ವಿರಹ, ವಿಯೋಗ, ವಿದ್ರೋಹ, ಪ್ರೇಮ, ವ್ಯಾಮೋಹ, ವಿಷಣ್ಣತೆ, ತೀವ್ರ ತೊಳಲಾಟ, ಹೂ ಪುಳಕ, ಬದುಕಿನ ಚೆಲುವುಗಳನ್ನು ಗಜಲುಗಳ ಮೂಲಕ ಕಟ್ಟಿ ಕೊಟ್ಟ ಮಿರ್ಜಾ ಗಾಲಿಬ್ ಉರ್ದು ಕಾವ್ಯ ಲೋಕದ ಮೇರು ಪ್ರತಿಭೆ. ಅವನ ಗಜಲುಗಳ ಉದ್ದಕ್ಕೂ ಸೃಜನಶೀಲತೆಯ ಸೂಕ್ಷ್ಮ ತಂತುಗಳಿವೆ. ಮರಕ್ಕೆ ಎಲೆಗಳು ಮೂಡಿದ ಹಾಗೆ ರೂಪಕ, ಪ್ರತಿಮೆಗಳು ಸಹಜವಾಗಿ ಇಡಿಕಿರಿದಿವೆ.
ಬದುಕಿನುದ್ದಕ್ಕೂ ಗಜಲನ್ನೇ ಧೇನಿಸಿದ ಮಹತ್ವಾಕಾಂಕ್ಷೆಯ ಕವಿ. ಅವನ ಗಜಲುಗಳ ಕಲರವವನ್ನು ಕೇಳುತಿದ್ದರೆ ನಮ್ಮ ನೋವುಗಳನ್ನು ಹಗೂರವಾಗಿ ಮರೆಯಬಹುದು. ಬದುಕಿನಲ್ಲಿ ಪಟ್ಟ ಪಾಡನ್ನೇ ಹಾಡಾಗಿಸಿ ಎದೆಯಿಂದ ಎದೆಗೆ ದಾಟಿಸಿದ ಕವಿ ಗಾಲಿಬ್. ಸದಾ ಹಾಸ್ಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿದ್ದ ಗಾಲಿಬನ ಪ್ರತಿ ಮಾತು ಕಾವ್ಯಾತ್ಮಕವಾಗಿತ್ತು.
ಈ ಕೃತಿಯಲ್ಲಿ 25 ಜನ ಬರೆಹಗಾರರು ಅವನ ಖಯಾಲಿ, ವಿಶಿಷ್ಟ ಬದುಕು, ಸಾಹಿತ್ಯದ ವಿಭಿನ್ನ ಚಹರೆಗಳ ಮಹತ್ವ ಮತ್ತು ಒಂದಿಷ್ಟು ಅನುವಾದಿತ ಗಜಲುಗಳನ್ನು ಕಟ್ಟಿ ಕೊಟ್ಪಿದ್ದಾರೆ. ಇದಕ್ಕೆ ಸೊಗಸಾದ ಮುಖಪುಟವನ್ನು ಹಿರಿಯ ಕಲಾವಿದರಾದ ಸುಧಾಕರ ದರ್ಬೆಯವರು ಮಾಡಿದ್ದಾರೆ. ಪುಸ್ತಕವನ್ನು ಪ್ರೀತಿಯಿಂದ ಕೈಗೆತ್ತಿಕೊಳ್ಳುವ ಮನಸ್ಸು ನಿಮ್ಮದಾಗಲಿ.
0 ಪ್ರತಿಕ್ರಿಯೆಗಳು