ಗೋವಿಂದರಾಜು ಎಂ ಕಲ್ಲೂರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಲ್ಲೂರು ಗ್ರಾಮದವರು. ತುಮಕೂರು ವಿಶ್ವವಿದ್ಯಾನಿಲಯದಿಂದ ‘ನಾಡು-ನುಡಿಯ ರೂಪಕ: ಡಾ. ರಾಜಕುಮಾರ್ ಸಿನಿಮಾ’ ಕುರಿತು ನಿತ್ಯಾನಂದ ಬಿ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಸದ್ಯ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಇವರ ಮೊದಲ ಕಥಾ ಸಂಕಲನ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಬಹುಪಾಲು ಬಹುಮಾನಿತ ಕಥೆಗಳನ್ನು ಹೊಂದಿರುವ ಈ ಸಂಕಲನದ ಕಥೆಗಳ ಬಗ್ಗೆ ಕೆಲ ಟಿಪ್ಪಣಿಗಳು ಇಲ್ಲಿವೆ.
ಪ್ರಕಾಶಕರು : ರೂಹು ಪುಸ್ತಕ
ಪುಟಗಳು : 113 ಬೆಲೆ : 130
ಮುಂಗಡ ಬುಕಿಂಗ್ ಬೆಲೆ : 100
ಪುಸ್ತಕಕ್ಕಾಗಿ ಸಂಪರ್ಕಿಸಿ : 8970162207
ಆಕೃತಿಯಲ್ಲಿನ ಪ್ರಯೋಗಶೀಲತೆ, ಕಥನದ ಭಿನ್ನ ಸಾಧ್ಯತೆಗಳನ್ನು ಸಾದರಪಡಿಸುವಲ್ಲಿ ಇರುವ ಹುಡುಕಾಟ, ಮರುಕಥನವೂ ಕೂಡ ಕಥನವೇ ಎಂಬ ಆಶಯದೊಡನೆ ಈಗಾಗಲೇ ಸಂಸ್ಕೃತಿ-ಜನಜೀವನದ ಭಾಗವಾಗಿರುವ ಕಥೆಯನ್ನು ಭಿನ್ನ ಭಿನ್ನ ಕೋನಗಳಿಂದ ಜೋಡಿಸುವುದು, ಹೀಗೆ ಜೋಡಿಸುವಾಗಲೂ ಎಲ್ಲ ಕೋನಗಳನ್ನು ಗೌರವಿಸುವುದು ‘ಮಡಿಲೊಳಗಣ ಕಳೇಬರವು’ ಕಥೆಯ ವಿಶಿಷ್ಟತೆ. ಸಮಕಾಲೀನ ಬದುಕಿಗೆ ಪ್ರಸ್ತುತವಾಗಿರುವ ಹಾಗೆ ಮರುಕಥನವಿದೆ. ಇದಕ್ಕಾಗಿ ಅಗತ್ಯವಾದ ಭಾಷೆಯನ್ನು ಕೂಡ ಲೇಖಕರು ರೂಪಿಸಿಕೊಂಡಿದ್ದಾರೆ. ಶೀಲದ ಬಗ್ಗೆ ಇರುವ ಪ್ರಶ್ನೆ, ಅನುಮಾನಗಳೆಲ್ಲವೂ ಎಲ್ಲ ಕಾಲದಲ್ಲೂ, ಎಲ್ಲ ಸಂಸ್ಕೃತಿಯಲ್ಲೂ ಏಕೆ ಹೆಣ್ಣಿನ ಸುತ್ತವೇ ಇರುತ್ತವೆ ಎಂಬ ಅಸಾಂಗತ್ಯವನ್ನು ಕೂಡ ಕಥೆ ಮರುಕಥನದುದ್ದಕ್ಕೂ ಪ್ರಶ್ನಿಸುತ್ತಾ ಹೋಗುತ್ತದೆ.
