ಎಚ್.ಕೆ.ಶರತ್
ಜೀವನ್ ಪ್ರಕಾಶನದ ರಾಜ್ಯಮಟ್ಟದ
ಯುಗಾದಿ ಕಾವ್ಯ ಸ್ಪರ್ಧೆ-2016ರ ಮೆಚ್ಚುಗೆ ಪಡೆದ ಕವಿತೆ
ದಾಟಿಕೊಂಡೇ ಹೋಗಬೇಕಿರುವ
ದಂಡೆಯೇ,
ನಿನ್ನ ಮೇಲೂ ಮೋಹವಿದೆ.
ಈಜಲೆಂದೇ
ಇಲ್ಲಿಗೆ ಬಂದ
ಜೀವವಿದು,
ಕ್ಷಮಿಸಿ ಬಿಡು…
ಹಾರಬೇಕಿದೆ ನದಿಗೆ.
ನದಿಯೊಳಗೆ ಹಿಡಿದಿಡಲು
ಹೊರಟ ಉಸಿರು
ನನ್ನದೇ ಹಿಡಿತಕ್ಕೆ ಸಿಗದೇ
ನೀರೊಳಗೂ ಇಳಿದಿರಬಹುದು,
ನಿನ್ನೆಡೆಗೂ ಬರಬಹುದು.
ಉಸಿರಿರುವವರೆಗೂ
ನೀರಿನೊಡಲಿಗೆ
ನಿಟ್ಟುಸಿರು ಸುರಿಯುತ್ತೇನೆ.
ಆಮೇಲೆ
ಮತ್ತೆ ನಿನ್ನ ಬಳಿಯೇ
ಬರುತ್ತೇನೆ,
ನಿನ್ನೊಳಗೇ ಉಳಿಯುತ್ತೇನೆ.
ಕ್ಷಮಿಸು ಬಿಡು ದಂಡೆಯೇ,
ಉಸಿರಾಡಬೇಕಿದೆ ನದಿಯೊಳಗೆ
ಉಸಿರು ನಿಂತ ಮೇಲೆ
ಬರುವೆನು ನಿನ್ನ ಅಡಿಗೆ!
0 ಪ್ರತಿಕ್ರಿಯೆಗಳು