ಕೃತಿಯ ನರ್ಸಿಂಗ್ ಡೈರಿಯ ಒಂದು ದಿನ…

ದಾಕ್ಷಾಯಿಣಿ

ಬೆಳಗ್ಗೆ ಒಂಬತ್ತು ಗಂಟೆಗೆ ಕೆಲಸಕ್ಕೆ ಬಂದ ಕೀರ್ತಿಗೆ ಗಂಟೆ  ಹನ್ನೆರಡಾದರೂ ಕೈ ಬಿಡುವೇ ಆಗಿರಲಿಲ್ಲ,, ಚಿಕ್ಕಬಳ್ಳಾಪುರದ ಒಂದು ತಾಲ್ಲೂಕಿನ ಗವರ್ನಮೆಂಟ್ ಆಸ್ಪತ್ರೆಗೆ ನರ್ಸ್ ಆಗಿ ಕೆಲಸಕ್ಕೆ ಇತ್ತೀಚೆಗಷ್ಟೇ ಸೇರಿದ್ದಳು. ಇನ್ನೂ ಪ್ರೊಬೆಷನರಿ ಅವಧಿಯೂ ಮುಗಿದಿರಲಿಲ್ಲ… ಕೋಗಿಲು ಕ್ರಾಸಿನ ಹತ್ತಿರದ ಒಂದು ಹಳ್ಳಿಯಲ್ಲಿ ಹುಟ್ಟಿ ಬೆಳೆದ ಕೀರ್ತಿ ಅಪ್ಪ ಅಮ್ಮನಿಗೆ ಒಬ್ಬಳೇ ಮಗಳಾಗಿದ್ದರೂ ಕಿತ್ತುತಿನ್ನುವ ಬಡತನ ಈಗಾಗಲೇ ಮನೆಯಲ್ಲಿ ಪಟ್ಟುಹಿಡಿದು ವಾಸ ಮಾಡುತ್ತಿದ್ದ ಕಾರಣ ಅಂತಹಾ ಸುಖವನ್ನೇನೂ ಕಂಡವಳಲ್ಲ.

ಕಷ್ಟ ಪಟ್ಟು ಹೇಗೋ ನರ್ಸಿಂಗ್ ಕೋರ್ಸ್ ಮಾಡಿಕೊಂಡಿದ್ದಳು, ಬಡತನ ಅವಳಿಗೆ ಇದ್ದಿದ್ದರಲ್ಲಿ ಬದುಕುವ ಮತ್ತು ಇತರರೊಂದಿಗೆ ಅಡ್ಜಸ್ಟ್ ಮಾಡಿಕೊಂಡು ಬದುಕುವುದನ್ನ ಸಹಜವಾಗಿ ಕಲಿಸಿತ್ತು, ಕಷ್ಟದ ಒಳಗೇ ಬದುಕಿದವಳಾಗಿದ್ದರಿಂದ ತನ್ನ ಕೈಲಾದಷ್ಟೂ ಬಡವರಿಗೆ ಸಹಾಯ ಮಾಡಬೇಕು ಎನ್ನುವ ಭಾವನೆ ಇಟ್ಟುಕೊಂಡಿದ್ದಳು.

ಹಾಗಾಗಿಯೇ ನರ್ಸಿಂಗನ್ನು ವೃತ್ತಿಯಾಗಿಯೂ ಆರಿಸಿಕೊಂಡಿದ್ದಳು. ಅವಳು ಕೆಲಸಕ್ಕೆ ಸೇರಿದ ಕೆಲವೇ ದಿನಗಳಿಂದಲೇ ದೇಶಾದ್ಯಂತ ಕೋವಿಡ್ ಎಂಬ ಮಹಾಮಾರಿ ತನ್ನ ಕೆನ್ನಾಲಿಗೆಯನ್ನ ಚಾಚಿ ಹರಡತೊಡಗಿತ್ತು, ಕಾಯಿಲೆಯ ಹಿನ್ನೆಲೆ, ಪರಿಣಾಮ, ಚಿಕಿತ್ಸಾ ಪದ್ಧತಿ, ಮೆಡಿಸನ್ ಇದಾವುದರ ಬಗ್ಗೆಯೂ ಯಾವುದೇ ತರಬೇತಿಗೂ ಇವರಿಗೆ ಅವಕಾಶವನ್ನೇ ನೀಡಲಿಲ್ಲ ಈ ಖಾಯಿಲೆ, ಡಾಕ್ಟರುಗಳೇ ಗೊಂದಲದಲ್ಲಿ ಮುಳುಗಿದ್ದರು, ಆಸ್ಪತ್ರೆಯಂತೂ ಛತ್ರದಂತೆ ತುಂಬಿ ತುಳುಕುತ್ತಿತ್ತು, ದಿನ ಬೆಳಗಾದರೆ ಸಾವು ಸಾವು ಸಾವು, ಪೋಷಕರ ರೋಧನೆ ಪ್ರತಿರೋಧ ಅಬ್ಬಬ್ಬಬ್ಬಬ್ಬ ಒಂದಾ ಎರಡಾ, ಯಾಕಾದರೂ ಕುಣ್ಕೊಂಡ್ ಕುಣ್ಕೊಂಡು ಈ ನರ್ಸಿಂಗ್ ಕೆಲಸಕ್ಕೆ ಸೇರಿದೆನೋ ಎಂದು ಹಣೆ ಚಚ್ಚಿಕೊಳ್ಳುವಂತಾಗಿತ್ತು ಅವಳ ಸ್ಥಿತಿ, ಸದಾ ಕಿಕ್ಕಿರಿದ  ರೋಗಿಗಳ, ಸೋಂಕಿತರ ನಡುವೆಯೇ ಕೆಲಸ, ಅದೆಷ್ಟೇ ಎಚ್ಚರವಾಗಿದ್ದರೂ ಕಡಿಮೆಯೇ, ಮಾಸ್ಕ್, ಪಿಪಿಯಿ ಕಿಟ್ ಧರಿಸಿಯೇ ಕೆಲಸ, ಅಕ್ಷರಶಃ ಮೃತ್ಯುವಿನ ಬಾಯೊಳಗೇ ಕುಳಿತಂತಹಾ ಭಾವ, ಅದಾವಾಗ ಅದು ನನ್ನನ್ನೂ ನುಂಗಿ ನೀರುಕುಡಿದು ಬಿಡುತ್ತದೋ ಎಂಬ ಭಯ.

