ಕಾರ್ನಾಡರಿಗೆ ಕಾಡಿದ ಪ್ರಶ್ನೆ ಬೆಂಗಳೂರಿಗರಿಗೆ ಕಾಡಿಲ್ಲ ಏಕೆ?

ಆಕಾಶವಾಣಿಯ ಹಿರಿಯ ಕಾರ್ಯಕ್ರಮ ನಿರ್ವಾಹಕರಾದ, ಲೇಖಕಿ ಬಿ ಕೆ ಸುಮತಿ ಅವರು

‘ರಂಗಶಂಕರ’ದ ಇತ್ತೀಚಿನ ನಾಟಕ ‘ಬೆಂದಕಾಳು ಆನ್ ಟೋಸ್ಟ್’ ನಾಟಕವನ್ನು ನೋಡಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಅದು ಇಲ್ಲಿದೆ 

ಇದಕ್ಕೆ ಕೆಂಭೂತ ಪ್ರತಿಕ್ರಿಯಿಸಿದ್ದಾರೆ.

ಇದಕ್ಕೆ ನಿಮ್ಮ ಪ್ರತಿಕ್ರಿಯೆಯನ್ನೂ ತಿಳಿಸಿ

[email protected] ಗೆ ನಿಮ್ಮ ಪ್ರತಿಕ್ರಿಯೆ ಕಳಿಸಿ

ಕೆಂಭೂತ 

ಗಿರೀಶ್ ಕಾರ್ನಾಡ್ ಅವರು ಬೆಂಗಳೂರಿಗರಲ್ಲ. ಅವರು ಜೀವನ ಸಂಧ್ಯಾಕಾಲದಲ್ಲಿ ಇಲ್ಲಿ ಬಂದು ನೆಲೆಸಿದರು. ಸೃಜನಶೀಲ ಬರಹಗಾರರಾದ ಅವರು ಸಹಜವಾಗಿಯೇ ಈ ನಗರಕ್ಕೆ ಪ್ರತಿಕ್ರಿಯುಸುತ್ತ ಬಂದರು. ಅದು ಬೆಂಗಳೂರು ಅತ್ಯಂತ ವೇಗವಾಗಿ ಬದಲಾಗುತ್ತಿದ್ದ, ಇಡೀ ಪ್ರಪಂಚದ ಗಮನ ತನ್ನೆಡೆಗೆ ಸೆಳೆದಿಟ್ಟುಕೊಂಡಿದ್ದ ಕಾಲ. ಅವರಿಗೆ ಮುಂಬೈ, ದೆಹಲಿ, ಕೋಲ್ಕತ್ತಾ ನಗರಗಳು ಸಾಹಿತ್ಯದೊಳಗೆ ಬಂದ ಹಾಗೆ ಬೆಂಗಳೂರು ಬಂದಿಲ್ಲ ಎಂದೆನಿಸಿತು. ಈ ಬಗ್ಗೆ ಅವರು ಕಡೇ ದಿನಗಳವರೆಗೂ ಸಹ ಮಾತಾಡುತ್ತಿದ್ದರು. ಅದರ ಭಾಗವಾಗಿಯೇ ಅವರು ಬರೆದ ನಾಟಕ, ಬೆಂಗಳೂರ ಬದುಕಿಗೆ ಅವರ ಪ್ರತಿಕ್ರಿಯೆ “ಬೆಂದಕಾಳು ಆನ್ ಟೋಸ್ಟ್”, ೨೦೧೨-೧೩ರಲ್ಲಿ ಬರೆದುದು.

ನನ್ನ ನೆನಪು ಸರಿ ಇದ್ದರೆ, ಬೆಂಗಳೂರೇ ಕೇಂದ್ರ ಪಾತ್ರವಾದ ಈ ನಾಟಕದ ಮೊದಲ ಪ್ರಯೋಗ ಆದದ್ದು ಪುಣೆಯಲ್ಲಿ, ಮರಾಠಿ ನಾಟಕವಾಗಿ. ೨೦೧೪ರ ಏಪ್ರಿಲ್ನಲ್ಲಿ. ಆ ಪ್ರಯೋಗದಲ್ಲಿ ಬೆಂಗಳೂರು ಬದಲು ಪುಣೆ! ಮಿಕ್ಕಂತೆ ನಾಟಕವೆಲ್ಲವೂ ಅದೇ! ಇದು ಈ ನಾಟಕ ಮತ್ತು ನಮ್ಮ ನಗರ ಬದುಕಿನ ವಿಮರ್ಶೆ, ಜಿಜ್ಞಾಸೆಗೆ ಉಪಮೆ.

ಬೆಂದ ಕಾಳು ಅನ್ ಟೋಸ್ಟ್ ನಾಟಕ ಅಸಂಗತ ನಗರ ಜೀವನವನ್ನು ಕಟ್ಟಿಕೊಡಲು ಪ್ರಯತ್ನಿಸುತ್ತದೆ. ಮನೆಕೆಲಸದಾಕೆಯ ಕಳ್ಳತನ, ಪೋಲೀಸರು, ಅಜ್ಜಿಯ ಕುದುರೆ ಜೂಜು, ಆ ಹುಡುಗನ ಏಲಿಯನೇಷನ್ ಹೀಗೆ..ಇದು ಎಲ್ಲ ನಗರಗಳ ಸತ್ಯ. ಹಾಗಾಗಿಯೇ ಈ ನಾಟಕವನ್ನು ಅಷ್ಟು ಸುಲಭವಾಗಿ ಪುಣೆಗೆ ಅನ್ವಯಿಸಿ ಮಾಡಬಹುದು. ಹಾಗಾದರೆ ಇಲ್ಲಿ ಬೆಂಗಳೂರು ಎಲ್ಲಿದೆ?

ಇವತ್ತು ಎಲ್ಲ ನಗರಗಳ ಬದುಕೂ ಒಂದೆಯಾ? ಹೌದು ಮತ್ತು ಇಲ್ಲ. ಇವತ್ತು ಒಬ್ಬ ವ್ಯಕ್ತಿ ಬೀದಿಯ ಜೊತೆ ಸಂಪರ್ಕವೇ ಇಲ್ಲದೆ ನಮ್ಮ ನಗರಗಳಲ್ಲಿರಬಲ್ಲ. ಗೇಟೆಡ್ ಕಮ್ಯೂನಿಟಿ/ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಾ, ಊಬರ್-ಓಲಾಗಳಲ್ಲಿ ಓಡಾಡುತ್ತಾ, ಗ್ಲೋಬಲ್ ಎನಿಸಿಕೊಳ್ಳುವ ಕಾರ್ಪೋರೇಟ್ ಆಫೀಸುಗಳಲ್ಲಿ ದುಡಿಯುತ್ತಾ, ಪಿವಿಆರ್-ಐನಾಕ್ಸ್ ಗಳಲ್ಲಿ ಪಿಚ್ಚರ್ ನೋಡುತ್ತಾ, ಮಾಲ್ಗಳಲ್ಲಿ ಶಾಪಿಂಗ್ ಮಾಡುತ್ತಾ, ಬಿಗ್ ಬ್ಯಾಸ್ಕೆಟ್ನಲ್ಲಿ ದಿನಸಿ-ತರಕಾರಿ ತರಿಸುತ್ತಾ, ಮಕ್ಕಳನ್ನು ಇಂಟರ್ನ್ಯಾಷನಲ್ ಶಾಲೆಗೆ ಸೇರಿಸಿ, ಮನೆ ಮಾತು ಇಂಗ್ಲಿಷ್ ಮಾಡಿಕೊಂಡು ಬಿಟ್ಟರೆ…ಈ ಬದುಕಿಗೆ ಬೆಂಗಳೂರು, ಪುಣೆ, ಗುರುಗ್ರಾಮ, ನೋಯ್ಡಾ, ಹೈದರಾಬಾದ್ ಗಳ ನಡುವೆ ಫರಕ್ಕೇನಿದೆ? ನಗರೀಕರಣದ ಪರಿಭಾಷೆಯಲ್ಲಿ ಇದನ್ನು sweep of generic spaces ಎನ್ನುತ್ತಾರೆ.

ನಾವೆಲ್ಲರೂ ಇಂದು ಈ ಜೀವನದ ಕೆಲವು ತುಣುಕುಗಳನ್ನಾದರೂ ಬದುಕುತ್ತಿದ್ದೇವೆ, ಹಾಗಾಗಿ ಇದೇ ನವ ಬೆಂಗಳೂರಿನ ಬದುಕು ಎಂದು ಸಾಧಾರಣವಾಗಿ ಭ್ರಮಿಸುತ್ತೇವೆ. ಕಾರ್ನಾಡರ ನಾಟಕ ಇಂಥದೊಂದು ಜೆನೆರಿಕ್ ಆದ ಅಸಂಗತ ನಗರ ಜೀವನವನ್ನು ಕಟ್ಟಿಕೊಡುತ್ತದೆ. ಆದರೆ ಅದನ್ನು ಬೆಂಗಳೂರಿಗೆ ಆರೋಪಿಸುತ್ತದೆ.

ಈ ಜೆನೆರಿಕ್ ಆದ ಇವತ್ತಿನ ಡೆವಲಪಿಂಗ್ ದೇಶಗಳ ನಗರ ಜೀವನದ ಹೊರತಾಗಿ ಬೆಂಗಳೂರಿಗೆ ಒಂದು ವಿಶಿಷ್ಟ ವ್ಯಕ್ತಿತ್ವ, ದನಿ, ಆತ್ಮ ಇಲ್ಲವೇ? ಖಂಡಿತ ಇದೆ, ಪ್ರತಿ ನಗರಕ್ಕಿರುವಂತೆ, ಈ ನಾಟಕದಲ್ಲಿಲ್ಲ ಎಂದೇ ನನ್ನ ಭಾವನೆ.

Why isn’t there a Bengaluru novel, like there is a Bombay novel? ಎಂದು ಹೊರಟ ಕಾರ್ನಾಡರು ಅವರ ಅನುಭವಕ್ಕೆ ದಕ್ಕಿದ ಊರನ್ನು ಕಟ್ಟಿಕೊಟ್ಟಿದ್ದಾರೆ. But as it turns out ಇದು ಎಲ್ಲ ನಗರಗಳ ಕತೆ!

ಕಾರ್ನಾಡರಿಗೆ ಕಾಡಿದ ಪ್ರಶ್ನೆ ಬೆಂಗಳೂರಿಗರಿಗೆ ಕಾಡಿಲ್ಲ ಏಕೆ?

‍ಲೇಖಕರು avadhi

March 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. T S SHRAVANA KUMARI

    ಮಗು ಬೆಳೆಯುತ್ತಿರುವ ಪ್ರತಿ ಹಂತವನ್ನೂ ನೋಡುತ್ತಿರುವ ತಾಯಿಗೆ ಹೇಗೆ ಬದಲಾದದ್ದು ತಿಳಿಯುವುದಿಲ್ಲವೋ ಹಾಗೆಯೇ ಬೆಂಳೂರಿಗರಿಗೆ ಬದಲಾವಣೆ ಕಾಣುವುದಿಲ್ಲ. ಆಗಲೋ ಈಗಲೋ ನೋಡುವವರಿಗೆ ಮಾತ್ರ ಬದಲಾವಣೆಗಳು ಸ್ಪಷ್ಟವಾಗಿ ಗೋಚರಿಸುತ್ತದೆ.

    ಪ್ರತಿಕ್ರಿಯೆ
  2. Sriranga M A

    ಡಿ ವಿ ಜಿ ಅವರ ಜ್ಞಾಪಕ ಚಿತ್ರಶಾಲೆ ಕೃತಿಗಳಲ್ಲಿ ಹಳೇ ಬೆಂಗಳೂರಿನ ಬಗ್ಗೆ ಬೇಕಾದಷ್ಟು ಮಾಹಿತಿ ಯಿದೆ. ಇತ್ತೀಚೆಗೆ ಜೋಗಿ ಅವರು ಬೆಂಗಳೂರಿನಲ್ಲಿ ವಾಸಮಾಡುತ್ತಿರುವವರು, ಜೀವನೋಪಾಯಕ್ಕಾಗಿ ಇಲ್ಲಿಗೆ ವಲಸೆ ಬಂದಿರುವವರ ಬದುಕಿನ ಚಿತ್ರಣವನ್ನು ಆರು ಕಾದಂಬರಿಗಳ ಒಂದು ಮಾಲಿಕೆಯಲ್ಲಿ ಮಾಡಲು ಪ್ರಾರಂಭಿಸಿ ಅದರಲ್ಲಿ ಈಗಾಗಲೇ ನಾಲ್ಕು ಕಾದಂಬರಿಗಳು ಪ್ರಕಟಿಸಿದ್ದಾರೆ. ವಸುಧೇಂದ್ರ ಅವರ ಸುಲಲಿತ ಪ್ರಬಂಧಗಳಲ್ಲಿ ಬೆಂಗಳೂರಿನ ಬದುಕಿನ ಬವಣೆ ಸಾಕಷ್ಟು ಬಂದಿದೆ.

    ಪ್ರತಿಕ್ರಿಯೆ

Trackbacks/Pingbacks

  1. ‘ಬೆಂದಕಾಳೂರು’ ಚರ್ಚೆ: ಯಾರು ಏನೇ ಹೇಳಲಿ, Bangalore is my heroine. – ಅವಧಿ । AVADHI - […] ಇದಕ್ಕೆ ಕೆಂಭೂತ ಪ್ರತಿಕ್ರಿಯಿಸಿದ್ದಾರೆ. ಅದು ಇಲ್ಲಿದೆ  […]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: