ಕೃಷ್ಣಾ ಕೌಲಗಿ
‘ದುಃಖ’
-ವೆಂದರೆ,
ನನಗೆ ಬೇರೆಯದೇ ಒಂದು ಭಾವವಿತ್ತು-
ಅದು-
ಮನಸ್ಸಿಗೆ ಹತ್ತಿರವಾದವರ
ಸಾವು- ನೋವಿನಲ್ಲಿದೆ ಎಂಬುದೊಂದು
ಅನಿಸಿಕೆಯಿತ್ತು…
ಅದನ್ನು ದಾಟಿ ದಡ ಸೇರುವದು ನಿಜಕ್ಕೂ ತೀರದ ‘ಸೆಣಸಾಟ’
ಅಂದುಕೊಂಡಿದ್ದೆ…
ಇಲ್ಲ –
ಹಾಗೆ ದಾಟಿ ಸೇರಬಹುದಾದ ದಡವೆಂಬುದು ಇಲ್ಲವೇಯಿಲ್ಲ-
ಎಂಬುದೀಗ ನನಗೆ ಅರಿವಾಗಿದೆ…
ಏನಿದ್ದರೂ ಅದನ್ನು ತಾಳಿಕೊಳ್ಳಬೇಕು,
ಅದರೊಂದಿಗೆ ರಾಜಿಯಾಗಬೇಕು,
ಕೊನೆಯವರೆಗೂ ಅದು ಇರುವದೇ ಎಂಬ ಸತ್ಯವನ್ನು ಒಪ್ಪಿಕೊಳ್ಳಲೇಬೇಕು-

ದುಃಖವೆಂದರೆ ಅನುಭವಿಸಿ ಮುಗಿಸಬಹುದಾದದ್ದಲ್ಲ,
‘ಮುಗಿಯಿತು’ ಎಂದು ನಿರಾಳವಾಗುವದಂತೂ ಅಲ್ಲವೇ ಅಲ್ಲ-
ಅದೆಂದರೆ, ಒಂದು ಪರಿಹಾರ,
ನಮ್ಮೊಳಗೇ ಇರುವ
ಒಂದು ಗುಣಾತ್ಮಕ ಅಂಶ…
ನಮ್ಮೊಳಗೇ ಆಗಬೇಕಾದ ಆಂತರಿಕ
ಬದಲಾವಣೆ…
ನಮ್ಮನ್ನೇ ನಾವು ಕಂಡುಕೊಳ್ಳುವ ಹೊಸದೊಂದು ಅರಿವು…
ಅಷ್ಟೇ-
ಬರೀ ಅಷ್ಟು ಮಾತ್ರವೇ…
(ಈ ಅರಿವು ಮೂಡಿ ಈ ನವರಾತ್ರಿಗೆ ಮೂವತ್ತೊಂಬತ್ತು ವರ್ಷಗಳು…)






0 Comments