ನೆನ್ನೆ ತಾನೇ ಗೆಳತಿ ಮೇರಿ ಸಿಸ್ಟರ್ ಗೆ ಪಾಸಿಟಿವ್ ಆಗಿ ನಾಲ್ಕನೇ ದಿನಕ್ಕೆ ಹೆದರಿ ಹಾರ್ಟ್ ಅಟ್ಯಾಕ್ ಆಗಿ ಕಣ್ಣಮುಂದೆಯೇ ಕೊನೆ ಉಸಿರು ಎಳೆದಿದ್ದು ಅವಳ ಕಣ್ಣಿಗೆ ಕಟ್ಟಿದಂತಿದೆ, ಇಬ್ಬರು ಸಹೋದ್ಯೋಗಿಗಳಿಗೆ ಈಗಾಗಲೇ ಪಾಸಿಟಿವ್ ಬಂದಿದೆ. ‘ಸಿಸ್ಟರ್ ಏನ್ ಯೋಚಿಸ್ತಿದಿರಾ, ಆ ಮೂರನೇ ಬೆಡ್ ಪೇಷಂಟ್ ನ ಸ್ವಲ್ಪ ನೋಡಿ’ ಎಂದ ಡಾಕ್ಟರ್ ಧ್ವನಿಗೆ ಬೆಚ್ಚಿದ ಕೀರ್ತಿ ಯೋಚನೆಯನ್ನ ಅರ್ಧಕ್ಕೇ ತುಂಡರಿಸಿ ಮತ್ತೆ ಕೆಲಸದಲ್ಲಿ ತೊಡಗಿಕೊಂಡಳು. ಸತತ ಎರಡು ಗಂಟೆಯವರೆಗೂ ಊಟಕ್ಕೂ ಸಮಯ ಸಿಗದಷ್ಟು ಸೋಂಕಿತರು, ಇವತ್ತು ಡೆತ್ ರೇಟ್ ಬೇರೆ ಹೆಚ್ಚಾಗಿತ್ತು, ಸುಮನಾ ಸಿಸ್ಟರ್ ಮಧ್ಯಾನ್ಹದ ಡ್ಯೂಟಿಗೆ ಬಂದರು ಈಗ ಸ್ವಲ್ಪ ಬಿಡುವು ಸಿಕ್ಕಂತೆ ಅನಿಸಿ ಒಂದು ನಿಟ್ಟುಸಿರು ಬಿಟ್ಟವಳು ಸೀದಾ ಬಾಲ್ಕನಿಗೆ ಬಂದು ಕುಳಿತಳು.

ಮನಸು ಒಂದು ಕಾಫಿಯನ್ನ ಬಲವಾಗಿ ಬಯಸ್ತಿತ್ತು, ಆದರೆ ಸ್ಯಾನಿಟೈಸ್ ಆಗದೆ ಏನನ್ನೂ ಕುಡಿಯುವಂತಿಲ್ಲ,,ಹತ್ತು ಹಲವು ಬಾರಿ ಸ್ಯಾನಿಟೈಸರ್ ಬಳಸೀ ಬಳಸೀ ಅದರ ವಾಸನೆಯೇ ಅಸಹ್ಯ ಬರಿಸುತ್ತಿತ್ತು, ಆ ಪಿಪಿಯಿ ಕಿಟ್ ಅಂತೂ ದೇವರಿಗೇ ಪ್ರೀತಿ, ಸಂಜೆಯೊತ್ತಿಗೆ ಬೆವರಿನ ಸ್ನಾನವೇ ಆಗಿ ಹೋಗಿರುತ್ತಿತ್ತು. ಮೊದಲೆಲ್ಲಾ ಆಸ್ಪತ್ರೆಯ ಕಟ್ಟಡದ ಹಿಂಬದಿಯಲ್ಲಿದ್ದ ಮರಗಳಿಂದ ಬರುತ್ತಿದ್ದ ತಣ್ಣನೆಯ ಗಾಳಿಗೆ ಮುಖ ಒಡ್ಡಿ ಇಲ್ಲಿ ನಿಲ್ಲುವುದು ಅವಳಿಗೆ ಬಹಳ ಇಷ್ಟದ ವಿಷಯವಾಗಿತ್ತು, ಈಗ ಅದೆಲ್ಲ ಸಾಧ್ಯವಿಲ್ಲ, ಮುಖದ ಮಾಸ್ಕನ್ನೂ ತೆಗೆಯಲು ಆಗದಂತಹ ಪರಿಸ್ಥಿತಿ.

ಬಹಳಾ ಆಸೆ ಪಟ್ಟು ಒಂದಷ್ಟು ನೈತಿಕ ನೆಲೆಯಲ್ಲಿ, ಜನರ ಸೇವೆ ಮಾಡುವ ಸದುದ್ಧೇಶದಿಂದ ಬಯಸೀ ಬಯಸೀ ನರ್ಸ್ ಕೆಲಸವೇ ಬೇಕೆಂದು ಈ ಕೆಲಸಕ್ಕೆ ಸೇರಿದ್ದಳು, ಆಸ್ಪತ್ರೆ, ಅದರ ಒಳಗಿನ ರಾಜಕೀಯ, ಅಲ್ಲಿ ನಡೆವ ಮೋಸ, ವಂಚನೆಗಳು ಕೀರ್ತಿಯ ಉತ್ಸಾಹದ ಬಲೂನಿಗೆ ಸೂಜಿ ಚುಚ್ಚಿ ಟುಸ್ ಅನಿಸಿಬಿಟ್ಟಿದ್ದವು. ಹಿರಿಯ ನರ್ಸ್ ಗಳ ದಬ್ಬಾಳಿಕೆ… ಇವಳನ್ನು ಟ್ರೈನಿ ಎಂಬಂತೆ ನೋಡುತ್ತಾ ಆದಷ್ಟು ಕೆಲಸಗಳನ್ನು ಇವಳ ಬಳಿಯೇ ಮಾಡಿಸುತ್ತಾ ಹಿಂಸಿಸುವುದು ಇವೆಲ್ಲಾ ಕಾಮನ್ ಆಗಿದ್ವು.

ಈ ಕೋವಿಡ್ ಹರಡಿದಂತೆಲ್ಲಾ ಆಸ್ಪತ್ರೆಯ ವಾತಾವರಣ ಇನ್ನಷ್ಟು ಹದಗೆಟ್ಟಿತು, ಅಡ್ಮಿಷನ್ ಗೆ, ಬೆಡ್ ಬಗ್ಗೆ, ಇಂಜೆಕ್ಷನ್ ಬಗ್ಗೆ ಸದಾ ಫೋನ್ ಕಾಲ್ಗಳು, ಗಾಬರಿ ಗೊಂದಲಕ್ಕೆ ಸಿಕ್ಕಿದ ಜನರ ಪ್ರಶ್ನೆಗಳು, ಸಾವು ಇವೆಲ್ಲಾ ಅದೆಷ್ಟೇ ನಿರ್ಲಿಪ್ತವಾಗಿ ಇರಬೇಕು ಎಂದುಕೊಂಡರೂ ಮನಸ್ಸನ್ನ ಕೆಡಿಸೇ ಬಿಡ್ತಿದ್ವು. ಇದರ ನಡುವೆಯೂ ನಿಸ್ವಾರ್ಥ ವಾಗಿ ಕೆಲಸ ಮಾಡುವ ಕೆಲವು ಡಾಕ್ಟರ್ಗಳು ಮತ್ತು ಸಿಬ್ಬಂಧಿಗಳು ಅವಳ ಮನಸ್ಸಿಗೆ ಖುಷಿಯನ್ನ ತರ್ತಿದ್ರು, ಬೆಂಗಳೂರಿನಲ್ಲಿದ್ದ ಅಪ್ಪ ಅಮ್ಮನ ಮುಖ ನೋಡಿಯೇ ತಿಂಗಳ ಮೇಲಾಗುತ್ತಾ ಬಂದಿತ್ತು.

ರಜೆ ಎಂಬ ಸೊಲ್ಲನ್ನೂ ಎತ್ತುವಂತಿರಲಿಲ್ಲ ಆಸ್ಪತ್ರೆಯಲ್ಲಿ ಈಗ, ಅವಳದ್ದು ಸೇವೆ ಮಾಡುವ ಸ್ವಭಾವ ಆದ್ದರಿಂದ ರೋಗಿಗಳ ಸೇವೆಯನ್ನು ಮನಸ್ಸಿಟ್ಟು ಮಾಡ್ತಿದ್ಳು. ಯೋಚನೆಯಿಂದ ಹೊರಬಂದು ಫೋನಿನಲ್ಲಿ ಟೈಮ್ ನೋಡಿದಳು ಕೀರ್ತಿ, ಅವ್ವ ಇಷ್ಟೊತ್ತಿಗೇ ಎಲ್ಲಿ ಮಲ್ಗಿರ್ತಾಳೆ, ಅವಳ ಕಣ್ಣು ನಿದ್ದೆ ನುಂಗಿ ಅದೆಷ್ಟು ದಿನಗಳಾದ್ವೊ ಅನ್ಕೊಂಡವಳು ತಾಯಿಗೆ ಕಾಲ್ ಮಾಡಿದಳು, ಅಪ್ಪನಿಗೆ ಕರೋನ ಆಗಿರುವ ಬಗ್ಗೆ ಫೋನಿನಲ್ಲಿ ಚಿಕ್ಕಪ್ಪ ಮೊನ್ನೆಯೇ ಹೇಳಿದ್ದ, ಇಲ್ಲಿಯ ಕೆಲಸವನ್ನು ಬಿಟ್ಟಾಗಲಿ, ರಜೆಯನ್ನು ಪಡೆದಾಗಲಿ ಹೋಗುವ ಯೋಚನೆಯನ್ನೂ ಅವಳು ಮಾಡುವಂತಿರಲಿಲ್ಲ, ಆದ್ದರಿಂದ ಪ್ರೀತಿಯ ಅಪ್ಪನ ಫೋಟೋ ಹಿಡಿದು ಅಳುವುದು, ಮತ್ತು ಫೋನಿನಲ್ಲೇ ಎಷ್ಟು ಸಾಧ್ಯವೋ ಅಷ್ಟು ಸಲಹೆ, ಸಹಾಯ ಇಷ್ಟೇ ಮಾಡಲು ಸಾಧ್ಯವಾಗಿತ್ತು.

ಕಾಯಿಲೆಯ ತೀವ್ರತೆಯ ಅರಿವಿದ್ದ ಅವಳಿಗೆ,ಬೆಂಗಳೂರಿನ ಆಸ್ಪತ್ರೆಗಳ ಸ್ಥಿತಿಯ ಬಗ್ಗೆಯೂ ಗೊತ್ತಿತ್ತಲ್ಲಾ, ಅಪ್ಪನ ಚಿಂತೆ, ಮತ್ತು ಮನೆಯ ಕಿತ್ತು ತಿನ್ನುವ ಬಡತನ, ಮತ್ತಷ್ಟು ಚಿಂತೆ ಮಾಡುವಂತೆ ಮಾಡಿದ್ದವು, ಫೋನ್ ಮಾಡಿದ್ದೇ ತಡ ಇವಳ ಫೋನಿಗೇ ಕಾದಿದ್ದವಳಂತೆ ಅವ್ವ ಒಂದೇ ರಿಂಗಿಗೆ ಫೋನೆತ್ತಿದಳು. ಪುಟ್ಟೀ ಎಂದು ಅಳೋದಕ್ಕೇ ಶುರು ಮಾಡಿದಳು. ಅವ್ವನ ನೋವನ್ನು ಸ್ವಲ್ಪನಾದ್ರೂ ಕಡಿಮೆ ಮಾಡೊಣ ಅಂದುಕೊಂಡಳು ಕೀರ್ತಿ, ಅವ್ವಳಿಗೆ ಸಧ್ಯಕ್ಕೆ ಅಪ್ಪನ ಆರೋಗ್ಯ ಸರಿಯಾಗಲು ಬೇಕಾದ ದುಡ್ಡಿನ ವ್ಯವಸ್ಥೆ ಆಗಬೇಕಿದೆ ಅಂತ ಮೊದಲೇ ಗೊತ್ತಿತ್ತಲ್ಲ ಇವಳಿಗೆ, ‘ಇನ್ನೂ ಈ ತಿಂಗಳ ಸಂಬಳ ಆಗಿಲ್ಲ ಕಣವ್ವ, ಬೆಳಗ್ಗೆ ಆಗಬಹುದು ಹತ್ತು ಗಂಟೆಯ ಒಳಗೆ ಫೋನ್ ಪೇ ಮಾಡ್ತಿನಿ ಅಂದ್ಲು’.

ಪುಟ್ಟೀ, ನಿನ್ ಅಪ್ಪ ಉಳಿತಾನೆ ಅನ್ನೊ ನಂಬ್ಕೆನೇ ಬುಟ್ಬುಟ್ಟಿದ್ದೆ ಕಣೇ, ಕರೋನ ಅಂತ ಮನೆಲ್ ಕುಂತ್ಕಂಡ್ರೆ ಹೊಟ್ಟೆ ತುಂಬ್ತದಾ ಅಂತ ಕೆಲ್ಸಕ್ ಹೋಗದ ನಿಲ್ಲಿಸ್ಲಿಲ್ಲ ನಿಮ್ಮಪ್ಪ, ನೀನು ಕಳ್ಸಿದ್ದಲ್ಲ ಆ ಮುಸ್ಕು, ಗ್ಲಾವ್ಸ್ ಎಲ್ಲನೂ ಆಕ್ಕಳನು, ಅವನ್ದು ಬೇರೆ ಆಸ್ಪತ್ರೆ ಟಾಯ್ಲೆಟ್ ತೊಳ್ಯ ಕೆಲ್ಸ, ಅದೆಂಗ್ ಬಂತೋ ಏನೋ, ಹಾಳ್ಗೇರಿದು, ಮೊನ್ನೆ ಇಂದನೇ ಜ್ವರ ಕಾಣುಸ್ಕಂಡದೆ.

ಇವ್ನು ನಂಗೆ ಏಳೇ ಇಲ್ಲ, ನರ್ಸಿನ್ತವ ಮಾತ್ರೆ ಇಸ್ಕಂಡು ನುಂಕಂಡು ಸುಂಕವ್ನೆ, ಅಂಗೂ ಮೊನ್ನೆ ನಡಿ ಆಸ್ಪತ್ರೆಗೋಗನ ಅಂತ ನಾನು ಬಯ್ಯವತ್ಗೆ, ಆಸ್ಪತ್ರೆ ಕತೆ ನಂಗಿಂತ ನಿಂಗ್ ಗೊತ್ತದಾ, ಅಲ್ಲಿ ಎಷ್ಟ್ ಕಷ್ಟ ಅನ್ನದ ದಿನಾ ನೋಡ್ತಿವ್ನಿ, ಸಾಯ್ತರೆ ಜನಾ ಕಣ್ಮುಂದೆಯ ಅಂತ ಸುಮ್ನಿರಿಸ್ದ, ನೆನ್ನೆ ನೋಡುದ್ರೆ ಜಾಸ್ತಿನೇ ಆಗೋಯ್ತು, ಉಸ್ರು ಮ್ಯಾಕೆಳಿತಿದ್ದ, ವಿಪ್ರೀತ ಜ್ವರಾ, ನೀರ್ಕೊಡೆ ಅಂತ ಬಡ್ಕತಾವ್ನೆ, ಜನಾ ಇದು ಕರೋನನೆಯ.. ನಿಂಗೂ ಬತ್ತದೆ, ಹತ್ರುಕೋಗ್ಬೇಡ ಅಂತಾವ್ರೆ. ಅವ್ನ್ ಅವಸ್ಥೆ ನೋಡಕಾಯ್ತಿರ್ಲಿಲ್ಲ ಕಣೇ, ನಾನು ತಾನೇ ಹೆಂಗ್ ಸುಮ್ನಿರ್ಲಿ ಹೇಳು, ಆದದ್ದಾಗ್ಲಿ ಅಂತ ಬಾಯ್ತಕೆ ಚೊಂಬಿಡ್ದು ವಸಿ ದೂರ್ದಲೇ ನಿಂತ್ಕಂಡು ಊದೆ ನೀರ, ಅದೇನ್ ಅವನ ಬಾಯಿಗ್ ಬಿದ್ವೋ,‌ ಕುಡುದ್ನೋ ಕುಡಿನೇ ಇಲ್ವೋ ಗೊತ್ತೇ ಆಗ್ಲಿಲ್ಲ, ಪಕ್ಕದ್ ಮನೆರು, ಏರಿಯಾ ಎಮ್ಮೆಲ್ಲೆಗೆ, ದೊಡ್ಡಗೌಡ್ರಿಗೆ ಎಕ್ರುಗೂ ಪೋನ್ ಮಾಡಿದ್ರು, ಯಾರಿಗ್ ಫೋನ್ ಮಾಡಿದ್ರೂ… ಒಂದ್ ಆಂಬಿಲೆನ್ಸ್ ಕಳ್ಸಿ ಅಂತ ಗೋಗರುದ್ರೂ ಏನೂ ಪ್ರಯೋಜ್ ನ ಆಗ್ಲಿಲ್ಲ ಕಣವ್ವಾ… ಅಷ್ಟರಲ್ಲಿ ನೀ ಅದ್ಯಾರ್ಗೋ ಏಳಿದ್ದಂತಲ್ಲ ಆ ಹುಡ್ಗ ಪಾಪ ಆಟೋ ತಗಂಡ್ ಬಂತು ದೇವ್ರಂಗೆ.

ಒಂದೇ ಸಮ ಕಣ್ಣೀರಾಕ್ತಾ,, ಮೂಗೊರುಸ್ಕತ್ತಾ ಅವ್ವ ಹೇಳ್ತಾನೇ ಇದ್ಲು, ಅವ್ವಾ ಅಳ್ಬೇಡ ಸ್ವಲ್ಪ ಸಮಾಧಾನವಾಗಿರು ಅಂದ್ಲು ಕೃತಿ ಮೆಲ್ಲಗೆ,
ಅವ್ವ ಹೇಳದ್ನ ಹಾಗೇ ಕೇಳ್ತಾ ಕೇಳ್ತಾ ಎದುರಿಗೆ ಕಾಣುತ್ತಿದ್ದ ಕಾರಿಡಾರನ್ನು ನೋಡಿದಾಗ ಕೃತಿಗೆ ಅಲ್ಲಿ ಕುಳಿತಿದ್ದ ರೋಗಿಗಳ ಸಂಬಂಧಿಕರ ಮುಖಗಳೆಲ್ಲಾ ಅವ್ವನ ಮುಖವಾಗಿ ಬದಲಾದಂತೆ ಕಂಡವು, ರೋಗಿಗಳೆಲ್ಲಾ ಅಪ್ಪನಾಗಿ ಬದಲಾಗಿದ್ದರು, ದುಃಖ ಉಮ್ಮಳಿಸಿ ಬಂದು, ಒಮ್ಮೆ ತಲೆ ಕೊಡವಿ,ಸುರಿದ ಕಣ್ಣೀರು ಮಾಸ್ಕನ್ನು ತೋಯಿಸದಂತೆ ಒರೆಸಿಕೊಂಡಳು.

ಅವ್ವ ಹೇಳ್ತಾನೇ ಹೋದ್ಲು, ಆಸ್ಪತ್ರೆಗೆ ಹೋಗಕೂ ಅದೆಷ್ಟು ಕಷ್ಟ ಆಯ್ತು ಗೊತ್ತಾ, ಆ ಹೆಬ್ಬಾಳ ದಾಟಿ ಬೋರಿಂಗ್ ಆಸ್ಪತ್ರೆ ತನ್ಕ ಬರೋವತ್ಗೆ ನಿಮ್ಮಪ್ಪ ಆಟೋದೊಳ್ಗೆ ಕುಲ್ಕಿ ಕುಲ್ಕಿ ಸೋತೋದ. ನನ್ಮೇಲೆ ಮಲ್ಗುಸ್ಕಂಡಿದ್ದೆ, ಕಾಯ್ಲೆ ನಂಗ್ ಬತ್ತದಂತ ನಿಮ್ಮಪ್ಪುನ್ ಸಾಯಕ್ ಎಂಗ್ ಬುಟ್ಬುಡ್ಲಿ ಹೇಳು, ನಂಗೊತ್ತು ಪುಟ್ಟೀ ನೀನು ಅವ್ವಾ ಅದೆಲ್ಲ ನೋಡ ಟೇಮಲ್ಲ ಇದು ವಸಿ ಪಾಕ್ಟಿಕಲ್ಲಾಗಿರು ಅಂತ ಬೈತಿಯ ಅಂತಾ, ಆದ್ರೆ ಅದೇನೋ ಆ ಕಲ್ಲು ಗಿಲ್ಲು ನಂಗೊತ್ತಿಲ್ಲ ಕಣೆ ಪುಟ್ಟಿ.

ನಿಮ್ಮಪ್ಪ ಬದುಕ್ಬೇಕು ಅಷ್ಟೇ ಆಗ ನಂಗ್ ಕಾಣ್ತಿದ್ದು, ಆ ಆಸ್ಪತ್ರೆನೋ ದನುದ್ ದೊಡ್ಡಿನೇ ಎಷ್ಟೋ ವಾಸಿ. ಜನಾ… ಪಿತಪಿತಾ ಅಂತಿದ್ರು. ಎಲ್ರುವೆ ಅದೆಂತದೋ ಸಿಲಿಂಡ್ರ ಇಡ್ಕ ಕುತಿದ್ರು. ಅದರ ಒಂದ್ ಬಾಗ್ಲುನ ಸತ್ತೋರ್ನ ಆಚಿಕಾಕಕೆ ಅಂತ ಬುಟ್ಟಿದ್ರು. ಇನ್ನೊಂದ್ನ ಒಳಿಕ್ ಕರ್ಕೊಂಡೋಗಕೆ ತೆಗ್ದಿದ್ರು. ಏಟೊತ್ತಾದ್ರೂ ನಮ್ ಕಡಿಕೆ ತಿರುಗ್ ನೋಡರೇ ಇಲ್ಲ ಅಲ್ಲಿ… ವತ್ತಾರೆ ಓಗಿದ್ದು. ಕಾದೂ ಕಾದೂ ಸಾಕಾಯ್ತು, ಕೊನಿಗೆ, ಅದೇ ನೀನು ಅದ್ಯಾರ್ಕೈಲೋ ಫೋನ್ ಮಾಡ್ಸುದ್ಮೇಲೆ ಬೆಡ್ ಸಿಕ್ತು, ಅದುಕ್ಕೂ ಅದೇಟೋ ದುಡ್ ಕೊಟ್ರೆಯ ಅಂದವ್ಳೆ ನರ್ಸಮ್ಮ. ನೀ ಬೆಳಿಗ್ಗೆ ದುಡ್ಡಾಕುದ್ರೆ ಈ ಬೆಡ್ ಉಳಿತದೆ ಕಣೆ ಪುಟ್ಟಿ,, ಇಲ್ಲಾಂದ್ರೆ… ಸೆರಗು ಬಾಯ್ಗೆ ತುರುಕಿ ಅಳತೊಡಗಿದಳು ಅವ್ವ. ‘ಅಳ್ಬೇಡ , ನಾ ಬೆಳ್ಗೆ ಹಾಕೇ ಹಾಕ್ತಿನಿ ದುಡ್ನಾ…’ ಅಂತ ಹೇಳ್ತಿದ್ದ  ಕೃತಿ ಡಾಕ್ಟರ್ ಕರೆದ ದನಿ ಕೇಳಿದವಳೇ ಊಟ ಮಾಡಬೇಕು ಅನ್ನೋದ್ನೂ ಮರೆತು ವಾರ್ಡಿನ ಕಡೆಗೆ ಹೊರಟ್ಳು. 

ಅದ್ಯಾರೋ ಸೆಲೆಬ್ರಿಟಿ ಅಂತೆ, ಫೋನಲ್ಲೇ ಯಾವುದೋ ರಾಜಕಾರಣಿ ಕಡೆಯಿಂದ ಸಿಫಾರಸ್ಸು ಮಾಡಿಸಿಕೊಂಡು ಮುಂಚೆಯೇ ಬೆಡ್ ಕೇಳಿದ್ದನಂತೆ, ಈಗಾಗಲೇ ಆ ಬೆಡ್ಡಿಗೆ ಪಕ್ಕದ ಹಳ್ಳಿಯ ರಂಗಪ್ಪನನ್ನ ಶಿಫ್ಟ್ ಮಾಡುವ ಮಾತಾಗಿತ್ತು. ಆದರೆ ಅವನು ಶ್ರೀಮಂತ ಅಲ್ವಲ್ಲ, ಅವನನ್ನ ಹಾಲಿಗೆ ಹಾಕಿ, ಬರಲಿದ್ದ ಅವನಿಗೆ ಬೆಡ್ ಲಾಕ್ ಮಾಡಲಾಯ್ತು,  ಆಗ ರಂಗಪ್ಪ ಅಸಹಾಯಕತೆಯಿಂದ ಕೀರ್ತಿಯನ್ನೇ ನೋಡತೊಡಗಿದ… ಅವನ ಕಣ್ಣುಗಳನ್ನ ಎದುರಿಸಲಾಗದೆ ತಲೆತಗ್ಗಿಸಿದಳು ಕೀರ್ತಿ, ಇಂಜೆಕ್ಷನ್‌ ಇತ್ಯಾದಿಗಳನ್ನ ಇವಳ ಕೈಗೆ ಕೊಟ್ಟ ಡಾಕ್ಟರ್ ರಾಜು, ಯಾರಿಗೂ ಕಾಣದಂತೆ ಜೋಪಾನವಾಗಿ ಇಡಲು ಸೂಚನೆ ಕೊಟ್ರು, ಮೆಡಿಸನ್ ಕಿಟ್ ಅನ್ನು ಕೈಯಲ್ಲಿ ಹಿಡಿದು ಮನಸ್ಸಿಲ್ಲದ ಮನಸ್ಸಿನಿಂದ ಔಷಧಿಯ ಕೊಠಡಿಗೆ ಹೋದಳು ಕೀರ್ತಿ.

ಹಣ ಒಂದಿದ್ದರೆ ಎಲ್ಲವನ್ನೂ ಪಡೆಯಬಹುದು ಎಂಬ ಶ್ರೀಮಂತರ ದೋರಣೆಯ ಬಗ್ಗೆ ಬಹಳಾ ಕೋಪ ಬಂತು, ಪ್ರಾಣ ಅಂತ ಬಂದಾಗ ಬಡವನ ಪ್ರಾಣಕ್ಕೆ ಬೆಲೆಯೇ ಇಲ್ಲವೆ, ಹಣ ಸಾಕಷ್ಟಿರುವಾಗ ಪ್ರೈವೇಟ್‌ ಆಸ್ಪತ್ರೆಗೆ ಹೋಗುವುದು ಬಿಟ್ಟು ಇನ್ಫ್ಲುಯೆನ್ಸ್ ಬಳಸಿ ಬಡವರಿಗೆ ಇರುವ ಔಷಧಿಯನ್ನು ಇವರು ಕಬಳಿಸುವುದು ಅದೆಷ್ಟು ಸರಿ ಎಂದೆಲ್ಲಾ ಯೋಚಿಸಿದಳು, ಆದರೆ ಇದಾವುದನ್ನೂ ಪ್ರಶ್ನೆ ಮಾಡಲು ಆಗದ, ಕಣ್ಣ ಮುಂದೆಯೇ ನಡೆವ ಅನ್ಯಾಯವನ್ನು ನಿಲ್ಲಿಸಲಾಗದ ತನ್ನ ಅಸಹಾಯಕತೆಯ ಬಗ್ಗೆ ಬೇಜಾರೂ ಆಯಿತು.

ಕೀರ್ತಿಯ ಫೋನ್ ಮತ್ತೆ ರಿಂಗಾಯ್ತು, ನೋಡಿದರೆ ಅವ್ವ ಮತ್ತೆ ಮಾಡಿದಾಳೆ, ಮಗಳೇ ಅಪ್ಪನ ಸ್ಥಿತಿ ಇನ್ನೂ ಹಾಳಾಗೋಯ್ತು ಕಣೇ, ಬೆಡ್ ಏನೋ ಕೊಟ್ರು, ಔಸ್ತಿ ಇಲ್ಲ ಅಂತಾವ್ರೆ ಕಣವ್ವಾ, ನೀನೆ ಏನಾರ ಮಾಡು,,ಅಪ್ಪ ನಿನ್ನ ಹೆಸ್ರ ಕನ್ರುಸ್ತಾ ಅವ್ನೆ, ಸಾಧ್ಯ ಆದ್ರೆ ಬಂದ್ಬುಡು ಮಗ್ಳೇ,,ಪುಟ್ಟೀ ಅಂತ ಗೊಳೋ ಅಂತಾವ್ಳೆ ಅವ್ವ. ಅಪ್ಪನ ಖಾಯಿಲೆಯನ್ನ ಹುಷಾರು ಮಾಡುವ ಔಷಧ ಈಗ ನನ್ನ ಕೈಯಲ್ಲಿದೆ, ರಾಜು ಡಾಕ್ಟರ್ ಸೆಲೆಬ್ರಿಟಿ ಪೇಷೆಂಟ್ ಬಂದಾಗ ಕರೆಯಮ್ಮ ಎಂದು ಹೇಳಿ ಕ್ವಾಟ್ರಸ್ ಗೆ ಹೋಗಿದ್ದಾರೆ, ಇರುವ ಅಷ್ಟೂ ರೋಗಿಗಳಿಗೆ ನಾವು ಇಬ್ಬರೇ ನರ್ಸ್ ಉಳಿದಿರುವುದು, ಸಂಜೆ ಡ್ಯೂಟಿ ನರ್ಸ್ಗಳು ಬರುವವರೆಗೆ ಇಬ್ಬರೇ ಇವರನ್ನೆಲ್ಲಾ ನೋಡಿಕೊಳ್ಳಬೇಕು, ಪ್ರೀತಿಯ ಅಪ್ಪ ಅಲ್ಲಿ ಆಸ್ಪತ್ರೆಯಲ್ಲಿ ಔಷಧಿ ದೊರೆಯದೇ ಒದ್ದಾಡ್ತಿದಾನೆ,, ಪಕ್ಕದ ಹಾಲಿನಲ್ಲಿ ಆಕ್ಸಿಜನ್ ಕೊರತೆಯಾಗಿ ಇಬ್ಬರು ರೋಗಿಗಳು ಒದ್ದಾಡುತ್ತಿದ್ದಾರೆ, ಬಡವರಾದ ಅವರಿಗೆ ಸಿಲಿಂಡರ್ ನೀಡದೆ,ಇಲ್ಲಿಗೆ ಬರಲಿರುವ ಆ ಶ್ರೀಮಂತ ರೋಗಿಗಾಗಿ ಮೂರು ಸಿಲಿಂಡರ್ಗಳನ್ನ ಕಾಯ್ದಿರಿಸಲಾಗಿದೆ.

ಏನು ಮಾಡಲಿ, ಕೀರ್ತಿಯ ತಲೆಯಲ್ಲಿ ಒಮ್ಮಲೇ ಹಲವಾರು ವಿಚಾರಗಳು ಓಡಲಾರಂಭಿಸಿದವು, ಕೈಯಲ್ಲಿರುವ ಈ ಔಷಧಿಗಳನ್ನು ತಗೊಂಡು ಆಸ್ಪತ್ರೆಯೂ ಬೇಡ ಕೆಲಸವೂ ಬೇಡ ಅಪ್ಪ ಉಳಿದರೆ ಸಾಕು ಅಂತ ಓಡಿ ಬಿಡ್ಲಾ… ಅಪ್ಪನನ್ನು ಉಳಿಸಿಕೊಂಡು ಬಿಡ್ಲಾ… ಇಂತಹಾ ಸಮಯದಲ್ಲಿ ಅಪ್ಪನನ್ನು ಉಳಿಸಿಕೊಳ್ಳದ ನಾನೂ ಒಬ್ಬ ಮಗಳಾ, ಅನ್ನೋ ಯೋಚನೆ ಅವಳ ಮನಸ್ಸಿಗೆ ಒಮ್ಮೆ ಬಲವಾಗಿ ಬಂದು ಹೋಯ್ತು, ಆದರೆ ಇಲ್ಲಿನ ರೋಗಿಗಳನ್ನು ನೋಡಿಕೊಳ್ಳುವುದೂ ನನ್ನದೇ ಕರ್ತವ್ಯ ತಾನೇ… ಇಲ್ಲಿರುವ ಜೀವಗಳೂ ಬೇರೆಯವರಿಗೆ ಅಪ್ಪನೋ ಅಮ್ಮಬೋ ಆಗಿರುವವರೇ ಅಲ್ಲವೇ… ಛೆ ಅದೆಲ್ಲಾ ನಂಗ್ಯಾಕೆ ನನಗೆ ಅಪ್ಪ ಮುಖ್ಯ ಆಗಬೇಕಲ್ವಾ!!!

ದೀರ್ಘವಾಗಿ ಒಮ್ಮೆ ಉಸಿರನ್ನ ಎಳೆದುಕೊಂಡ ಕೃತಿ ಏನೋ ತೀರ್ಮಾನ ಮಾಡಿಕೊಂಡು ಕುರ್ಚಿಯಿಂದ ಎದ್ದಳು, ಮೂಲೆಯಲ್ಲಿದ್ದ ಎರಡೂ ಆಕ್ಸಿಜನ್ ಸಿಲಿಂಡರ್ಗಳನ್ನ ಮೈಮೇಲೆ ದೆವ್ವ ಹೊಕ್ಕವಳಂತೆ ಒಬ್ಬಳೇ ದರದರನೆ ಎಳೆದುಕೊಂಡು ಹೋದವಳೇ ಆಕ್ಸಿಜನ್ ಕೊರತೆಯಿಂದ  ಒದ್ದಾಡುತ್ತಿದ್ದ ಆ ಇಬ್ಬರು ಬಡ ರೋಗಿಗಳಿಗೆ ಉಪಯೋಗವಾಗುವಂತೆ ಹೊಂದಿಸಿದಳು. ಅಲ್ಲಿಂದ ಬರಾಬರಾ ಬಂದವಳೇ  ಕಾಯ್ದಿರಿಸಲಾಗಿದ್ದ ಔಷಧಗಳನ್ನು ಕೈಗೆ ತಗೊಂಡ್ಳು, ಸೀದಾ ಹಾಲಿಗೆ ಬಂದವಳೇ ಅಲ್ಲಿಗೆ ನೂಕಲಾಗಿದ್ದ ರಂಗಣ್ಣನ ಬಳಿ ಹೋದವಳೇ ಅವನಿಗೆ ಇಂಜೆಕ್ಷನ್‌ ಕೊಡತೊಡಗಿದಳು…

ಸುಮನಾ ಸಿಸ್ಟರ್ ಬಿಟ್ಟ ಕಣ್ಣು ಬಿಟ್ಟಂತೆ ಕೀರ್ತಿಯನ್ನೇ ನೋಡುತ್ತಾ ನಿಂತು ಬಿಟ್ಟಳು.

‍ಲೇಖಕರು Avadhi

May 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: