ಪ್ರಕಾಶ್‍ ಕೊಡಗನೂರ್ ಕವಿತೆ- ತಪ್ಪಿದರೆ..!!

ಪ್ರಕಾಶ್‍ ಕೊಡಗನೂರ್

1. ತಪ್ಪಿದರೆ..!!

ತಪ್ಪಿನ
ಕಾರಣ ಹಿನ್ನೆಲೆ
ಏನೇ ಇರಲಿ
ತಪ್ಪಿತಸ್ಥ
ಯಾರೇ ಆಗಲಿ
ತಪ್ಪುಗಳು
ಬುಲೆಟ್ಟಿನಂತೆ ಸ್ಫೋಟಿಸುತ್ತವೆ;
ತಪ್ಪುಗಳು
ತಪ್ಪುಗಳಾಗೇ ಉಳಿದುಬಿಡುತ್ತವೆ!!

ಒಂದೆಡೆ ತಪ್ಪಿತಸ್ಥನ
ಕುಟುಂಬಸ್ಥರು ಸಂಬ೦ಧಿಕರ
ಮಾನ ಪ್ರಾಣಗಳೆಲ್ಲ
ಭೀಕರ ದಾಳಿಗೆ ತುತ್ತಾದರೆ
ಮತ್ತೊಂದೆಡೆ ಅವನ
ಸ್ನೇಹಿತರು ಪ್ರೀತಿಪಾತ್ರರು
ಸಹಾನುಭೂತಿಯುಳ್ಳವರ
ಹೃದಯ ಮೆದುಳುಗಳೆಲ್ಲ
ಬರಸಿಡಿಲಿಗೆರಗಿದ ಕುರಿಗಳಾಗುತ್ತವೆ!!

ಇದಲ್ಲದೆ
ಸಹಜ ಸರ್ವಾಂತರ್ಯಾಮಿ
ತಪ್ಪುಗಳು ಮೆರೆದಿರುವುದು
ಸಾರ್ವತ್ರಿಕ ಸತ್ಯ;
ಕೃತ್ರಿಮವಲ್ಲದ
ಅನರ್ಥವೆಸಗದ ತಪ್ಪುಗಳು
ಇಂದಿಗೂ ಪಥ್ಯ!!

ತಪ್ಪುಗಾರರೇ
ಎಚ್ಚರ ಕಟ್ಟೆಚ್ಚರ:
ತಪ್ಪಿದರೆ
ಒಪ್ಪುವ ಹಾಗಿರಲಿ ನರ;
ಇಲ್ಲದಿರೆ
ಸಂಬ೦ಧಗಳೆಲ್ಲ ಬರ್ಬರ!!

2. ಅಂದರ್-ಬಾಹರ್

ಕತ್ತಿಯಲಗಿನ ಮೇಲೆ
ಬದುಕು ಗಿರಗಟ್ಲೆ
ಧೇನಿಸುತಾ ಹಿಂಸೆ;
ಚಿತೆಯಾಗುವ
ಜೀವಕೂ ಚಿಂತೆ!!

ನ್ಯಾಯದ ದನಿಯೊಳಗೆ
ಅನ್ಯಾಯದ ಬೆಳವಣಿಗೆ
ಅಹಿಂಸೆಯ ಪಥದೊಳಗೆ
ಕಾರ್ಯದ ಮೆರವಣಿಗೆ

ಮಾಸ್ತರನ ಮುಖವಾಡದಲಿ
ಜಾರಿಣ ಯ ಕಾಯಕ
ಪ್ರೇಮದ ಅಮಲಿನಲಿ
ವಿರಹದ ನರಕ

ಸಾಲವೆಂಬ ಆಸ್ತಿಯೆನಗೆ
ಬಗೆಹರಿಯದ ಭಾರತ
ದಾರಿದ್ರ್ಯವೇ ಪ್ರಾರಬ್ಧವಾಗಿ
ನಲುಗುತಿರುವೆ ಅನವರತ

ಕಾಳ್ಗಿಚ್ಚಿನೊಳಗೆ ನಾನೊ
ನನ್ನೊಳಗೆ ಕಾಳ್ಗಿಚ್ಚೊ?

ಜಿಜ್ಞಾಸೆಯೊಂದಿಗೇ
ಮೈ ಮನದ ದಹನ;
ಬಯಕೆಗಳೊಂದಿಗೇ
ಜೀವಾತ್ಮದ ಕದನ!!

3. ಎಚ್ಚರ

ತತ್ವ
ಸಿದ್ಧಾಂತಗಳು
ಉದಯಿಸಿದವು
ಬೆಳೆದವು
ಬೆಳಗಿದವು
ಮನುಕುಲದ
ಇತಿಹಾಸ
ಬದಲಿಸಿದವು

ತಲೆಮಾರುಗಳ
ಸವೆಸುತಲೇ
ಹಸಿರುಳಿಸಿದ
ಸಮಸಮಾಜದ
ಕನಸುಗಾರರು
ಹೆಸರಾದರು;
ಲೋಕಕೂ
ಮಾನ್ಯರಾದರು

ಬರಬರುತ್ತಾ
ಕಾಲದ
ದನಿಗೆ
ಓಗೊಡದ
ತತ್ವ
ಸಿದ್ಧಾ೦ತಗಳು
ಸ೦ವೇದನಾ
ಶೂನ್ಯವಾದವು;
ದ೦ಧೆಕೋರರ
ದಾಳಗಳಾಗಿಯೂ
ಚಲಾವಣೆಗೊ೦ಡವು

ನೆನಪಿರಲಿ
ಹೆಜ್ಜೆಯೊ೦ದು
ಮು೦ದೆ
ಹೆಜ್ಜೆಯೆರಡು
ಹಿ೦ದೆ
ಸಾಗಿದ೦ತೆ
ಪ್ರಗತಿಪಥ
ಕ್ಲೀಷೆ
ಸಹಜ

ಎಲೆ
ಮನುಜ
ಎಚ್ಚರ
ಅರಿವು
ಗುರುವಾಗಲಿ
ನಿರ೦ತರ

‍ಲೇಖಕರು Admin

October 8, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: