ ಸಾಹಿತ್ಯಿಕ ಹೋರಾಟಗಾರ…

ಜಿ ಎನ್‌ ನಾಗರಾಜ್

ಚಂಪಾ ಎಂಬ ಮಹಾನ್ ಸಾಹಿತ್ಯಿಕ ಹೋರಾಟಗಾರರ ನಿಧನ. ಅವರು ಸ್ವತಃ ಒಂದು ಸಾಂಸ್ಕೃತಿಕ ಸಂಸ್ಥೆ. ಜೆಪಿ ಚಳುವಳಿಯಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿದರು. ತುರ್ತು ಪರಿಸ್ಥಿತಿಯನ್ನು ಖಂಡತುಂಡವಾಗಿ ಖಂಡಿಸಿ ಜೈಲುವಾದ ಅನುಭವಿಸಿದ ಏಕಮಾತ್ರ ಕನ್ನಡ ಸಾಹಿತಿ ಅವರು.

ಕೋಮುವಾದ ಜಾತಿವಾದ,ಬೇರೆಲ್ಲ ಪ್ರತಿಗಾಮಿಗಳ ವಿರುದ್ಧ ಚಾಟಿ ಬೀಸುತ್ತಿದ್ದ ಪರಿಣಾಮಕಾರಿ ಧ್ವನಿ. ನಾಲ್ಕು ದಶಕಗಳ ಕಾಲ ಕನ್ನಡ ಸಾಹಿತ್ಯಾಗಸವನ್ನು ಆವರಿಸಿದವರು. ಲಂಕೇಶ್, ತೇಜಸ್ವಿ, ಚಂಪಾ ಮೂವರು ಸೇರಿ ಅನೇಕ ಬಿರುಗಾಳಿ ಎಬ್ಬಿಸಿದವರು. ಬಂಡಾಯ ಸಾಹಿತ್ಯದಲ್ಲಿ ಬರಗೂರು ಚಂಪಾ ಎರಡು ಮುಖ್ಯ ಸ್ತಂಭಗಳಾಗಿ ಬೆಳಸಿದವರು.

ನವ್ಯದ ಮುಖ್ಯ ಸಾಹಿತಿಯಾಗಿ ಬೆಳೆದು ಬಂಡಾಯ ಸಾಹಿತ್ಯದ ಬಾವುಟ ಎತ್ತಿದವರು. ಅವರ ಕಾವ್ಯ,ನಾಟಕಗಳೂ ಸಾಹಿತ್ಯದಲ್ಲಿ ಗಣನೀಯ ಪರಿಣಾಮ ಬೀರಿದವು. ಅವರ ಟಿಂಗರ ಬುಡ್ಡಣ್ಣ, ಅಪ್ಪ ನಾಟಕಗಳು ನೋಡುಗರ ಮನದಲ್ಲಿ ವಿಚಾರಶೀಲತೆಯನ್ಬು ಬಡಿದೆಬ್ಬಿಸಿದವು. ನಂತರ ನಾಟಕವನ್ನು ತಮ್ಮ‌ಹರಿತ ವ್ಯಂಗ್ಯದ ಮೂಲಕ ಕನ್ನಡ ಸಾಹಿತ್ಯದ ಪ್ರತಿಗಾಮಿ ಪ್ರವೃತ್ತಿಗಳನ್ನು ಲೇವಡಿ ಮಾಡಲು ಪರಿಣಾಮಕಾರಿ ಸಾಧನವಾಗಿಸಿದರು. ನಳಕವಿಯ ಮಹಾ ಮಸ್ತಕಾಭಿಷೇಕ ಅಂತಹುದೊಂದು ಅಂದು ಬಹಳ ಜನಪ್ರಿಯವಾಗಿದ್ದ ನಾಟಕ. ಅವರ ಕಾವ್ಯ, ನಾಟಕಗಳು ಬಹುಕಾಲ ಕನ್ನಡಿಗರ ಮನದಲ್ಲಿ ಜೀವಂತ.

ನವ್ಯದ ಒಂದು ಮುಖವಾಣಿಯಾಗಿ ಅವರ ಸಂಪಾದಕತ್ವದಲ್ಲಿ ಆರಂಭವಾದ ‘ಸಂಕ್ರಮಣ’ ಬಹು ದೀರ್ಘ ಕಾಲ ಕನ್ನಡ ಸಾಹಿತ್ಯದ ಓದುಗರನ್ನು ಹಲವು ವಿಚಾರಗಳ ಮೂಸೆಗೆ ಒಡ್ಡಿ ಬೆಳೆಸಿತು. ಹೊಸ ಸಾಹಿತಿಗಳನ್ನು ಪೋಷಿಸಿತು. ಅವರೊಡನೆ ನಾನು ಭಾಗವಹಿಸಿದ ಹೋರಾಟಗಳು, ಹಂಚಿಕೊಂಡ ವೇದಿಕೆಗಳೆಷ್ಟು ಲೆಕ್ಕವೇ ಇಲ್ಲ.

1979ರಲ್ಲಿ ನಾನು ಮೊದಲ ಬಾರಿಗೆ ಧಾರವಾಡ ಜಿಲ್ಲೆಗೆ ಅಧಿಕಾರಿಯಾಗಿ ಹೋದ ಕೂಡಲೇ ಮೊದಲು ಭೇಟಿಯಾದ ವ್ಯಕ್ತಿ ಅವರು. ಅವರ ಮನೆಯಲ್ಲಿ ಅವರನ್ನು ಭೇಟಿಯಾದ, ಹಲವು ವಿಷಯಗಳನ್ನು ಚರ್ಚಿಸಿದ ಸವಿ ನೆನಪು.

ನಾನು ಹಿಂದೆಯೇ ಬರೆದಂತೆ ಲೋಹಿಯಾ ಮಾರ್ಕ್ಸ್ ಮತ್ತು ಗಾಂಧಿ ಬಗ್ಗೆ ಬರೆದ ಒಂದು ಪುಸ್ತಕ ನೀಡಿ ಅದರ ಮೂಲಕ ಮಾರ್ಕ್ಸ್‌ರವರ ವಿಚಾರಗಳ ಪರಿಚಯ ಮಾಡಿಸಿದವರು,ನಾನು ಮಾರ್ಕ್ಸ್‌ವಾದಿಯಾಗಲು ಒಂದು ಮುಖ್ಯ ಹಂತ ಅದು. ಇಳಿವಯಸ್ಸಿನಲ್ಲೂ ಪೋಲಿಸರ ನಿರ್ಬಂಧವನ್ನು ಧಿಕ್ಕರಿಸಿ ಅವರು ಭಾಗವಹಿಸಿದ, ಕಲುಬುರ್ಗಿಯವರ ನಿಧನದ ಒಂದು ವರ್ಷದ ನೆನಪಿನಲ್ಲಿ ಮೂರು ದಿನಗಳ ಕಾಲ ಬೆಂಗಳೂರಿನಿಂದ ಧಾರವಾಡದವರೆಗೆ ನಡೆಸಿದ ವಾಹನ ಜಾಥಾ ಆ ಸಂದರ್ಭದಲ್ಲಿ ಅವರ ಮಾತುಗಳು ಅವರ ಬದ್ಧತೆ ಮತ್ತು ಹಿಂಜರಿಯದೆ ಮುನ್ನುಗ್ಗುವ ದೃಡತೆಗೆ ಪುರಾವೆಯಾಗಿದ್ದವು. ಹಾಗೆಯೇ ಗಣಿ ದರೋಡೆಕೋರರ ವಿರುದ್ಧ ನಡೆಸಿದ ಮೂರು ದಿನಗಳ ವಾಹನ ಜಾಥಾ ಅಚ್ಚಳಿಯದ ನೆನಪು.

ಅವರದು ಯಾವಾಗಲೂ ಹೊಸ ವಿಚಾರಗಳ ಬಗ್ಗೆ ತೆರೆದ ಮನಸ್ಸು. ಯಾವುದೇ ವಿಚಾರ ಸಂಕಿರಣಗಳಲ್ಲಿ ಒಬ್ಬ ವಿದ್ಯಾರ್ಥಿಯಂತೆ ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು. ಇತ್ತೀಚೆಗೆ ಕಲಬುರ್ಗಿ ಕೊಲೆಯ ನಂತರ ಅವರ ಮೇಲೂ ಹಿಂದೂ ಭಯೋತ್ಪಾದಕರ ಕಣ್ಣಿದೆ ಎಂದರೂ ಹೆದರದೆ, ಪೋಲೀಸರ ಹಾಕುತ್ತಿದ್ದ ನಿರ್ಬಂಧಗಳ ಬಗ್ಗೆ ಕೇರ್ ಮಾಡದೆ ಎಲ್ಲ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದರು. ವೃದ್ಧಾಪ್ಯದ ದೈಹಿಕ ಸಮಸ್ಯೆ ಮಾತ್ರ ಅವರ ಭಾಗವಹಿಸುವಿಕೆಯನ್ನು ಸೀಮಿತಗೊಳಿಸಿತ್ತು.

ಅವರ ನಿಧನ ಕರ್ನಾಟಕದ ಜನತೆಗೆ, ಸಾಹಿತ್ಯಕ್ಕೆ ಬಹು ದೊಡ್ಡ ನಷ್ಟ. ನನಗಂತೂ ಒಬ್ಬ ವೈಯುಕ್ತಿಕ ಗೆಳೆಯರನ್ನು ಕಳೆದುಕೊಂಡ ಶೂನ್ಯಭಾವ.

‍ಲೇಖಕರು Admin

January 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: