ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೀತೋಸ್ಮಿ ಹೊಸ ಕವಿತೆ- ಪ್ರಹಸನ

 ಗೀತೋಸ್ಮಿ

—–

ಎಂದಾದರೂ ನಿಮಗನಿಸಿತ್ತೆ?

ಜಗತ್ತಿಗೆ ಸಾಕ್ಷಿ ಕೊಡಬೇಕಾ-

ಗಬಹುದೆಂದು;

ನೀವು ಬಯಸಿದ್ದಿರಿ- ಬದುಕಲು-

ನಿಮ್ಮದೇ ಬದುಕನ್ನು- ಎಂದು..

ಲಕ್ಷ- ಕೋಟಿ ಜನ ಉಸಿರಾಡಿದ

ಗಾಳಿಯೇ ಇರಬಹುದು;

ಆದರೆ- ಶ್ವಾಸಕೋಶದೊಳಗೆ ಹರಿದಾಡಿದ

ಉಸಿರು- ನಿಮ್ಮದೇ-

ಆಗಿದೆ ಎಂದು..

ಹೂವು-ಹಕ್ಕಿಗಳೆಲ್ಲ ವಿಶ್ವಾತ್ಮನ ಸೃಷ್ಟಿ-

ಯೇ ಇರಬಹುದು;

ಆದರೆ- ಅವು ತಂದ ಮುದ, ಹಿಗ್ಗು

ನಿಮ್ಮೊಳಗ ಅರಳಿಸುವುದೆಂದು..

ಒಡಂಬಡಿಕೆಗಳ ಕಂತೆ-ಕಂತೆ

ಕಂತಿನಲ್ಲೂ ಸಿಗಬಹುದೆಲ್ಲೆಲ್ಲೂ;

ಆದರೆ- ಕ್ಷಣಭಂಗುರತೆಯ ತಿರುಳ

ನೀವು ಹೀರಿಕೊಂಡಿರುವಿರೆಂದು..    

ಏನು, ಎತ್ತ, ಏಕೆ..ಪ್ರಶ್ನೆಗಳೇ

ಕಾಡಬಹುದು ದನಿಯಾಗಿ;

ಆದರೆ- ನಿಗೂಢತೆಯ ಒಡಪು

ಬಿಡಿಸಬೇಕಾದವರು-

ನೀವೇ- ಎಂದು..

 ಹುಸಿನಗುವಿನ ಕೊಸರಾಟಕೆ

 ಬುದ್ಬುದದ ಜೀವರಾಶಿ

 ಬೀಳುತೇಳುವ ಪ್ರಹಸನ!

 ಅನಿಸಿತ್ತೆ ನಿಮಗೆ- ಎಂದಾದರೂ?

 ಒಂದಲ್ಲ- ಒಂದು ದಿನ-

 ಸ್ವಸ್ತಿವಾಚನದಭಯದಾನ-

 ಒದಗೀತು ಅಯಾಚಿತ- ಎಂದು..

 ಅಥವಾ,

 ಒಂದು ಕವಿತೆ ಮೂಡಿದ ಕ್ಷಣ!-

 ಮೀರಬಲ್ಲಿರಿ ನೀವು ಎಲ್ಲ-

 ಎಲ್ಲವನ್ನೂ;

 ಸಾಕ್ಷಿ-ಪುರಾವೆಗಳ-

 ಹಂಗು-ಗೊಡವೆಯನ್ನೂ!!- ಎಂದು.

            

‍ಲೇಖಕರು avadhi

30 October, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading