ಕೆ.ವಿ.ತಿರುಮಲೇಶ್
cover Art: PONNAPPA
ಕರ್ನಾಟಕದಿಂದ ದೂರವಿರುವ ನಾನು ಸುದ್ದಿಗಾಗಿ, ಭಾಷೆಗಾಗಿ ಕನ್ನಡ ಟಿ.ವಿ. ಚ್ಯಾನೆಲುಗಳನ್ನು ನೋಡುತ್ತೇನೆ.
ಆದ್ದರಿಂದ ನನಗೆ ಅಲ್ಪ ಸ್ವಲ್ಪ ಮಾಹಿತಿಗಳು ಸಿಗುತ್ತವೆ, ಆದರೆ ಒಳನಾಡಿಗರಷ್ಟು ಜ್ಞಾನ ನನಗೆ ಇಲ್ಲ.
ನಾನು ‘ಮಾಧ್ಯಮ’ ಎಂದರೆ ಉದ್ದೇಶಿಸುವುದು ಕೇವಲ ಟಿ.ವಿ. ಯನ್ನೇ ಅಲ್ಲ–ಪತ್ರಿಕೆ, ಮೊಬೈಲ್, ಇಂಟರ್ನೆಟ್ ಇತ್ಯಾದಿಗಳೂ ಇದರಲ್ಲಿ ಸೇರಿವೆ.
ಇನ್ನು ಬೆಂಗಳೂರಲ್ಲಿ ನಡೆದ ಕಾವೇರಿ ಹಿಂಸಾಚಾರಕ್ಕೆ ಟಿ.ವಿ. ಎಷ್ಟು ಕಾರಣವಾಯಿತು ಎಂದು ನನಗೆ ತಿಳಿಯದು. ಆದರೆ ಒಂದು ವಿಷಯ ಪ್ರಸ್ತುತ: ನಮ್ಮ ದೇಶದಲ್ಲಿ ಅನೇಕ ಕಡೆ ಇಂಥ ಹಿಂಸಾಚಾರಗಳು ನಡೆಯುತ್ತಲೇ ಬಂದಿವೆ–ಅವುಗಳಲ್ಲಿ ಕೆಲವು ಟಿ.ವಿ. ಪೂರ್ವದಲ್ಲಿ ನಡೆದಂಥವು.
ಇವಕ್ಕೂ ಮಾಧ್ಯಮಗಳು ಕಾರಣವಾದುವೇ?
ಸದ್ಯದ ಕಾವೇರಿ ಪ್ರಕರಣದಲ್ಲಿ ನಾನು ನೋಡಿದ ಯಾವ ಚ್ಯಾನೆಲೂ ಜನರನ್ನು ಹಿಂಸಾಚಾರಕ್ಕೆ ಉದ್ರೇಕಿಸಿದಂತೆ ನನಗೆ ಕಂಡುಬರಲಿಲ್ಲ. ಕೆಲವು ಚ್ಯಾನೆಲುಗಳು ಹಿಂಸಾಚಾರದ ವಿರುದ್ಧ ಜನರಿಗೆ ವಿನಂತಿ ಮಾಡಿದವು ಕೂಡ. ಪ್ರಚೋದನಕರಿಯಾಗಿ ವರದಿ ಮಾಡಿದ ಇತರ ಚ್ಯಾನೆಲುಗಳು ಇರಬಹುದು. ನನಗೆ ಗೊತ್ತಿಲ್ಲ.
ಆದರೆ ನನಗನಿಸುವುದು: ‘ಕನ್ನಡಕ್ಕಾಗಿ’ ಏನು ಬೇಕಾದರೂ ಮಾಡಬಹುದು, ಮಾಡಬೇಕು ಎನ್ಫುವ ಮನೋಭಾವನೆಯೊಂದು ಕೆಲವು ಜನರಲ್ಲಿ ಇರುವುದೇ ಈ ಅತಿರೇಕಕ್ಕೆ ಕಾರಣ. ‘ಕನ್ನಡಕೆ ಕೈಯೆತ್ತು ಕನ್ನಡದ ಕಂದ’, ‘ಗಂಡಸಾದರೆ ನಿನ್ನ ಬಲಿ ಕೊಡುವೆಯೇನು?’ ಎಂದು ಮುಂತಾದ ಮಾತುಗಳನ್ನು ಹಲವರು ಒಂದು ರೂಪಕವಾಗಿ ತೆಗೆದುಕೊಳ್ಳದೆ ಅಕ್ಷರಶಾ ತೆಗೆದುಕೊಳ್ಳುವುದೇ ಇದಕ್ಕೆ ಕಾರಣ.
ಬಸ್ಸುಗಳಿಗೆ ಬೆಂಕಿಯಿಟ್ಟವರು (ಅವರು ಯಾರೆನ್ನುವುದು ಇನ್ನೂ ಖಚಿತವಾಗಿಲ್ಲ) ತಮ್ಮನ್ನು ‘ಕನ್ನಡ ವೀರ’ರೆಂದು ತಿಳಿದುಕೊಂಡಿರಬಹುದು–ಜಿಹಾದಿಗಳ ಹಾಗೆ–ಅವರು ಟಿ.ವಿ. ಅಥವಾ ಇತರ ಮಾಧ್ಯಮಗಳಿಂದ ಪ್ರಚೋದನೆ ಪಡೆಯುವುದಿಲ್ಲ. ಅವರ ಮನಸ್ಸೇ ಹಾಗಿರುತ್ತದೆ. ಅದನ್ನು ಸರಿಪಡಿಸುವ ಕೆಲಸವನ್ನು ಯಾರೂ ಮಾಡಿಲ್ಲ. ಬುದ್ಡಿಜೀವಿಗಳಾದ ನಾವು ಜನರಿಂದ ಎಷ್ಟು ದೂರವಾಗಿದ್ದೇವೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಆದ್ದರಿಂದ ಪರಸ್ಪರ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಎಲ್ಲದಕ್ಕೂ ಇನ್ನು ಯಾರನ್ನೋ ದೂರುವುದು ಬಹಳ ಸುಲಭ. ಈಗ ಮಾಧ್ಯಮಗಳು ಸುಲಭದ ಟಾರ್ಗೆಟ್ ಆಗಿವೆ. ಹಾಗಾದಾಗ ಮೂಲ ಕಾರಣ ಮರೆಯಾಗಿಬಿಡುತ್ತದೆ.
ಮಾಧ್ಯಮಗಳೂ ಸೇರಿದಂತೆ ಎಲ್ಲರೂ ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಲುವುದು ಈಗ ಮತ್ತು ಯಾವಾಗಲೂ ಅಗತ್ಯ.
ಮಾಧ್ಯಮಗಳು ‘ಕಾವೇರಿ ನಮ್ಮದು’ ಎಂಬ ಅಂಶಕ್ಕೆ ಒತ್ತು ಕೊಟ್ಟು ಕಾರ್ಯಕ್ರಮ ಪ್ರಸಾರ ಮಾಡುತ್ತಿದ್ದವು. ಇದು ಸಮರ್ಪಕವಲ್ಲ. ಕಾವೇರಿ ನಮ್ಮದು ಮಾತ್ರವೇ ಅಲ್ಲ ಅದು ತಮಿಳುನಾಡು, ಕೇರಳ, ಪುದುಚೇರಿ ಹೀಗೆ ಎಲ್ಲರಿಗೂ ಸೇರಿದೆ. ಹೀಗಾಗಿ ಕಾವೇರಿ ನಮ್ಮದು ಎಂಬ ಸಂಕುಚಿತ ಮನೋಭಾವವನ್ನು ಬೆಳೆಸಿಕೊಳ್ಳುವುದು ಹಾಗೂ ಅದನ್ನೇ ಎತ್ತಿ ಹಿಡಿಯುವುವುದು ಹಿಂಸೆಗೆ ಕಾರಣ. ಇನ್ನೊಂದು ಕಾರಣ ಜನರೇ ಹೋರಾಟಗಾರರ ಹೆಸರಿನಲ್ಲಿ ಗುಂಪು ಕಟ್ಟಿ ಕಾನೂನನ್ನು ಕೈಗೆ ತೆಗೆದುಕೊಳ್ಳುವುದು. ಇದನ್ನು ಮಾಧ್ಯಮಗಳು ಬೆಂಬಲಿಸುವ ರೀತಿಯಲ್ಲಿ ಕಾರ್ಯಕ್ರಮ, ಚರ್ಚೆಗಳನ್ನು ಪ್ರಸಾರ ಮಾಡುತ್ತಿದ್ದದ್ದು. ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯ ದೇಶದಲ್ಲಿ ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಹಾಗೂ ಅದನ್ನು ಮಾಧ್ಯಮಗಳು ಪ್ರೋತ್ಸಾಹಿಸುವುದು ತಪ್ಪು. ರೈತರು ಗುಂಪು ಕಟ್ಟಿ ನಿಷೇದಾಜ್ಞೆ ಇರುವ ಕನ್ನಂಬಾಡಿ ಅಣೆಕಟ್ಟಿಗೆ ನುಗ್ಗಲು ಯತ್ನಿಸಿರುವುದು ತಪ್ಪು, ಅದನ್ನು ತಡೆಯಲು ಅನಿವಾರ್ಯವಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು ಸರಿಯಾಗಿಯೇ ಇದೆ ಏಕೆಂದರೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ. ರೈತರೆಂದಾಕ್ಷಣ ಅವರು ಮಾಡಿದ್ದೆಲ್ಲಾ ಸರಿ ಎಂದು ಹೇಳುವಂತಿಲ್ಲ. ಇದನ್ನು ಓರ್ವ ರೈತನಾಗಿಯೇ ನಾನು ಹೇಳುತ್ತಿದ್ದೇನೆ. ರೈತರ ಮೇಲೆ ಲಾಠಿಚಾರ್ಜ್ ಮಾಡಿದ್ದು ತಪ್ಪು ಎಂದು ಟಿವಿ ಮಾಧ್ಯಮದವರು ಅರಚುತ್ತಿದ್ದರು.
ಮಾಧ್ಯಮದವರು ಅಂತರರಾಷ್ಟ್ರೀಯ ನದಿನೀರು ಹಂಚಿಕೆಯ ಬಗ್ಗೆ ಇರುವ ಹೆಲ್ಸಿಂಕಿ ಸೂತ್ರದ ಬಗ್ಗೆ ಜನರನ್ನು ವಿದ್ಯಾವಂತರನ್ನಾಗಿ ಮಾಡಬಹುದಾಗಿತ್ತು. ಈ ಬಗ್ಗೆ ಮಾಧ್ಯಮಗಳು ಚಕಾರ ಎತ್ತಲಿಲ್ಲ. ಹೆಲ್ಸಿಂಕಿ ಸೂತ್ರದ ಬಗ್ಗೆ ಜನರನ್ನು ವಿದ್ಯಾವಂತರನ್ನಾಗಿ ಮಾಡಿದ್ದಿದ್ದರೆ ಸರ್ವೋಚ್ಛ ನ್ಯಾಯಾಲಯದ ತೀರ್ಪು ಯಾಕೆ ಆ ರೀತಿಯಲ್ಲಿ ಬರುತ್ತದೆ, ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪು ಯಾಕೆ ಆ ರೀತಿ ಬಂದಿದೆ ಎಂಬುದು ಜನರಿಗೆ ತಿಳಿಯುತ್ತಿತ್ತು, ಆಗ ಜನ ಉದ್ರೇಕಗೊಳ್ಳುವುದು ತಪ್ಪುತ್ತಿತ್ತು. ಕಾವೇರಿ ಗಲಭೆಯಲ್ಲಿ ಮಾಧ್ಯಮದ ಪಾತ್ರದ ಬಗ್ಗೆ ಅಂತರ್ಜಾಲದಲ್ಲಿ ಬಂದ ಈ ಲಿಂಕನ್ನು ನೋಡಬಹುದು http://www.firstpost.com/india/kaveri-issue-how-kannada-media-became-agent-provocateurs-fuelling-further-violence-3005290.html
ಟಿ.ವಿ.ಯಲ್ಲಿ ಪೋಲಿಸರು ಹೊಡೆದಟ್ಟುವ ದೃಶ್ಯವನ್ನು ಬೆಳಗ್ಗಿನಿಂದ ಸಂಜೆ ವರೆಗೆ ಮತ್ತೆ ಮತ್ತೆೋರಿಸುತ್ತಲೇ ಇದ್ದಾಗ ಹಳ್ಳಿಯ ಮುದುಕಮ್ಮ ಈ ಥರ ಹೊಡೆದ್ರೆ ಅವರು ಬದುಕ್ತಾರಾ, ಪೋಲಿಸರ ಮನೆಹಾಳಾಗ ಎಂದಳಂತೆ. ಜನರ ಉದ್ರೇಕಕ್ಕೆ ಇದೂ ಒಂದು ಕಾರಣವೆ.