ಮೊನ್ನೆ ಸಂಧ್ಯಾರಾಣಿ ಅವರ ‘ಯಾಕೆ ಕಾಡುತಿದೆ ಸುಮ್ಮನೆ ನನ್ನನು…’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ ಜಿ ಎನ್ ಮೋಹನ್ ಒಂದು ವಿಷಯವನ್ನು ಪ್ರಸ್ತಾಪಿಸಿದರು.
ಹೆಣ್ಣು ಮಕ್ಕಳ ಭಾವ ಲೋಕದ ಬಗ್ಗೆ ಮಾತನಾಡುತ್ತಾ ಹೇಳಿದ ಮಾತು. ಅದು ಬ್ರೂಣ ಹತ್ಯೆ ತಡೆ ಕಾಯಿದೆ ಬಂದ ನಂತರವೂ ಹೇಗೆ ಇನ್ನೂ ಭ್ರೂಣ ಹತ್ಯೆ ಎಗ್ಗಿಲ್ಲದೆ ನಡೆಯುತ್ತಿದೆ ಹಾಗೂ ಭ್ರೂಣ ಪತ್ತೆ ಮಾಡಿ ಅದನ್ನು ಗುಟ್ಟಾಗಿ ತಿಳಿಸಲು ವೈದ್ಯಲೋಕ ಕಂಡುಕೊಂಡ ಪಾಸ್ ವರ್ಡ್ ಏನು? ಎಂಬುದನ್ನು ಪ್ರಸ್ತಾಪಿಸಿದ್ದರು.ಇನ್ನಷ್ಟು ಗಾಬರಿ ಹುಟ್ಟಿಸುವ ಮೂರು ಮಾಹಿತಿಗಳು ಇಲ್ಲಿದೆ ಓದಿ-
ಭ್ರೂಣ ಹತ್ಯೆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಹೆಲ್ತ್ ಡಿಪಾರ್ಟ್ಮೆಂಟಿನ ಕೆಲವು ಮೀಟಿಂಗುಗಳಲ್ಲಿ ಪಾಲ್ಗೊಳ್ಳೋ ಅವಕಾಶ ಸಿಕ್ಕಿತ್ತು. ಆಗ ಆರೋಗ್ಯಾಧಿಕಾರಿಗಳ ಜೊತೆ ನಡೆಸಿದ ಮಾತುಕತೆ ವೇಳೆ ನನಗೆ ಗೊತ್ತಾದ ಸಂಗತಿಗಳು ನಿಜಕ್ಕೂ ಗಾಬರಿ ಹುಟ್ಟಿಸಿದವು. ಭ್ರೂಣದ ಲಿಂಗ ಪತ್ತೆ ಹಚ್ಚೋದು ಬಹಳ ಸುಲಭ. ಇದಕ್ಕಿಂತ ಸುಲಭ ಏನೆಂದರೆ, ಭ್ರೂಣ ಹೆಣ್ಣೊ ಗಂಡೊ ಅನ್ನೋದನ್ನ ಸಂಬಂಧಪಟ್ಟ ಫ್ಯಾಮಿಲಿಗೆ ತಿಳೀಸೋ ವಿಧಾನ. ಅಂಥ ಒಂದು ವಿಧಾನವೆಂದರೆ, ವೈದ್ಯರು ಪ್ರಿಸ್ಕ್ರಿಪ್ಷನ್ ಬರೆಯೋವಲ್ಲಿನ ಚಮತ್ಕಾರ. ಭ್ರೂಣ ಹೆಣ್ಣಾಗಿದ್ರೆ ಕೆಂಪು ಇಂಕಿನಲ್ಲಿ ಬರೆಯೋದು.. ಗಂಡಾಗಿದ್ರೆ ಹಸಿರು ಇಂಕಿನಲ್ಲಿ ಬರೆಯೋದು… ನೋಡುವವರಿಗೆ ಮಾತ್ರ ಎಲ್ಲ ಪ್ರಿಸ್ಕ್ರಿಪ್ಷನ್ನುಗಳ ಹಾಗೆ ಇದೂ ಒಂದು.
ಇನ್ನೂ ಒಂದು ವಿಧಾನ ಇದೆ. ಭ್ರೂಣ ಹೆಣ್ಣಾಗಿದ್ರೆ ತಾಯಿಗೆ ಡಾಕ್ಟ್ರನ್ನ ಭಾನುವಾರ ಭೇಟಿಯಾಗೋಕ್ಕೆ ಹೇಳೋದು. ಇಲ್ಲಾಂದ್ರೆ ಸೋಮವಾರ.
ಈ ಒಂದಂಶ ಗಮನಿಸಿದರೇ ಗೊತ್ತಾಗುತ್ತೆ, ಇದು ಕಾನೂನು ಅಥವಾ ನಿಯಮಗಳಿಂದ ಬಗೆಹರಿಯೋ ಅನಿಷ್ಠ ಅಲ್ಲ ಅಂತಾ.
-ಶ್ರೀ
ನಾನೊಮ್ಮೆ ರುಟೀನ್ ಚೆಕಪ್ ಗೆ ಅಂತಾ ಹೋಗಿದ್ದೆ (ಮುಂಬೈನಲ್ಲಿ). ಅಲ್ಲಿನ ನರ್ಸ್ ಗಳು “ಜೈ ಮಾತಾ ದಿ” ಮತ್ತು “ಜೈ ಶ್ರೀಕೃಷ್ಣ” ಅನ್ನೋ ಎರಡು ನಾಮಗಳನ್ನ ಹೇಳ್ಕೊಂಡು ಓಡಾಡೋದು ಗಮನಿಸ್ದೆ. ಆಶ್ಚರ್ಯ ಆಗೋಯ್ತು, ಕ್ಲಿನಿಕ್ಕಿನಲ್ಲಿ ಇದೇನಿದು ರಿಲೀಜಿಯೊಸಿಟಿ ಅಂತಾ.
ಅಷ್ಟೊತ್ತಿಗೆ ನನಗೆ ಕ್ಲೋಸ್ ಆಗಿಬಿಟ್ಟಿದ್ದ ನರ್ಸೊಬ್ಳು ಆ ಕ್ಲಿನಿಕ್ಕಿನಲ್ಲಿದ್ಲು. ಏನು ಕಥೆ ಅಂತಾ ಕೇಳ್ದೆ. ಅವ್ಳು ಹೇಳಿದ್ದು ಕೇಳಿದ್ಮೇಲೆ ಶಾಕ್ ಆಗಿಹೋಯ್ತು. ಭ್ರೂಣ ಹೆಣ್ಣೊ ಗಂಡೊ ಅನ್ನೋದನ್ನ ಗುಟ್ಟಾಗಿ ಹೇಳೋಕ್ಕೆ ಬಳ್ಸೋ ಕೋಡ್ ವರ್ಡ್ಸ್ ಆಗಿದ್ವು ಅವು. ಭ್ರೂಣದ ಲಿಂಗ ಬಹಿರಂಗಪಡಿಸೋದು ನಿಷಿದ್ಧ ಅಂತಾದ ಮೇಲೆ ಈ ದಾರಿ ಹುಡುಕಿಕೊಂಡಿದ್ರು. ಗೊತ್ತಾಯ್ತಲ್ಲ, ಜೈ ಮಾತಾ ದಿ ಅಂದ್ರೆ ಹೆಣ್ಣು ಭ್ರೂಣ ಕಣ್ರೀ ಅನ್ನೋ ಸಿಗ್ನಲ್.
-ಮಾಲತಿ ಎಸ್
ಒಬ್ಬ ವೈದ್ಯನಾಗಿ ನಾನು ಅದೆಷ್ಟೋ ಹೆಣ್ಣು ಭ್ರೂಣಗಳ ಮೂಕ ಸಾವಿಗೆ ಸಾಕ್ಷಿಯಾಗಿದ್ದೇನೆ. ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ಭ್ರೂಣದ ಲಿಂಗ ಕುರಿತು ಹೇಳಲು ಒಪ್ಪದ ದಿಟ್ಟ ನಿಲುವಿನ ತಜ್ಞರನ್ನು ಕಂಡಾಗ ಮೆಚ್ಚಿಕೊಂಡಿದ್ದೇನೆ. ಈ ಇಡೀ ದುಷ್ಕೃತ್ಯದಲ್ಲಿ ಭಾಗಿಯಾಗಿರೋದು ನಮ್ಮದೇ ವೈದ್ಯಕೀಯ ಸಮುದಾಯ ಅಂತಾ ಹೇಳೋಕ್ಕೆ ನಾಚಿಕೆಯಾಗುತ್ತೆ.
ಕುಟುಂಬದಲ್ಲಿ ಮತ್ತೊಂದು ಹೆಣ್ಣುಮಗು ಬರೋದನ್ನು ಹೇಗಾದ್ರೂ ತಪ್ಪಿಸಬೇಕು ಅನ್ನೋ ತಪ್ಪು ಧಾವಂತದಲ್ಲಿರೋ ಮಿಡ್ಲ್ ಕ್ಲಾಸಿನ ಪೋಷಕರಿಗೆ ನೆರವಾಗ್ತೀವಿ ಅನ್ನೋ ಸೋಗಿನಲ್ಲಿ ದುಡ್ಡು ಸುಲಿಯುವ ಪರಮ ದುರಾಸೆಯಲ್ಲದೆ ಮತ್ತೇನೂ ಅಲ್ಲ ಇದು. ಇದರ ವಿರುದ್ಧ ಬೇರೆ ಬೇರೆ ಹಂತಗಳಲ್ಲಿ ಫೈಟ್ ಆಗ್ಬೇಕು. ಅಂಥ ನರ್ಸಿಂಗ್ ಹೋಂಗಳ (ನರ್ಸಿಂಗ್ ಹೋಂಗಳಲ್ಲ, ಅವನ್ನು ಕಸಾಯಿ ಖಾನೆಗಳು ಅಂತ ಕರೆಯೋದೇ ಸರಿ) ವಿರುದ್ಧ ದಂಡ ಹಾಕ್ಬೇಕು. ಅಂಥ ಕಟುಕ ಡಾಕ್ಟರ್ ಗಳಿಗೂ ತಕ್ಕ ಶಿಕ್ಷೆಯಾಗ್ಬೇಕು. ಅವರ ರಿಜಿಸ್ಟ್ರೇಷನ್ ಕ್ಯಾನ್ಸಲ್ ಮಾಡಿದರೂ ಸರಿಯೆ.
-ಡಾ. ಸತ್ಯನಾರಾಯಣ ಭಟ್
0 ಪ್ರತಿಕ್ರಿಯೆಗಳು