ಭುವನಾ ಹಿರೇಮಠ
ಅಜ್ಞಾತ ಅಲೆಯ ಕಡಲೊಂದರ
ನೆಲೆ ಹುಡುಕುತ್ತಾ
ಮಿಂಚುಹುಳುವಿನ ಮಿಣುಕಿನ
ಅಂಚಿನಲ್ಲೇ ನಡೆಯುತಿರುವಾಗ
ಅಂಗಾಲ ಮುದ್ದಿಸಿದ ಮರಳ ಕಣಕ್ಕೂ ಗೊತ್ತಾಗಿತ್ತು,
ಅವನು “ನನ್ನ ಮುತ್ತಿನ ಗುರುತೇ ಅಲ್ಲ” ಎಂದು ಆರೋಪಿಸಿದ.
ಕತ್ತಲೆಯಲ್ಲಿ ಯಾವ
ಶವಯಾತ್ರೆಯ ಶೃಂಗಾರವೂ
ವಿಜೃಂಭಿಸುವುದಿಲ್ಲ
ಅದೆಷ್ಟು ಏಕಾಂತ ಬಯಲ
ರಾತ್ರಿಗಳಿದ್ದವು ಬೊಗಸೆಯಲ್ಲಿ
ರೈಲು ಹಳಿಗಳೆರಡು ಸೇರಲೇಯಿಲ್ಲ
“ಒಂದು ಕಗ್ಗತ್ತಲು ಬರುವವರೆಗೆ ಕಾಯಲಾಗದೆ? ತಾಳ್ಮೆಯಿರಲಿ”
ಎನ್ನುತ್ತಾನೆ.
ಎವೆಯಿಕ್ಕದೆ ನೋಡುವ
ಆಗಸದ ಎದೆ ಅಂದೇ
ಆ ಗುಡುಗಿನ ಆರ್ಭಟಕೆ
ಬಿರುಕು ಬಿಟ್ಟಿದೆ
ಅವನು ದಿಢೀರನೆ ಹೊರಳಿರಬೇಕು
ಕೂದಲೆಳೆಯಷ್ಟೇ ಮಿಂಚು
ಭೂಮಿಯ ಕೊಂದಿದೆ.
“ಬಾ ಇದು ನೀನೇ ಅಂದಿನಿಂದ
ಹುಡುಕುತ್ತಲೇ ಅಲೆದೆ,
ಜೀವವಿಲ್ಲದ ದೇಹದ ಮೇಲೆಯೇ
ಪ್ರೀತಿ ಜೀವಂತಗೊಳ್ಳುವುದು”
ಒಗಟು ಅರ್ಥವಾದ
ಮರುಘಳಿಗೆ ನಾವಿಬ್ಬರೂ
ಜೀವ ಕಳೆದುಕೊಂಡೆವು.
“ಯಾರನ್ನು ಯಾರು ಪ್ರೀತಿಸುವುದೀಗ?”
ಯಕ್ಷಪ್ರಶ್ನೆಯಲ್ಲಿಯೇ
ಅಂತ್ಯ ಶುರುವಾಗಿದೆ.
0 ಪ್ರತಿಕ್ರಿಯೆಗಳು