ಚಂಪಾ ಶೆಟ್ಟಿ
ರಂಗಶಂಕರದಲ್ಲಿ ನಿನ್ನೆ ಮಳೆಯ ನಡುವೆಯೇ ‘ರಂಗಜಂಗಮ’ ನಾಟಕ ನೋಡಲು ಹೋಗಿದ್ದೆ.
ಮಳೆಯ ಕಾರಣ ಪ್ರೇಕ್ಷಕರ ಸಂಖ್ಯೆ ನಿರೀಕ್ಷಿಸಿದ ಹಾಗೆ ಕಡಿಮೆ ಇದ್ದರೂ ರಂಗಭೂಮಿಯ ಅನೇಕ ಹಿರಿಯ ರಂಗಕರ್ಮಿಗಳು ರಂಗಜಂಗಮನನ್ನು ನೋಡಲು ಬಂದಿದ್ದು ಖುಷಿಯಾಯಿತು.. ನಾನೂ ಕೂಡ, ರಂಗ ಜಂಗಮ ರಂಗದ ಮೇಲೆ ಹೇಗಿರಬಹುದು ಎಂಬ ಕುತೂಹಲದೊಂದಿಗೆ ಹೋಗಿದ್ದೆ.
“ಆದರೆ ಹುಡುಕಿದರೆ ಸಿಗುವವರಲ್ಲ ಆ ರಂಗಜಂಗಮ. ನೀರಲ್ಲಿ ಹುಡುಕಿದಷ್ಟೂ ಆಳಕ್ಕೆ ಹೋಗುತ್ತಾರೆ, ಆಕಾಶದಲ್ಲಿ ಹುಡುಕಿದಷ್ಟೂ ಎತ್ತರಕ್ಕೆ ಹೋಗುತ್ತಾರೆ. ಅವರನ್ನು ಕಾಣಬೇಕೆಂದರೆ ನಾವೂ ಕೂಡ ಪಾತ್ರವಾಗಬೇಕು”
ಎಂಬ ನಾಟಕದ ನಟನ ಮಾತಿನಂತೆ, ಅವರನ್ನು ಹುಡುಕಿ ಹೋದ ನನಗೂ ಮೊದಲಾರ್ಧದಲ್ಲಿ ಅವರು ಸಿಗಲೇ ಇಲ್ಲ! ಹಾಗೇ ನೋಡುತ್ತಾ ನೋಡುತ್ತಾ ಹೋದಂತೆ ನನ್ನನ್ನೂ ನಾಟಕದ ಒಂದು ಪಾತ್ರವಾಗಿಸಿ, ಅವರೊಂದಿಗಿನ ಹುಡುಕಾಟದಲ್ಲಿ ನನ್ನನ್ನೂ ಸೇರಿಸಿ ಕೊಂಡದ್ದು ನಾಟಕದ ಕಲಾವಿದರು ಹಾಗೂ ನಾಟಕಕಾರರು….
ಆ ಹುಡುಕಾಟದಲ್ಲಿ ಬಿ ವಿ ಕಾರಂತರ ಹಲವು ನಾಟಕಗಳ ಪರಿಚಯದ ಜೊತೆಗೆ 80ರ ದಶಕದ ಕನ್ನಡ ರಂಗಭೂಮಿಯ ಸಂಭ್ರಮವನ್ನು ನಾನೂ ಸಂಭ್ರಮಿಸಿದ ಅನುಭವವಾಯಿತು. ಜೊತೆಗೆ, ಇಂದಿನ ರಂಗಭೂಮಿಯ ಸ್ಥಿತಿಗತಿ, ಈಗಿನ ನಾಟಕಕಾರರು ಮತ್ತು ಕಲಾವಿದರ ಮನಸ್ಥಿತಿಗಳನ್ನೂ ರಂಗದ ಮೇಲೆ ವಿಡಂಬನಾತ್ಮಕ ತೋರಿಸಿದ್ದು, ರಂಗಕರ್ಮಿಗಳಿಗೆ ಅರೆ ಹೌದಲ್ಲ! ಅನಿಸಿದರೆ ಹೊಸ ಕಲಾವಿದರಿಗೆ, ಓ ಹೀಗ ? ಎನಿಸುವಂತಿತ್ತು.
ಎಲ್ಲಾ ಕಲಾವಿದರ ಅಭಿನಯವೂ ಚೆಂದವಾದರೂ, ಕಾರಂತರನ್ನು ನಮ್ಮೊಳಗೆ ಕಾಣಿಸಿದ್ದು ಮಂಗಳ ಮತ್ತು ಹಾಡುಗಳು. ನಿರ್ದೇಶಕರೇ ಹೇಳಿದಂತೆ ಇದನ್ನು ಪ್ರದರ್ಶನ ಎನ್ನುವುದಕ್ಕಿಂತ ಒಂದು ಅತ್ಯುತ್ತಮ ಪ್ರಯೋಗ ಎನ್ನುವುದೇ ಸೂಕ್ತ.. ಕಡೆಯಲ್ಲಿ ಕಾರಂತರದೇ ಧ್ವನಿಯಲ್ಲಿ ಕೇಳಿದ ಹಾಡಿನೊಂದಿಗೆ ಹಲವರ ಕಣ್ಣಿನಂತೆ ನನ್ನ ಕಣ್ಣುಗಳೂ ಮಂಜಾದದ್ದು ಸುಳ್ಳಲ್ಲ…..
ರಂಗಜಂಗಮದ ಉತ್ತಮ ಪ್ರಯೋಗಕ್ಕಾಗಿ ನಿರ್ದೇಶಕರಿಗೆ, ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ಅಭಿನಂದನೆಗಳು.
ನನಗೂ ನೋಡಬೇಕೆನ್ನುವ ಕುತೂಹಲ ಹುಟ್ಟಿದೆ.