ಲಲಿತಾ ಸಿದ್ಧಬಸವಯ್ಯ
ಈ ಛಾಯಾಚಿತ್ರವನ್ನು ನೋಡಿ ಲಲಿತಾ ಸಿದ್ಧಬಸವಯ್ಯನವರು ಅವಧಿಗಾಗಿಯೇ ಬರೆದ ಕವನ ಇಲ್ಲಿದೆ.
ದೇಶದ ರೈತರಿಗೆ ಈ ಕವನ ಅರ್ಪಣೆ.
ಕಳ್ಳ ವಾಮನನ ಪಾದವಲ್ಲ
ಇದು ದುಡಿದು ಸವೆದ ಪಾದ
ಅಂಗಾಲು ಮಿಂಚುವುದಿಲ್ಲ
ಎಣಿಸಬಹುದು ನೂರು ಛಿದ್ರ
ಎತ್ತಿಟ್ಟಿದ್ದೇನೆ ಗರ್ವದಲಿ ತಲೆ
ಎತ್ತಿ ನಡೆಯಲು, ಅಮಾಯಕ
ಶಿರವ ಪಾತಾಳಕದುಮಲಲ್ಲ
ಕುಟಿಲಹೆಜ್ಜೆ ಈ ಕಾಲು ಕಲಿತಿಲ್ಲ
ಎರಡೇ ಕಾಲು ಸಾಕು ಕಣೋ
ಆರುಮೊಳದ ಸೀರೆ,ಆರಡಿ ನೆಲ
ಸಂಪಾದನೆಗೆ, ನೀನು ಅವತಾರಿ
ಬೇಕು ಮೂರನೆಯದಿನ್ನೊಂದು
ಮೋಸದ ಲೋಕ ಮೋಜಣಿಗೆ
ಕಂಡವರ ತಲೆ ಬೋಳಿಸುವುದಕೆ
ಜೇನುತುಪ್ಪದುಪದೇಶ ಬಿಸಾಡಿ
ಅನಾಮತ್ತುಸಿರು ಹಿಸುಕುವದಕೆ
ಅರುಗಾಗೊ, ಹೊತಾರೆಯೆದ್ದು
ಮೈಗಳ್ಳರ ನೋಡಿದರೆ ಹುಟ್ಟದು
ಎನಗೆ ದಿನಗೂಳು, ಸೋಗಲಾಡಿ
ಹೊಸಿ ಹೋಗು ಹುಸಿಪುರಾಣ
ತುಂಬಾ ಚೆನ್ನಾಗಿದೆ. ಅಮಾಯಕ ಶಿರವ ಪಾತಾಳಕದುಮಲಲ್ಲ ..ಇದೊಂದು ಸಾಲು ಸಾಕು
ಚೆನ್ನಾಗಿದೆ ಲಲಿತಕ್ಕ