ಅವಧಿಯಲ್ಲಿ ಅಂಕಣವಾಗಿ ಬರುತ್ತಿದ್ದ ಕಾಸು ಕುಡಿಕೆ ಈಗ ಪುಸ್ತಕವಾಗಿ! ಮೊಳೆಯಾರರಿಗೆ ಅವಧಿಯ ಅಭಿನಂದನೆಗಳು..
ಬರುತ್ತಿದೆ ಕಾಸು ಕುಡಿಕೆ!
– ವಿದ್ಯಾರಶ್ಮಿ ಪೆಲತ್ತಡ್ಕ
ವಿತ್ತ ವಿಚಾರದಲ್ಲಿ ಎಲ್ಲರಿಗೂ ಆಸಕ್ತಿ ಇರುವುದಿಲ್ಲ. ಆಸಕ್ತಿ ಇದ್ದರೂ ಎಲ್ಲರಿಗೂ ಅದು ಅರ್ಥವಾಗುವುದಿಲ್ಲ. ಅರ್ಥವಾದರೂ ವಿಚಾರಗಳನ್ನು ಖಚಿತವಾಗಿ ತಿಳಿದುಕೊಂಡವರು ಬಹಳಿಲ್ಲ. ವಿಷಯ ಬಲ್ಲವರಿದ್ದರೂ ಇನ್ನೊಬ್ಬರಿಗೆ ಅರ್ಥವಾಗುವಂತೆ ಸರಳವಾಗಿ ಹೇಳುವವರು ಬಹಳ ವಿರಳ. ಜಯದೇವ ಪ್ರಸಾದ ಮೊಳೆಯಾರ ಇಂತಹ ವಿರಳರ ಸಾಲಿಗೆ ಸೇರಿದವರು.
ಮೊಳೆಯಾರರ ವಿತ್ತೀಯ ಲೇಖನಗಳ ಕೃತಿ `ಕಾಸು ಕುಡಿಕೆ’ ಇದೀಗ ಮಾರುಕಟ್ಟೆಗೆ ಬರುತ್ತಿದೆ. ಹೂಡಿಕೆ, ಶೇರು, ವಿಮೆ, ಮ್ಯೂಚುವಲ್ ಫಂಡ್… ಇತ್ಯಾದಿ ಹಣಕಾಸಿಗೆ ಸಂಬಂಧಪಟ್ಟಂತೆ ಜನಸಾಮಾನ್ಯರು ತಿಳಿದುಕೊಳ್ಳಬೇಕಾದ ಸಕಲ ಅಂಶಗಳ ಸಂಕಲನವಿದು. ಉದಯವಾಣಿ ಪತ್ರಿಕೆಯಲ್ಲಿ `ಕಾಸು ಕುಡಿಕೆ’ ಹೆಸರಿನ ಕಾಲಂ ಪ್ರಕಟವಾಗುತ್ತಿದ್ದು, ಅದರಿಂದಾಯ್ದ, ಪರಿಷ್ಕರಿಸಲ್ಪಟ್ಟ ಲೇಖನಗಳ ಗುಚ್ಛ ಇದು.
ವಿವಿಧ ಪತ್ರಿಕೆಗಳಲ್ಲಿ ವಿವಿಧ ವಿಚಾರಗಳ ಮೇಲೆ ಲೇಖನ ಬರೆಯುವ ಮೊಳೆಯಾರರು ಆಥರ್ಿಕ ವಿಚಾರಗಳಲ್ಲಿ ವಿಶೇಷ ತಜ್ಞರು. ಅವರ ಬರಹಗಳಲ್ಲಿ ನಾನು ಗಮನಿಸಿದಂತೆ ಎದ್ದು ಕಾಣುವುದು ಸರಳತೆ. ಹಣಕಾಸಿನ ವಿಚಾರ ಕಷ್ಟ, ಅರ್ಥವಾಗುವುದಿಲ್ಲ ಎಂದು ದೂರ ಸರಿಯುವವರನ್ನೂ ಸೆಳೆಯಬಲ್ಲ ಶೈಲಿ ಅವರಿಗಿದೆ. ಮೂಲತಃ ಕಥೆಗಾರರಾಗಿರುವುದರಿಂದ ಸಣ್ಣದೊಂದು ಆಸಕ್ತಿಕರ ಘಟನೆಯ ಮೂಲಕ ಲೇಖನಗಳನ್ನು ವಿಸ್ತರಿಸುತ್ತಾ ಹೋಗುವ ಅವರ ರೀತಿ ಆಕರ್ಷಕ. ಇದಲ್ಲದೆ ಅವರು ತಮ್ಮ ವಿತ್ತೀಯ ಬರಹಗಳಲ್ಲಿ ನಮ್ಮ, ನಿಮ್ಮೆಲ್ಲರ ಪ್ರತಿನಿಧಿ `ಗುರುಗುಂಟಿರಾಯರ’ನ್ನೂ ಸೃಷ್ಟಿಸಿದ್ದಾರೆ. ಈ ಪಾತ್ರದ ಮೂಲಕ ಮೊಳೆಯಾರರು ಪ್ರತಿಯೊಂದು ಕುಟುಂಬದ `ಕಾಸು ಕುಡಿಕೆ’ಯನ್ನು ಜೋಪಾನ ಮಾಡುವ ಬಗೆಯನ್ನು ವಿವರಿಸುತ್ತಾ ಇನ್ನಷ್ಟು ಆಪ್ತರಾಗುತ್ತಾರೆ.
ಹಣಕಾಸಿನ ವಿಚಾರ ಕುರಿತಂತೆ ಅಲ್ಲಲ್ಲಿ ಹಲವರು ಲೇಖನಗಳನ್ನು ಪ್ರಕಟಿಸುವುದುಂಟು. ದೊಡ್ಡ ವೇದಿಕೆಗಳಲ್ಲಿ ದೊಡ್ಡ ದೊಡ್ಡ ಸೆಮಿನಾರ್ಗಳೂ ಆಗುವುದುಂಟು. ಆದರೆ, ಜನಸಾಮಾನ್ಯನಿಗೆ ಬೇಕಾದ ಅಧಿಕೃತ, ನಂಬಲರ್ಹ ಮಾಹಿತಿಯುಳ್ಳ ಇಂತಹ ಕೃತಿಗಳು ಕನ್ನಡದಲ್ಲಿ ವಿರಳ. ಆದ್ದರಿಂದಲೇ ಮೊಳೆಯಾರರ ಈ ಕೃತಿ ಎಲ್ಲರಿಗೂ ಉಪಯುಕ್ತವಾಗಬಹುದು.
ಕನ್ನಡ ಆರ್ಥಿಕ ಲೋಕದಲ್ಲೊಂದು ಅಥೆಂಟಿಕ್ ಮಾಹಿತಿ ಗ್ರಂಥವಾಗುವ ಎಲ್ಲ ನಿರೀಕ್ಷೆಯನ್ನೂ ಬೆನ್ನಲ್ಲಿ ಕಟ್ಟಿಕೊಂಡು ಬರುತ್ತಿರುವ ಕೃತಿ ಇದು.
Thanks Avadhi, GN Mohan and thanks Vidyarashmi
i am a fan of Mr.jayadevaprasada Moleyara.. where this book is available?..