ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆ ಟಿ ಶಿವಪ್ರಸಾದ್ ಇನ್ನಿಲ್ಲ

ಕೆ ಟಿ ಶಿವಪ್ರಸಾದ್ ಅವರು ಇಂದು ನಿಧನರಾಗಿದ್ದಾರೆ.

‘ಅವಧಿ’ಯ ತೀವ್ರ ಸಂತಾಪಗಳು

ಈ ಹಿಂದೆ ಅವಧಿಯಲ್ಲಿ ಕೆ ಟಿ ಶಿವಪ್ರಸಾದ್ ಅವರ ಕುರಿತ ಬರಹ ಅವರ ನೆನಪಿಗೆ ಇಲ್ಲಿದೆ

ನಾಗರಾಜ ಹೆತ್ತೂರು ಅವರ ‘ಜಾಡಮಾಲಿಗಳ ಜಗತ್ತು’ ಸರಣಿಯಿಂದ ಆಯ್ದ ಭಾಗ ಇದು.

ಟಿ.ಸಿ. ಕಳೆದು ಹೋಗದಿದ್ದರೆ ನಾನು ಮುಂದೆ ಓದುತ್ತಿದ್ದೆ…
ವಿಧಿ ನನ್ನ ಚರಂಡಿಗೆ ಕರೆತಂತು…
ಒಂದೊಂದು ಸಣ್ಣ ಘಟನೆಗಳು ವ್ಯಕ್ತಿಯ ಜೀವನವನ್ನು ಹೇಗೆ ಬದಲಾಯಿಸುತ್ತವೆ. ಅವಕಾಶ ಇದ್ದರೂ ಹೇಗೆ ಜೀವನದಲ್ಲಿ ಸೋಲುತ್ತಾರೆ ಎಂಬುದಕ್ಕೆ ಉದಾಹರಣೆ ಪುನೀತ್. ನಿರ್ಮಲನಗರದ ಪುನೀತ್ ಜೀವನದಲ್ಲಿ ಅದೊಂದು ದಿನ ಟಿಸಿ ಕಳೆದುಕೊಳ್ಳದಿದ್ದರೆ ಜೀವನದಲ್ಲಿ ಮಹತ್ತರ ಬದಲಾವಣೆ ಯಾಗಬಹುದಿತ್ತೇನೋ..?
ಜೀವನದಲ್ಲಿ ಇಂತಹುದೊಂದು ಕಾರಣದಿಂದ ಓದು ನಿಲ್ಲಿಸಿ ಪೌರ ಕಾರ್ಮಿಕನಾದ ಪುನೀತ್ ಜೀವನಗಾಥೆಯನ್ನು ಅವನ ಬಾಯಿಂದಲೇ ಕೇಳಿ.
`ಎಸ್ಎಸ್ಎಲ್ ಸಿ ಪಾಸಾಗಿದ್ದೆ. ಆವತ್ತು ಕಾಲೇಜಿಗೆ ದಾಖಲಾಗಲು ಹಣ ಹೊಂದಿಸಿಕೊಂಡು ಕಾಲೇಜಿಗೆ ಹೋದೆ. ನಮಗೆ ಗೈಡ್ ಮಾಡುವರೇ ಇರಲಿಲ್ಲ. ವಿಪರ್ಯಾಸ ಎಂದರೆ ಅವತ್ತು ದಾಖಲಾತಿಗೆ ಕೊನೆ ದಿನ. ಪ್ಲಾಸ್ಟಿಕ್ ಕವರ್ ನಲ್ಲಿ ದಾಖಲಾತಿ ಇಟ್ಟುಕೊಂಡು ಹೋಗಿದ್ದೆ. ನನ್ನ ದುರಾದೃಷ್ಟವೋ.. ಹಣೆಬರಹವೋ ನಾನು ತಂದಿದ್ದ ಪ್ಲಾಸ್ಟಿಕ್ ಹರಿದು ಹೋಗಿತ್ತು . ಒರಿಜನಲ್ಲ್ ಟಿ.ಸಿ. ಕಳೆದುಕೊಂಡಿದ್ದೆ. ಆವತ್ತು ನಿಜಕೂ ತಲೆಗೆ ಕೈ ಹೊತ್ತು ಕುಳಿತೆ. ಡುಪಲಿಕೆಟ್ ಟಿಸಿ ಕೊಡುತ್ತಾರೆ ಎಂಬುದೇ ನನಗೆ ಗೊತ್ತಿರಲಿಲ್ಲ. ಅಲ್ಲಿದ್ದ ಅಧಿಕಾರಿಯೊಬ್ಬರು `ಇಲ್ಲಪ್ಪಾ ಒರಿಜಿನಲ್ ಟಿಸಿ ಕೊಟ್ಟರೆ ಮಾತ್ರ ಕಾಲೇಜಿಗೆ ಸೇರಿಸಿಕೊಳ್ಳುತ್ತೇವೆ’ ಎಂದಿದ್ದು ಕಿವಿ ಯಲ್ಲಿ ಗುಂಯ್ ಎನ್ನುತ್ತಿತ್ತು. ಮನಸ್ಸಿಗೆ ಬೇಸರವಾಯಿತು. ಹಾಗೆ ಬಂದವನು ಸ್ನೇಹಿತರ ಜತೆ ಸೇರಿಕೊಂಡು ಒಂದಷ್ಟು ದಿನ ಕಾಲ ದೂಡಿದೆ.
ನನ್ನ ಸ್ನೇಹಿತರು ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. `ನೋಡಪ್ಪಾ ಏನು ಮಾಡಿದರೂ ನಮಗೆ ಕೆಲಸ ಸಿಕ್ಕುವುದಿಲ್ಲ ಯಾಕೆ ಓದುತ್ತೀಯಾ..? ಬಾ ನಮ್ಮೊಂದಿಗೆ ಎಂದರು. ಅವರೊಂದಿಗೆ ಸೇರಿಕೊಂಡವನು ಹೇಗೆ ಇಲ್ಲಿ ಬಂದೆ ಎನ್ನುವುದೇ ಗೊತ್ತಿರ್ಲಿಲ್ಲ. ಅಮೇಲೆ ನಡಿದಿದ್ದೆಲ್ಲ ಇದೇ ಸ್ವಚ್ಛತೆ. ಕಂಡಿದ್ದೆಲ್ಲ ಚರಂಡಿ, ಅದೇ ವಾಸನೆ . ಈಗ ಅನ್ನಿಸುತ್ತಿದೆ ನಾನು ಕಾಲೇಜಿಗೆ ಸೇರಬೇಕಿತ್ತು ಎಂದು. ಕೆಲಸಕ್ಕೆ ಸೇರಿಕೊಂಡು 7 ವರ್ಷ ಆಗಿದೆ. ಗುತ್ತಿಗೆ ಆದಾರದಲ್ಲಿ ಕೆಲಸ ಮಾಡುತ್ತೇವೆ. ಬಾಲ್ಯದಲ್ಲೆ ತಂದೆ ಕಳೆದುಕೊಂಡೆ. ಅವರೂ ಕೂಡ ಇದೇ ಕೆಲಸ ಮಾಡುತ್ತಿದ್ದರು. ನನ್ನಮ್ಮ ಆಸ್ಪತ್ರೆಯಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಾರೆ. ನಾನು ಕೆಲಸಕ್ಕೆ ಸೇರಿದಾಗ 2500 ರೂಪಾಯಿ ಇತ್ತು. ಈಗ 5600 ರೂ. ಕೊಡುತ್ತಾರೆ. ನಮಗೆ ಏನೂ ಸಾಕಾಗುವುದಿಲ್ಲ ಸ್ವಾಮಿ. ಬೆಲೆ ಏರಿಕೆಯಾಗಿದೆ. ನಮಗೂ ಕನಸುಗಳಿರುತ್ತವೆ. ನಾವು ಎಲ್ಲರಂತೆ ಬದುಕಬೇಕು. ನಮಗೆ ಕನಿಷ್ಟ ಪರ್ಮನೆಂಟ್ ಮಾಡುತ್ತಾರೆ ಎಂದು ಹೇಳಿದರೆ ನಾವು ನೆಮ್ಮದಿಯಿಂದ ಬದುಕುತ್ತೇವೆ. ನಮ್ಮದೂ ಒಂದು ಜೀವನವಾ ಸ್ವಾಮಿ..? ಎನ್ನುತ್ತಾನೆ.
