ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ
ಎದೆಯತ್ತರಕೆ ಬೆಳೆದು ನಿಂತ
ಪ್ರೀತಿಯ ಮರ ತಲೆಯಮೇಲೆರುವ
ಪ್ರಯತ್ನದಲ್ಲಿದೆ.
ಒಲೆಯ ಮುಂದೆ ಕುಳಿತ ಅವಳ
ಹಣೆಯ ಮೇಲಿನ ಬೆವರ ಹನಿಗಳನ್ನು
ಬೇಕಾಬಿಟ್ಟಿಯಾಗಿ ಟೀಕಿಸಿ
ನಿಂದಿಸಿ ನಿಧಾನಕ್ಕೆ ಕಾಲ್ಕಿಳುವ
ಅವನಲ್ಲಿ ಈ ಎದೆಯತ್ತರದ ಪ್ರೀತಿ
ಹುಟ್ಟಿದ್ದಾದರೂ ಹೇಗೆ!?
ಹಾಡಾಗಲು ಸಿದ್ಧನಾಗುತ್ತಾನೆ
ಗೂಡನ್ನೂ ಕಟ್ಟುತ್ತಿದ್ದಾನೆ
ಬೆಚ್ಚಗಿನ ಭಾವದಲಿ ಬಂಧಿಸಿ
ಹುಚ್ಚನ್ನು ಹಿಡಿಸುತ್ತಾನೆ
ಅಲ್ಲ…
ಕೈ ಹಿಡಿದು ನಡೆಸಿದವನನ್ನೇ
ಕಾಲಲ್ಲಿ ಒದ್ದು ಬಾಗಿಲಾಚೆ ನೂಕಿ
ಗಳಿಸಿಟ್ಟದ್ದನ್ನೆಲ್ಲ ಅಳಿಸಿಹಾಕಿ
ಉಳಿಸಿಕೊಳ್ಳದವನ ಎದೆಯಲ್ಲಿ
ಉಸಿರಾಗುವಷ್ಟು ಉನ್ಮಾದದ ಪ್ರೀತಿ
ಉದ್ಭವಿಸಿದ್ದಾದರೂ ಹೇಗೆ!?
ಹಳಸೋದು, ಕೆಟ್ಟುಹೋಗೊದು
ಕೊಳೆತು ಹೋಗುವದು
ಸಾಯೋದು ಇವೆಲ್ಲ ಇರುವಲ್ಲಿ
ಅವನು ಹುಟ್ಟಿದ್ದಷ್ಟೇ ಅಲ್ಲ
ಹುಟ್ಟಿ ಬದುಕಿ ಬೆಳೆದು ನಿಂತು
ಬೆರೆತು ಬೆರಗುಗೊಳಿಸಿದ್ದು
ಸೋಜಿಗವೇ ಸರಿ
ಅದೇನೆ ಇರಲಿ
ಅವನಲ್ಲಿ ಅದೆಂಥಹ ಬದಲಾವಣೆ
ಹೆಗಲಾಗುತ್ತಾನೆ, ಹೆರಳು ಬಿಚ್ಚಿ
ಹರಳೆಣ್ಣೆ ಹಚ್ಚುತ್ತಾನೆ
ಕೊರಳಲ್ಲಿ ಇನ್ಯಾರೋ ಕಟ್ಟಿದ ತಾಳಿಯಿದ್ದರೂ
ನೋಡಿಯು ನೋಡದಂತಿದ್ದು
ನಗುತ್ತಾನೆ, ನಗಿಸುತ್ತಾನೆ
ಮೈಮರೆಸುತ್ತಾನೆ
ಅವಳು ಮುಖವರಳಿಸಿ ನಕ್ಕರೆ ಸಾಕು
ಸ್ವರ್ಗ ಎಂದುಕೊಂಡು
ಧ್ಯಾನಸ್ಥನಾಗುತ್ತಾನೆ.
ದಿನ ಬೆಳಗುವ ಸೂರ್ಯ, ದಿನಾಲು
ನಗುವ ಹೂವು, ದಿನದಿನಕ್ಕು ಹಬ್ಬುವ ಬಳ್ಳಿ
ಸೃಷ್ಟಿಯ ಎದೆಯಲ್ಲಿ ಸೃಷ್ಟಿಸುವ
ಪ್ರೀತಿಯ ಭಾವ
ಭೂಗರ್ಭವನ್ನು ಪುಳಕಗೊಳಿಸುವುದು
ಭೂಮಿಯಾಕಾಶದ ನಡುವೆ
ಕೇವಲ ಒಡವೆಯನ್ನು ಮಾತ್ರ ಪ್ರೀತಿಸುವ
ಒಲವೊಂದಿದ್ದರೆ
ಒಲವನ್ನೇ ಪ್ರೀತಿಸುವ ಒಲವೊಂದಿದೆ.
ನಿಂದಿಸಿದವನ ನೂಕಿದವನ
ಎದೆಯಲ್ಲಿ ಒಲವಿನ ಸ್ಪರ್ಶದ ಹೂ
ಜೀವಂತವಿದೆ
ಎದೆಯಲ್ಲಿ ಪ್ರೀತಿಯನ್ನು
ಜೀವಂತವಾಗಿರಿಸಿಕೊಳ್ಳುವ
ಹಂಬಲವಿದೆ
ನಂಬಲೇಬೇಕಾದ ಸತ್ಯ
ಪ್ರೀತಿಯಿದೆ…
ಚೆನ್ನಾಗಿದೆ ದೋಸ್ತ್
ಅವಳು ಮುಖವರಳಿಸಿ ನಕ್ಕರೆ ಸಾಕು
ಸ್ವರ್ಗ ಎಂದುಕೊಂಡು
ಧ್ಯಾನಸ್ಥನಾಗುತ್ತಾನೆ.
ಒಲವೊಂದಿದ್ದರೆ
ಒಲವನ್ನೇ ಪ್ರೀತಿಸುವ ಒಲವೊಂದಿದೆ….
ಕವನ ಓದುವಾಗ ಪ್ರಶ್ನೆಗಳೊಂದಿಗೆ ಮಾತಾಗುವ ಸಂದರ್ಭದಲ್ಲಿ ಹೃದಯ ಉತ್ತರ ಕಂಡುಕೊಂಡು ಕವಿಯನ್ನ ಬಣ್ಣಿಸಿತೊಡಗುತ್ತದೆ.
ತುಂಬಾ ಇಷ್ಟ ಆಯಿತು.
ಅಭಿನಂದನೆಗಳು ನನ್ನ ಇಷ್ಟದ ಕವಿಗೆ.