ಅಲ್ಲಿ ‘ನೆನಪುಗಳು
ಕಸೂತಿಯಾದವು..’
~
ಜಿ ಎನ್ ಮೋಹನ್
ಎಂ ಆರ್ ಕಮಲ ಅವರ ‘ಕಸೂತಿಯಾದ ನೆನಪು’ ಕೃತಿಯ ಬಿಡುಗಡೆಯೇ ನೆಪವಾಗಿ ಕನ್ನಡ ರಂಗಭೂಮಿ ಹಾಗೂ ಸಿನೆಮಾ ರಂಗದ ಒಳ್ಳೆಯ ಪಯಣಿಗ ಶ್ರೀನಿವಾಸ ಪ್ರಭು ಅವರ ರಂಗಭೂಮಿಯ ಯಾನದ ಕಥನವನ್ನು ಕೇಳುವ ಅವಕಾಶ ಸಿಕ್ಕಿತು. ಒಂದು ರೀತಿಯಲ್ಲಿ ಇದೂ ಸಹಾ ‘ಕಸೂತಿಯಾದ ನೆನಪೇ..’
ಶ್ರೀನಿವಾಸ ಪ್ರಭು ಆ ಕಾಲಕ್ಕೇ ಎನ್ ಎಸ್ ಡಿ ಮೆಟ್ಟಿಲು ಹತ್ತಿದವರು. ನಾಲಿಗೆಗೆ ಹೊರಳಲು ಸಿಕ್ಕದ ಹಿಂದಿಯನ್ನು ಅವುಡುಗಚ್ಚಿ ತಮ್ಮದಾಗಿಸಿಕೊಂಡವರು. 16 ಪುಟಗಳುದ್ದದ ಹಿಂದಿ ಡೈಲಾಗ್ ಗಳನ್ನು ಸುಲಲಿತವಾಗಿ ಶ್ರೀರಾಮ್ ಸೆಂಟರ್ ನ ಸಭ್ಯರ ಮುಂದೆ ಒಪ್ಪಿಸಿ ನಿಬ್ಬೆರಗಾಗಿಸಿದವರು. ಜಗತ್ತಿನ ರಂಗ ಘಟಾನುಘಟಿ ಫ್ರಿಟ್ಸ್ ಬೆನೆವಿಟ್ಸ್ ಅವರಿಂದ ಪ್ರಶಂಸೆಯ ಹೂ ಮುತ್ತು ಪಡೆದವರು.
ಶ್ರೀನಿವಾಸಪ್ರಭು ಅವರೊಳಗಿದ್ದ ಒಬ್ಬ ವಿನಯಶೀಲ, ನಂಜಿಲ್ಲದ ವ್ಯಕ್ತಿತ್ವ ಕಂಡು ಅಚ್ಚರಿಗೊಂಡೆ. ಅವರು ತಾವು ಎದುರಿಸಿದ ಅವಮಾನವನ್ನು, ಮೋಸವನ್ನು ಒಂದಿಷ್ಟೂ ಅಸಹನೆಯಿಲ್ಲದೆ ಹಂಚಿಕೊಂಡರು. ಇವರು ರಂಗರೂಪ ನೀಡಿದ ‘ಉದ್ಭವ’ ಇನ್ನಾರದ್ದೋ ಹೆಸರಿನಲ್ಲಿ ಮೈಸೂರು ವಿವಿ ಗೆ ಪಠ್ಯವಾದದ್ದು ಹೇಳುವಾಗ, ಎಂ ಕೆ ರೈನಾ ರಂತಹ ಹೆಸರಾಂತ ನಿರ್ದೇಶಕರು ಉತ್ತರ- ದಕ್ಷಿಣ ಅಸಹನೆ ತೋರಿಸಿದ್ದನ್ನು ಹೇಳುವಾಗ ಅವರ ಒಳಗೆ ನಂಜಿರಲಿಲ್ಲ.
ರಾಜ್ಯ ಸರ್ಕಾರದ ಮೊದಲ ಸ್ಕಾಲರ್ಶಿಪ್ ಪಡೆದು ಎನ್ ಎಸ್ ಡಿ ಪ್ರವೇಶಿಸಿದ ಇವರು ಅದು ಬರುವುದು ತಡವಾದಾಗಲೆಲ್ಲಾ ಹಸಿವಿನ ದವಡೆ ಹಲ್ಲಿಗೆ ಸಿಕ್ಕಿಕೊಂಡದ್ದು, ಅದರ ನಡುವೆಯೇ ಬಂದ ಹುಟ್ಟುಹಬ್ಬವನ್ನು ಅಶೋಕ ಬಾದರದಿನ್ನಿ ಬೆಂಗಾಲಿ ಬಜಾರ್ ನಲ್ಲಿ ಸ್ವೀಟ್ ಕೊಡಿಸಿ ಆಚರಿಸಿದ್ದನ್ನೂ, ದೆಹಲಿಗೆ ಬೆನಕ ತಂಡ ‘ಸತ್ತವರ ನೆರಳು’ ನಾಟಕ ತಂದಾಗ ಊಟ ಸಿಗುವ ಆಸೆಗಾಗಿ ಹೋಗಿ ಬಾಗಿಲು ಕಾದದ್ದನ್ನೂ ಹೇಳಿ ರಂಗಭೂಮಿ ಹೊರಳಿ ಬೆಳೆದ ಕಥೆ ಹಂಚಿಕೊಂಡರು.
ಅನಂತ ನಾಗ್ ಆಕಸ್ಮಿಕಕಾಗಿ ಇವರ ರಂಗರೂಪಕ್ಕೊಳಗಾದ ನಾಟಕವನ್ನು ಓದಿ ಅದರಲ್ಲಿ ತಾನು ನಟಿಸಲೇಬೇಕು ಎಂದು ಹಠ ಹಿಡಿದದ್ದು, ಇಂದಿರಾಗಾಂಧಿ ಹತ್ಯೆ ಆದ ಒಂದೇ ಕಾರಣಕ್ಕೆ ಆಕ್ಸಿಡೆಂಟ್ ಸಿನೆಮಾದ climax ಅನ್ನು ಶಂಕರ್ ನಾಗ್ ಬದಲಾಯಿಸಬೇಕಾಗಿ ಬಂದದ್ದು… ಹೀಗೆ ಪ್ರಭು ನೂರೊಂದು ನೆನಪನ್ನು ಎದೆಯಾಳದಿಂದ ಹೆಕ್ಕಿಕೊಟ್ಟರು.
‘ಕರ್ಟನ್ ಕಾಲ್ ಗೆ ಲೈಟೇ ಬರಲಿಲ್ಲ’ ಓದಿ ಕನ್ನಡ ರಂಗಭೂಮಿ ಎನ್ನುವುದು ಹುಳುಕುಗಳ ಸಂತೆ ಎಂದುಕೊಂಡಿದ್ದಾಗಲೇ ಶ್ರೀನಿವಾಸ ಪ್ರಭು ಕನ್ನಡ ರಂಗಭೂಮಿಯನ್ನು ಇನ್ನಷ್ಟು ಪ್ರೀತಿಸುವಂತೆ ಮಾಡಿದರು.
ಇನ್ನೂ ಆ ಗುಂಗಿನಿಂದ ಬಿಡಿಸಿಕೊಳ್ಳಲು ಸಾಧ್ಯವಾದಷ್ಟು ನೆನಪುಗಳನ್ನು ಪ್ರಭು ಮೊಗೆದುಕೊಟ್ಟರು.

ಇಡೀ ಕಾರ್ಯಕ್ರಮ ‘ಅವಧಿ’ ತಂಡದ ಹರ್ಷಿತಾ ಪಾಟೀಲ್ ಮತ್ತು ಶ್ರುತಿ ಮೋಪಗಾರ್
ಅವರಿಗೆ ಕಂಡಿದ್ದು ಹೀಗೆ-






















Beautiful Pictures.. Thank you Avadhi
Very nice photography