ನಮ್ಮ ಸಂಬಳದಲ್ಲಿ ಇಎಸ್ಐ ಕಟ್ ಮಾಡುತ್ತಾರೆ ಸ್ವಾಮಿ. ಆ ಆಸ್ಪತ್ರೆ ಎಲ್ಲಿದೆ ಎಂದೇ ಗೊತ್ತಿಲ್ಲ. ನಾವು ಮಾಡುವ ಕೆಲಸವೇ ಅಂಥದ್ದು ದಿನ ರೋಗಗಳೊಂದಿಗೆ ನಾವು ಸೆಣೆಸುತ್ತೇವೆ. ಊರು ಕ್ಲೀನ್ ಮಾಡುವ ನಮ್ಮನ್ನು ಜನ ಅಸಹ್ಯ ಪಟ್ಟುಕೊಂಡು ನೋಡುತ್ತಾರೆ. ಕಸ ತುಂಬುವನು ಎಂದು ನೋಡುತ್ತಾರೆ. ಅಸಹ್ಯ ಪಟ್ಟುಕೊಳ್ಳುತ್ತಾರೆ.
ನಿಮಗೆ ಇನ್ನೂ ಗೊತ್ತಿಲ್ಲ ಸ್ವಾಮಿ ನಮಗೆ ಇವತ್ತಿಗೂ ಕೈಗೆ ಗ್ಲೌಸ್ ಸಿಕ್ಕಿಲ್ಲ. ಕಾಲಿಗೆ ಶೂ ಕೊಟ್ಟಿಲ್ಲ. ಮಾಸ್ಕ್ ಇಲ್ಲ. ನಾಳೆ ಹೆಚ್ಚು ಕಡಿಮೆ ಆದರೆ ನಮಗೆ ಯಾವುದೇ ಭದ್ರತೆ ಇಲ್ಲ ಸ್ವಾಮಿ. ನಮ್ಮವರಿಗೂ ಚಳಿ, ಜ್ವರ ಬರುತ್ತದೆ ಅವರೂ ಮನುಷ್ಯರಲ್ಲವೇ..? ಅವರು ರಜ ತೆಗೆದುಕೊಂಡು ಮತ್ತೆ ಮಾರನೆ ದಿನ ಅದೇ ಪ್ರದೇಶಕ್ಕೆ ಹೋಗಿ ಬಾಚಬೇಕು..? ಒಮ್ಮೆ ಯೋಚಿಸಿ ಅವನ ಸ್ಥಿತಿ ಹೇಗಿರಬೇಕು. ಎಂದದರೂ ನಮ್ಮ ಬಗ್ಗೆ ಯಾರಾದರೂ ಯೋಚಿಸುತ್ತಾರಾ..? ಇಲ್ಲವೇ ಇಲ್ಲ.
ಸ್ವಾಮಿ ನಿಜ ಹೇಳುತ್ತೇನೆ.. ಆ ಸ್ಮೆಲ್ ತೆಡೆಯಲು ಆಗುವುದಿಲ್ಲ. ಅದಕ್ಕಾಗಿ ಪಾನ್ ಪರಾಗ್, ಹನ್ಸ್ಹಾಕುತ್ತೇವೆ. ಈ ಮೂಲಕವಾದರು ಒಂದಷ್ಟು ವಾಸನೆ ಮರೆಯುತ್ತೇವೆ. ಈಗೆಲ್ಲಾ ಮಾಮೂಲಾಗಿದೆ. ನಮ್ಮ ಜನ ಕೆಲವರು ಕುಡಿಯುತ್ತಾರೆ. ಈಗ ಅದೂ ಕೂಡ ಕಡಿಮೆಯಾಗಿದೆ. ನಾನಂತೂ ಕುಡಿಯುವುದಿಲ್ಲ ಸಾರ್. ನಮಗೂ ಕೆಲಸದ ಬಗ್ಗೆ ಶೃದ್ಧೆ ಇದೆ.
ನೀವು ನಂಬುತ್ತೀರೋ ಬಿಡುತ್ತೀರೋ..? ನಮಗ್ಯಾರಿಗೂ ಸರಿಯಾದ ಸಮಯದಲ್ಲಿ ಪೇಮೆಂಟ್ ಆಗುವುದಿಲ್ಲ. ಕೆಲಸ ತಿಂಗಳಾದ ನಂತರ ಹೆಚ್ಚು ಕಡಿಮೆ ಒಂದು ತಿಂಗಳ ನಂತರ ಸಂಬಳ ಸಿಗುತ್ತದೆ. ನಾವೂ ಕೇಳಿ ಕೇಳಿ ಸುಸ್ತಾಗಿ ಸುಮ್ಮನಾಗುತ್ತೇವೆ. ಹಬ್ಬ ಬಂದರೆ ಬಡ್ಡಿ ಸಾಲ ತೆಗೆದುಕೊಂಡು ಆಚರಿಸುತ್ತೇವೆ. ದಯವಿಟ್ಟು ನಮ್ಮ ಕೆಲಸಕ್ಕೆ ಗೌರವ ಕೊಡುವುದಾದರೆ ಕನಿಷ್ಠ ನಮಗೆ ತಿಂಗಳು ಕರಕ್ಟಾಗಿ ಸಂಬಳ ಕೊಡಿಸುವಂತೆ ಮಾಡಿ ನಿಮಗೆ ಮನವಿ ಮಾಡುತ್ತೇವೆ.
ಇದು ನಮಗಷ್ಟೆ ಅಲ್ಲ ಪರ್ಮನೆಂಟ್ ಆದವರೂ ಸಂಬಳ ಸರಿಯಾದ ಸಮಯಕ್ಕೆ ಬರುವುದಿಲ್ಲ. ನಾವೆಲ್ಲಾ ಎಲ್ಲಿಗೆ ಹೋಗಬೇಕು. ನಮ್ಮ ಸಂಬಳ ನಮಗೆ ಕೊಡಲು ಇವರಿಗ್ಯಾಕೆ ಇಷ್ಟೊಂದು ಜಿದ್ದು, ಅಸಡ್ಡೆ ದಯವಿಟ್ಟು ನಮ್ಮ ಸಂಬಳ ನಮಗೆ ಬೇಗ ಕೊಡಿ ಬಡ್ಡಿ ಕಟ್ಟುವುದನ್ನಾದರು ತಪ್ಪಿಸಿ.
ಇದು ಪುನೀತನೊಬ್ಬನ ಸಮಸ್ಯೆಯಲ್ಲ ಹಾಗೂ ನೋವಲ್ಲ ಈತನ ವಯಸ್ಸಿನ ಎಲ್ಲರದ್ದೂ ಇದೇ ಸಮಸ್ಯೆ. ಹೇಳಿ ನಾಗರೀಕರೆ ಇದಕ್ಕೆ ನೀವು ಏನನ್ನುತ್ತೀರಿ..?

ಕಲೆ : ಪುಂಡಲೀಕ ಕಲ್ಲಿಗನೂರು
ನಲ್ಲಪ್ಪನ ಮನೆಯಲ್ಲಿ ಕೆಟಿ ಶಿವಪ್ರಸಾದ್ ಕೊರಬಾಡು ತಿಂದಿದ್ದು…
ಆತನ ಜೀವನದಲ್ಲಿ ಎಂಥಂತಾದ್ದೂ ಸಮಸ್ಯೆ ಸವಾಲುಗಳನ್ನು ಎದುರಿಸಿದ್ದಾನೆ. ಆತನ ಜೀವನವೇ ಕಸದೊಂದಿಗೆ. ಚರಂಡಿಯೊಂದಿಗೆ, ಗಲೀಜಿನೊಂದಿಗೆ. ನಮಗೂ ಜಮೀನು ಬೇಕು ಎಂದು ಹೋರಾಟ ನಡೆಸುತ್ತಿರುವ ಈತನ ಹೆಸರು ನಲ್ಲಪ್ಪ. ಈತನ ಹೋರಾಟವನ್ನು ನೋಡುತ್ತಿದ್ದ ಮತ್ತು ಈತನ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದು ಹಾಸನದ ದಲಿತ ಸಂಘರ್ಷ ಸಮಿತಿಯ ಜಯರಾಂ, ಕೃಷ್ನಾ ದಾಸ್, ಶಂಕರ್ ರಾಜು, ಆರ್. ಮರಿಜೋಸೆಫ್, ಸಂದೇಶ್, ಮತ್ತು ಅವರೊಂದಿಗೆ ನಿರಂತರವಾಗಿ ಗುರುತಿಸಿಕೊಂಡಿರುವ ಖ್ಯಾತ ಅಂತರಾಷ್ಟ್ರೀಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್.
ನೀವು ನಂಬಲಾರಿರಿ ಈತ ಕೆ.ಟಿ ಶಿವಪ್ರಸಾದ್ರ ಆತ್ಮೀಯ ಸ್ನೇಹಿತ ಕೂಡ.
ಹೀಗೆ ಒಂದು ದಿನ ಕೆ.ಟಿ. ಶಿವಪ್ರಸಾದ್ ಅವರು ವಾಸಿಸುವ ಉದಯ ಗಿರಿಯ ಮನೆಯ ಮುಂದೆ ಚರಂಡಿಯಲ್ಲಿ ಗಲೀಜು ನಿಂತು ವಾಸನೆ ಬರುತ್ತಿತ್ತು. ` ಏ ಆ ನಲ್ಲಪ್ಪನಿಗೆ ಬಂದು ಹೋಗೋಕೆ ಹೇಳೋ ಇಲ್ಲಿ’ ಎಂದು ಮರಿ ಜೋಸೆಫ್ ಜತೆ ಹೇಳಿ ಕರೆಸಿಕೊಂಡರು. ದೊಡ್ಡವರು ಕರೆದಿದ್ದಾರೆ ಎಂದು ಥಟ್ಟನೆ ಬಂದ ನಲ್ಲಪ್ಪ ಕೆ.ಟಿ. ಹೇಳಿದ ಕೆಲಸ ಮುಗಿಸಿ ಒಳಬಂದರು. ಶಿವಪ್ರಸಾದ್ ಮುಂದೆ ಕುಳಿತವರೂ ಅಲ್ಲ. ಕುಳಿತುಕೊ ಎಂದರೂ `ಇಲ್ಲ ಬುದ್ದಿ’ ಎಂದು ನಿಂತೇ ಇದ್ದರು.
ನೀನು ನನ್ನ ಫ್ರೆಂಡ್ ಕಣೋ ಎಂದರೂ ಕೇಳಲಿಲ್ಲ.
ಒತ್ತಾಯಿಸಿ ಎದುರು ಕೂರಿಸಿಕೊಂಡ ಕೆಟಿ ಮಾತನಾಡುತ್ತ ಕುಳಿತರು.
ಹೀಗೆ ಮಾತನಾಡುತ್ತಾ ನಲ್ಲಪ್ಪ `ಸಾರ್ ನಾಳೆ ನಮ್ಮ ಮನೆಯಲ್ಲಿ ಹಬ್ಬ ಇದೆ’ ಎಂದು ಪ್ರಸ್ತಾಪಿಸಿದ.
ಕೆಟಿಎಸ್ ಯಾಕೆ ನಮ್ಮನ್ನು ಕರೆಯುವುದಿಲ್ಲವಾ..? ಎಂದು ನಕ್ಕರು.
ನಲ್ಲಪ್ಪ ಏನೂ ಮಾತನಾಡದೆ ಮೆಲ್ಲಗೆ `ಅಯ್ಯೋ ಬನ್ನಿ ಬುದ್ದಿ’ ಎಂದು ಹೇಳಿ ಅಲ್ಲಿಂದ ತೆರಳಿದ.
ಎಂದಿನಂತೆ ನಲ್ಲಪ್ಪನ ಮನೆಯಲ್ಲಿ ಹಬ್ಬದ ಸಡಗರ. ಅದೊಂದು ಪುಟ್ಟ ಮನೆ ಗಂಡ-ಹೆಂಡತಿ ಮಗ ವಾಸಿಸುವಷ್ಟು ಜಾಗ. ಪತ್ನಿ ಕೆಲಸದಲ್ಲಿ ನಿರತಳಾಗಿದ್ದರು. ನಲ್ಲಪ್ಪ ಚಾಪೆಯಲ್ಲಿ ಹೊರಳಾಡಿಕೊಂಡು ಬಾಡಿನ ರುಚಿ ಬಾಯೊಟ್ಟಿ ಕುಳಿತಿದ್ದ.
ಮದ್ಯಾಹ್ಮ ಒಂದು ಗಂಟೆ ಸಮಯ ಹೊರಗಿನಿಂದ ಬಾಗಿಲು ಬಡಿದ್ದ ಸದ್ದು..!
ಯಾರು..? ಎಂದು ನಲ್ಲಪ್ಪ ಬಾಗಿಲು ತೆಗೆದಿದ್ದೆ ಅಚ್ಚರಿ, ಆತಂಕ..! ದಿಗ್ಭ್ರಮೆ.
ಹೌದು ಅಲ್ಲಿ ನಿಂತಿದ್ದು ಅಂತರಾಷ್ಟ್ರೀಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ಎಂಬ ಅಜಾನುಬಾಹು. ಜತೆಗೆ ಮಾನವ ಹಕ್ಕು ಹೋರಾಟಗಾರ ಮರಿ ಜೋಸೆಫ್. ಕೋಣದ ಸವಿಗೆ ಕಾತರಿಸುತ್ತಿದ್ದ ನಲ್ಲಪ್ಪನ ಬಾಯಿ ಒಣಗೊ ಹೋಗಿ ಏನು ಮಾತನಾಡಬೇಕೆಂದು ತಿಳಿಯದೆ ಅಬ್ಬೆಪಾರಿಯಂತೆ ನಿಂತಿದ್ದ. ಸಂತೋಷ ಇಲ್ಲವೇ ಇಲ್ಲ. ಕೈ ಕಾಲು ಆಡುತ್ತಿಲ್ಲ.
ಒಂದು ಕ್ಷಣ ನಿಂತದ್ದ ನಲ್ಲಪ್ಪ ನನ್ನು ನೋಡಿದ ಕೆಟಿ ` ಏ ಏನೂ ಒಳಗೆ ಬರಬಹುದೇನೋ..? ಎಂದರು
ಸ್ವಾಮಿ ಇಲ್ಲಿಗೆ ಬ್ಯಾಡ ನಮ್ಮ ತಮ್ಮನ ಮನೆಗೆ ಹೋಗೋಣಎಂದ.
ಕನಸಿನಲ್ಲೂ ನಿರೀಕ್ಷಿಸದ ಆಘಾತ ನಲ್ಲಪ್ಪನಿಗೆ ಆಗಿತ್ತು. ಏ ಏನೂ ಬೇಡ ಕಣೋ ನಡೆಯೋ ಒಳಗೆ ಎಂದವರು ನಲ್ಲಪ್ಪನನ್ನು ದೂಡಿಕೊಂಡ ಕೆಟಿ ಒಳಗೆ ಹೋದರು.
ಅಲ್ಲಿ ಕುರ್ಚಿಯೂ ಇರಲಿಲ್ಲ. ಸಾರ್ ಕುರ್ಚಿ ತರುತ್ತೇನೆ ಎಂದರೂ ಕೇಳದ ಕೆಟಿ ಚೇಣಿ ಚಾಪೆರ ಹಾಕಿಸಿಕೊಂಡು ಕುಳಿತರು.
`ಮನೆಲಿ ಏನೋ ಸಾರು’
`ಬುದ್ದಿ ಈಗ ಬತ್ತಿನಿ’ ಎಂದು ಹೊರಗೆ ಬಂದು ನಲ್ಲಪ್ಪ ಚಡಪಡಿಸತೊಡಗಿದ. ಏನು ಮಾಡುವುದು ಹೋಟೆಲಿಂದ ತರಿಸಲಾ..? ಒಳ್ಳೆ ಕತೆಯಾಯಿತಲ್ಲಾ.. ಏನೆಂದುಕೊಳ್ಳುತ್ತಾರೋ..? ಅಯ್ಯೋ ದೇವರೇ ಕಾಪಾಡಪ್ಪ ಎಂದು ಪಕ್ಕದಲಿದ್ದ ಹುಡುಗನನ್ನು ಕರೆದು `ಏ ಹೋಗಿ ಹೋಟೆಲಿಂದ ಚಿಕನ್, ಮಟನ್ ಏನು ಸಿಕ್ಕುತ್ತೋ ತೆಗೆದುಕೊಂಡು ಬೇಗ ಬಾ ‘ ಎಂದು ಹಣ ನೀಡಲು ಮುಂದಾದ.
ಅಷ್ಟರಲ್ಲಿ ಒಳಗಿನಿಂದ ಗಟ್ಟಿ ಧ್ವನಿ `ಏ ನಲ್ಲಪ್ಪಾ’
ಬಂದೆ ಸ್ವಾಮಿ ಎಂದು ಎದ್ದುಬಿದ್ದಂತೆ ಬಂದ ನಲ್ಲಪ್ಪ ಕೆಟಿ ಮುಂದೆ ವಿದ್ಯಾರ್ಥಿಯಂತೆ ನಿಂತ.
ಏನೋ ಮಾಡಿದ್ದೀಯಾ ಸಾರು..?
ಏ ಬ್ಯಾಡ ಬುಡಿ ಸ್ವಾಮಿ..
ಏನು ಹೇಳೋ..
ಸ್ವಾಮಿ ಕೊರ ಬಾಡು
ಅದುಕ್ಯಾಕೆ ಹಿಂಗಾಡ್ತಿಯೋ ದೈರ್ಯವಾಗಿ ಹೇಳೋ..!
ನಲ್ಲಪ್ಪ ತಬ್ಬಿಬ್ಬಾಗಿದ್ದ. ಒಳಗಿದ್ದ ಪತ್ನಿ ತುಟಿಕ್ ಪಿಟಿಕ್ ಎನ್ನದೆ ಕಣ್ಣು ಕಣ್ಣು ಬಿಡುತ್ತಾ ಕುಳಿತಿದ್ದಳು.
ಕೆಟಿ ನಲ್ಲಪ್ಪ ನನ್ನು ಕರೆದು ` ಲೋ ಯಾಕೋ ನಾನು ಬಂದಿದ್ದು ಇಷ್ಟವಿಲ್ಲವೇನೋ..? ಎಂದರು ನಲ್ಲಪ್ಪ ಮಾತನಾಡಲಿಲ್ಲ.
ನೋಡು ಏನು ಹೊರಗೆ ತರಿಸಬೇಡ. ಏನಿದೆ ಅದನ್ನು ಹಾಕು.
ಸ್ವಾಮಿ ನೀವು ತಿನ್ನುತ್ತೀರಾ..?
ಏ ಇದು ಇಂಟರ್ ನ್ಯಾಷಿನಲ್ ಫುಡ್ ಕಣಯ್ಯ ಹಾಕು ಬಾ ಎಂದವರೆ ಎರಡೆರಡು ಭಾರಿ ಕೊರಬಾಡು ತಿಂದು ಸಂತೃಪ್ತರಾದರು. ನಲ್ಲಪ್ಪನ ಮುಖದಲ್ಲಿ ಮಂದಹಾಸ, ಆತ್ಮತೃಪ್ತಿ ಎದ್ದು ಕಾಣುತ್ತಿತ್ತು.
ನಿಜಕ್ಕೂ ನಲ್ಲಪ್ಪನ ಬಾಳಿನಲ್ಲಿ ಅದೊಂದು ಮರೆಯದ ಘಟನೆ. ದೊಡ್ಡವರು ಪೌರಕಾರ್ಮಿಕರ ಬಗ್ಗೆ ಬಂದು ಅದು ಕೊರಬಾಡು ತಿಂದು ಹೋಗುವುದೆಂದರೆ ಏನು..? ಅವತ್ತೆಲ್ಲಾ ಪೌರಕಾರ್ಮಿಕರ ಬೀದಿಯಲ್ಲಿ ಅದೇ ಸುದ್ದಿ ಎಂದು ನೆನೆಯುತ್ತಾರೆ ನಲ್ಲಪ್ಪ..!

‍ಲೇಖಕರು Admin

30 June, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading