ಗೀತಾ ಜಿ ಹೆಗಡೆ ಕಲ್ಮನೆ
ಹೊಸ ವರ್ಷದ ಬೆಳ್ಳಂಬೆಳಗ್ಗೆ ಅಂದುಕೊಂಡೆ
ಇವತ್ತಿನಿಂದ ದಿನಚರಿನೇ ಬೇರೆ
ಎಲ್ಲಾ ಕಟ್ನಿಟ್
ನಾನೇ ಬೇರೆ
ನನ್ನ ಸ್ಟೈಲೇ ಬೇರೆ.
ಪ್ರೀತಿ ಪಾತ್ರಳಾದ ಚಹಾಕ್ಕೆ ಗುಡ್ ಬೈ
ಆಗಾಗ ಹಣುಕಿಹಾಕುವ fbಗೆ ಜೈ
ಸುಮ್ಮನೆ ಕೂತು ಮಾಡುವ ಕಾಲಹರಣಕ್ಕೆ ಟೂ ಟೂ
ಗಂಟೆಗಟ್ಟಲೆ ನೋಡುವ ಧಾರಾವಾಹಿಗೆ ಟಾ ಟಾ
ಇತ್ಯಾದಿ ಇತ್ಯಾದಿ ಲೀಸ್ಟ್ ದೊಡ್ಡದಾಗಿದ್ದು ಗೊತ್ತಾಗಿ
ಕಪಾಟಿನಲ್ಲಿರುವ ಪುಸ್ತಕಗಳಿಗೋ
ಇನ್ನೇನಿದ್ದರೂ ಅಮ್ಮನ ಮಡಿಲು ತಮಗೇ…
ಥೈ ಥೈ ನೆಗೆತ.
ಸರಿ ಎಲ್ಲಾ ಬರೆದು ಪಟ್ಟಿ ಮಾಡೋಣ
ವಯಸ್ಸಾಯಿತಲ್ಲಾ ಮರೆತುಹೋಗಬಾರದು ನೋಡಿ.
ಡ್ರಾವರಿನಲ್ಲಿ, ಕಪಾಟಿನಲ್ಲಿ, ಟೇಬಲ್ ಸ್ಟ್ಯಾಂಡ್ ಎಲ್ಲ
ತಡಕಾಡಿದರೂ ನೆಟ್ಟಗಿರೊ ಒಂದಾದರೂ
ಪೆನ್ನು ಸಿಗಬೇಕಲ್ಲ…..
ಎಲ್ಲಾ ಮಾಯಾಂಗನೆಯ ಕೈವಾಡ
ಟುಕ್ಕು ಟುಕ್ಕು ಕಲಿತ ಮೇಲೆ
“ಮುಂಡೆದೆ ಪೆನ್ನು ಸಿಕ್ಕರೂ ನಿನ್ನ ಕೈ ಓಡಲ್ವೆ”
ಮನಸ್ಸು ಕುಟುಕಿತು
ಬುದ್ಧಿ”ಅಲ್ವಾ ಮತ್ತೆ “ಅಂತ ಸಾತ್ ಕೊಟ್ಟಿತು
ಮತ್ತೆ ನಾನು ಪಿಚ್ಚಾ.
ಗಂಟೆ ಏಳಾಯಿತು, ಎಂಟೂ ಆಯಿತು
ಬೆಳಗಿನ ವಾಕಿಂಗ್ ಇಲ್ಲ, ಹಾಲಿಲ್ಲ ಪೇಪರ್ ಇಲ್ಲ
ಇನ್ನು ತಿಂಡಿ ವಗೈರೆ?
ತಲೆ ಗಿರ್ ….ಅಂತು
“ಭಗವಂತಾ ನೀ ಮಡದಾಂಗೆ ನಾನಿರ್ತೀನಿ ಕಣಪ್ಪಾ” ಅಂತ ಉದ್ದಂಡ ನಮಸ್ಕಾರ ಹಾಕಿ
ಬಿರೀನೆ ಹಾಲು ತಂದು
ಖಡಕ್ ಚಹಾ ಮಾಡಿ
ಸೊರ್….. ಅಂತ ಹೀರುತ್ತಾ ಕೂತ್ಕಂಡೆ ನೋಡಿ…
ಆಹಾ! ಸ್ವರ್ಗಕ್ಕೆ ಮೂರೇ ಗೇಣು.
ಮನೆಮಂದಿ ಎಲ್ಲಾ
ನನ್ನ ಅವತಾರ ನೋಡಿ
ಲಬೋ ಲಬೋ….
ಕಾರಣ ಅವರೂ ನನ್ನಂತೆ ಅಲ್ವಾ?
ಚಹಾ ಕೊಡೋದನ್ನೇ ಮರೆತಿದ್ದೆ!
ಹಂಗೆ ಹೊಸ ವರ್ಷದ ಮೊದಲ ದಿನವೇ
ಹೀಗಾಗಿ ಹೋಯಿತಲ್ಲಾ
ಮನಸ್ಸಿಗೆಲ್ಲಾ ಖೇದ, ಇರಿಸುಮುರಿಸು.
ಗಟ್ಟಿಯಾಗಿ ಕೂಗಲಿಲ್ಲ
ಆದರೆ ನನ್ನಷ್ಟಕ್ಕೇ ತೀರ್ಮಾನ ಮಾಡಿಕೊಂಡೆ
ಹಳೆ ವರ್ಷ ಹೋಗಲಿ
ಹೊಸ ವರ್ಷ ಬರಲಿ
ಎಂತಾದರೂ ಆಗಲಿ
ಎಷ್ಟೆಂದರೂ
ನಾನೇ ನೆಟ್ಟ ಆಲದ ಮರಕ್ಕೆ ಜೋತು ಬಿದ್ದು
ತುಂಬಾನೇ ವರ್ಷ ಆಗೋಯ್ತು
ಇನ್ನೇನಿದ್ದರೂ ನಾಯಿ ಬಾಲ ಡೊಂಕೇ
ನೆಟ್ಟಗೆ ಮಾಡೊ ಕಸರತ್ತು ಬಿಟ್ಟು
ಈಗ ನಾನಿರೋದೇ ಸರಿ.
ಈಗ ನೋಡಿ ಸಮಾಧಾನ ಆಯ್ತು
ಮನಸ್ಸು,ದೇಹ ಎಲ್ಲಾ
ಗರಿ ಗರಿ.
0 ಪ್ರತಿಕ್ರಿಯೆಗಳು