ಗಂಗಾಧರ ಕೊಳಗಿ ನೆನಪಿನ ಬುತ್ತಿ: ಕಾಸರವಳ್ಳಿ ಎಂಬ ಬೆಳಕಿನ ಕಿರಣದ ಜೊತೆ..

  ಗಂಗಾಧರ ಕೊಳಗಿ

ಆಗ ಬಾಲ್ಯದಿಂದ ಯೌವನಕ್ಕೆ ದಾಟಿಕೊಳ್ಳುತ್ತಿರುವ ವಯಸ್ಸು: ಕೃಷಿ, ಅಭ್ಯಾಸ ಮತ್ತು ರಂಗಭೂಮಿ, ಸಾಹಿತ್ಯ ಎನ್ನುವ ನೂರೆಂಟು ತರಲೆಗಳನ್ನ ಹಚ್ಚಿಕೊಂಡು ಓಡಾಡುತ್ತಿದ್ದ ಸಮಯ. ಯಾವುದನ್ನೂ ಸರಿಯಾಗಿ ಮಾಡೋದಿಲ್ಲ, ಎಲ್ಲಾನೂ ಹಿಡ್ಕೊಂಡು ಹೋದ್ರೆ ಯಾವುದನ್ನೂ ದಡ ಹಚ್ಚೋಕೆ ಆಗೋದಿಲ್ಲ ಎಂದು ನನ್ನ ಅಪ್ಪ, ಅಮ್ಮ ನನ್ನ ನಡವಳಿಕೆಗೆ ಬೇಸತ್ತು ಗದರುತ್ತಿದ್ದರು.

ಅವರು ಎಷ್ಟೇ ಗದರಿದರೂ ನಾನೇನು ತಪ್ಪಿನ ಕೆಲಸ ಮಾಡುತ್ತಿಲ್ಲ ಎನ್ನುವ ಒಳ ಸಮಾಧಾನ ಅವರಿಗಿತ್ತು ಎನ್ನುವದು ಮೇಲ್ನೋಟಕ್ಕೇ ತಿಳಿಯುತ್ತಿತ್ತು. ಉಳಿದವರು ನನ್ನನ್ನು ತೀರಾ ಬೇಜವಾಬ್ದಾರಿ ಹುಡುಗ, ಅಪ್ಪ, ಅಮ್ಮನನ್ನ ಸರಿಯಾಗಿ ನೋಡ್ಕೋತಾನೆ ಅನ್ನುವ ಗ್ಯಾರಂಟಿಯಿಲ್ಲ ಎಂದು ಸಮಯ ಸಿಕ್ಕಾಗೆಲ್ಲ ನನ್ನ ಬಗ್ಗೆ ವ್ಯಾಖ್ಯಾನಿಸುತ್ತಿದ್ದರು.

ಓದುವ ಹುಚ್ಚು ಬೇರೆ ಗಂಟು ಬಿದ್ದಿತ್ತಲ್ಲ, ಈ ಎಲ್ಲ ಉಪದ್ವಾಪಗಳ ನಡುವೆ ಒಂದು ಅಪರೂಪದ ಕ್ಷಣದಲ್ಲಿ ಕೆ.ವಿ. ಸುಬ್ಬಣ್ಣನವರ ಪರಿಚಯವಾಗಿತ್ತು. ಕನಿಷ್ಠ ಹದಿನೈದು ದಿನಕ್ಕೆ ಒಮ್ಮೆಯಾದರೂ ಹೆಗ್ಗೋಡಿಗೆ ಹೋಗಿ ‘ನೀನಾಸಂ’ ಕಚೇರಿಯೆದುರು ಆಗಿದ್ದ ಅಡಕೆದಬ್ಬೆ ಹೆಣೆದು ಮಾಡಿದ ಬೆಂಚ್ ಮೇಲೆ ಕುಳಿತು ಸುಬ್ಬಣ್ಣವರ ಬಳಿ ಮಾತನಾಡಿ, ಹಾಸ್ಟೆಲಿನ ಕಾಕಾಲ್ ಅವರ ಕಾಫಿ ಕುಡಿದು, ರಂಗಮಂದಿರದಲ್ಲಿ ನಡೆಯುತ್ತಿದ್ದ ರಂಗ ತರಬೇತಿ ವಿದ್ಯಾರ್ಥಿಗಳ ರಿಹರ್ಸಲ್ ನೋಡಿ ಬಾರದಿದ್ದರೆ ಸಮಾಧಾನವಿರುತ್ತಿರಲಿಲ್ಲ.

ನಾಟಕವಿದ್ದರೆ ಸಂಜೆಯವರೆಗೆ ಇದ್ದು ಅದನ್ನು ನೋಡಿ, ರಾತ್ರಿ ಸಾಗರಕ್ಕೆ ಬಂದು, ಅಲ್ಲಿ ಬೆಳಗಿನ ಜಾವದ ತನಕ ಕಾದು ಬೆಂಗಳೂರಿನಿಂದ ಬರುವ ದಾಂಡೇಲಿ ಬಸ್‍ನಲ್ಲಿ, ಕೆಲವೊಮ್ಮೆ ಟ್ರಕ್ ಸಿಕ್ಕರೆ ಅದರಲ್ಲಿ ಸಿದ್ದಾಪುರಕ್ಕೆ ಬಂದು ಮತ್ತೆ ನಾಲ್ಕು ಮೈಲಿ ನಡೆದು ಮನೆ ಸೇರುತ್ತಿದ್ದೆ.

ನಾನೇನು ನೀನಾಸಂ ವಿದ್ಯಾರ್ಥಿಯಲ್ಲ, ಅದರಲ್ಲಿ ಯಾವುದೇ ವಿಧದಲ್ಲಿ ಭಾಗಿಯಾದವನೂ ಅಲ್ಲ; ನನ್ನ ಸಂಬಂಧವೇನಿದ್ದರೂ ಸುಬ್ಬಣ್ಣನವರ ಜೊತೆ. ಆಗ ಕೆ.ವಿ. ಸುಬ್ಬಣ್ಣ ನೀನಾಸಂ ಹಾಗೂ ಪುಣೆಯ ಫಿಲಂ ಆರ್ಖೈವ್ ಮೂಲಕ ‘ಜನಸ್ಪಂದನ’ ಎನ್ನುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದರು. ಗ್ರಾಮೀಣ ಪ್ರದೇಶದಲ್ಲಿ ದೇಶದ, ವಿದೇಶದ ಸದಭಿರುಚಿಯ ಸಿನೆಮಾಗಳ ಪ್ರದರ್ಶನ ಕೂಡ ಆ ಯೋಜನೆಯಲ್ಲಿತ್ತು.

ಒಮ್ಮೆ “ನಿಮ್ಮೂರ ಸುತ್ತಮುತ್ತ ಕಾರ್ಯಕ್ರಮ ಆಯೋಜನೆ ಮಾಡಲಿಕ್ಕಾಗುತ್ತಾ ನೋಡಿ” ಎಂದಿದ್ದರು. ಅದರಂತೆ ನಮ್ಮ ತಾಲೂಕಿನ ಇಟಗಿ ಮುಂತಾದ ತೀರಾ ಗ್ರಾಮೀಣ ಭಾಗದ ಊರುಗಳಲ್ಲಿ  ಎರಡು ದಿನಗಳ ಸಿನೆಮಾ ಪ್ರದರ್ಶನ ಮಾಡಿದ್ದೆವು. ಆಗಲೇ ನನಗೊಂದು ಉಮೇದು ಬಂತು. ಪಟ್ಟಣದಲ್ಲೇ ಯಾಕೆ ಸಿನೆಮಾ ಪ್ರದರ್ಶನ ಮಾಡಬಾರದು? ಎಂದು. ಆ ಬಗ್ಗೆ ಸುಬ್ಬಣ್ಣನವರ ಬಳಿ ಹೇಳಿದೆ. ‘ಆಯ್ತು ಮಾಡೋಣ, ಮೂರು ದಿನದ್ದು ಇಟ್ಕೊಳ್ಳೋಣ’ ಎಂದು ಅದರ ಬಗ್ಗೆ ಸಿದ್ಧತೆ ನಡೆಸಲು ಹೇಳಿದರು.

