ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕವಿತೆ ನಿಂತು ನಮಸ್ಕರಿಸಿತು..

ಜಾತಿ ಇಲ್ಲದ ಲೇಖನಿ ಮತ್ತು ಬಸವಣ್ಣ

bidaloti ranganath

ಬಿದಲೋಟಿ ರಂಗನಾಥ್ 

ಬರೆದ ಕವಿತೆ ಸುಮ್ಮನಿರದೆ
ಬಸವಣ್ಣನ ಆಸ್ಥಾನದ ಕಡೆ ಹೊರಟಿತು
ಎದುರು ತಾಕಿದವರನ್ನೆಲ್ಲಾ ಮಾತಾಡಿಸುತ..
ಬಾಲ ಅಂಬೇಡ್ಕರ್ ಬುದ್ದ ಅತ್ತಲಿಂದಲೇ
ಬರುವುದ ನೋಡಿದ ಕವಿತೆ
ನಿಂತು ನಮಸ್ಕರಿಸಿತು

pencil birdಓ ಕವಿತೆ ಎತ್ತ ಹೊರಟಿ?
‘ಅಣ್ಣ ಬಸವಣ್ಣನ ಹುಟ್ಟು ಹಬ್ಬಕೆ ಅಂದಿತು’
ಆತ ಆಡಂಬರಿಯಲ್ಲ
ಹೋಗೇನು ಮಾಡುತ್ತಿ, ಎಂದ ಅಂಬೇಡ್ಕರ್ ಬುದ್ದನ ಮಾತಿಗೆ,
ಮನಸ ಗರ್ಭದಲ್ಲುಟ್ಟಿದ ನನಗೆ ಅಷ್ಟೂ ಗೊತ್ತಿಲ್ಲವೆ? ಆದರೆ,ಅದೇನೋ ಅಂತರ್ಜಾತಿ ವಿವಾಹ ಮಾಡುವರಂತೆ,
ಹಾರೈಸಲು ಹೋಗುತ್ತಿರುವೆ.

ನನ್ನ ಕರೆದ ಬಸವ ಮನಸಿಗೆ
ಉಲ್ಲಾಸಿತಗೊಳ್ಳಲು
ಜಾತಿ ಇಲ್ಲದ ಲೇಖನಿಯ ಮುಯ್ಯಾಗಿ
ಕೊಡಲು ಹೊರಟಿರುವೆ.

ಸುಡು ಬಿಸಿಲ ಝಳದಿ
ಮಳೆ ಬಾರದ ದಿನಗಳು
ನನ್ನ ಸಂಕಟದ ಕೋಲಾಗಿ ಮಾಡಿವೆ
ಹಸಿವೆಂದವರ ಗುಡಿಸಲ ನೊಂದ ಮನಸುಗಳಿಗೆ
ದನಿಯಾಗಿ ಹೊರಟಿರುವೆ

ಅನುಭವ ಮಂಟಪದ ಖಾಯಂ ಸದಸ್ಯತ್ವಕೆ
ಹೆಸರು ನೊಂದಾಯಿಸಿ ಬರುವೆ
ಹಸಿವುಂಡ ನನಗೆ ಎಲ್ಲವೂ ಅನುಭವವೇ ಅಲ್ಲವೆ?
ಮನುಷ್ಯ ಮಾಡಿಕೊಂಡ ಜಾತಿಗಳ
ಮನಸುಗಳಲ್ಲಿ ಹುಟ್ಟಿದ ನಾನು
ಜಾತಿ ಮೀರಿದವನು.!

ಅಗೋ !
ಅಲ್ಲಾಗಲೇ ಬಸವಣ್ಣನವರ
ಹೆಜ್ಜೆ ಸಪ್ಪಳದ ಸದ್ದು ಕೇಳುತಿದೆ.
ಅಂತರ್ಜಾತಿ
ಮದುವೆ ಆದವರ ಮರ್ಯಾದೆ ಬೀದಿಯಲಿ
ಉರುಳುವ ಸದ್ದು ಕೇಳುತ್ತಿದೆ
ಹೋಗಿ ಮೊದಲು ಸಂತೈಸಬೇಕು
ಬದಲಾವಣೆಯ ಬೆಳಕಿನ ಗುಟ್ಟ ತಿಳಿಸಬೇಕು
ಬನ್ನಿ ಹೋಗೋಣ…
ಲೋಕ ಕಲ್ಯಾಣಕೆ ಕರೆ ಕೊಡೋಣ.
ಕೊಳೆಯುವ ಮನಸುಗಳು
ಮೌಢ್ಯದಲಿ ಸಾಯುವ ಮುನ್ನ.

‍ಲೇಖಕರು Admin

5 June, 2016

2 Comments

  1. ಉದಯಕುಮಾರ ಹಬ್ಬು

    ಶಿವರಾಮ ಕಾರಂತರು “ಬಾಳ್ವೆಯೇ ಬೆಳಕು’ ಕೃತಿಯಲ್ಲಿ ಹೀಗೆ ಬರೆಯುತ್ತಾರೆ:“ ಗಾಂಧೀಜಿಯವರ ಹರಿಜನೋದ್ಧಾರದ ಆದರ್ಶದಿಂದ ಪ್ರೇರಿನಾದ ನಾನು ದಾರಿಯಲ್ಲಿ ಹೋಗುವಾಗ ಚಿಕ್ಕಮಕ್ಕಳು ಸಿಕ್ಕರೆ ಅವರ ಗಲ್ಲ ಹಿಂಡಿ ತಲೆ ಸವರಿ ಹೋಗುತ್ತಿದ್ದೆ. ಆದರೆ ದಲಿತ ಮಕ್ಕಳನ್ನು ಕಂಡಾಗ ನನ್ನ ಕೈ ಹಿಂಜರಿಯುತ್ತಿತ್ತು. ಅಷ್ಟೊಂದ ಗಾಢವಾಗಿದೆ ಸಂಪ್ರದಾಯದ ಪ್ರಭಾವ.” ಎನ್ನುತ್ತಾರೆ. ಮೇಲ್ಜಾತಿಯವರಿಗೆ ಈ ಬಗೆಯ ಗೊಂದಲ ದ್ವಂದ್ವ ಮಾಮೂಲೇನೋ. ಇದೊಂದು ಕಬಂಧಬಾಹು. ಜಾತಿ ಕುಲವು ವಿಷಸರ್ಪವು ನಮ್ಮ ದೇಶದಲ್ಲಿ ಪ್ರತಿಯೊಬ್ಬನಿಗೂ ಕಚ್ಚುತ್ತೆ.

  2. ಸುಬ್ರಾಯ ಮತ್ತೀಹಳ್ಳಿ.

    ಇದೊಂದು ಮಾನವತೆಯ ಧ್ಯಾನ. ಶುಭ್ರ ಸಂಸ್ಕೃತಿಯ ಕನಸು. ಒಂದೇ ರಾಷ್ಟ್ರ ನಿರ್ಮಿಸುವ ಛಲ. ಛಿದ್ರಗೊಂಡಿರುವ ಮನಸ್ಸುಗಳನ್ನು ಒಗ್ಗೂಡಿಸುವ ಕ್ರಿಯೆ. ಇಂಥ ಲಕ್ಷಾಂತರ ಮನಸ್ಸುಗಳು ಏಕಕಾಲದಲ್ಲಿ ಸೃಷ್ಟಿಗೊಳ್ಳಬೇಕು. ಆಗ ಮಾತ್ರ ಈ ಕವನಕ್ಕೆ ಬೆಲೆ ಬಂದೀತು.
    ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading