ಅಮಾಸೆ ಟೈಮ್ಸ್. ಕನ್ನಡ ಟೈಮ್ಸ್ ಪತ್ರಿಕೆಯನ್ನು ರೆಗ್ಯೂಲರ್ ಆಗಿ ಓದುವವರಿಗೆ ಈ ಅಮಾಸೆ ಟೈಮ್ಸ್ ರುಚಿ ಗೊತ್ತಿರುತ್ತದೆ. ಇದರ ಆರೋಗ್ಯಕರ ಕೀಟಲೆ ಖುಷಿ ಕೊಡುವಂಥದ್ದು. ಇದರ ರುಚಿಯನ್ನು ಅವಧಿಯ ಓದುಗರಿಗೂ ಬಡಿಸೋಣ ಎಂಬ ಆಸೆ.
* * *
ಈಚೆಗೆ ಮೈಸೂರ್ ನಲ್ಲಿ ಸಾಹಿತ್ಯ ಅಕಾಡೆಮಿ ನಡೆಸಿದ ಕಾದಂಬ್ರೀ ಕಮ್ಮಟದಲ್ಲಿ ಕನ್ನಡ ಕ್ರಿಟಿಕ್ಸ್ ಕೋಸಂಬ್ರೀ ಥರ ಫ್ರೀ ಐಡಿಯಾಸ್ ಹಂಚಿದ ಬಗ್ಗೆ ಮೈಸೂರ್ ಅಮಾಸೆ ರಿಪೋರ್ಟರ್ ವರದಿ:
ರಹಮತ್: ಕಾಮ್ರೇಡ್ ಕಾದಂಬರಿಕಾರ್ರೇ, ನೀವೆಲ್ಲ ನಿಮ್ಮ ಪೆನ್ ಗಳಿಗೆ ಸ್ವಲ್ಪ ದೇಸೀ ಮಣ್ ಹಾಕ್ಕೊಂಡ್ ಗೀಚಬೇಕು. ಇಲ್ದಿದ್ರೆ ಹಂಪಿ ಸೈಡ್ ಕ್ರಿಟಿಕ್ಸ್ ಯಾರೂ ನಿಮ್ಮ ಕಾದಂಬ್ರೀಗೆ ಒಪ್ಪಾಕಿಲ್ಲ.
ಡಿ.ಎಸ್.ನಾಗಭೂಷಣ್: ಎಳೆಯ ಕಾದಂಬರಿಕಾರ್ರೇ, ನೀವು ರವಷ್ಟು ನಂ ಲೋಹಿಯಾ ಸಾಹೇಬ್ರ ಟಚ್ ಕೊಟ್ಟು ಹೆಂಗಸ್ರ ಪಾತ್ರಗಳನ್ನ ಮೃದುವಾಗಿ ಟಚ್ ಮಾಡ್ಬೇಕು… ದ್ರೌಪದೀ ಥರ ಟ್ರೀಟ್ ಮಾಡ್ಬೇಕು.
ಮೊಗಳ್ಳಿ ಗಣೇಶ್: ಏನೇ ಹೇಳಿ, ಅಷ್ಟಿಷ್ಟು ಬ್ಲ್ಯಾಕ್ ಟಚ್ ಇಲ್ದೆ ಕಾದಂಬ್ರೀ ಬರೆದ್ರೆ ದಲಿತ್ಸ್ ಗೆ ಅವಮಾನ. ಅದಕ್ಕೆ ಹೊಸ ತಲೆಮಾರಿನ ಕಾದಂಬರಿಕಾರ್ರೆಲ್ಲ ಬ್ಲ್ಯಾಕ್ ಪೆನ್ ಬಳಸ್ಬೇಕ್…
ಕೆ.ವಿ.ನಾರಾಯಣ್: ಕಾದಂಬ್ರೀ ಬಂಧುಗಳೇ! ನೀವು ಭಾಷಿಕ ನೆಲೇಲಿ ಹುಚ್ಚು ಹುಚ್ಚು ಪ್ರಯೋಗ ಮಾಡಿ, ಸಾಧ್ಯವಾದಷ್ಟೂ ೨೬ ಅಕ್ಷರದಲ್ಲೇ ಶಂಕರಭಟ್ರ ಶೈಲೀಲಿ ಕಾದಂಬ್ರೀ ಬರೀರಿ. ಯಾವ್ದೇ ಭಾಷೆಯಿಂದ ಏನೇ ಸೇರ್ಸಿ, ಎಲ್ಲಾ “ಕೋಡ್ ಮಿಕ್ಸಿಂಗ್” ಅಂತ ನಾನ್ ಶಿಫಾರಸ್ ಕೊಡ್ತೀನಿ! ಕನ್ನಡದಲ್ಲಿ ಟೂಲೆಟರ್ಡ್ ವರ್ಡ್ಸ್ ಬಳಸೋಕೆ ಹಿಂಜರೀಬೇಡಿ!
ಈ ಥರದ ಕಲ್ ಕಲರ್ ಸಲಹೆ ಕೇಳಿ ತಲೆ ಕೆಟ್ಟು, ಹೊಸ ತಲೆಮಾರಿನ ಕಾದಂಬ್ರೀಕಾರರಾದ ಎನ್ಸಿ ಮಹೇಶ್, ಹನೂರು ಚೆನ್ನಪ್ಪ, ಕೆ.ನರಸಿಂಹಮೂರ್ತಿ, ಮಂಜುನಾಥ ಲತಾ, ಕನಕ್ ರಾಜ್ ಮೊದಲಾದವರು ಮೈಸೂರ್ ಚಾಮುಂಡಿ ಬೆಟ್ಟದಿಂದ ಕೆಳಗೆ ಹಾರಲು ನಿರ್ಧರಿಸಿದ ಸುದ್ದಿ ಇದೀಗ ಅಮಾಸೆ ಟೈಮ್ಸ್ ತಲುಪಿದೆ!
0 ಪ್ರತಿಕ್ರಿಯೆಗಳು