ಮುಖ್ಯವಾದ ವೆಚ್ಚಗಳನ್ನು ಸುಬ್ಬಣ್ಣ ಭರಿಸಿದರೂ ಒಂದಿಷ್ಟಾದರೂ ಖರ್ಚುಗಳು ಇರುತ್ತವಲ್ಲ. ನನ್ನ ಬಳಿ ಏನಿಲ್ಲ, ಉಮೇದಿಯ ಹೊರತು. ಆಗ ಸಿದ್ದಾಪುರದಲ್ಲಿ ಜೇಸಿಸ್ ಕ್ಲಬ್ ಎನ್ನುವ ಸಂಘಟನೆ ಕ್ರಿಯಾಶೀಲವಾಗಿತ್ತು. ಆದಾಯ ತೆರಿಗೆ ಇಲಾಖೆ ಹಿರಿಯ ಅಧಿಕಾರಿಯಾಗಿ ನಿವೃತ್ತರಾಗಿರುವ ಎಸ್.ಎಂ. ಹೆಗಡೆ ಬಣಗೆ ಆಗ ನಮ್ಮೂರ ಕಾಲೇಜಿನ ಉಪನ್ಯಾಸಕರಾಗಿದ್ದರು. ಅವರಂತೆ ಕಾಲೇಜಿನ ಲೈಬ್ರರಿಯನ್ ಆಗಿದ್ದ ಹಿರೇಮಠ್, ಎಸ್.ಬಿ.ಎಂ.ನಲ್ಲಿದ್ದ ಕಾಮತ್ ಮುಂತಾದವರು ಜೇಸಿಸ್ ನೇತೃತ್ವವಹಿಸಿದ್ದರು.

ಅದೂ, ಇದೂ ಕಾರ್ಯಕ್ರಮಗಳು ಎಂದು ಅವರ ನಿಕಟ ಸಂಪರ್ಕವೂ ನನಗಿತ್ತು. ಅವರ ಬಳಿ ಪ್ರಸ್ತಾವವಿಟ್ಟೆ. ಅವರೆಲ್ಲ ನನಗಿಂತ ಎಷ್ಟೋ ಹಿರಿಯರು. ಉತ್ಸಾಹ, ತಹತಹ ಬಿಟ್ಟರೆ ಅವರೆದುರು ವಯಸ್ಸು ಸೇರಿದಂತೆ ಎಲ್ಲದರಲ್ಲೂ ನಾನು ಬಚ್ಚಾ; ಆದರೂ ಅವರೆಲ್ಲ ಖುುಷಿಯಿಂದಲೇ ಒಪ್ಪಿಕೊಂಡರು.

ಅಂತೂ ಐದು ದಿನಗಳ ಸಿನೆಮಾ ಉತ್ಸವಕ್ಕೆ ದಿನ ನಿಗದಿಯಾಗೇ ಬಿಟ್ಟಿತು. ಆಗ ಸಿದ್ದಾಪುರದಲ್ಲಿ ನಡೆಯುವ ರಾಜಕೀಯ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮಳೆಗಾಲದ ಯಕ್ಷಗಾನ ಎಲ್ಲವಕ್ಕೂ ಆಶ್ರಯತಾಣವಾಗಿದ್ದು ಸಿ.ಆರ್.ಹಾಲ್ ಕರ್ನಾಟಕ ಸಂಘದ ಉಸ್ತುವಾರಿಯಲ್ಲಿದ್ದ ಸಿ.ಆರ್.ಹಾಲ್ ನಲ್ಲೇ ನಮ್ಮ ಚಲನ ಚಿತ್ರೋತ್ಸವ ಏರ್ಪಾಟಾಯಿತು.

ಅಷ್ಟರ ಮಧ್ಯೆ ಒಮ್ಮೆ ಹೆಗ್ಗೋಡಿಗೆ ಹೋಗಿ ಕೆ.ವಿ. ಸುಬ್ಬಣ್ಣ ನವರ ಬಳಿ ಕಾರ್ಯಕ್ರಮದ ರೂಪುರೇಷೆ ಪಡೆದು ಕಾರ್ಯಕ್ರಮದ ಕರಪತ್ರದ ಮಾದರಿಯನ್ನೂ ತಂದು ಮುದ್ರಣಕ್ಕೆ ಕೊಟ್ಟೆ. ನಂತರ ಸುಬ್ಬಣ್ಣ ಪತ್ರ ಬರೆದು ಮೊದಲ ಮತ್ತು ಎರಡನೇ ದಿನ ಗಿರೀಶ್ ಕಾಸರವಳ್ಳಿ ಹಾಗೂ ಇನ್ನಿತರ ಒಂದೆರಡು ಜನ ಬರುತ್ತಾರೆಂತಲೂ, ಅವರಿಗೆ ವಸತಿ ಮತ್ತು ಊಟೋಪಚಾರದ ವ್ಯವಸ್ಥೆ ಸಮರ್ಪಕವಾಗಿರಬೇಕೆಂತಲೂ ತಿಳಿಸಿದ್ದರು.

ನನಗೆ ಆಗಲೇ ಒಂಥರಾ ಉತ್ಸಾಹ ಪುಟಿದೇಳತೊಡಗಿತ್ತು. ‘ಘಟಶ್ರಾದ್ಧ’ ಸಿನೆಮಾಕ್ಕೆ ಸ್ವರ್ಣಕಮಲ ಪ್ರಶಸ್ತಿ ಪಡೆದ ಹೆಸರಾಂತ ಸಿನೆಮಾ ನಿರ್ದೇಶಕರು ನಮ್ಮೂರಿಗೆ ಬರುತ್ತಿದ್ದಾರೆ ಎಂದರೆ ಹುಡುಗಾಟಿಕೆಯ ಮಾತೇ?

ಕರಪತ್ರ ಮುದ್ರಣ, ಅದರ ವಿತರಣೆ ಎಲ್ಲವನ್ನ ನಾವೆಲ್ಲ ಸೇರಿ ಮಾಡುತ್ತಿದ್ದರೂ ಅವರ್ಯಾರಿಗೂ ಬಾಧಿಸದ ತಲೆನೋವೊಂದು ನನಗಿತ್ತು. ಕಾಸರವಳ್ಳಿ ಬರ್ತಿದಾರೆ, ಸುಬ್ಬಣ್ಣ ಅವರಿಗೆ ಸಮರ್ಪಕ ವ್ಯವಸ್ಥೆ ಆಗಬೇಕೆಂದು ಹೇಳಿದ್ದಾರೆ, ಅದೂ ಅಲ್ಲದೇ ಅಂಥಾ ಪ್ರಸಿದ್ಧರು ನಮ್ಮೂರಿಗೆ ಬಂದಾಗ ಅವರಿಗೆ ತೊಂದರೆಯಾಗಬಾರದಲ್ಲ ಎನ್ನುವ ಒಳತುಡಿತ ಎಲ್ಲ ಸೇರಿ ಏನು ಮಾಡೋದು ಎಂದು ಜೇಸಿಸ್‍ನವರ ಎದುರು ವಿಷಯ ಇಟ್ಟೆ.

‘ಪಿ. ಡಬ್ಲು.ಡಿ. ಐಬಿಯಲ್ಲಿ ರೂಮ್ ಮಾಡಿಸೋಣ, ಏನು ಸಮಸ್ಯೆ ಇಲ್ಲ’ ಎಂದು ಒಂದೇ ಕ್ಷಣದಲ್ಲಿ ಬಗೆಹರಿಸಿದರೂ ನನಗೆ ಅನುಮಾನ. ರೂಮ್ ಸಿಗದಿದ್ದರೆ? ನಾವೆಲ್ಲ ಹೈಸ್ಕೂಲ್ ದಾಟುವವರೆಗೂ ಹತ್ತಿರ ಹೋಗದಿದ್ದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರ ಸಿದ್ದಾಪುರದಲ್ಲಿತ್ತು. ಇತ್ತೀಚೆಗೆ ನಾನು ನೋಡಿದ ಪ್ರವಾಸಿ ಮಂದಿರಗಳಲ್ಲಿ ಉಳಿದೆಲ್ಲವಕ್ಕಿಂತ ತೀರ್ಥಹಳ್ಳಿಯ ಪ್ರವಾಸಿ ಮಂದಿರ ನಮ್ಮೂರ ಐಬಿಗೆ ಹೋಲಿಸಿದರೆ ಪರವಾಯಿಲ್ಲ. ಏಕದಂ ಎತ್ತರವಾಗಿರದ, ನಿಧಾನ ಎತ್ತರದ ಗುಡ್ಡದ ಮೇಲಿರುವ ಬಂಗ್ಲೆ ಗುಡ್ಡ ಎಂದೇ ಕರೆಸಿಕೊಳ್ಳುವ ನಮ್ಮೂರ ಪ್ರವಾಸಿ ಮಂದಿರ ಉದಯಿಸುವ ಮತ್ತು ಅಸ್ತಮಿಸುವ ಸೂರ್ಯೋದಯವನ್ನ, ಅರ್ಧದಷ್ಟು ಪಟ್ಟಣವನ್ನ, ದೂರ ದಿಗಂತದವರೆಗೂ ಗುಡ್ಡ, ಬೆಟ್ಟ, ಹಸುರಿನ ಸಾಲುಗಳನ್ನ ನೋಡಬಹುದಾದ ವಿನ್ಯಾಸದಲ್ಲಿದೆ. ಈಗ ಮತ್ತೊಂದು ವಿಶಾಲ ಕಟ್ಟಡವಾಗಿದ್ದರೂ ಮೊದಲಿದ್ದ ಕಟ್ಟಡ ಇನ್ನೂ ಮೊದಲಿನಂತೆ ಇದೆ.

ನನಗೆ ತಲೆಬಿಸಿ ಹುಟ್ಟಿಸಿದ್ದು ಆಗ ಐಬಿಯಲ್ಲಿದ್ದದ್ದು ಮೂರೇ ಕೊಠಡಿಗಳು, ಒಂದರಲ್ಲಿ ಆಗಿದ್ದ ಪೊಲೀಸ್ ಇನಸ್ಪೆಕ್ಟರ್ ಉಳಿದಿದ್ದರು. ಇನ್ನೆರಡು ಕೊಠಡಿಗಳನ್ನ ಯಾವುದಾದರೂ ರಾಜಕಾರಣಿ ಯಾವುದೇ ಕ್ಷಣದಲ್ಲೂ ವಿರಾಮ ಪಡೆಯಲು ಬಳಸಿಕೊಳ್ಳುವ ಸಾಧ್ಯತೆ ಇತ್ತು.

ಎತ್ತರದ ಗುಡ್ಡದ ಮೇಲೆ, ಸುತ್ತೆಲ್ಲ ಗಾರ್ಡನ್ ಇರುವ ಆಕರ್ಷಕವಾದ ಬಂಗ್ಲೆ ಗುಡ್ಡದ ಪ್ರವಾಸಿ ಮಂದಿರವನ್ನ ಆವರೆಗೆ ದೂರದಿಂದಲೇ ನೋಡಿದ್ದೇವೆ ಹೊರತು ಅದರ ಹತ್ತಿರ ಹೋಗಿರಲಿಲ್ಲ! ಆಗ ಐಬಿಗಳೆಂದರೆ ದೊಡ್ಡ ಮನುಷ್ಯರಿಗೆ ಮಾತ್ರ ಎನ್ನುವ ಅಲಿಖಿತ ಅನಿಸಿಕೆ ಎಲ್ಲರಲ್ಲೂ ಇತ್ತು. ಅದೊಂದು ಮಜಾ ಮಾಡುವ ತಾಣ ಎನ್ನುವದನ್ನ ನಮ್ಮ ಹಿರಿಯರು ಹೇಳದಿದ್ದರೂ ನಮಗೆ ಅದು ತಿಳಿಯುತ್ತಿತ್ತು. ಬಂಗ್ಲೆ ಗುಡ್ಡದ ಹತ್ತಿರ ಸುಳಿದ ಚಿಕ್ಕವರಿರಲಿ, ದೊಡ್ಡವರಿಗೂ ಸಣ್ಣ ಕಳಂಕ ತಟ್ಟಿಯೇ ತಟ್ಟುತ್ತಿತ್ತು. ಅಲ್ಲಿ ಹೋದವರಿಗೆ ‘ಅವಾ ಹಾಳಾದೋಗ್ನಾ’ ಎನ್ನುವ ಅರ್ಥಗರ್ಭಿತ ಮಾತುಗಳನ್ನ ಆಗ ಕೇಳಿದ ನೆನಪು ಈಗಲೂ ಇದೆ. ಒಂದು ರೀತಿಯಲ್ಲಿ ಸರಕಾರಿ ಪ್ರವಾಸಿ ಮಂದಿರಗಳು ನೈತಿಕ ನೆಲೆಯಲ್ಲಿ ನಿಷೇಧಿತ ಪ್ರದೇಶಗಳಾಗಿದ್ದವು ಆಗ. ಶ್ರೀಮಂತರು ಮಾತ್ರ ಹತ್ತಿರ ಹೋಗಬಹುದಾಗಿದ್ದ ಸ್ಥಳ ಅದಾಗಿತ್ತು.

ಆದರೆ ಈ ಹೊತ್ತಿಗೆ ಸಾಕಷ್ಟು ಬದಲಾವಣೆಗಳಾಗಿದ್ದವು. ಬಂಗ್ಲೆಯ ಬಗ್ಗೆ ಮೊದಲಿದ್ದ ದೃಷ್ಟಿಕೋನ ಬದಲಾಗಿತ್ತು. ಅಲ್ಲಿ ಜನ ಅಂದುಕೊಂಡಂತೆ ಕಾನೂನು ಬಾಹಿರವಾದದ್ದೆಲ್ಲ ನಡೆಯೋದಿಲ್ಲ ಅನ್ನೋದು ಮನದಟ್ಟಾಗಿತ್ತು. ಜೇಸಿಸ್‍ನಲ್ಲಿ ಲೋಕೋಪಯೋಗಿ ಇಲಾಖೆಯವರೂ ಇದ್ದ ಕಾರಣ ಕೊಠಡಿಯೂ ಸಿಕ್ಕಿತು. ಸುಬ್ಬಣ್ಣ ಪತ್ರ ಬರೆದು ‘ಕಾರ್ಯಕ್ರಮದ ದಿನ ಬೆಳಗ್ಗೆ ಸೀದಾ ಬೆಂಗ್ಳೂರಿಂದ ಗಿರೀಶ ಬರ್ತಾರೆ’ ಎಂದು ತಿಳಿಸಿದ್ದರು. ಆಗೆಲ್ಲ ಫೋನ್ ಎಲ್ಲಿ? ಮೊಬೈಲ್ ಎಲ್ಲಿ? ಹತ್ತು ನಿಮಿಷ ಮುಂಚೆ ಹೇಳೋಕೆ. ಮುಂದಿನ ಕಾರ್ಯಕ್ರಮದ ಕುರಿತು ಎರಡು ದಿನದ ಮೊದಲೇ ತಲುಪುವಂತೆ ಪತ್ರ ಬರೆಯಬೇಕಿದ್ದ ದಿನಗಳು.

ಬೆಂಗಳೂರಿನಿಂದ ನಮ್ಮೂರಿಗೆ ಸಂಪರ್ಕ ಕಲ್ಪಿಸುತ್ತಿದ್ದ ಏಕೈಕ ಬಸ್ ಆದ ಬೆಂಗಳೂರು-ದಾಂಡೇಲಿಯಲ್ಲಿ ಗಿರೀಶ್ ಬಂದಿಳಿದರು.

ನಾನು ಬೆಳಗ್ಗೆ ಬೇಗ ಎದ್ದು ಸೈಕಲ್ ತುಳಿದುಕೊಂಡು ಬಂದು ನಮ್ಮೂರಿನ ಸಣ್ಣ ಬಸ್‍ ನಿಲ್ದಾಣದಲ್ಲಿ ಕಾದು ನಿಂತಿದ್ದೆ. ರಾತ್ರಿ ಪ್ರಯಾಣದ ನಿದ್ದೆಗಣ್ಣು, ಸುಸ್ತುಗಳಿಲ್ಲದ ತೇಜೋವಂತ ಮುಖದ ಮನುಷ್ಯಾಕೃತಿಯೊಂದು ಆ ಬಸ್ಸಿನಿಂದ ಇಳಿಯಿತು. ಪತ್ರಿಕೆಗಳಲ್ಲಿ ಹಲವು ಬಾರಿ ಕಂಡಿದ್ದರೂ ಮೊದಲ ಬಾರಿಗೆ ಎದುರಲ್ಲಿ ಕಂಡದ್ದು ಗಿರೀಶ್ ಕಾಸರವಳ್ಳಿ!

ಗುಂಗುರುಗುಂಗುರಾಗಿ ಹರಡಿಕೊಂಡ ತಲೆಗೂದಲು, ಸುಂದರವಾದ ಮೀಸೆ, ತಾರುಣ್ಯದ ಶರೀರ… ಎಲ್ಲಕ್ಕಿಂತ ಮಿಗಿಲಾಗಿ ಹೊಳಪಿನ ಜೊತೆಗೆ ತನ್ನೊಳಗಿನ ಪ್ರತಿಭೆಯನ್ನ ಸೂಸುತ್ತಿದ್ದ ಕಣ್ಣುಗಳು. ನಿಜಕ್ಕೂ ನಾನು ಪರವಶನಾಗಿಬಿಟ್ಟಿದ್ದೆ. ಅತ್ತಿತ್ತ ನೋಡುತ್ತಿದ್ದ ಅವರನ್ನ ಪರಿಚಯಿಸಿಕೊಂಡ ನಂತರ ಸಮಾಧಾನವಾಗಿರಬೇಕು. ಅವರ ಜೊತೆ ಇನ್ನೊಬ್ಬರಿದ್ದರು. ಅವರನ್ನ ನನಗೆ ಪರಿಚಯಿಸುತ್ತ ‘ಇವ್ರು ಎ.ಎನ್.ಮುಕುಂದ್ ಅಂತಾ, ಹೆಸರಾಂತ ಸ್ಟಿಲ್ ಫೋಟೊಗ್ರಾಫರ್’ ಎಂದರು. ಮುಕುಂದ ಅವರ ಹಲವು ಛಾಯಾಚಿತ್ರಗಳನ್ನ ‘ಸುಧಾ’ ಮುಂತಾದ ಪತ್ರಿಕೆಗಳಲ್ಲಿ ನೋಡಿದ್ದರಿಂದ ಹೆಸರು ನೆನಪಿಗೆ ಬಂತು. ಅವರ ಲಗೇಜ್‍ ಸೈಕಲ್ ಮೇಲಿಟ್ಟುಕೊಂಡು ಸಮೀಪದಲ್ಲೇ ಇರುವ ಬಂಗ್ಲೆಗೆ ಕರೆದುಕೊಂಡು ಹೋದೆ.

ಸಿ.ಆರ್.ಹಾಲ್‍ನಲ್ಲಿ ಹೆಗ್ಗೋಡಿನಿಂದ ದೊಡ್ಡದಾದ ಪ್ರೊಜೆಕ್ಟರ್, ಸಿನೆಮಾ ರೋಲ್ ಇರುವ ಅಗಲವಾದ ತಟ್ಟೆಗಳು ಬಂದಿಳಿದಿದ್ದವು; ಅದರ ಜೊತೆ ಅವನ್ನೆಲ್ಲ ನಿರ್ವಹಿಸುವ ಒಂದಿಬ್ಬರು ಆಪರೇಟರ್‍ಗಳು. ನಾನು ಅವರಿಗೆ ಅಗತ್ಯವಾದುದನ್ನ ಒದಗಿಸುವದರ ಜೊತೆಗೆ ಬಂಗ್ಲೆಯಲ್ಲಿದ್ದವರನ್ನು ನೋಡಿಕೊಳ್ಳಬೇಕಾಗಿತ್ತು. ಸೈಕಲ್‍ನಲ್ಲಿ ಅರ್ಧರ್ಧ ಗಂಟೆಗೆ ಬಂದು ವಿಚಾರಿಸುತ್ತಿದ್ದೆ. ಯಾಕೆಂದರೆ ಸುಬ್ಬಣ್ಣ ಹೇಳಿದ್ದರಲ್ಲ, ಅದಲ್ಲದೇ ಅಂಥ ಪ್ರಸಿದ್ಧರು ನಮ್ಮೂರಿಗೆ ಬಂದಾಗ ಅವರ ಯೋಗಕ್ಷೇಮ ಸರಿಯಾಗಿ ನೋಡದಿದ್ದರೆ ನನ್ನೂರಿಗೆ ಕೆಟ್ಟ ಹೆಸರಲ್ಲವೇ?

ನಾನು ಅಂಟಿಕೊಂಡೇ ಇರುತ್ತಿದ್ದುದು ಗಿರೀಶರಿಗೆ ಇರಿಸುಮುರುಸಾಗಿರಬೇಕು. ‘ನೀವು ಪೋಗ್ರಾಂ ತಯ್ಯಾರಿ ಬಗ್ಗೆ ನೋಡಿ, ನಾವು ಹೇಗೂ ಮಾಡ್ಕೋತೇವೆ. ಮಧ್ಯಾಹ್ನ ಒಮ್ಮೆ ಸಿ.ಆರ್.ಹಾಲ್ ಹತ್ರ ಬರ್ತೆವೆ’ ಎಂದರು. ‘ಸರಿ’ ಎಂದು ನಾನು ಬಂದೆ. ಮಧ್ಯಾಹ್ನ ಅವರಿಬ್ಬರೂ ಹಾಲ್ ಹತ್ರ ನಡೆದುಕೊಂಡೇ ಬಂದರು. ನನಗೆ ಅದಾಗಿ ಕೆಲವು ವರ್ಷಗಳ ನಂತರ ಅರಿವಿಗೆ ಬಂತು. ಎಲ್ಲರಿಗೂ ಏಕಾಂತ, ಖಾಸಗಿತನ ಇದ್ದೇ ಇರುತ್ತದೆ, ಅದರಲ್ಲಂತೂ ಸೆಲಿಬ್ರಿಟಿಗಳಿಗೆ ಅದು ಸಿಗೋದೇ ಕಷ್ಟ. ಕಾಸರವಳ್ಳಿಯವರಿಗೆ ನನ್ನ ಕಾಳಜಿಯೇ ಮುಜುಗುರ ತಂದಿರಬೇಕು ಅನ್ನಿಸಿತ್ತು.

ಸಂಜೆ ಸಿನೆಮಾ ಶೋ; ಹಾಲ್‍ನ ಹದಿನೈದಿಪ್ಪತ್ತು ಕಿಟಕಿಗಳಿಗೆ ಎಲ್ಲಿಂದ ಕಪ್ಪುಬಟ್ಟೆ ಕಟ್ಟೋದು? ಹಾಗಾಗಿ ಕತ್ತಲೆಯಾದ ಮೇಲೆ ಶುರುಮಾಡಬೇಕಲ್ಲ. ಮೊದಲನೇ ದಿನ ಘಟಶ್ರಾದ್ಧ, ಬೈಸಿಕಲ್ ಥೀವ್ಸ್, ಅದಾದ ನಂತರ ಮತ್ತೊಂದು ಸಣ್ಣ ಸಿನೆಮಾ. ನಮ್ಮ ನಿರೀಕ್ಷೆಗೂ ಮೀರಿ ಪ್ರೇಕ್ಷಕರು ತುಂಬಿಕೊಂಡರು. ಹಾಲ್‍ನಲ್ಲಿ ಸುಮಾರು 300 ಕಬ್ಬಿಣದ ಕುರ್ಚಿಗಳಿದ್ದವು. ಅವೆಲ್ಲ ಭರ್ತಿಯಾಗಿ ನಿಂತುಕೊಂಡೇ ನೋಡುವ ಪ್ರೇಕ್ಷಕರೇ ಜಾಸ್ತಿ. ಅದರಲ್ಲೂ ಮಹಿಳಾ ಪ್ರೇಕ್ಷಕರ ಸಂಖ್ಯೆಯೂ ಸಾಕಷ್ಟಿತ್ತು (ಆಗ ಟಿ.ವಿ ಮತ್ತು ಧಾರಾವಾಹಿಗಳು ಇರಲಿಲ್ಲವಲ್ಲ!).

ಗಿರೀಶ್ ಚಿತ್ರೋತ್ಸವದ ಆರಂಭದಲ್ಲಿ ಇಡೀಯಾಗಿ ಯೋಜನೆಯ ಉದ್ದೇಶ, ಸಿನೆಮಾದ ಗುಣ, ಸಮಾಜದಲ್ಲಿ ಅದರ ಪ್ರಭಾವ, ಅದು ನಿರ್ವಹಿಸುವ ಅಲೌಕಿಕ ಪರಿಣಾಮದ ಬಗ್ಗೆ ಅದ್ಭುತವಾಗಿ ಮಾತನಾಡಿದರು (ಅವರ ಮಾತುಗಳ ಪ್ರೇರಣೆಯಲ್ಲೇ ನಂತರ ಜಪಾನಿನ ‘ರಶೋಮನ್’ ಸಿನೆಮಾ ಚಿತ್ರಕಥೆಯ ಕನ್ನಡ ರೂಪಾಂತರವನ್ನ, ಅದೊಂದು ದೊಡ್ಡ ಕಾದಂಬರಿ ಥರ ಇದೆ. ಓದಿದೆ).

ಶೋ ಮುಗಿದ ನಂತರ ಎಲ್ಲ ನಿರ್ವಹಣೆ ಮುಗಿಸಿ (ರಾತ್ರಿ ಊಟವನ್ನ ಬಂಗ್ಲೆಗೆ ತಂದುಕೊಡಲು ಮೇಟಿಗೆ ಹೇಳಿದ್ದೆ) ಗಿರೀಶ್-ಮುಕುಂದರನ್ನ ಮಾತನಾಡಿಸಿ ಮನೆಗೆ ಸೈಕಲ್ ಹೊಡೆದೆ. ಮೊದಲ ದಿನದ ಜಂಜಡವಿಲ್ಲದೇ ಆರಾಮಾಗಿ ಬೆಳಗ್ಗೆ ಬಂಗ್ಲೆಗೆ ಬಂದೆ. ಗಿರೀಶ್-ಮುಕುಂದ್ ಆಗಲೇ ಅವರೇ ಹೋಗಿ ಇಷ್ಟಬಂದ ಹೊಟೇಲಿನಲ್ಲಿ ಉಪಾಹಾರ ಮುಗಿಸಿದ್ದರು. ಅವರೆಷ್ಟು ಸೂಕ್ಷ್ಮ ಅನ್ನೋದು ಆಗ ಸ್ವಲ್ಪ ನಜರಿಗೆ ಬಂತು. ‘ನಿಮ್ಮ ತಹಸೀಲದಾರ ಕಚೇರಿ ನೋಡ್ಬೇಕಲ್ರೀ’ ಎಂದರು. ‘ಆಯ್ತು ಹೋಗೊಣ’ ಎಂದು ಅವರನ್ನ ಅಲ್ಲಿಗೆ ಕರಕೊಂಡು ಹೋದೆ.

ಈಗ ಆ ಪುರಾತನ ಕಟ್ಟಡ ಇಲ್ಲ. ಅಲ್ಲಿ ಬೃಹತ್ತಾದ, ಆಧುನಿಕವಾದ, ತನ್ನ ಸ್ವರೂಪದಿಂದಲೇ ಜನರನ್ನು ದೀನರನ್ನಾಗಿಸುವ ಮಿನಿ ವಿಧಾನಸೌಧ ಎನ್ನುವ ಕಟ್ಟಡ ತಲೆಯೆತ್ತಿದೆ. ಮೊದಲಿನದು ಹಾಗಿರಲಿಲ್ಲ. ಬ್ರಿಟಿಷರು ಕಟ್ಟಿದ ಕಟ್ಟಡ. ಅವರದ್ದೇ ವಾಸ್ತುವಿನ್ಯಾಸದ, ಆ ಕಾಲದ ಜನರ ಅಂತಃಸತ್ವವನ್ನ ಉಡುಗಿಸುವಂತಿದ್ದ ಕಟ್ಟಡ (ಈ ಸರಕಾರಿ ಕಟ್ಟಡಗಳ ಬಗ್ಗೆ ನನ್ನದು ಬಹುದೊಡ್ಡ ತಕರಾರಿದೆ, ವಿಧಾನಸೌಧದಿಂದ ಹಿಡಿದು ತಹಸೀಲದಾರ ಕಚೇರಿಯ ಕಟ್ಟಡಗಳನ್ನ ಗಮನಿಸಿ. ಯಾವುದೂ ಜನಪರ, ಜನಸ್ನೇಹಿಯಾಗಿ ಕಾಣುವದೇ ಇಲ್ಲ. ಅಧಿಕಾರವನ್ನ, ಆ ಶಕ್ತಿಯನ್ನ ವಿಜೃಂಭಿಸುವ ವಿನ್ಯಾಸ, ಶೈಲಿಗಳು ಈ ಕಟ್ಟಡಗಳದ್ದು. ನಮ್ಮನ್ನ ಆಳಿಹೋದ, ಈಗ ಆಳುತ್ತಿರುವ ಅಧಿಕಾರಸ್ಥರು ನಿರ್ಮಿಸಿದ ಕಟ್ಟಡಗಳ ಬಗ್ಗೆ ವಿಶೇಷವಾಗಿ ಲೇಖನ ಬರೆದದ್ದನ್ನ ಓದುವಾಗ ಸಿಟ್ಟೇ ಬರುತ್ತದೆ).

ಅವತ್ತು ಗಿರೀಶ್ ಇಡೀ ಕಟ್ಟಡವನ್ನು ಅಮೂಲಾಗ್ರವಾಗಿ ನೋಡಿದರು. ಮುಕುಂದ್ ತಮ್ಮ ಕ್ಯಾಮರಾದಲ್ಲಿ ಆ ಕಟ್ಟಡವನ್ನ ಬೇರೆ ಬೇರೆ ಕೋನಗಳಲ್ಲಿ ಕ್ಲಿಕ್ ಮಾಡುತ್ತಿದ್ದರು. ಒಂದೆರಡು ತಾಸಿನ ನಂತರ ವಾಪಸ್ಸಾದೆವು. ನಂತರ ನನಗೆ ಗೊತ್ತಾಗಿದ್ದು; ಗಿರೀಶ್ ಕಾಸರವಳ್ಳಿ ಆಗ ತೇಜಸ್ವಿಯವರ ‘ತಬರನ ಕಥೆ’ಯನ್ನ ಸಿನೆಮಾ ಮಾಡಲು ಕೈಗೆತ್ತಿಕೊಂಡಿದ್ದರು. ಮತ್ತು ಮುಕುಂದ್ ಜೊತೆಗೆ ಲೊಕೇಶನ್ ನೋಡ್ತಾ ಇದ್ರು ಅಂತಾ.

ಅವತ್ತು ಸಂಜೆ ‘ಸಂಸ್ಕಾರ’ ಮತ್ತು ಅಕಿರಾ ಕುರೊಸುವಾನ ‘ರಶೋಮನ್’ ಸಿನೆಮಾಗಳ ಪ್ರದರ್ಶನ. ಕಾರ್ನಾಡರ ‘ಒಂದಾನೊಂದು ಕಾಲದಲ್ಲಿ’ ಸಿನೆಮಾಕ್ಕೆ ಪ್ರೇರಣೆ ಕೊಟ್ಟದ್ದು ಎಂದು ಪಂಡಿತಲೋಕ ಹೇಳುವ ರಶೋಮನ್ ಮತ್ತು ಕಾರ್ನಾಡ್ ನಟಿಸಿದ (ಇಬ್ಬರೂ ಗಿರೀಶ್ ಆಗಿದ್ದಕ್ಕೆ ಇಷ್ಟವಿಲ್ಲದಿದ್ದರೂ ಅವರ ಸರ್‍ನೇಮ್ ಬಳಸಬೇಕಿದೆ) ಸಂಸ್ಕಾರದ ಪ್ರದರ್ಶನ ಒಂದೇ ದಿನ. ಅವತ್ತು ಕೆಲಹೊತ್ತು ಇದ್ದ ಕಾಸರವಳ್ಳಿ ನಮ್ಮೂರಿಂದ ಬೆಂಗಳೂರು ತಲುಪುವ ಏಕೈಕ ಬಸ್‍ನಲ್ಲಿ ಹೊರಟು ಹೋದರು. ನನಗೆ ಅವರನ್ನ ಬೀಳ್ಕೊಡಲು ಜನ ಬಿಡಬೇಕಲ್ಲ; ಅವರನ್ನು ಸುತ್ತುವರಿದ ಅಭಿಮಾನಿಗಳ ಮಧ್ಯೆ ನಾನು ಅಸಹಾಯಕನಾದೆ.

ಮೂರನೇಯ ದಿನ ಸತ್ಯಜೀತ್ ರೇ ಅವರ ‘ಪಥೇರ್ ಪಾಂಚಾಲಿ’ ಜಗತ್ಪಸಿದ್ಧ ಸಿನೆಮಾ. ನಾನು ಕೇಳಿದ್ದೇ ಹೊರತು ನೋಡಿರಲಿಲ್ಲ. ಆದರೆ ಸತ್ಯಜಿತ್ ರೇ ಬಗ್ಗೆ ಒಂದಿಷ್ಟು ಕೇಳಿದ್ದೆ. ಅವರ ಒಂದು ಜೋಕ್ ಓದಿದ್ದು ಇನ್ನೂ ನೆನಪಿದೆ. ಪತ್ರಕರ್ತರು ಯಾರೋ ಅವರ ಸಿಗರೇಟ್ ಸೇದುವ ಹವ್ಯಾಸದ ಬಗ್ಗೆ ಕೇಳಿದ ಪ್ರಶ್ನೆಗೆ ಅವರ ಉತ್ತರ; ‘ನನಗೆ ಸಿಗರೇಟ್ ದುಷ್ಪರಿಣಾಮ ಮಾಡುತ್ತೆ ಎನ್ನುವುದು ಗೊತ್ತು. ಅದನ್ನ ಅಸಂಖ್ಯಾತ ಬಾರಿ ಬಿಟ್ಟಿದ್ದೇನೆ’ ಎಂದದ್ದು ಎಂಥಾ ಮಾರ್ಮಿಕವಾದ ಮಾತು.

ಅವತ್ತು ಏನೇ ಆಗಲಿ ಎಂದು ಹಠಹಿಡಿದು ಮುಂದುಗಡೆಯೇ ಕೂತು ‘ಪಥೇರ್ ಪಾಂಚಾಲಿ’ ನೋಡಿದೆ. ನೋಡ ನೋಡುತ್ತಿದ್ದಂತೇ ಅಳು ಬಂದು ಬಿಟ್ಟಿತ್ತು. ಸುಮ್ಮನೆ ಆ ಕತ್ತಲೆ ಮೂಲೆಯಲ್ಲಿ ಕುಸುಕುಸು ಅತ್ತುಬಿಟ್ಟೆ. ಸಂಘಟಕರಾದವರಿಗೆ ಒಂದಿಷ್ಟು ಜವಾಬ್ದಾರಿ ಇರುತ್ತವಲ್ಲ. ಮಧ್ಯದಲ್ಲಿ ಬರುವ ವಿರಾಮದಲ್ಲಿ ಸುತ್ತಲಿನ ಪರಿಸ್ಥಿತಿ ಹೇಗಿದೆ ಎಂದು ನೋಡಲು ಹೋದೆ. ಕುರ್ಚಿ ಸಾಲಿನ ಹಿಂದೆ ನಿಂತ ಜನಸಮೂಹದ ಮಧ್ಯೆ ಒಂದು ಕಪ್ಪನೆಯ ಲಾಂಗ್‍ಕೋಟ್ ತೊಟ್ಟ ವ್ಯಕ್ತಿಯ ಹಿಂಭಾಗ ಕಂಡಿತು! ಯಾರೋ ಕರಿಗಂಬಳಿ ಹಾಕಿಕೊಂಡು ಬಂದಂತಿತ್ತು. ನಿಜಕ್ಕೂ ಬೆಚ್ಚಿಬಿದ್ದೆ. ಸೀದಾ ಹೋಗಿ ನೋಡಿದರೆ ಸುಬ್ಬಣ್ಣ! ಅಚ್ಚರಿಯಿಂದ ಅವರನ್ನ ಮಾತನಾಡಿಸಿದರೆ ‘ಸುಮ್ಮನಿರಿ, ಗಟ್ಟಿ ಮಾತನಾಡಬೇಡಿ, ನಾನು ಇನ್ನರ್ಧ ಗಂಟೆ ಇದ್ದು ದಾಂಡೇಲಿ ಬಸ್ಸಿಗೆ ಹೋಗ್ತೀನಿ. ಒಳ್ಳೆದಾಗಿ ಮಾಡೀದೀರಾ, ಪ್ರೇಕ್ಷಕರು ಚೆನ್ನಾಗಿದಾರೆ. ನಿಮ್ಮ ಕೆಲ್ಸ ನೋಡಿ’ ಅಂದರು.

ಆ ಲಾಂಗ್ ಕೋಟ್ ಆಗ ಇಂಗ್ಲೆಂಡಿನಲ್ಲಿ ಸ್ಟಡಿ ಮಾಡುತ್ತಿದ್ದ ಅವರ ಮಗ ಕೆ.ವಿ.ಅಕ್ಷರ ಅಪ್ಪನಿಗೆ ಕೊಟ್ಟದ್ದು ಎಂದು ಸುಬ್ಬಣ್ಣನೇ ನಂತರ ಹೇಳಿದ್ದರು. ಸುಬ್ಬಣ್ಣ ಎಷ್ಟು ಪ್ರೀತಿ, ಹೆಮ್ಮೆ, ಭಾವುಕತೆಯಿಂದ ಆ ಕೋಟಿನ ಬಗ್ಗೆ ಹೇಳುತ್ತಿದ್ದರು. ಅಕ್ಷರ ತಂದುಕೊಟ್ಟ ನಂತರ ಆ ಕೋಟಿಲ್ಲದೇ ಸುಬ್ಬಣ್ಣನವರನ್ನ ನಾನು ನೋಡಲೇ ಇಲ್ಲ.

ನಮ್ಮ ಸಿನೆಮಾ ಉತ್ಸವ ಅದ್ಭುತವಾಗೇ ಆಯಿತು. ಅಷ್ಟರ ನಂತರ ನನ್ನ ಬದುಕು ದಿನದಿಂದ ದಿನಕ್ಕೆ ಚಿತ್ರ ವಿಚಿತ್ರವಾದ ತಿರುವುಗಳನ್ನ ಪಡೆದುಕೊಳ್ಳುತ್ತ ಹೋಯಿತು. ಈ ನಡುವೆ ಒಂದಿಷ್ಟು ದಿನ ಬೆಂಗಳೂರಿನಲ್ಲಿ ಪತ್ರಿಕೋದ್ಯಮದ ಕೆಲಸ ಮಾಡುವ ವಿಫಲ ಪ್ರಯತ್ನ ಮಾಡಿದೆ. ಆ ನಡುವಿನ ನನ್ನ ಭಗ್ನ ಪ್ರೇಮ ಪ್ರಸಂಗ ಅತಿ ಭಾವುಕತೆಯಿಂದಾಗಿ ಕುಬ್ಜನನ್ನಾಗಿಸಿತು. ಮತ್ತೆ ಊರಿಗೆ ಬಂದೆ.

ಹಾಗೇ ಅದೆಷ್ಟೋ ದಿನಗಳ ನಂತರ ಫಿಲಂ ಛೇಂಬರ್ ಆಯೋಜಿಸಿದ ಸಾಹಿತ್ಯ ಕಮ್ಮಟಕ್ಕೆ ನನ್ನನ್ನ ಆಯ್ಕೆ ಮಾಡಿರುವ ಪತ್ರ ಬಂತು. ಅಷ್ಟರಲ್ಲಾಗಲೇ ನನ್ನ ಬದುಕನ್ನ ರೂಪಿಸಿದ, ಈಗಲೂ ನನಗೆ ಮಾದರಿಯಾಗಿರುವ ಪ್ರೀತಿಯ ಅಪ್ಪ ತೀರಿ ಹೋಗಿದ್ದ. ಅಮ್ಮ ಒಬ್ಬಳೇ ಮನೆಯಲ್ಲಿ. ಆದರೂ ಆ ಕಮ್ಮಟಕ್ಕೆ ಹೋದೆ; ವಿಧಾನಸೌಧದ ಎದುರಿಗಿರುವ ಸರಕಾರಿ ನೌಕರರ ಭವನದ ಸಭಾ ಭವನದಲ್ಲಿ.

ಮೊದಲ ದಿನ ಒಳಹೊಕ್ಕಿದ್ದೇ ಆಘಾತ. ಅಲ್ಲಿ ಶಿಭಿರಾರ್ಥಿಗಳು ಯಾರು? ಅಬ್ದುಲ್ ರೆಹಮಾನ್ ಪಾಷಾ, ಜಯಂತ್ ಕಾಯ್ಕಿಣಿ, ಪ್ರತಿಭಾ ನಂದಕುಮಾರ್, ರೇಖಾರಾಣಿ, ಹೂಲಿ ಶೇಖರ್! ಮುಂತಾದ ಘಟಾನುಘಟಿಗಳು. ನನಗೆ ಬೆವರೋ ಬೆವರು. ಅಲ್ಲಿದ್ದವರಲ್ಲಿ ನಾನೇ ವಯಸ್ಸಿನಲ್ಲಿ ಸಣ್ಣವ. ಅದಕ್ಕಿಂತ ಸಂತೋಷದ ಸಂಗತಿಯೆಂದರೆ ಆ ಕಮ್ಮಟದ ನಿರ್ದೇಶಕರು ಗಿರೀಶ್ ಕಾಸರವಳ್ಳಿ.

ತುಂಬಾ ವರ್ಷಗಳ ನಂತರ ಮತ್ತೊಮ್ಮೆ ಅವರನ್ನು ಮುಖತಃ ನೋಡಿದೆ. ಹತ್ತು ದಿನಗಳ ಆ ಕಮ್ಮಟದಲ್ಲಿ ನಾನು ಸಾಕಷ್ಟು ಕಲಿತೆ, ಕನ್ನಡದ ಹಲವು ಪ್ರಸಿದ್ಧ ನಿರ್ದೇಶಕ, ನಟರನ್ನ, ಮಹೇಶ ಭಟ್, ಗಿರೀಶ್ ಕಾರ್ನಾಡ್ ಮುಂತಾದ ಹೆಸರಾಂತ ನಿರ್ದೇಶಕರ ಜೊತೆ ಮಾತನಾಡುವ ಅವಕಾಶ ಪಡೆದೆ. ಕೊನೆಯ ದಿನ ಪಾರ್ವತಮ್ಮ ರಾಜಕುಮಾರ್ ಅವರಿಂದ ಪ್ರಮಾಣಪತ್ರ ಪಡೆದೆ. ಕಾಸರವಳ್ಳಿಯವರ ಜೊತೆ ಹತ್ತು ದಿನ ಹತ್ತಿರದಿಂದ ಬೆರೆಯುವ ಎರಡನೇ ಅವಕಾಶ ಅದಾಗಿತ್ತು. ಅಂತಾರಾಷ್ಟ್ರೀಯ ಖ್ಯಾತಿಯ, ದೇಶ, ವಿದೇಶದ ಅಸಂಖ್ಯಾತ ಪ್ರಶಸ್ತಿಗಳನ್ನು ಪಡೆದ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಇಂಥ ಸರಳ ವ್ಯಕ್ತಿಗಳಲ್ಲೊಬ್ಬರು.

ಈಗ್ಗೆ ಕೆಲವು ವರ್ಷಗಳ ಹಿಂದೆ ಸಿದ್ದಾಪುರದ ಶೃಂಗೇರಿ ಶಂಕರಮಠದಲ್ಲಿ ಬೆಂಗಳೂರಿನ ಕೆ.ವಿ.ಸುಬ್ಬಣ್ಣ ಆಪ್ತ ಸಮೂಹ, ಇಲ್ಲಿನ ಸಂಸ್ಕೃತಿ ಸಂಪದದ ಸಹಯೋಗದಲ್ಲಿ ಗಿರೀಶ ಕಾಸರವಳ್ಳಿಯವರ ನಿರ್ದೇಶನದ ಚಲನಚಿತ್ರಗಳ ಉತ್ಸವ ಆಯೋಜಿಸಲಾಗಿತ್ತು. ಇನ್ನು ನಾಲ್ಕು ದಿನದಲ್ಲಿ ತಮ್ಮ ಹೊಸ ಚಿತ್ರ ‘ಕೂರ್ಮಾವತಾರ’ದ ಚಿತ್ರೀಕರಣ ಆರಂಭಗೊಳ್ಳುತ್ತಿದ್ದ ಸಂದರ್ಭದಲ್ಲಿ ದೂರದ ಬೆಂಗಳೂರಿನಿಂದ ಖಾಸಗಿ ಬಸ್ಸೊಂದರಲ್ಲಿ ಚಲನಚಿತ್ರೋತ್ಸವಕ್ಕೆ ಬಂದ ಕಾಸರವಳ್ಳಿ ನಮ್ಮ ಕುಟುಂಬದ ಸದಸ್ಯನೊಬ್ಬ ಬಂದು ಹೋದ ಅನುಭವವನ್ನ ತಂದರು.

ತುಂಬ ಸಂಕೋಚದ, ತಮ್ಮ ವರ್ತನೆಯಲ್ಲಿ ಕೃತಕತೆಯನ್ನ ವ್ಯಕ್ತಪಡಿಸದೇ ಆತ್ಮೀಯವಾಗಿ ಮಾತನಾಡುವ ಕಾಸರವಳ್ಳಿ ಅಂದಿನ ಮುಂಜಾನೆಯಲ್ಲಿ ಆಸಕ್ತಿಯಿಂದ ನೋಡಿದ್ದು ಅವರು ಉಳಿದಿದ್ದ ಎಪಿಎಂಸಿ ಪ್ರವಾಸಿ ಮಂದಿರದ ಎದುರಿನ ಹಸಿರು ಗದ್ದೆಗಳನ್ನ. ಪ್ರಯಾಣದ ಆಯಾಸ ಮರೆತು, ಸುಮಾರು ಎರಡೂವರೆ ತಾಸುಗಳ ಕಾಲ ಆ ಪ್ರವಾಸಿ ಮಂದಿರದ ಬಾಲ್ಕನಿಯಲ್ಲಿ ನಿಂತು ಮಾತನಾಡುತ್ತಲೇ ಎಷ್ಟೋ ದಿನದಿಂದ ಕಾದವರಂತೆ ಆ ಸಹಜಸುಂದರ ದೃಶ್ಯವನ್ನ ಕಣ್ತುಂಬಿಕೊಂಡಿದ್ದರು.

ಒಬ್ಬ ಸಹಜ ಮನುಷ್ಯ ಎಷ್ಟೇ ಎತ್ತರದ ಸ್ಥಾನದಲ್ಲಿರಲಿ, ಖ್ಯಾತಿಯ ಉತ್ತುಂಗದಲ್ಲಿರಲಿ, ತನ್ನ ಬಾಲ್ಯವನ್ನ, ಕಳೆದ ಬದುಕಿನ ಸಂದರ್ಭಗಳನ್ನ ಮರೆಯಲಾರ ಎನ್ನಲು ಗಿರೀಶರೊಂದು ಸಾಕ್ಷಿ. ಯಾವ ಹಮ್ಮುಬಿಮ್ಮು ತೋರಿಸದೇ, ಆಗ ಊಟದ ಮೇಜಿರದ ನಮ್ಮ ಮನೆಯಲ್ಲಿ ನೆಲದ ಮೇಲೆ ಹಾಕಿದ ಬಾಳೆಲೆಯ ಮುಂದೆ ಚಕ್ಕಳಮಕ್ಕಳ ಹಾಕಿ ಕೂತು ಅವರು ಊಟ ಮಾಡಬಹುದೆಂದು ಯಾರೂ ನಿರೀಕ್ಷಿಸಿರಲೇ ಇಲ್ಲ. ಊಟ ಮಾಡುವಾಗ ನಮ್ಮ ಮನೆಯ ಉಪ್ಪಿನಕಾಯಿ ಚಪ್ಪರಿಸುತ್ತ, ತನ್ನ ಅಮ್ಮ ಮಾಡುತ್ತಿದ್ದ ಅಪ್ಪೆಮಿಡಿ ಉಪ್ಪಿನಕಾಯಿ ತಯಾರಿಸುವ ವಿಧಾನ ನೆನಪು ಮಾಡಿಕೊಳ್ಳುತ್ತ, ಅದಕ್ಕೆ ಬಳಸುವ ಕಾಡಿನಲ್ಲಿ ದೊರೆಯುವ ಅರಮಾದಲ ಹರಳು ಎನ್ನುವ ಸಣ್ಣ ಕಾಯಿಯ ವಿವರಣೆ ಮಾಡುತ್ತ, ತಾನು ಚಿಕ್ಕಂದಿನಲ್ಲಿ ಈಜು ಕಲಿತ ಹಳ್ಳಗಳು ಬತ್ತಿ ಹೋದ ಬಗ್ಗೆ ಅದೆಷ್ಟು ಕಕ್ಕುಲತೆಯಿಂದ ಮಾತನಾಡಿದರೆಂದರೆ ಇಷ್ಟು ದೊಡ್ಡ ಮನುಷ್ಯ ಈಗಲೂ ಆ ನೆನಪುಗಳನ್ನು ಇಟ್ಟುಕೊಂಡಿದ್ದಾನಲ್ಲ ಎಂದು ಅಚ್ಚರಿಯಾಗುವಷ್ಟು. ನನ್ನ ಮಡದಿ ಶಾಂತಿ ಎಷ್ಟು ಅಚ್ಚರಿಪಟ್ಟಳೆಂದರೆ ಇವರು ಕಾಸರವಳ್ಳಿಯವರಾ? ಅಲ್ಲವಾ? ಎನ್ನುವಷ್ಟು.

ಒಂದರ ಹಿಂದೊಂದರಂತೆ ಎಲೆ ಅಡಿಕೆ ಮೆಲ್ಲುತ್ತ, ಮಾತನಾಡುತ್ತ ಕೂತದ್ದು ಗಿರೀಶರ ಚಿತ್ರದ ಫ್ರೇಮೊಂದರಂತೆ ಕಣ್ಣಿಗೆ ಕಟ್ಟಿದೆ. ಸಂಜೆ ಕಾರ್ಯಕ್ರಮದ ಮುಗಿದ ನಂತರ ಮನೆಗೆ ಬಂದರು. ಗ್ರಹಚಾರಕ್ಕೆ ಆ ವೇಳೆಗೆ ವಿದ್ಯುತ್ ಕೈ ಕೊಟ್ಟಿತ್ತು. ಮೇಣಬತ್ತಿ, ಚಾರ್ಜರ್ ಲ್ಯಾಂಪ್ ಬೆಳಕಿನಲ್ಲೇ ಚಾಪೆಯೆಳೆದು ಅಡುಗೆ ಮನೆಯ ಗೋಡೆಗೊರಗಿ ಕೂತು, ಪ್ರಯಾಣ ಮಾಡುವ ಕಾರಣಕ್ಕೆ ಊಟ ಮಾಡದೇ ಒಂದೆರಡು ಚಪಾತಿ ತಿಂದರು. ತನ್ನೊಳಗಿನ ನೋವು, ಒತ್ತಡ, ಮುಂದಿನ ಕೆಲಸದ ಸಿದ್ಧತೆಯ ತುರ್ತು ಎಲ್ಲವನ್ನ ಮರೆತು ಸಹಜ ಆತ್ಮೀಯತೆಯಿಂದ ಓರ್ವ ಅಂತಾರಾಷ್ಟ್ರೀಯ ಖ್ಯಾತಿಯ ವ್ಯಕ್ತಿ ಮಾತನಾಡುವದು ಕಣ್ಣೆದುರಿನ ಘಟನೆಯಾದರೂ ಇಂದಿನ ಹಮ್ಮು ಬಿಮ್ಮಿನ ಜಗತ್ತಿನಲ್ಲಿ ಸುಳ್ಳಾಗಿರಬಹುದೇ ಎಂದು ಒಂದು ಕ್ಷಣ ಅನಿಸುವಂತಿದೆ. ನನಗೆ ಪರಿಚಿತರಾದ ಹಲವು ಹಿರಿಯರಂತೆ ಇವರಿಂದಲೂ ಆಹ್ಲಾದಕರವಾದ ನೆನಪು, ಸ್ವಚ್ಛ ಸ್ನೇಹ, ಧನ್ಯತಾ ಭಾವವನ್ನ ಪಡೆದಿದ್ದೇನೆ ಮಾತ್ರ. ಅವರ ಸಿನೆಮಾದಲ್ಲಿ ಛಾನ್ಸ್ ಕೇಳಬಹುದಿತ್ತಲ್ಲ ಎಂದು ಹಲವರು ಸೂಚಿಸಿದ್ದರೂ ಆ ತಪ್ಪನ್ನೂ ಮಾಡಿಲ್ಲ.

‍ಲೇಖಕರು nalike

July 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ತಮ್ಮಣ್ಣ ಬೀಗಾರ

    ತಾಜಾ ನೆನಪಾಗಿ ಉಳಿಸಿಕೊಂಡು ಆಪ್ತವಾಗಿ ಬರೆದಿದ್ದೀರಿ.ವಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: