ಸ್ಮಶಾನದಲ್ಲಿ ಕವಿತೆ

ಬಿ ಕೆ ನರಸಿಂಹ ರಾಜು
ಕವಿತೆ ಸ್ಮಶಾನದಲ್ಲಿದೆ
ಸತ್ತ ಆತ್ಮಗಳ ಜೊತೆ ಮಾತಿಗಿಳಿಯಲು ಹೊರಟಿದೆ
ಎಲ್ಲಿ ನೋಡಿದರೂ ಉರಿವ ಕೆಂಡ ,
ತೋಡಿದ ಗುಂಡಿ, ಸುಟ್ಟ ಬೂದಿ,
ಕವಿತೆಗೆ ಭಯವಾಗುತ್ತಿದೆ!
ಅಲ್ಲೊಂದು ಆತ್ಮ ಕವಿತೆಯ ನೋಡಿ ಹೆದರಿ ಓಡುತ್ತಿದೆ
ಇಲ್ಲೊಂದು ಆತ್ಮ ತನ್ನ ಸಮಾಧಿಗೆ
ಸುಣ್ಣ ಬಣ್ಣವನ್ನು ಬಳಿದು ಸಿಂಗರಿಸುತ್ತಿದೆ.
ಅಲ್ಯಾರೋ ಬಂದು ಸಮಾಧಿಯ ಕಿತ್ತು
ಅದೇ ಸಮಾಧಿಯಲ್ಲಿ ಮತ್ತೊಬ್ಬರ ಊಳುತ್ತಿದ್ದಾನೆ.
ಕಣ್ಣೆದುರೇ ಹಳೇ ಮೂಳೆಯ ಕಿತ್ತು
ಹೊಸ ದೇಹವ ಊಳುತ್ತಿರುವುದ ನೋಡಿ
ನಾಳೆ ನನಗೂ ಇದೇ ಸ್ಥಿತಿ ಎಂದು
ಆ ಆತ್ಮ ಗೊಣಗಾಡುತ್ತಿದೆ.
ಕವಿತೆಗೆ ತನ್ನ ನೋವ ತೋಡಿಕೊಳ್ಳುತ್ತಿದೆ.
ಕವಿತೆಗೆ ಭೇಟಿಯಾದ ಎಲ್ಲಾ ಆತ್ಮಗಳು
ನೋವುಂಡ ಆತ್ಮಗಳೇ,
ಪ್ರೀತಿ, ಪ್ರೇಮ, ಜಾತಿ – ಧರ್ಮ ಮೋಸ, ಸಾಲ, ಕಿರುಕುಳ, ಒಂದೇ ಎರಡೇ!
ಅರೆರೆ ಇಲ್ಲಿ ಇರುವ ಆತ್ಮಗಳೆಲ್ಲಾ ಒಂದೇ ಜಾತಿಯದ್ದೇ!
ಸ್ಮಶಾನವೇ ಅದೇ ಜಾತಿಯದ್ದಂತೆ!
ಕವಿತೆ ಓಡಾಡಿದ್ದು ಸ್ಮಶಾನದಲ್ಲಿ ಅಲ್ಲವಂತೆ!
ಮನೆಗಳಲ್ಲಿ, ಮನಗಳಲ್ಲಿ, ನನ್ನಲ್ಲಿ- ನಿನ್ನಲ್ಲಿ!
ಕವಿತೆಗೂ ತಲೆಕೆಟ್ಟು ಅದೂ ಸತ್ತಿದೆ!
ಈ ಲೋಕದ ಸತ್ಯ ತಿಳಿಯದೇ
ಅನಾಥ ಶವವಾಗಿ ಕೊಳೆತು ನಾರುತ್ತಿದೆ.
ಕವಿತೆಯ ಹೂಳಲು ಸ್ಮಶಾನವಿಲ್ಲದೇ ಅಲೆದಾಡುತ್ತಿದೆ!
ಕವಿತೆ ಆತ್ಮವಾಗಿ ಮಾತಾಡುತ್ತಿದೆ.!





ಸೂಪರ್………ಬ್ರದರ್ ತುಂಬಾ ಚೆನ್ನಾಗಿದೆ
ಈ ಕವಿತೆ ಓದುತ್ತಿದ್ದರೇ ಓದಬೇಕೆನಿಸುತ್ತೇ….
Brother e Katie thumbs chennagide ninu busy yagiddaru Yamaha kaviyade if I munduvareyali