–ಕೆ. ಸತ್ಯನಾರಾಯಣ
೨೦೨೨ನೇ ಸಾಲಿನ ಅಕ್ಷರ ಸಂಗಾತ ಯುವಕಥಾಸ್ಪರ್ಧೆಯ ತೀರ್ಪುಗಾರರ ಟಿಪ್ಪಣಿ
‘ಪುಣ್ಯಕೋಟಿ’ ಕನ್ನಡದ ಮನೆಮಾತಾದ ಕಥನ ಕಾವ್ಯವಾಗಿದೆ. ಶಾಲೆಯಲ್ಲಿ ಎಳೆಯರ ಹೃದಯವನ್ನು ಕರಗಿಸಿ ಕಣ್ಣೀರಾಗಿಸಿ ಹರಿಸಿದ ಪದ್ಯವದು ಸಾಂಸ್ಕೃತಿಕ ವಾಗ್ವಾದವನ್ನೂ ಬೆಳೆಸಿದ ಶ್ರೇಯಸ್ಸು ಅದಕ್ಕೆ ಸಲ್ಲುತ್ತದೆ. ‘ಮೆಚ್ಚನಾ ಪರಮಾತ್ಮನು’ ಕಥೆಯಲ್ಲಿ ಮೂಲ ಪಠ್ಯವನ್ನು ವಿಸ್ತರಿಸುತ್ತ ಪಠಾಂತರ ಮಾಡಲಾಗಿದೆ. ಕಥೆಯ ವಿಸ್ತರಣೆಯಲ್ಲಿ `ಒಡಹುಟ್ಟಕ್ಕ’ ಎಂದು ಪ್ರಾಣ ಬಿಟ್ಟ ಅರ್ಬುದನ ಸಾವನ್ನ ತಡೆಯಲಾಗಲಿಲ್ಲವೆಂದು ಪುಣ್ಯಕೋಟಿಗೆ ಗಾಢ ವಿಷಾದ ಉಂಟಾಗಿದೆ. “ನಾನು ಪಾಪಿ, ಪರರ ಆಹಾರವನ್ನು ಕಿತ್ತುಬಿಟ್ಟೆ; ಅರ್ಬುದನ ಕೊಂದುಬಿಟ್ಟೆ” ಎಂದ ತಾಯಿಯ ಕನವರಿಕೆ ಅವಳ ಮಗಳಲ್ಲೂ ಮುಂದೊರೆಯುತ್ತದೆ. ಈ ವಿಷಾದಯೋಗದಲ್ಲಿ ಮಗಳು ಪುಣ್ಯವತಿ ಅರ್ಬುದನ ಮಗನನ್ನು ಮುಖಾಮುಖಿಯಾಗುತ್ತಾಳೆ.
ಪ್ರಕೃತಿಯ ನಿಯಮದಂತೆ ಪರರ ಹಸಿವನ್ನು ಪರಿಹರಿಸಲೆಂದೇ ಈ ಜೀವ ಬದುಕಿದೆ ಎಂಬ ಹೆತ್ತವರ ತ್ಯಾಗಭಾವ ಇಬ್ಬರಲ್ಲೂ ಜಾಗೃತವಾಗುತ್ತದೆ. ಪುಣ್ಯಕೋಟಿ ಮತ್ತು ಅರ್ಬುದನ ನಡುವೆ ನಡೆದ ಮರು ಸಂಭಾಷಣೆಯಲ್ಲಿ ಮೂಲ ಪಠ್ಯದ ಆದರ್ಶ ಕಳಚಿ ಕಥೆ ವಾಸ್ತವ ಪಾತಳಿಗೆ ಬರುತ್ತದೆ. ಅರ್ಬುದ ಪ್ರಾಣತ್ಯಾಗ ಮಾಡಿ ಸ್ವರ್ಗಕ್ಕೆ ಹೋಗದೆ ಬಿದ್ದ ಜಾಗದಲ್ಲಿ ಅಲೆಯುತ್ತಿದ್ದರೆ, ಪುಣ್ಯಕೋಟಿ ತನ್ನ ದೇಹದಲ್ಲಿ ದೇವತೆಗಳು ವಾಸವಾಗಿಲ್ಲವೆಂದೂ ತಾನೂ ಅತ್ಯಂತ ಸಾಮಾನ್ಯ ಪಶುವೆಂತಲೂ ಹೆತ್ತ ಮಕ್ಕಳ ಹಸಿವು ಹಿಂಗಿಸಿ, ತನ್ನ ಮಾತೃತ್ವವನ್ನು ಕಂದನಿಗೆ ಮರಳಿ ಕೊಟ್ಟ ನೀನೇ(ಅರ್ಬುದ) ನಿಜ ದೈವವೆಂದೂ ವಾದಿಸುತ್ತಾಳೆ. ಕಥೆ ಕಾಳಿಂಗನ ಮಗ ಮಾಲಿಂಗ ಗೊಲ್ಲನಿಂದ ಪುನರ್ ನಿರೂಪಣೆಯಾಗಿದೆ. ಕಥೆಯ ಆಶಯವನ್ನು ಮಾನವ ಕೇಂದ್ರಿತ ದೃಷ್ಟಿಕೋನದಿಂದ ನೋಡದೆ ಪ್ರಕೃತಿ ನಿಯಮದಂತೆ ಮರು ನಿರೂಪಿಸುವ ಪ್ರಯತ್ನ ಶ್ಲಾಘನೀಯ.
–ಡಾ. ಶ್ರೀಧರ ಬಳಗಾರ
2018-19ನೇ ಸಾಲಿನ ಕ್ರೈಸ್ಟ್ ಯೂನಿವರ್ಸಿಟಿಯ ಡಾ. ಅ.ನ.ಕೃ ಸ್ಮಾರಕ ಅಂತರ ಕಾಲೇಜು ಕಥಾಸ್ಪರ್ಧೆ–10ರ ತೀರ್ಪುಗಾರರ ಟಿಪ್ಪಣಿ
0 ಪ್ರತಿಕ್ರಿಯೆಗಳು